Karnataka Voice

Latest Kannada News

ಅಪಘಾತವಾದಾಗಲೇ “ಸ್‌ಲೈನ್”ದಲ್ಲಿ ವಿಷ ಹಾಕಿ ಮಾಜಿ ಯೋಧನನ್ನೆ ಕೊಂದ ಪತ್ನಿ…!!!

2 ಕೋಟಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನಿಗೆ ವಿಷವಿಕ್ಕಿ ಕೊಂದ ಪತ್ನಿ ಮತ್ತು ಪ್ರಿಯಕರ!

ಬೆಳಗಾವಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಹಾಗೂ ಕೋಟ್ಯಂತರ ರೂಪಾಯಿ ವಿಮೆ ಹಣದ ಆಸೆಗೆ ಬಿದ್ದು, ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸೈನಿಕನಿಗೆ ಗ್ಲೂಕೋಸ್ ಬಾಟಲ್ ಮೂಲಕ ವಿಷವಿಕ್ಕಿ ಕೊಲೆ ಮಾಡಿರುವ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

​ಘೋಡಗೇರಿ ನಿವಾಸಿ, ಮಾಜಿ ಸೈನಿಕ ಸಂದೀಪ್ ಮಾಂಜರಿ (45) ಕೊಲೆಯಾದ ದುರ್ದೈವಿ. ಕೃತ್ಯಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ಸುಮಾ ಹಾಗೂ ಆಕೆಯ ಪ್ರಿಯಕರ ಪುಂಡಲೀಕ ಎಂಬುವವರನ್ನು ಯಮಕನಮರಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

​ಮೂರು ತಿಂಗಳ ಹಿಂದೆ ಹುಕ್ಕೇರಿಯ ದೇವಿ ಜಾತ್ರೆ ಮುಗಿಸಿ ಬರುತ್ತಿದ್ದಾಗ ಸಂದೀಪ್ ಮಾಂಜರಿ ಅವರಿಗೆ ರಸ್ತೆ ಅಪಘಾತವಾಗಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೇ ಅವಕಾಶವಾಗಿ ಬಳಸಿಕೊಂಡ ಪತ್ನಿ ಸುಮಾ ಮತ್ತು ಪ್ರಿಯಕರ ಪುಂಡಲೀಕ, ಆಸ್ಪತ್ರೆಯಲ್ಲೇ ಸಂದೀಪ್‌ಗೆ ನೀಡಲಾಗುತ್ತಿದ್ದ ಗ್ಲೂಕೋಸ್ ಬಾಟಲಿಗೆ ವಿಷ ಬೆರೆಸಿದ್ದಾರೆ ಎನ್ನಲಾಗಿದೆ. ವಿಷ ದೇಹ ಸೇರಿದ ಕೆಲವೇ ಕ್ಷಣಗಳಲ್ಲಿ ಸಂದೀಪ್ ಮೃತಪಟ್ಟಿದ್ದರು. ಅಪಘಾತದಿಂದಲೇ ಸಾವು ಸಂಭವಿಸಿದೆ ಎಂದು ನಂಬಿಸಿ, ಯಾರಿಗೂ ಅನುಮಾನ ಬಾರದಂತೆ ಮೂರು ತಿಂಗಳ ಹಿಂದೆಯೇ ಶವ ಸಂಸ್ಕಾರವನ್ನೂ ನೆರವೇರಿಸಲಾಗಿತ್ತು.

​ಗಂಡ ಸತ್ತರೆ ಬರುವ ಬರೋಬ್ಬರಿ 2 ಕೋಟಿ ರೂಪಾಯಿ ಇನ್ಶೂರೆನ್ಸ್ (ವಿಮೆ) ಹಣ ಹಾಗೂ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿ ಇರಬಾರದು ಎಂಬ ಕಾರಣಕ್ಕೆ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸಂದೀಪ್ ಸಾವಿನ ಬಗ್ಗೆ ಕುಟುಂಬಸ್ಥರಿಗೆ ಅನುಮಾನ ಬಂದು ಯಮಕನಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನಿಖೆ ಚುರುಕು: ಪ್ರಕರಣದ ಗಾಂಭೀರ್ಯತೆ ಅರಿತ ಪೊಲೀಸರು, ಬೆಳಗಾವಿ ಎಸಿ ಶ್ರವಣಕುಮಾರ್ ಸಮ್ಮುಖದಲ್ಲಿ ಮೂರು ತಿಂಗಳ ಬಳಿಕ ಹೂತಿದ್ದ ಸಂದೀಪ್ ಅವರ ಶವವನ್ನು ಹೊರತೆಗೆದು ಮಹಜರು ನಡೆಸಿದ್ದಾರೆ. ಶವದ ಅವಶೇಷಗಳನ್ನು ಎಫ್‌ಎಸ್‌ಎಲ್ (FSL) ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಂಪೂರ್ಣ ಸತ್ಯಾಂಶ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *