ಶಿಕ್ಷಕರು ಜಾತಕಪಕ್ಷಿಗಳಾಗಿದ್ದಾರೆ: ಆಯೋಗದ ಅನುಮತಿ ಪಡೆದು ವರ್ಗಾವಣೆ ಆರಂಭಿಸಿ
1 min readಹುಬ್ಬಳ್ಳಿ: ಶಿಕ್ಷಕರ ವರ್ಗಾವಣೆ ಕಳೆದ ಐದು ವರ್ಷದಲ್ಲಿ ಒಂದೇ ಬಾರಿ ನಡೆದಿದೆ. ಇದರಿಂದ ಶಿಕ್ಷಕರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ವರ್ಗಾವಣೆ ಅಪೇಕ್ಷಿತ ಶಿಕ್ಷಕರು ಕಂಗೆಟ್ಟಿದ್ದಾರೆಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ ಅವರಿಗೆ ಪತ್ರ ಬರೆದು ಮನವರಿಕೆ ಮಾಡಿದೆ.
ತೀವ್ರತರ ಕಾಯಿಲೆಯುಳ್ಳವರು, ವಿಕಲಚೇತನರು, ಪತಿ-ಪತ್ನಿಯರು, ವಿಧವೆಯರು ಹತಾಶರಾಗಿದ್ದಾರೆ. ಈ ದಿಸೆಯಲ್ಲಿ ಶಿಕ್ಷಕರ ವರ್ಗಾವಣೆಗಳು ಕೌನ್ಸಲಿಂಗ್ ಮೂಲಕ ಹಾಗೂ ಕೋರಿಕೆ ಮತ್ತು ಪರಸ್ಪರ ನಡೆಯುತ್ತವೆ. ಕಾರಣ ಚುನಾವಣಾ ನೀತಿ ಸಂಹಿತೆಯಿಂದ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸದೇ ಮುಖ್ಯ ಚುನಾವಣಾಧಿಕಾರಿಗಳ ಅನುಮತಿ ಪಡೆದು, ವರ್ಗಾವಣೆ ನಡೆಸಲು ಅನುಮತಿ ಪಡೆದು ವರ್ಗಾವಣೆ ಬಯಸುವ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಂಘ ಮನವಿ ಮಾಡಿಕೊಂಡಿದೆ.
ಮುಂಬರುವ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸುವ ಮತಗಟ್ಟೆ ಅಧಿಕಾರಿಗಳಿಗೆ ಮತದಾನದ ತಡರಾತ್ರಿ ಆಗುವುದರಿಂದ ಮತದಾನದ ಮಾರನೇ ದಿನ ಅನ್ಯ ಕಾರ್ಯ ನಿಮಿತ್ತ ಪರಿಗಣಿಸಬೇಕೆಂದು ಹಾಗೂ ಗೌರವ ಧನವನ್ನು ಎರಡು ಪಟ್ಟು ಹೆಚ್ಚಿಸಲು ಚುನಾವಣೆ ಅಯೋಗಕ್ಕೆ ಶಿಫಾರಸ್ಸು ಮಾಡಬೇಕೆಂದು ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಮನವಿ ಮಾಡಿಕೊಂಡಿದ್ದಾರೆ.