Category: ನಮ್ಮೂರು

  • ಜೈಲಿನಲ್ಲಿದ್ದವನನ್ನ ಕಸ್ಟಡಿಗೆ ಪಡೆದು ವಿಚಾರಣೆ: ಹೊರಬಿತ್ತು ಮನೆಗಳ್ಳತನ ಪ್ರಕರಣ..!

    ಧಾರವಾಡ: ಕಾರಾಗೃಹದಲ್ಲಿದ್ದ ಆರೋಪಿಯನ್ನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡಿದಾಗ ಮನೆಗಳ್ಳತನ ಮಾಡಿದ ಪ್ರಕರಣವೊಂದು ಬಯಲಿಗೆ ಬಂದ ಘಟನೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಮೂಲತಃ ಗದಗ ಜಿಲ್ಲೆಯ ನರಗುಂದ ಪಟ್ಟಣದ ಕಿರಣ ಸುರೇಶ ಬೇವಿನಗಿಡದ ಅಲಿಯಾಸ್ ಬೇವಿನಮರದ ಎಂಬಾತನನ್ನೇ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಎಂ.ಕೆ.ಬಸಾಪೂರ ನ್ಯಾಯಾಲಯದ ಅನುಮತಿ ಪಡೆದು, ಕಸ್ಟಡಿಯಲ್ಲಿ ವಿಚಾರಣೆ ನಡೆಸಿದ್ದರು.

    ಆರೋಪಿಯಿಂದ 15 ಗ್ರಾಂ ಚಿನ್ನ ಹಾಗೂ 44 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನ ವಶಕ್ಕೆ ಪಡೆಯಲಾಗಿದ್ದು, ಇವುಗಳ ಮೌಲ್ಯ 78 ಸಾವಿರ ರೂಪಾಯಿ ಎಂದು ಹೇಳಲಾಗಿದೆ.

    2019ರಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯ ಕೀಲಿ ಮುರಿದು ಕಳ್ಳತನ ಮಾಡಿರುವ ಪ್ರಕರಣ ಈ ಮೂಲಕ ಬಯಲಿಗೆ ಬಂದಿದೆ.

  • ಹು-ಧಾ ಕಮೀಷನರ್ ಇದ್ದಾಗ ಆರ್.ದಿಲೀಪ್ ಲೈಂಗಿಕ ಕಿರುಕುಳ….?

    ಬೆಂಗಳೂರು: ಸಿಐಡಿ ಡಿಐಜಿ ದಿಲೀಪ್ ವಿರುದ್ಧ ಪ್ರತಿಷ್ಠಿತ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕಂಪನಿಯ ಮಹಿಳಾ ಉದ್ಯೋಗಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಸಂಬಂಧ ಮಹಿಳಾ ಉದ್ಯೋಗಿ ಗೃಹ ಇಲಾಖೆಗೆ ದೂರು ನೀಡಿದ್ದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

    ಸಿಐಡಿ ಡಿಐಜಿ ಆರ್. ದಿಲೀಪ್, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ಮಹಿಳೆ ಪ್ರತಿಷ್ಠಿತ ಸಾರಿಗೆ ಮತ್ತು ಲಾಜೆಸ್ಟಿಕ್ ಸಮೂಹ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕಳೆದ ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಐಟಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ನೋರ್ವ ಸ್ನೇಹಿತೆ ಜೊತೆ ದಿಲೀಪ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಮೊಬೈಲ್ ನಂಬರ್ ಪಡೆದ ದಿಲೀಪ್ ಮಹಿಳೆಗೆ ಕರೆ ಮಾಡಿ ತಮ್ಮನ್ನು ಭೇಟಿಯಾಗಲು ಮನೆಗೆ ಬರುವಂತೆ ಹೇಳಿದ್ದರು.

