Karnataka Voice

Latest Kannada News

ಗಂಡನಿಗೆ 1.5ಲಕ್ಷ ರೂ. ಫೋನ್ ಫೇ ಮಾಡಿಸಿ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಲಕ್ಷ್ಮೀ ಪ್ಯಾಟಿ…

Spread the love

ಖಾತಾ ಉತಾರ ನೀಡಲು ಲಂಚ ಸ್ವೀಕಾರ: ಲೋಕಾಯುಕ್ತ ಬಲೆಗೆ ಬಿದ್ದ ಬಿಜನಗೇರಾ ಪಿಡಿಒ ಲಕ್ಷ್ಮೀ ಪ್ಯಾಟಿ

ರಾಯಚೂರು: ಲೇಔಟ್ ನಿರ್ಮಾಣಕ್ಕಾಗಿ ಎರಡು ಎಕರೆ ಜಮೀನಿನ ಖಾತಾ ಉತಾರ ನೀಡಲು ಸಾರ್ವಜನಿಕರಿಂದ ₹1.5 ಲಕ್ಷ ಲಂಚ ಪಡೆದ ತಾಲೂಕಿನ ಬಿಜನಗೇರಾ ಗ್ರಾಮ ಪಂಚಾಯಿತಿಯ ಪಿಡಿಒ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಲಕ್ಷ್ಮೀ ಪ್ಯಾಟಿ ಅವರು ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬಿಜನಗೇರಾ ನಿವಾಸಿಯಾದ ಮಹಬೂಬ್ ಅಲಿ ಎಂಬುವವರು ತಮ್ಮ ಪಂಚಾಯಿತಿ ವ್ಯಾಪ್ತಿಯ ಉಂಡ್ರಾಳದೊಡ್ಡಿ ಗ್ರಾಮದಲ್ಲಿ ಲೇಔಟ್ ನಿರ್ಮಾಣ ಮಾಡಲು ಎರಡು ಎಕರೆ ಜಮೀನಿನ ಖಾತಾ ಉತಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಉತಾರವನ್ನು ನೀಡಲು ಪಿಡಿಒ ಲಕ್ಷ್ಮೀ ಪ್ಯಾಟಿ ಅವರು ಮೊದಲಿಗೆ ₹2 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ₹1.50 ಲಕ್ಷ ಹಣವನ್ನು ತಮ್ಮ ಪತಿಯ ಮೊಬೈಲ್ ಸಂಖ್ಯೆಗೆ ‘ಫೋನ್ ಪೇ’ (PhonePe) ಮೂಲಕ ಡಿಜಿಟಲ್ ರೂಪದಲ್ಲಿ ಪಾವತಿಸುವಂತೆ ಮಹಬೂಬ್ ಅಲಿ ಅವರಿಗೆ ಸೂಚಿಸಿದ್ದರು.

ಲಂಚ ನೀಡಲು ಇಷ್ಟವಿಲ್ಲದ ಮಹಬೂಬ್ ಅಲಿ ಅವರು ಈ ಬಗ್ಗೆ ತಕ್ಷಣವೇ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳ ಮಾರ್ಗದರ್ಶನದಂತೆ ಮಹಬೂಬ್ ಅಲಿ ಅವರು ಪಿಡಿಒ ಪತಿಯ ಅಕೌಂಟ್‌ಗೆ ಫೋನ್‌ಪೇ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದಂತೆ, ಕಾರ್ಯಪ್ರವೃತ್ತರಾದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

​ಸದ್ಯ ಲೋಕಾಯುಕ್ತ ಅಧಿಕಾರಿಗಳು ಪಿಡಿಒ ಲಕ್ಷ್ಮೀ ಪ್ಯಾಟಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *