ನೆಲ-ಜಲ-ಪರಿಸರ ಉಳಿವಿಗಾಗಿ ಶಿವಳ್ಳಿಯಿಂದ ಧಾರವಾಡಕ್ಕೆ ಐತಿಹಾಸಿಕ ಪಾದಯಾತ್ರೆ!
ಧಾರವಾಡ: ಐದು ಗ್ರಾಮಗಳ ಪರಿಸರ, ಜನರ ಆರೋಗ್ಯ ಮತ್ತು ನೆಮ್ಮದಿಗೆ ಧಕ್ಕೆ ತರುವ ಯೋಜನೆಯನ್ನು ವಿರೋಧಿಸಿ ಹಾಗೂ ಮಡ್ಡಿಗುಡ್ಡ ಪ್ರದೇಶದಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳ ತನಿಖೆಗೆ ಒತ್ತಾಯಿಸಿ ಶಿವಳ್ಳಿ ಗ್ರಾಮಸ್ಥರು ಗುರುವಾರ ಶಿವಳ್ಳಿಯಿಂದ ಧಾರವಾಡದವರೆಗೆ ಬೃಹತ್ ಪಾದಯಾತ್ರೆ ನಡೆಸಿದರು.
ನೂರಾರು ಗ್ರಾಮಸ್ಥರು, ಹಿರಿಯರು ಹಾಗೂ ಮಹಿಳೆಯರು ಭಾಗವಹಿಸಿದ್ದ ಈ ಶಾಂತಿಯುತ ಪಾದಯಾತ್ರೆಯು ಪಾಲಿಕೆ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ರಾಯಮಾನೆ ಅವರು, ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮತ್ತು ಗ್ರಾಮಸ್ಥರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಇದೇ ವೇಳೆ, ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನೂ ಭೇಟಿ ಮಾಡಿದ ಗ್ರಾಮಸ್ಥರು, “ಇದು ನಮ್ಮ ನೆಲ, ನೀರು ಹಾಗೂ ಮಕ್ಕಳ ಭವಿಷ್ಯವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟ” ಎಂದು ಒಕ್ಕೊರಲಿನಿಂದ ತಿಳಿಸಿದರು.
