Karnataka Voice

Latest Kannada News

ಖಂಡನೀಯ ಘಟನೆಗೆ ಶಾಸಕ ಅರವಿಂದ ಬೆಲ್ಲದ್ ಕಾರಣ… ತಕ್ಷಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಕೆ.ನೀಲಾ

Spread the love

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ‘ಸಮುದಾಯ–50’ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ದುರುದ್ದೇಶಪೂರ್ವಕವಾಗಿ ಗದ್ದಲ ಎಬ್ಬಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿರುವ ಘಟನೆ ಖಂಡನೀಯ ಎಂದು ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯೆ ಕೆ. ನೀಲಾ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಸಮಾರೋಪ ಭಾಷಣಕ್ಕೆ ಆಗಮಿಸಿದ್ದ ನಟ ಹಾಗೂ ವಿಚಾರವಾದಿ ಪ್ರಕಾಶ್ ರಾಜ್ ಅವರನ್ನು ಅಪಮಾನಿಸುವ ಉದ್ದೇಶದಿಂದ ಅವರ ಭಾವಚಿತ್ರವಿದ್ದ ಬ್ಯಾನರ್‌ಗಳಿಗೆ ಮಸಿ ಬಳಿದು, ಸಭಾಂಗಣದೊಳಗೆ ನುಗ್ಗಿ ಗದ್ದಲ ಸೃಷ್ಟಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದರು.

ಪೊಲೀಸರು ಮನವಿ ಮಾಡಿದರೂ ಗದ್ದಲ ಮುಂದುವರಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ಒದಗಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಿದರು.

“ಧಾರವಾಡ ಯಾರೊಬ್ಬರ ಗುತ್ತಿಗೆಯಲ್ಲ. ವಿದ್ಯಾನಗರಿ ಎಂದು ಹೆಸರಾಗಿರುವ ಧಾರವಾಡದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಕಪ್ಪುಚುಕ್ಕೆಯಾಗಿದೆ” ಎಂದು ಕೆ. ನೀಲಾ ಹೇಳಿದರು.
ಗದ್ದಲ ಎಬ್ಬಿಸಿದವರ ಜೊತೆಗೆ ಅವರಿಗೆ ಕುಮ್ಮಕ್ಕು ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಶಾಸಕ ಅರವಿಂದ ಬೆಲ್ಲದ ಅವರು ಗದ್ದಲ ಎಬ್ಬಿಸಿದವರನ್ನು ಸಮರ್ಥಿಸಿಕೊಂಡಿರುವುದು ಖಂಡನೀಯ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರಾಜಕೀಯ ಬಣ್ಣ ಹಚ್ಚಿರುವ ಶಾಸಕ ಅರವಿಂದ ಬೆಲ್ಲದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆ. ನೀಲಾ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮುದಾಯ ಧಾರವಾಡದ ಗೌರವಾಧ್ಯಕ್ಷ ಡಾ. ಶಿವಾನಂದ ಶೆಟ್ಟರ, ಬಿ.ಎನ್. ಪೂಜಾರಿ, ಬಿ.ಐ. ಈಳಗೇರ, ಮಹೇಶ ಪತ್ತಾರ, ಎ.ಎಂ. ಖಾನ್ ಹಾಗೂ ಇಸಾಬೆಲ್ಲಾ ಝೇವಿಯರ್ ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed