ದಾರಿಗಾಗಿ ಅಣ್ಣನಿಗೆ “ದೇವರ ದಾರಿ” ತೋರಿಸಿದ ಪಾಪಿ ತಮ್ಮ: ಬೆಚ್ಚಿಬಿದ್ದ ಕರಡಿಗುಡ್ಡ…!!!
ಧಾರವಾಡ: ಮನೆಗೆ ಹೋಗುವ ದಾರಿ ವಿಚಾರವಾಗಿ ನಡೆದ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಸಂಭವಿಸಿದೆ. ಶ್ರೀಕಾಂತ್ ಚಿಕ್ಕಮಠ ಎಂಬಾತನೇ ತನ್ನ ಸ್ವಂತ ಅಣ್ಣ ಮಲ್ಲಯ್ಯ ಚಿಕ್ಕಮಠ (ಮೃತ) ಎಂಬುವವರನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಕರಡಿಗುಡ್ಡ ಗ್ರಾಮದ ನಿವಾಸಿಗಳಾದ ಮಲ್ಲಯ್ಯ ಹಾಗೂ ಶ್ರೀಕಾಂತ್ ನಡುವೆ ಕಳೆದ ಕೆಲವು ದಿನಗಳಿಂದ ಮನೆಗೆ ಹೋಗುವ ದಾರಿ ವಿಚಾರವಾಗಿ ವಿವಾದವಿತ್ತು. ಎಂದಿನಂತೆ ಸೋಮವಾರವೂ ಇಬ್ಬರ ನಡುವೆ ಇದೇ ವಿಚಾರಕ್ಕೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ, ಅಣ್ಣ ಮಲ್ಲಯ್ಯ ಚಾಕುವಿನಿಂದ ತಮ್ಮ ಶ್ರೀಕಾಂತ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾನೆ. ಇದರಿಂದ ಕೋಪೋದ್ರಿಕ್ತನಾದ ತಮ್ಮ ಶ್ರೀಕಾಂತ್, ಅಣ್ಣನ ಕೈಯಲ್ಲಿದ್ದ ಚಾಕುವನ್ನೇ ಕಸಿದುಕೊಂಡು ಆತನಿಗೆ ಮನಸೋಇಚ್ಛೆ ತಿವಿದು ಪ್ರತಿದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಚಿಕಿತ್ಸೆ ಫಲಿಸದೆ ಸಾವು: ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಲ್ಲಯ್ಯನನ್ನು ತಕ್ಷಣವೇ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಲ್ಲಯ್ಯ ಸಾವನ್ನಪ್ಪಿದ್ದಾನೆ. ಅಣ್ಣ ಮೃತಪಡುತ್ತಿದ್ದಂತೆ ಆರೋಪಿ ಶ್ರೀಕಾಂತ್ ಸ್ಥಳದಿಂದ ಪರಾರಿಯಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಗುಂಜನ್ ಆರ್ಯ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