    ಅದರಂತೆ ಸಿಐಡಿ ಡಿಐಜಿ ದಿಲೀಪ್ ರನ್ನು ಅವರ ಮನೆಯಲ್ಲಿ ಭೇಟಿಯಾದ ಮಹಿಳೆ ಜೊತೆ ದಿಲೀಪ್ ಅಸಭ್ಯವಾಗಿ ವರ್ತಿಸಿದ್ದಲ್ಲದೇ ತನ್ನ ಜೊತೆ ಸಂಬಂಧವಿರಿಸಿಕೊಳ್ಳುವಂತೆ ಬಲವಂತ ಮಾಡಿದ್ದರು. ಆದರೆ ಮಹಿಳೆ ತನಗೆ ಈಗಾಗಲೇ ವಿವಾಹವಾಗಿದ್ದಾಗಿ ಹೇಳಿ ಸ್ಥಳದಿಂದ ಹೊರಟು ಬಂದಿದ್ದರು. ಆದರೆ ಅಷ್ಟಕ್ಕೆ ನಿಲ್ಲದ ಡಿಐಜಿ ಕಾಟ ಮತ್ತೆ ಮುಂದುವರೆದಿತ್ತು. ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಸ್ವತ: ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ತನ್ನ ವಿರುದ್ಧ ಅಪಪ್ರಚಾರಮಾಡಿ ತನ್ನ ಹೆಸರು ಕೆಡಿಸುತ್ತಿರುವುದಾಗಿಯೂ ಮಹಿಳೆ ದೂರು ನೀಡಿದ್ದಾರೆ.

    ಅಷ್ಟೇ ಅಲ್ಲ, ಸಿಐಡಿ ಡಿಐಜಿ ದಿಲೀಪ್ ಮಂಗಳೂರಿನಲ್ಲಿ ಎಸ್ ಪಿಯಾಗಿದ್ದ ವೇಳೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ, ಕಾರವಾರದಲ್ಲಿ ಮಹಿಳೆಯೊಂದಿಗೆ ಸಿಕ್ಕಿಬಿದ್ದ ಪ್ರಕರಣ ಸೇರಿದಂತೆ ಹಲವು ಕರ್ಮಕಾಂಡಗಳನ್ನು ಮಹಿಳೆ ದೂರಿನಲ್ಲಿ ಬಯಲಿಗೆಳೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಗೃಹ ಇಲಾಖೆ ಈವರೆಗೂ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

  • ಹೆಬ್ಬಳ್ಳಿ-ಹುಬ್ಬಳ್ಳಿ ರಸ್ತೆಯಲ್ಲಿ ಅಪಘಾತ: ಹೆಬ್ಬಳ್ಳಿ ಯುವಕನ ಸ್ಥಿತಿ ಗಂಭೀರ, ಇಬ್ಬರು ಪ್ರಾಣಾಪಾಯದಿಂದ ಪಾರು..!

    ಹುಬ್ಬಳ್ಳಿ: ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಾಯಗೊಂಡು, ಒಬ್ಬನ ಸ್ಥಿತಿ ಗಂಭೀರವಾದ ಘಟನೆ ಹುಬ್ಬಳ್ಳಿ ಬಳಿಯ ಹೆಬ್ಬಳ್ಳಿ ರಸ್ತೆಯ ಜೈನ್ ಕಾಲೇಜ್ ಬಳಿ ಸಂಭವಿಸಿದೆ.

    ಹುಬ್ಬಳ್ಳಿಯಿಂದ ಹೆಬ್ಬಳ್ಳಿ ಗ್ರಾಮಕ್ಕೆ ಹೊರಟಿದ್ದ ಪರಮೇಶ್ವರ ಮೊರಬದ ಹಾಗೂ ಮೌಲಾ ಎಂಬಿಬ್ಬರಿದ್ದ ಬೈಕಿಗೆ ಬಿಜೆಪಿ ಮುಖಂಡರ ಹೊಲದಲ್ಲಿ ಕಾರ್ಯನಿರ್ವಹಿಸುವ ಕೊಂಡಯ್ಯ ಎಂಬಾತನ ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ಹೆಬ್ಬಳ್ಳಿ ಗ್ರಾಮದ ಪರಮೇಶ್ವರ ಮೊರಬದ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ದಾರಿ ಹೋಕರು ಅಂಬ್ಯಲೆನ್ಸಗೆ ಕಾಲ್ ಮಾಡಿ, ಆಸ್ಪತ್ರೆಗೆ ಸಾಗಿಸುವ ಪ್ರಯತ್ನವನ್ನ ಮಾಡುತ್ತಿದ್ದಾರೆ.

    ಘಟನೆಯಲ್ಲಿ ಮೌಲಾ ಹಾಗೂ ಕೊಂಡಯ್ಯ ಎಂಬಾತನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಅವರನ್ನೂ ಕೂಡಾ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗುತ್ತಿದೆ.

    ಬಿಜೆಪಿ ಮುಖಂಡರ ಹೊಲದಲ್ಲಿ ಮಷೀನ್ ಆಪ್ ರೇಟಿರ್ ಆಗಿರುವ ಕೊಂಡಯ್ಯ, ತಾನೂ ತಪ್ಪು ಮಾಡಿದಾಗಲೂ ಹಿರಿಯ ಸಚಿವರ ಹೆಸರು ಹೇಳಿ, ಧಮಕಿ ಹಾಕುತ್ತಿದ್ದನೆಂದು ಹೇಳಲಾಗಿದೆ. ಘಟನೆಯು ಉತ್ತರ ಸಂಚಾರಿ ಠಾಣೆ ವ್ಯಾಪ್ತಿಗೆ ಬರುತ್ತಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

  • ಮಾಳಮಡ್ಡಿಯಲ್ಲಿ ಬಾವಿಗೆ ಬಿದ್ದಳಾಕೆ…!

    ಧಾರವಾಡ: ನಗರದ ಮಾಳಮಡ್ಡಿಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವೃದ್ಧೆಯೋರ್ವರು ಬಾವಿಯಲ್ಲಿ ಬಿದ್ದಿದ್ದು, ಸ್ಥಳೀಯರು ಆಕೆಯನ್ನ ಮೇಲಕ್ಕೇತ್ತಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ ಘಟನೆ ನಡೆದಿದೆ.

    ಮಾಳಮಡ್ಡಿಯ ಬಾವಿಯಲ್ಲಿ ಬಿದ್ದ ತಕ್ಷಣವೇ ಜೋರಾಗಿ ಶಬ್ದವಾಗಿದ್ದು, ಬಾವಿಯಲ್ಲಿ ಬಿದ್ದ ವೃದ್ಧೆಯ ಕೈಗಳು ಮೇಲಕ್ಕೆ ಕಾಣುತ್ತಿದ್ದವು. ತಕ್ಷಣವೇ ಈಜು ಬರುತ್ತಿದ್ದ ಸ್ಥಳೀಯರು ಬಾವಿಯೊಳಗೆ ಜಿಗಿದು ಆಕೆಯನ್ನ ರಕ್ಷಣೆ ಮಾಡಿದ್ದಾರೆ.

    ಅದೇ ಸಮಯದಲ್ಲಿ ಕೆಲವರು ಅಂಬ್ಯಲೆನ್ಸಗೆ ದೂರವಾಣಿ ಕರೆ ಮಾಡಿದ್ದರಿಂದ ಸರಿಯಾದ ಸಮಯಕ್ಕೆ 108 ಅಂಬ್ಯಲೆನ್ಸ್ ಬಂದು ಧಾರವಾಡದ ಜಿ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಘಟನೆಯ ಬಗ್ಗೆ ಮಾಹಿತಿಯನ್ನ ಪೊಲೀಸರು ಕಲೆ ಹಾಕುತ್ತಿದ್ದು, ಬಾವಿಯೊಳಗೆ ವೃದ್ದೆ ಯಾವ ಕಾರಣಕ್ಕೆ ಬಿದ್ದರೆನ್ನುವುದರ ಬಗ್ಗೆ ವಿವರಣೆ ಸ್ಥಳೀಯರಿಂದ ಪಡೆಯುತ್ತಿದ್ದಾರೆ.

    ವೃದ್ಧೆಯನ್ನ ವನಮಾಲಾ ಕುಲಕರ್ಣಿ ಎಂದು ಗುರುತಿಸಲಾಗಿದೆ.

  • “ಮಾತಿಗಾಗಿ ನಿಂತ” ಬೈಕ್ ಸವಾರರಿಗೆ ಬೊಲೇರೋ ಡಿಕ್ಕಿ: ಒಬ್ಬ ಸಾವು, ಮತ್ತೋರ್ವ ಗಂಭೀರ..!

    ಘಟನೆಯಲ್ಲಿ ಶ್ರೀನಿವಾಸ ಜೋಗಣ್ಣನವರ ಎಂಬ 19 ವರ್ಷದ ಯುವಕ ಸಾವಿಗೀಡಾಗಿದ್ದು, ರಾಜು ಫಕ್ಕೀರಪ್ಪ ರಂಗಣ್ಣನವರ ತೀವ್ರವಾಗಿ ಗಾಯಗೊಂಡಿದ್ದಾನೆ.

    ನವಲಗುಂದ: ತಾಲೂಕಿನ ಅಮರಗೋಳ ಗ್ರಾಮದ ಬಳಿ ಬೈಕ್ ಸವಾರರಿಬ್ಬರು ಮಾತನಾಡುತ್ತಿದ್ದ ನಿಂತ ಸಮಯದಲ್ಲಿ ಗೂಡ್ಸ್ ಬೊಲೇರೋ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದಾನೆ.

    ಶರಣಪ್ಪ ಮಜ್ಜಿಗುಡ್ಡ ಮತ್ತು ಅಜಯ ಗುರುಬಸಣ್ಣನವರ ಅವರಿಗೆ ಸೇರಿದ ಬೈಕಿನಲ್ಲಿ ಮಾತನಾಡುತ್ತಿದ್ದ ನಿಂತಿದ್ದ ಸಮಯದಲ್ಲಿ ವೇಗವಾಗಿ ಬಂದ ಗೂಡ್ಸ್ ಬೊಲೇರೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗುವ ಯತ್ನ ಮಾಡಿದ್ದು, ನವಲಗುಂದ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

    ಮೃತ ವ್ಯಕ್ತಿಯನ್ನ ನರಗುಂದ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ತೆರಳಿದ್ದ ನವಲಗುಂದ ಠಾಣೆ ಪಿಎಸ್ಐ ಜಯಪಾಲ ಪಾಟೀಲ ಅವರು ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.

  • ಲಕ್ಷ್ಮಣ ಅಲ್ಲೇಗೆ ಹೆಣವಾದ- ಶಿವಲಿಂಗವ್ವ…!

    ಧಾರವಾಡ: ನಗರದ ಕೆಲಗೇರಿ ಕೆರೆಯಲ್ಲಿ ಆಟೋ ತೊಳೆಯಲು ಹೋದ ಆಟೋ ಚಾಲಕನೋರ್ವ ಹೆಣವಾಗಿ ಸಿಕ್ಕ ಘಟನೆ ನಡೆದಿದ್ದು, ನಾಗರಿಕರಲ್ಲಿ ಹಲವು  ಅನುಮಾನ ಮೂಡಿಸಿದೆ.

    ಶಿವಲಿಂಗವ್ವ ಹೂಲಿಕಟ್ಟಿ ಎನ್ನುವವರಿಗೆ ಸೇರಿದ ಆಟೋವನ್ನ ಲಕ್ಷ್ಮಣ ಡೊಳ್ಳಣನವರ ಚಲಾಯಿಸುತ್ತಿದ್ದ. ನಿನ್ನೆ ಆಟೋ ತೊಳೆಯಲು ಹೋದಾಗ ಕಾಲು ಜಾರಿ ಕೆರೆಯಲ್ಲಿ ಬಿದ್ದು ಸಾವಿಗೀಡಾಗಿದ್ದಾನೆ.

    ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಧಾರವಾಡ ಉಪನಗರ ಠಾಣೆಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಲಕ್ಷ್ಮಣನ ಶವವನ್ನ ಹೊರಗೆ ತೆಗೆದಿದ್ದಾರೆ.

