Category: ನಮ್ಮೂರು

  • ಹುಬ್ಬಳ್ಳಿಯಲ್ಲಿ ಡಿಸಿಪಿ ರಾಮರಾಜನ್ ಬೇಟೆ: 17 ಬೈಕುಗಳು ವಶ.. ನಡೆದದ್ದಾದರೂ ಏನೂ ಗೊತ್ತಾ..!

    ಹುಬ್ಬಳ್ಳಿ: ಕಾನೂನು ಉಲ್ಲಂಘನೆ ಮಾಡಿ ಬಾರ್ ಆ್ಯಂಡ್ ರೆಸ್ಟೊಂರೆಂಟ್ ನಡೆಸುತ್ತಿದ್ದವರ ಮೇಲೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಿನ ದಕ್ಷ ಅಧಿಕಾರಿಯಾದ ಡಿಸಿಪಿ ರಾಮರಾಜನ್ ದಾಳಿ ಮಾಡಿದ್ದು, ಕಾನೂನು ಲೆಕ್ಕಸಿದೇ ಕುಳಿತವರ 17 ಬೈಕುಗಳನ್ನ ವಶಕ್ಕೆ ಪಡೆದಿದ್ದಾರೆ.

    ಕಾನೂನು ಮೀರಿಯೂ ಸಮಯವನ್ನೂ ಮೀರಿ ಕುಳಿತಿದ್ದವರಿಗೆ ಬಿಸಿ ಮುಟ್ಟಿಸಲಾಗಿದ್ದು, ಹುಬ್ಬಳ್ಳಿ ಗೋಕುಲ ರಸ್ತೆಯ ಐ ಕ್ಯೂಬ್ ಬಾರ್ ಆ್ಯಂಡ್ ರೆಸ್ಟೊಂರೆಂಟಿನಲ್ಲಿ.

    ಪ್ರತಿ ದಿನವೂ ಸಮಯದ ಬಗ್ಗೆ ಅರಿವೇ ಇಲ್ಲದೇ ತೆರೆಯುತ್ತಿದ್ದನ್ನ ಗಮನಿಸಿರುವ ಡಿಸಿಪಿ ರಾಮರಾಜನ್ ತಮ್ಮ ತಂಡದೊಂದಿಗೆ ದಾಳಿ ಮಾಡಿದ್ದಾರೆ. ಆಗ ಕೆಲವರು ನಾವೂ ಮಂತ್ಲಿ ಕೊಡುತ್ತೇವೆ ಎಂದು ಹೇಳಿದಾಗ, ಅವರಿಗೂ ಡಿಸಿಪಿ ಸರಿಯಾಗಿಯೇ ಪಾಠ ಮಾಡಿದ್ದಾರೆಂದು ಗೊತ್ತಾಗಿದೆ.

    ಕಾನೂನು ಪಾಲಕರನ್ನ ಖರೀದಿ ಮಾಡಿದ್ದೇವೆ ಎಂದು ಹೇಳಿಕೊಂಡು ನಡೆಯುತ್ತಿರುವ ಕೆಲವರಿಗೆ ದಕ್ಷ ಅಧಿಕಾರಿಗಳ ನಡೆ, ಭಯವನ್ನ ಹುಟ್ಟಿಸುತ್ತಿದೆ. ಆದರೆ, ಸಾರ್ವಜನಿಕ ವಲಯದಲ್ಲಿ ಇಂತಹ ಅಧಿಕಾರಿಗಳು ಬೇಕು ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.

  • ನಲ್ಪಾಡ ಅಧ್ಯಕ್ಷ, ರಕ್ಷಾ ರಾಮಯ್ಯ ಕಾರ್ಯಾಧ್ಯಕ್ಷ: ಯೂಥ್ ಕಾಂಗ್ರೆಸ್ ಮಹತ್ವದ ಬದಲಾವಣೆ..

    ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನ  ಪಡೆದರೂ ಅನರ್ಹರಾಗಿದ್ದ ಮೊಹ್ಮದ ಹ್ಯಾರಿಸ್ ನಲ್ಪಾಡ್ ಅವರನ್ನ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದ್ದು, ಹಾಲಿ ರಕ್ಷಾ ರಾಮಯ್ಯ ಅವರನ್ನ ಕಾರ್ಯಾಧ್ಯಕ್ಷರನ್ನಾಗಿ ಆಯ್ಕ ಮಾಡಲಾಗಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.

    ಆ್ಯಪ್ ಮೂಲಕ ಹೆಚ್ಚು ಮತ ಪಡೆದರೂ ಕೊನೆಗಳಿಗೆಯಲ್ಲಿ ಮೊಹ್ಮದ ನಲ್ಪಾಡ್ ಅವರನ್ನ ಅನರ್ಹಗೊಳಿಸಿದ್ದ ಕಾಂಗ್ರೆಸ್, ಈಗ ಕಾರ್ಯಕರ್ತರ ಒತ್ತಡಕ್ಕೆ ಮಣಿದು, ಅವರನ್ನೇ ರಾಜ್ಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ನಲ್ಪಾಡ್ ಅನರ್ಹಗೊಂಡ ಹಿನ್ನೆಲೆಯಲ್ಲಿ 2ನೇ ಅತೀ ಹೆಚ್ಚು ಮತಗಳನ್ನ ಪಡೆದಿದ್ದ ರಕ್ಷಾ ರಾಮಯ್ಯರನ್ನ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

    ಮೊಹ್ಮದ ನಲ್ಪಾಡರ ಅನರ್ಹತೆಯನ್ನ ಖಂಡಿಸಿ ರಾಜ್ಯದ ಹಲವೆಡೆ ತೀವ್ರ ಥರದ ವಿರೋಧಗಳು ಕೇಳಿ ಬಂದಿದ್ದವು. ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ ಎಂದು ಕೆಲವರು ಅಲವತ್ತುಕೊಂಡಿದ್ದರು. ಅಷ್ಟೇ ಅಲ್ಲ, ಪಕ್ಷವನ್ನ ತೊರೆಯುವುದಾಗಿಯೂ ಎಚ್ಚರಿಕೆ ನೀಡಿದ್ದರು.

    ಇದೀಗ ಪಕ್ಷದ ಪ್ರಮುಖರು ಯುವ ಕಾಂಗ್ರೆಸ್ ಸಮಸ್ಯೆಯನ್ನ ಕೊನೆಗಾಣಿಸಿದ್ದು, ಮೊಹ್ಮದ ನಲ್ಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ, ರಕ್ಷಾ ರಾಮಯ್ಯ ಕಾರ್ಯಾಧ್ಯಕ್ಷರಾಗಿಯೂ ಕಾರ್ಯವನ್ನ ನಿರ್ವಹಿಸಲಿದ್ದಾರೆ.

  • ಮೇಜರ್ ಸಿದ್ಧಲಿಂಗಯ್ಯ ಕಂ ಬ್ಯಾಕ್..!

    ಧಾರವಾಡ: ಕಳೆದ ಎರಡು ದಿನದ ಹಿಂದೆ ವರ್ಗಾವಣೆಯಾಗಿದ್ದ ಆದೇಶವನ್ನ ಮತ್ತೆ ರದ್ದು ಮಾಡಿರುವ ಸರಕಾರ, ಇಬ್ಬರು ಅಧಿಕಾರಿಗಳಿಗೆ ಮೊದಲಿನ ಜಾಗದಲ್ಲೇ ಮುಂದುವರೆಯುವಂತೆ ಆದೇಶ ಮಾಡಿದ್ದಾರೆ.

    ಹಾವೇರಿ ಜಿಲ್ಲೆಯ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿಯಾಗಿದ್ದ ರಮೇಶ ದೇಸಾಯಿ ಅವರನ್ನ ಧಾರವಾಡದಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಪರ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಇಲ್ಲಿದ್ದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರಿಗೆ ಯಾವುದೇ ಜಾಗವನ್ನ ತೋರಿಸಿರಲಿಲ್ಲ.

    ಸರಕಾರ ಮತ್ತೆ ಎರಡೇ ದಿನದಲ್ಲಿ ಹೊಸದೊಂದು ಆದೇಶ ಹೊರಡಿಸಿದ್ದು, ಇಬ್ಬರು ಅಧಿಕಾರಿಗಳು ಮೊದಲಿನ ಜಾಗದಲ್ಲಿಯೇ ಮುಂದುವರೆಯುವಂತೆ ಸೂಚನೆ ನೀಡಿದೆ.

    ಶಿಕ್ಷಣ ಇಲಾಖೆಯ ಮಹತ್ವದ ಹುದ್ದೆಯಲ್ಲೂ ಸರಕಾರ ಇಂತಹ ದ್ವಂದ್ವ ನೀತಿಯನ್ನ ಅನುಸರಿಸುತ್ತಿರುವುದು ಸೋಜಿಗವೆನಿಸುತ್ತಿದೆ. ಹೀಗೆ ಮಾಡುವ ಮುನ್ನವೇ ಸರಕಾರ ಸ್ಪಷ್ಟವಾದ ನಿಲುವಿಗೆ ಏಕೆ ಇರುವುದಿಲ್ಲವೆನ್ನುವುದು ಹಲವರ ಪ್ರಶ್ನೆಯಾಗಿದೆ.

  • ಶಿವಳ್ಳಿಯಲ್ಲಿ “ನಾನು” ಅಲ್ಲಾ “ನಾವೂ” ಟೀಂನಿಂದ ಉತ್ತಮ ಕಾರ್ಯ..!

    ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಯುವಕರ ಪಡೆಯೊಂದು ಗ್ರಾಮದ ಸ್ವಚ್ಚತೆಯ ಸಂಕಲ್ಪ ಮಾಡಿಕೊಂಡು ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

    ನಾನು ಅಲ್ಲಾ ನಾವೂ ಎಂಬ ತಂಡವನ್ನ ಕಟ್ಟಿಕೊಂಡಿರುವ ಯುವಕರು, ಇಂದು ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಚತಾ ಕಾರ್ಯವನ್ನ ನಡೆಸಿದರು. ಈ ಕಾರ್ಯದಿಂದ ಗ್ರಾಮದಲ್ಲಿ ಹೊಸತನದ ಅಲೆ ಶುರುವಾಗಿದ್ದು, ಬಹುತೇಕ ಗ್ರಾಮಸ್ಥರು ಯುವಕರಿಗೆ ಶಹಬ್ಬಾಸ್ ಎನ್ನುವಂತಾಗಿದೆ.

    ಗ್ರಾಮದ ನಿಂಗಪ್ಪ ಹೆಬ್ಬಳ್ಳಿ, ಮಲೀಕಜಾನ ಸಾಬಣ್ಣನವರ, ಮುತ್ತಪ್ಪ ಹಂಚಿನಮನಿ, ಮಂಜುನಾಥ ಚೆಲವಾದಿ, ದಾದಾಪೀರ ಸಾಬಣ್ಣನವರ, ಶ್ರೀಧರ ಬಿಲ್ಲಿಂಗನವರ, ಸದ್ದಾಂ ನದಾಫ ಯುವಕರ ತಂಡ ಉತ್ತಮ ಕಾರ್ಯವನ್ನ ಮಾಡಿದ್ದು, ಜನಮೆಚ್ಚುಗೆಗೆ ಕಾರಣವಾಗಿದೆ.

    ಈಗಾಗಲೇ ಇದೇ ತಂಡ ಗ್ರಾಮದ ಸರಕಾರಿ ಶಾಲೆಯನ್ನೂ ಸ್ವಚ್ಚಗೊಳಿಸಿತ್ತು. ಯುವಕರು ಬೆಳ್ಳಂಬೆಳಿಗ್ಗೆಯೇ ಗ್ರಾಮದ ಅಭಿವೃದ್ಧಿಗೆ ಕನಸು ಕಂಡು ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ.

  • ಮುರುಘಾಮಠದಲ್ಲಿ ಸ್ವಚ್ಚ ಸಂಡೇ ಅಭಿಯಾನ

    ಧಾರವಾಡ: ಭಾರತೀಯ ಜನತಾ ಪಕ್ಷದ ಧಾರವಾಡ ನಗರ-71 ಯುವಮೋರ್ಚಾ ಘಟಕದ ವತಿಯಿಂದ ಇಂದು ಬೆಳಿಗ್ಗೆ 7 ಗಂಟೆಗೆ   ಧಾರವಾಡದ ವಾರ್ಡ್ ನಂಬರ್ 6 ರ ಸುಪ್ರಸಿದ್ಧ ಮುರುಘಾಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಸಂಪೂರ್ಣ ಮಠದ ಆವರಣವನ್ನು ಮಠದ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಯುವಮೋರ್ಚಾ ಅಧ್ಯಕ್ಷ  ಶಕ್ತಿ ಹಿರೇಮಠ ನೇತೃತ್ವದಲ್ಲಿ ಸ್ವಚ್ಚತಾ  ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

    ಈ ಸಂದರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಿರಣ  ಉಪ್ಪಾರ್, ಮಂಡಳ ಅಧ್ಯಕ್ಷ ಸುನೀಲ ಮೋರೆ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ  ಸಿದ್ದು ಕಲ್ಯಾಣ ಶೆಟ್ಟಿ,  ಮಂಡಳ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಾಯಕ ಗೊಂಧಳಿ, ಮಹಿಳಾ ಮೋರ್ಚಾ ಅದ್ಯಕ್ಷ ರಾಜೇಶ್ವರಿ ಅಳಗವಾಡಿ, ಸ್ವಚ್ಚ ಭಾರತ ಜಿಲ್ಲಾ ಸಂಚಾಲಕ ಸಹ ಸಂಚಾಲಕ ಪ್ರಕಾಶ್ ಇಂಗಳೆ, ಪಕ್ಷದ ಹಿರಿಯರಾದ ಪುಷ್ಪಾ ನವಲಗುಂದ, ನಿಂಗಪ್ಪ ಸಪೂರಿ, ಜಗದೀಶ್ ಚಿಕ್ಕಮಠ, ಕಪಿಲ ಶಿರಹಟ್ಟಿ, ಲತಾ ಕೆರಿಮಠ, ಮಾದೇವಿ ಕೌದಿ, ಮಾಲತಿ ಬರಗಿ,  ರಾಹುಲ್ ಅಷ್ಟಗಿ ಯುವಮೋರ್ಚಾ ಪ್ರಮುಖ ಪದಾಧಿಕಾರಿಗಳಾದ ರಾಘವೇಂದ್ರ ತುಪ್ಪದ, ಕಾರ್ತಿಕ ಪೂಜಾರ್, ಸಚಿನ ಚವಾಣ್, ಸೂರಂಜನ್ ಗೂಂಡೆ, ಸಾಗರ್ ಜೋಶಿ, ರಾಜೇಶ್ ನಾಯ್ಕ್ , ಅಮೃತ ಹೆಬ್ಬಳ್ಳಿ, ರವಿ ಮಾಳಗಾರ್,  ವಿನಾಯಕ   ಭೋಳೆ, ಪೃಥ್ವಿ ಚಿತಗುಬ್ಬಿ,  ರೋಹಿತ, ಸಾಯಿಪ್ರಸಾದ, ಗಂಗನಗೌಡ, ನಿಂಗನಗೌಡ, ಹೇಮಂತ್, ನಾಗರಾಜ್ ಹಾಗೂ ಎಲ್ಲ ಯುವಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

  • ಮೊಹ್ಮದ ನಲ್ ಪಾಡ್: ರಾಜ್ಯಾಧ್ಯಕ್ಷ ಸಿಂಧುಗೊಳಿಸಿ: ಕಾಂಗ್ರೆಸ್ ಮುಖಂಡ ಆನಂದ ಕಲಾಲ ಆಗ್ರಹ

    ಫಲಿತಾಂಶದ ನಂತರ ಅನರ್ಹಗೊಳಿಸಿದ್ದು, ಪಕ್ಷದ ಕಾರ್ಯಕರ್ತರನ್ನೂ ಅನರ್ಹಗೊಳಿಸಿದ ಹಾಗಾಗತ್ತೆ. ಜಾತ್ಯಾತೀತ ಮನೋಭಾವನೆಯಿಂದ ಮತ ಹಾಕಿದ ಅಷ್ಟು ಮತಗಳಿಗೆ ಗೌರವ ಕೊಡದ ಹಾಗಾಗತ್ತೆ ಎಂಬುದು ಪ್ರಮುಖರಿಗೆ ತಿಳಿಯಬೇಕಾಗಿದೆ..

    ಧಾರವಾಡ: ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದಿರುವ ಕಾಂಗ್ರೆಸ್ ಯುವ ನಾಯಕ ಮೊಹ್ಮದ ಹ್ಯಾರಿಸ್ ನಲ್ ಪಾಡ್ ಅವರನ್ನ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನಾಗಿ ಸಿಂಧುಗೊಳಿಸಬೇಕೆಂದು ಕಾಂಗ್ರೆಸ್ ಮುಖಂಡ ಆನಂದ ಕಲಾಲ ಆಗ್ರಹಿಸಿದ್ದಾರೆ.

    ಆನಂದ ಕಲಾಲ ಅವರು ಮೊದಲಿಂದಲೂ ಮೊಹ್ಮದ ನಲ್ ಪಾಡ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ನಲ್ ಪಾಡ್ ಅವರನ್ನ ಅಧ್ಯಕ್ಷರನ್ನಾಗಿ ಮಾಡದೇ ಹೋದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.

    ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮುನ್ನವೇ ಅವರನ್ನ ಅನರ್ಹಗೊಳಿಸಬೇಕಿತ್ತು. ಆದರೆ, ಚುನಾವಣೆ ಮುಗಿದ ಮೇಲೆ ಅನರ್ಹ ಮಾಡುವುದು ಯಾವ ಲೆಕ್ಕ. ಆ್ಯಪ್ ಮೂಲಕ ನಡೆದ ಚುನಾವಣೆಯಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆದಿದೆ. ಇದರಿಂದ ನಲ್ ಪಾಡ್ ಅವರನ್ನೇ ಅಧ್ಯಕ್ಷರನ್ನಾಗಿ ಘೋಷಣೆ ಮಾಡಬೇಕೆಂದು ಆನಂದ ಕಲಾಲ ಒತ್ತಾಯಿಸಿದ್ದಾರೆ.

    ಪಕ್ಷದಲ್ಲಿ ಯುವಕರನ್ನ ಸೆಳೆಯುವ ನಾಯಕತ್ವ ಮೊಹ್ಮದಹ್ಯಾರಿಸ್ ನಲ್ ಪಾಡ್ ಹೊಂದಿದ್ದಾರೆ. ಇಂದಿನ ಸ್ಥಿತಿಯಲ್ಲಿ ಪಕ್ಷವನ್ನ ಮುನ್ನಡೆಸುವ ಯುವಕರು ಬೇಕಾಗಿದ್ದಾರೆ. ಹಾಗಾಗಿ, ಅವರನ್ನೇ ಅಧ್ಯಕ್ಷರನ್ನಾಗಿ ಘೋಷಣೆ ಮಾಡಬೇಕೆಂದು ಹೇಳಿದ್ದಾರೆ.

