ಧಾರವಾಡ ಜಿಲ್ಲಾ ಪಿಡಿಓ ಸಂಘದ ಅಧ್ಯಕ್ಷೆ, ಹಳ್ಳಿಗೇರಿ ಗ್ರಾಪಂ PDO ಪುಷ್ಪಾವತಿ ಮೇದಾರ ಅಮಾನತ್ತು…
ಧಾರವಾಡ: ಕರ್ತವ್ಯಲೋಪ ಹಾಗೂ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆ ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಪುಷ್ಪಾವತಿ ಮೇದಾರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಭುವನೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಹಳ್ಳಿಗೇರಿ ಗ್ರಾಮ ಪಂಚಾಯತಿಯಲ್ಲಿ ಅಕ್ರಮವಾಗಿ ಬಿಲ್ಗಳನ್ನು ಮಾಡಿರುವುದು ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಕಲಿ ಬಿಲ್ಗಳನ್ನು ತೆಗೆದುಕೊಂಡಿರುವ ಆರೋಪಗಳು ಪಿಡಿಓ ವಿರುದ್ಧ ಕೇಳಿಬಂದಿದ್ದವು ಎನ್ನಲಾಗಿದೆ.
ಈ ಕುರಿತು ಗ್ರಾಮಸ್ಥರು ಸಚಿವ ಸಂತೋಷ್ ಲಾಡ್ ಅವರ ಎದುರು ಆರೋಪ ಮಾಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು ಎಂದು ತಿಳಿದುಬಂದಿದೆ.
ಸಚಿವರ ಸೂಚನೆಯ ಹಿನ್ನೆಲೆ ಹಾಗೂ ಪಿಡಿಓ ವಿರುದ್ಧ ಕೇಳಿಬಂದ ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಆರೋಪಗಳ ಆಧಾರದಲ್ಲಿ ಹಳ್ಳಿಗೇರಿ ಗ್ರಾಮ ಪಂಚಾಯತಿ ಪಿಡಿಓ ಪುಷ್ಪಾವತಿ ಮೇದಾರ್ ಅವರನ್ನು ಅಮಾನತುಗೊಳಿಸಿ ಸಿಇಓ ಭುವನೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಈ ಕ್ರಮದಿಂದ ಹಳ್ಳಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚರ್ಚೆಗೆ ಗ್ರಾಸವಾಗಿರುವ ಅಕ್ರಮ ಬಿಲ್ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದ ಆರೋಪಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.
