Karnataka Voice

Latest Kannada News

​ಕುಂದಗೋಳ: ಮನೆಯ ದೀಪವೇ ಆರಿಹೋದಾಗ… ಕತ್ತಲಲ್ಲಿ ಕರಗುತ್ತಿದ್ದ ಹೆತ್ತವರ ಕಣ್ಣೀರು ಒರೆಸಿದ ಸಾಮಾಜಿಕ ಧ್ವನಿ “ಮಲ್ಲಿಕಾರ್ಜುನ ಬಾಳಿಕಾಯಿ!”

Spread the love

ಕುಂದಗೋಳ: ಮೊನ್ನೆ ಇಡೀ ನಾಡನ್ನೇ ಬೆಚ್ಚಿಬೀಳಿಸಿದ್ದ ಆ ಭೀಕರ ರಸ್ತೆ ಅಪಘಾತದಲ್ಲಿ ಬಸ್ಸಿನ ಕಿಟಕಿಯಿಂದ ಇಣುಕಿದ ಯುವಕನ ತಲೆ ಟಿಪ್ಪರ್ ಹೊಡೆತಕ್ಕೆ ಸಿಲುಕಿ ಕತ್ತರಿಸಿ ಬಿದ್ದ ಘಟನೆ ಇಡೀ ಸಮಾಜದ ಕಣ್ಣಾಲಿಗಳನ್ನು ಒದ್ದೆಯಾಗಿಸಿತ್ತು. ಆದರೆ, ಈ ದುರಂತದ ಬೆನ್ನಲ್ಲೇ ಕೆಲವು ಮಾಧ್ಯಮಗಳು ಸತ್ಯಾಸತ್ಯತೆ ಪರಿಶೀಲಿಸದೆ, “ಯುವಕ ಗುಟ್ಕಾ ಉಗುಳಲು ಹೋಗಿ ಪ್ರಾಣ ಕಳೆದುಕೊಂಡ” ಎಂದು ಚಾರಿತ್ರ್ಯ ವಧೆ ಮಾಡಿ ಆ ನೊಂದ ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದ್ದವು.

​ಮಾಧ್ಯಮಗಳ ಈ ಬೇಜವಾಬ್ದಾರಿತನದ ವಿರುದ್ಧ ಹಾಗೂ ನೊಂದ ಕುಟುಂಬದ ಪರವಾಗಿ ಧ್ವನಿಯೆತ್ತಲು ಕುಂದಗೋಳ ತಾಲೂಕಿನ ಸಾಮಾಜಿಕ ಧ್ವನಿ ಮಲ್ಲಿಕಾರ್ಜುನ ಬಾಳಿಕಾಯಿ ಅವರು ಮುಂದಾಗಿದ್ದಾರೆ.

​”ಮೃತ ದುರ್ದೈವಿ ದಿ. ಫಕ್ಕಿರೇಶ ಮುತ್ತಳ್ಳಿಮರ ಅವರಿಗೆ ಗುಟ್ಕಾ ಸೇರಿದಂತೆ ಯಾವುದೇ ರೀತಿಯ ದುಷ್ಟಟಗಳು ಇರಲಿಲ್ಲ. ಆತ ಅತ್ಯಂತ ಸಭ್ಯ ಮತ್ತು ಕಷ್ಟಪಟ್ಟು ದುಡಿಯುವ ಯುವಕನಾಗಿದ್ದ” ಎಂದು ಮಲ್ಲಿಕಾರ್ಜುನ ಬಾಳಿಕಾಯಿ ಅವರು ವಾಸ್ತವವನ್ನು ಜಗತ್ತಿಗೆ ಸಾರಿದ್ದಾರೆ.

​ಅಳೆತ್ತರಕ್ಕೆ ಬೆಳೆದು ನಿಂತು ಇಡೀ ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡು ಕಣ್ಣೀರಿನ ಮಡುವಿನಲ್ಲಿ ಮುಳುಗಿರುವ ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ಫಕ್ಕಿರೇಶ ಅವರ ಮನೆಗೆ ಖುದ್ದಾಗಿ ಭೇಟಿ ನೀಡಿದ ಮಲ್ಲಿಕಾರ್ಜುನ ಬಾಳಿಕಾಯಿ ಹಾಗೂ ಸ್ನೇಹಿತರು, ಹೆತ್ತವರಿಗೆ ಸಾಂತ್ವನ ಹೇಳಿದರು. ಕಲ್ಪನೆಗೂ ನಿಲುಕದ ದುಃಖದಲ್ಲಿರುವ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಅವರು, ತಮ್ಮ ಕೈಲಾದ ಅಳಿಲು ಸೇವೆಯನ್ನು ಸಲ್ಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


Spread the love

Leave a Reply

Your email address will not be published. Required fields are marked *