    ಒಂದು ವಾರದೊಳಗೆ ನಲ್ ಪಾಡ್ ಅವರನ್ನ ಅಧ್ಯಕ್ಷರನ್ನಾಗಿ ಘೋಷಣೆ ಮಾಡದೇ ಹೋದರೆ, ತಾವೂ ಬೆಂಬಲಿಗರೊಂದಿಗೆ ಹೋರಾಟದ ದಾರಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ಆನಂದ ಕಲಾಲ ಎಚ್ಚರಿಕೆ ನೀಡಿದ್ದಾರೆ.

  • ಧಾರವಾಡದ ರೇಗೆ ಆಟೋ ಸರ್ವೀಸಗೆ ಬೆಂಕಿ..!

    ಧಾರವಾಡ: ನಗರದ ಓಲ್ಡ್ ಡಿಎಸ್ಪಿ ಕ್ರಾಸ್ ಬಳಿಯಿರುವ ರೇಗೆ ಆಟೋ ಸರ್ವೀಸಗೆ ಬೆಂಕಿ ತಗುಲಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಬೆಂಕಿ ನಂದಿಸಲು ಪ್ರಯತ್ನ ಪಡುತ್ತಿದ್ದಾರೆ.

    ದ್ವಿಚಕ್ರವಾಹನಗಳನ್ನ ದುರಸ್ತಿ ಮಾಡುವ ರೇಗೆ ಆಟೋ ಸರ್ವೀಸನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಮನೆಗೂ ತಗುಲುವ ಸಾಧ್ಯತೆಯಿದ್ದು, ಅದನ್ನ ತಡೆಯುವ ಪ್ರಯತ್ನವನ್ನ ಅಗ್ನಿಶಾಮಕ ದಳದ ಸಿಬ್ಬಂದಿ ಮಾಡುತ್ತಿದ್ದಾರೆ.

    ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸಾರ್ವಜನಿಕರು ಹತ್ತಿರ ಬರದಂತೆ ತಡೆಗಟ್ಟುತ್ತಿದ್ದು, ಬೆಂಕಿ ತಗುಲಿದ ಸ್ಥಳದಲ್ಲಿ ನೂರಾರು ಜನರು ಜಮಾವಣೆಗೊಂಡಿದ್ದಾರೆ.

    ಈಗಾಗಲೇ ರೇಗೆ ಆಟೋ ಸರ್ವಿಸ್ ನಲ್ಲಿದ್ದ ಕೆಲವು ವಸ್ತುಗಳು ಸುಟ್ಟು ಕರಕಲಾಗಿದ್ದು, ಇನ್ನುಳಿದ ವಸ್ತುಗಳು ಉಳಿಸುವ ಪ್ರಯತ್ನ ನಡೆದಿದೆ. ಸಧ್ಯ ಬೆಂಕಿಯನ್ನ ಹತೋಟಿಗೆ ತರುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗುತ್ತಿದೆ.

  • ಸರಕಾರಿ ಶಾಲೆ ವಿದ್ಯಾರ್ಥಿಗೆ ಚಾಕು: ಆರು ಯುವಕರ ಮೇಲೆ ಪ್ರಕರಣ ದಾಖಲು..!

    ಧಾರವಾಡ: ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ 9ನೇ ತರಗತಿಯ ವಿದ್ಯಾರ್ಥಿಯ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಆರು ಜನರ ಮೇಲೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    ಮಾಚಾಪೂರದ ನಿವಾಸಿಯಾಗಿರುವ ಮಂಜುನಾಥ ಯಂಕಪ್ಪ ಲಮಾಣಿ ಎಂಬ ವಿದ್ಯಾರ್ಥಿಗೆ ಹೊಟ್ಟೆ, ಎದೆ ಮತ್ತು ಬೆನ್ನಿಗೆ ಚಾಕು ಹಾಕಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರು ಯುವಕರ ಮೇಲೆ ಪ್ರಕರಣ ದಾಖಲಾಗಿದೆ.

    ಆಕಾಶ ಬಸಪ್ಪ ಕಟ್ಟಿಮನಿ, ಯಲ್ಲಪ್ಪ ಮಂಜುನಾಥ ಕಟ್ಟಿಮನಿ, ಸುರೇಶ ದುರ್ಗಪ್ಪ ಕಟ್ಟಿಮನಿ, ಬಸವರಾಜ ಅಣ್ಣಪ್ಪ ಕಟ್ಟಿಮನಿ, ಕಾರ್ತೀಕ ಬಸವರಾಜ ಕಟ್ಟಿಮನಿ ಹಾಗೂ ದರ್ಶನ ಹರಿಜನ ಮೇಲೆ ಪ್ರಕರಣ ದಾಖಲಾಗಿದೆ. ಎಲ್ಲ ಆರೋಪಿತರು ಕಲಘಟಗಿ ಠಾಣೆಯ ಡಾ.ಅಂಬೇಡ್ಕರನಗರದವರಾಗಿದ್ದಾರೆ.

    ಎಲ್ಲರ ಮೇಲೆ ಕಲಘಟಗಿ ಠಾಣೆಯಲ್ಲಿ 341, 307, 504, 506 ಐಪಿಸಿ ಪ್ರಕರಣಗಳನ್ನ ಹಾಕಲಾಗಿದೆ. ಘಟನೆಯಲ್ಲಿ ದೇವೇಂದ್ರ ಲಕ್ಷ್ಮಣ ಲಮಾಣಿ ಎಂಬುವವರು ಗಾಯಗೊಂಡಿದ್ದಾರೆ.

  • ತಿಳುವಳಿಕೆ ನೀಡಿದ ಸಂಚಾರಿ ಠಾಣೆ ಪೊಲೀಸರಿಗೆ ಸತ್ಕಾರ..!

    ಧಾರವಾಡ: ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಿಶೇಷ ಕಾರ್ಯಕ್ರಮದ ಮೂಲಕ ಸಂಚಾರ ನಿಯಮಗಳನ್ನ ಪ್ರತಿಯೊಬ್ಬರಿಗೂ ತಿಳಿಸುವ ಪ್ರಯತ್ನಕ್ಕೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಮುಂದಾಗಿದ್ದು, ಇಂತಹ ಉತ್ತಮ ಕಾರ್ಯನಿರ್ವಹಿಸಿದ ಪೊಲೀಸರನ್ನ ಮಹಾವಿದ್ಯಾಲಯದ ವತಿಯಿಂದ ಸತ್ಕರಿಸಲಾಯಿತು.

    ಧಾರವಾಡ ತಾಲೂಕಿನ ರಾಯಾಪೂರ ಬಳಿಯಲ್ಲಿರುವ ಶ್ರೀ ಜಗದ್ಗುರು ಮೃತ್ಯುಂಜಯ ಮಹಾಂತ ಮಹಾವಿದ್ಯಾಲಯದಲ್ಲಿಂದು ಧಾರವಾಡ ಸಂಚಾರಿ ಠಾಣೆ ಪೊಲೀಸರಿಂದ ವಿಶೇಷ ತಿಳುವಳಿಕೆ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು.

    ಎಎಸ್ಐ ಎಂ.ಎಸ್.ಕರಗಣ್ಣನವರ, ಉಪನ್ಯಾಸಕರನ್ನ ಉದ್ದೇಶಿಸಿ ಮಾತನಾಡಿದರು. ರಸ್ತೆಯಲ್ಲಿ ಸಂಚರಿಸುವಾಗ ಜವಾಬ್ದಾರಿಯನ್ನ ಹೊಂದಿರಬೇಕೆಂದು ನಿಮ್ಮ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಆಗುವಂತೆ ಹೇಳಿ ಎಂದು ವಿನಂತಿಸಿದರು.

    ಇದೇ ಸಮಯದಲ್ಲಿ ಮುಖ್ಯಪೇದೆ ಮಂಜುನಾಥ ಗದ್ದಿಕೇರಿ, ಪೇದೆಗಳಾದ ಬಸು ಲಮಾಣಿ ಮತ್ತು ಕುಂಬಾರ ಅವರನ್ನ ಕಾಲೇಜಿನ ವತಿಯಿಂದ ಸತ್ಕರಿಸಲಾಯಿತು.

  • ನಿವೃತ್ತ ಬಿಎಸ್ಎಫ್ ಯೋಧನನ್ನ ಅವಿರೋಧ ಆಯ್ಕೆ ಮಾಡಿ, ಅಧ್ಯಕ್ಷರನ್ನಾಗಿಸಿದ ಗ್ರಾಮಸ್ಥರು…!

    ಗದಗ: ದೇಶ ಸೇವೆ ಮಾಡುವ ಸೈನಿಕನಿಗೆ ಗೌರವ ಕೊಡಬೇಕು. ಆತನಿಗೆ ಬಹಳಷ್ಟು ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಬರೀ ಮಾತಿನಲ್ಲೇ ಹೇಳಿದರೇ ಸಾಲದು. ಅದನ್ನ ಕಾರ್ಯಗತ ಮಾಡಿ ತೋರಿಸಬೇಕೆಂಬ ಮಾತನ್ನ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮಸ್ಥರು ಸದ್ದಿಲ್ಲದೇ ಮಾಡಿ ತೋರಿಸಿದ್ದಾರೆ.

    ಹೌದು.. ಕಳೆದ ಎರಡು ವರ್ಷದ ಹಿಂದೆ ಬಾರ್ಡರ್ ಸೆಕ್ಯುರಿಟಿ ಪೋರ್ಸ(ಬಿಎಸ್ಎಫ್)ನಲ್ಲಿಕರ್ತವ್ಯ ಸಲ್ಲಿಸಿ ಮರಳಿ ಬಂದ ಯೋಧ ವೆಂಕಟೇಶ ಗೆಜ್ಜಿ ಎಂಬುವವರನ್ನ 4ನೇ ವಾರ್ಡಿನಲ್ಲಿ ನಿಲ್ಲಿಸಿ ಅವಿರೋಧವಾಗಿ ಆಯ್ಕೆ ಮಾಡಿದ್ದರು. ಸಾಲದಕ್ಕೆ ಗ್ರಾಮ ಪಂಚಾಯತಿಗೆ ಜನರಲ್ ಮೀಸಲು ಬಂದಿದ್ದರೂ, ಎಸ್ಸಿ ಕೆಟಗೇರಿಯಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ಯೋಧ ವೆಂಕಟೇಶ ಅವರನ್ನೇ ಅಧ್ಯಕ್ಷ ಮಾಡಿದ್ದಾರೆ.

    ಹಿರೇವಡ್ಡಟ್ಟಿ ಗ್ರಾಮದಲ್ಲಿ ಒಟ್ಟು 19 ಸದಸ್ಯರ ಗೆದ್ದು ಬಂದಿದ್ದು, ವೀರಯೋಧನಿಗೆ ಸಾಥ್ ನೀಡಿದ್ದು ಭಾರತೀಯ ಜನತಾ ಪಕ್ಷದ ಬೆಂಬಲಿತ ಸದಸ್ಯರು, ಹಾಗಾಗಿಯೇ ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ವಿರೋಧ ಮಾಡಿದ್ದರೂ ಕೂಡಾ, ಬಿಜೆಪಿ ಬೆಂಬಲಿತರಿಂದ ಅಧ್ಯಕ್ಷಗಿರಿ ಪಡೆದುಕೊಂಡಿದ್ದಾರೆ.

    ಗ್ರಾಮ ಪಂಚಾಯತಿಗೆ ನಂದಿನಿ ಹೊಳೆಗುಂದಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಗ್ರಾಮದ ಅಭಿವೃದ್ಧಿಯನ್ನಷ್ಟೇ ಮನಸ್ಸಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವುದಾಗಿ ಯೋಧ ವೆಂಕಟೇಶ ಕರ್ನಾಟಕವಾಯ್ಸ್.ಕಾಂಗೆ ತಿಳಿಸಿದರು.