ಧಾರವಾಡ: ಪ್ರತಿಭಟನೆಗೆ ಅವಕಾಶ ನಿರಾಕರಣೆ- ಕಮೀಷನರ್ ಶಶಿಕುಮಾರ: ಪ್ರತಿಭಟನೆ ಮಾಡೇ ಮಾಡ್ತೇವಿ: ಅಕ್ಸಾ ಕಾಂತಕುಮಾರ…
ಧಾರವಾಡ: ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿನ ಅವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಕ್ಸಾ ಸಂಘಟನೆ ಆಗಸ್ಟ್ 18ರಂದು ಧಾರವಾಡದ ಮಿಂಚಿಗನ್ ಕಾಂಪೌಂಡ್ನಲ್ಲಿ ಹೋರಾಟಕ್ಕೆ ಮುಂದಾಗಿದ್ದು, ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
ಆಕ್ಸಾ ರಾಜ್ಯಾಧ್ಯಕ್ಷ ಕಾಂತಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾನ್ಸ್ಟೇಬಲ್ ಪರೀಕ್ಷೆಯ ಹಲವು ಕೇಂದ್ರಗಳಲ್ಲಿ ಸಮಯ, ಗಡಿಯಾರ, ಕುಡಿಯುವ ನೀರು ಹಾಗೂ ಸಾರಿಗೆ ವ್ಯವಸ್ಥೆ ಇರಲಿಲ್ಲ. ಇದರಿಂದ ಹಲವರು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಪರೀಕ್ಷೆಯನ್ನು ಮರು ನಡೆಸಬೇಕು, ಪರೀಕ್ಷಾರ್ಥಿಗಳಿಗೆ ಉಚಿತ ಬಸ್-ರೈಲು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕೆಪಿಎಸ್ಸಿ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳ ಅಕ್ರಮಗಳ ಬಗ್ಗೆ ಐದು ವರ್ಷಗಳ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಶಿಕ್ಷಣ ಇಲಾಖೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
“ಇದು ವೈಯಕ್ತಿಕ ಹೋರಾಟವಲ್ಲ. ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗಾಗಿ ನಡೆಸುತ್ತಿರುವ ಶಾಂತಿಯುತ ಹೋರಾಟ. ಅನುಮತಿ ಇಲ್ಲದಿದ್ದರೂ ಹೋರಾಟ ನಡೆಸುತ್ತೇವೆ” ಎಂದು ಕಾಂತಕುಮಾರ್ ಹೇಳಿದರು.
ಕಮೀಷನರ್ ಸ್ಪಷ್ಟನೆ
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, “ಕಳೆದ ಸೆಪ್ಟೆಂಬರ್ನ ಪ್ರತಿಭಟನೆ ವೇಳೆ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಕಾನೂನು-ಸುವ್ಯವಸ್ಥೆ ದೃಷ್ಟಿಯಿಂದ ಮಿಂಚಿಗನ್ ಕಾಂಪೌಂಡ್ನಲ್ಲಿ ಪ್ರತಿಭಟನೆಗೆ ಅನುಮತಿ ನೀಡಿಲ್ಲ. ಹೈಕೋರ್ಟ್ ನೂರು ಜನರಿಗೆ ನೆಹರು ಮೈದಾನದಲ್ಲಿ ಅವಕಾಶ ನೀಡಿದ್ದರೂ ಅಲ್ಲಿ ಪ್ರತಿಭಟನೆ ನಡೆಸದೆ ಬೇರೆ ಸ್ಥಳದಲ್ಲಿ ಅನುಮತಿ ಕೋರಲಾಗಿದೆ” ಎಂದು ತಿಳಿಸಿದ್ದಾರೆ.
ಅನುಮತಿ ನಿರಾಕರಣೆಯ ನಡುವೆಯೂ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಘೋಷಿಸಿರುವ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಕುತೂಹಲ ಮೂಡಿದೆ.