    ಆಟೋ ಚಾಲಕನೋರ್ವ ಕೆರೆಯ ಬಗ್ಗೆ ಮಾಹಿತಿಯಿಲ್ಲದೇ ಅಲ್ಲಿಗೆ ಹೋದನೇ. ಆತನ ಕಾಲು ಜಾರಿದ್ದು ಹೇಗೆ ಎಂಬ ಅನುಮಾನಗಳಿಗೆ ಪೊಲೀಸರು ಉತ್ತರವನ್ನ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.

  • ಶಾಲೆ, ಕಾಲೇಜು ಬೇಸಿಗೆ ರಜೆ ಕಡಿತ: ಸಚಿವ ಸುರೇಶಕುಮಾರ

    ಬೆಳಗಾವಿ: ಮುಂಬರುವ ಬೇಸಿಗೆ ರಜೆ ದಿನಗಳನ್ನು ಕಡಿತ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ ಹೇಳಿದರು.

    ನಗರದಲ್ಲಿ ಮಾತನಾಡಿದ ಸಚಿವ ಸುರೇಶಕುಮಾರ ಅವರು, ಕಳೆದ ವರ್ಷ ಕೊರೋನಾದಿಂದಾಗಿ ವಾರ್ಷಿಕ ಅವಧಿಯಲ್ಲಿ ಕಡಿತವಾಗಿದ್ದು, ಈ ಬಾರಿ ಬೇಸಿಗೆ ರಜೆ ಕಡಿತ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಸಕಾಲಕ್ಕೆ ಶಾಲಾ, ಕಾಲೇಜುಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ ಸಚಿವರು, ಹೀಗೆ ಆಗಲು ನಾವೆಲ್ಲ ಬಿಡಬಾರದೆಂದು ಹೇಳಿದರು.

    ಈಗಾಗಲೇ ಆರಂಭಿಸಿರುವ ಶಾಲೆ, ಕಾಲೇಜುಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಪೋಷಕರು ಸಹಕಾರ ನೀಡುತ್ತಿದ್ದಾರೆ. ಇದೇಲ್ಲವನ್ನೂ ಗಮನಿಸಿಯೇ ಎಲ್ಲ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

  • ಕೆಎಲ್ಇಯವರೇ ಆಸ್ತಿ ಮರಳಿಸಿ, ಕೆಲ್ಸಾ ಬಂದ್ ಮಾಡಿ: ಲಿಂಗಾಯತ ಮುಖಂಡ ಆಗ್ರಹ

    ಹುಬ್ಬಳ್ಳಿ: ಮೂರುಸಾವಿರ ಮಠದ ಉನ್ನತ ಸಮಿತಿ ಕೂಡಲೇ ಸಭೆ ಕರೆದು ಕೆ.ಎಲ್.ಇ ಸಂಸ್ಥೆಗೆ ವೈದ್ಯಕೀಯ ಮಹಾವಿದ್ಯಾಲಯಕ್ಕಾಗಿ ಪರಭಾರೆ ಮಾಡಿರುವ ಆಸ್ತಿಯನ್ನು 15 ದಿನಗಳಲ್ಲಿ ಮರಳಿ ವಾಪಸ್ ಪಡೆಯಲು ಮುಂದಾಗಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಹೇಳಿದ್ದಾರೆ.


    ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠದ ವಿಚಾರ ದಿನಂಪ್ರತಿ ಸುದ್ದಿಯಾಗುತ್ತಿದ್ದರೂ ಉನ್ನತ ಸಮಿತಿಯವರು ತಮಗೆ ಸಂಬಂಧವೇ ಇಲ್ಲದಂತೆ ಇರುವುದು ದುರದೃಷ್ಟಕರ. ಈಗಾಗಲೇ ಸಮುದಾಯದ ಜನರಿಗೆ ವಾಸ್ತವದ ಅರಿವಾಗುತ್ತಿದ್ದು ಕೋಟ್ಯಂತರ ರೂ.ಬೆಲೆ ಬಾಳುವ ಆಸ್ತಿ ಮರಳಿ ಪಡೆಯಬೇಕೆಂಬ ಅಭಿಪ್ರಾಯ ಸಾರ್ವತ್ರಿಕವಾಗುತ್ತಿದೆ.ಕೇವಲ ರಾಜಕಾರಣಿಗಳಿರುವ ಸಮಿತಿ ವಿಸರ್ಜಿಸಿ ಸಮುದಾಯದ ಗಣ್ಯರು,ಉದ್ಯಮಿಗಳು,ನಿವೃತ್ತ ಅಧಿಕಾರಿಗಳನ್ನು ಸೇರ್ಪಡೆ ಮಾಡಿದಲ್ಲಿ ಒಳ್ಳೆಯದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
    ಮಠದ ಉನ್ನತ ಸಮಿತಿಯವರು ಜನರ ಅನುಕೂಲಕ್ಕೆ ತಕ್ಕಂತೆ ಮಠದ ಆಸ್ತಿಗಳನ್ನು ಬಳಸಬೇಕು. ಜನರಿಂದ ದೇಣಿಗೆ ಪಡೆದಂತೆ ಆಸ್ತಿಗಳನ್ನು ಮತ್ತೊಬ್ಬರಿಗೆ ದಾನವಾಗಿ ನೀಡುವುದು ಸರಿಯಲ್ಲ ಎಂದಿರುವ ಗೌರಿ ಕೂಡಲೇ ಆರಂಭಿಸಿರುವ ಕಾಮಗಾರಿಯನ್ನು ಕೆ.ಎಲ್.ಇ ಸಂಸ್ಥೆಯವರು ಸ್ಥಗಿತಗೊಳಿಸಲು ಆಗ್ರಹಿಸಿದ್ದಾರೆ.
    ಸುಪ್ರೀಂಕೋರ್ಟನಲ್ಲಿ ಆಸ್ತಿಗಳನ್ನು ಪರಭಾರೆ ಮಾಡುವುದಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟು ನಂತರ ಮತ್ತೊಬ್ಬರಿಗೆ ದಾನವಾಗಿ ನೀಡಿರುವುದು ಸರಿಯಲ್ಲ ಎಂದು ಕಾನೂನು ತಜ್ಞರು ಸಹ ಅಭಿಪ್ರಾಯಪಟ್ಟಿದ್ದು ಈಗಾಗಲೇ ಲಿಂಗಾಯತ ಪ್ರಮುಖರ ಸಭೆ ಸಹ ನಡೆಯುತ್ತಿದ್ದು ಇಷ್ಟರಲ್ಲೇ ಹೋರಾಟದ ರೂಪುರೇಷೆ ಅಂತಿಮಗೊಳ್ಳಲಿದೆ ಎಂದಿದ್ದಾರೆ.

  • ಮುಕ್ಕಲ್‌ದಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಪಂಚಾಯತಿಯಲ್ಲೇ ಹೋಮ ಹವನ…!

    ಕಲಘಟಗಿ: ನೂತನವಾಗಿ ಗ್ರಾಮ ಪಂಚಾಯತಿಗೆ ಆಯ್ಕೆಯಾದ ಸದಸ್ಯರೆಲ್ಲರೂ ಕೂಡಿಕೊಂಡು ಗ್ರಾಮದ ಅಭಿವೃದ್ಧಿಯಾಗಲಿ ಎಂದು ವಿಶೇಷ ಹೋಮ-ಹವನ ಮಾಡಿಸಿ, ಸಾರ್ವಜನಿಕರ ಪ್ರೀತಿಗೆ ಪಾತ್ರವಾದ ಘಟನೆ ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದಲ್ಲಿ ನಡೆದಿದೆ.
    ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗರೆಡ್ಡಿ ನಡುವಿನಮನಿ, ಉಪಾಧ್ಯಕ್ಷ ಶ್ರೀಕಾಂತ ಪಾಟೀಲ, ಪಿಡಿಓ ಜಗದೀಶ ಹಾಗೂ ಸದಸ್ಯರು ಮತ್ತು ಗ್ರಾಮದ ಪ್ರಮುಖರು ಸೇರಿಕೊಂಡು ಹೋಮ ಹವನವನ್ನ ನಡೆಸಿ, ಶಾಂತಿ ನೆಮ್ಮದಿಗಾಗಿ ಪ್ರಾರ್ಥಿಸಿದರು.


    ಕಳೆದ ಚುನಾವಣೆಯಲ್ಲಿ ಕೈ ಬೆಂಬಲಿತ ಹತ್ತು ಸದಸ್ಯರು ಗೆಲುವು ಸಾಧಿಸಿ ಅವಿರೋಧವಾಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಕ್ಕಲ ಗ್ರಾಮ ಪಂಚಾಯತಿ ಇತಿಹಾಸದಲ್ಲಿ ಇದು ಮೊದಲು ಬಾರಿಯಾಗಿದೆ. ಬಿಜೆಪಿ ಬೆಂಬಲಿತ ಸದಸ್ಯರು, ಹೀನಾಯವಾಗಿ ಸೋತಿರುವುದನ್ನ ಇಲ್ಲಿ ಸ್ಮರಿಸಬಹುದಾಗಿದೆ.
    ಆದರೆ, ಚುನಾವಣೆ ಮುಗಿದ ಮೇಲೆ ಗ್ರಾಮದ ಏಳಿಗೆ ಮುಖ್ಯವೆಂಬ ಕಾರಣದಿಂದ ಎಲ್ಲರೂ ಕೂಡಿಕೊಂಡು ಹೋಮ ಹವನ ಮಾಡಿಸಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

  • ಶಾಸಕ ಅರವಿಂದ ಬೆಲ್ಲದ್ ಅವರ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿರುವುದೇನು…!

    ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಮತ್ತು ಭಾರತೀಯ ಜನತಾ ಪಕ್ಷದ ಸ್ಥಳೀಯ ಪ್ರಮುಖರು ಫುಲ್ ಜಾಲಿ ಮೂಡಲಿದ್ದಾರೆ. ಅದೇ ಕಾರಣಕ್ಕೆ ಇಟಿಗಟ್ಟಿ ಬಳಿಯ ಫಾರ್ಮ್ ಹೌಸನಲ್ಲಿ ಏನು ಮಾಡುತ್ತಿದ್ದಾರೆ.. ಪೂರ್ಣವಾಗಿ ನೋಡಿ..

    ಇಲ್ಲಿದೆ ವೀಡಿಯೋ..

    ಶಾಸಕ ಅರವಿಂದ ಬೆಲ್ಲದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರೂ ಆಗಿದ್ದರಿಂದ ಆ ಭಾಗದ ಪ್ರಮುಖರನ್ನ ಕರೆದುಕೊಂಡು ದೇಶಿ ಆಟಗಳನ್ನಾಡುತ್ತ ಇಟಿಗಟ್ಟಿಯ ಬಳಿಯ ಅವರದ್ದೇ ಫಾರ್ಮ್ ಹೌಸನಲ್ಲಿ ಸಮಯ ಕಳೆಯುತ್ತಿದ್ದಾರೆ.

    ಭಾರತೀಯ ಜನತಾ ಪಕ್ಷದ ಸೆಂಟ್ರಲ್ ಕ್ಷೇತ್ರದ ಮಾಜಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಲಿಂಗರಾಜ ಪಾಟೀಲ, ಶಂಕರ ಶೇಳಕೆ ಸೇರಿದಂತೆ ಹಲವರು ದೇಸಿ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಮಹಾಭಾರತದಲ್ಲಿ ಬರುವ ಪ್ರಮುಖರ ಹೆಸರುಗಳನ್ನ ಹೇಳುವಾಟದಲ್ಲಿ ಎದುರಾಳಿ ಗುಂಪೊಂದು ರಾಮಾಯಣದ ಸೀತೆ ಹೆಸರು ಹೇಳಿ, ನಗೆಬುಗ್ಗೆಯಾದ ಘಟನೆಯೂ ನಡೆದಿದೆ.