Category: ನಮ್ಮೂರು

  • ಕುಂದಗೋಳದ ಬಳಿ ಕಾರು-ಬಸ್ ಡಿಕ್ಕಿ-ಇಬ್ಬರಿಗೆ ಗಂಭೀರ ಗಾಯ

    ಧಾರವಾಡ: ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ದ ಬಸ್ ಗೆ ಹಾಗೂ ಕುಂದಗೋಳದಿಂದ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

    ಕಾರಿನ ಮುಂಭಾಗಕ್ಕೆ ಬಸ್ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದವರಿಗೆ ತೀವ್ರ ಥರದ ಗಾಯಗಳಾಗಿದ್ದು, ಇಬ್ಬರನ್ನೂ ಕಿಮ್ಸಗೆ ರವಾನೆ ಮಾಡಲಾಗಿದೆ.

    ಯರೇಬೂದಿಹಾಳ ಕ್ರಾಸ್ ಬಳಿ ನಡೆದ ಘಟನೆಯಲ್ಲಿ ಗಾಯಗೊಂಡವರ ಬಗ್ಗೆ ಹೆಚ್ಚಿನ ಮಾಹಿತಿ ಬರಬೇಕಿದ್ದು, ಪ್ರಕರಣ ಕುಂದಗೋಳ ಠಾಣೆಯಲ್ಲಿ ದಾಖಲಾಗಿದೆ. ಬಸ್ ಚಾಲಕನಿಂದ ಅಪಘಾತದ ಬಗ್ಗೆ ಮಾಹಿತಿಯನ್ನ ಪಡೆಯಲಾಗುತ್ತಿದೆ.

  • “ಚಹಾ” ಮಾರೋ ವೇಷ- ಕಾಲಿ”ಮಿರ್ಜಿ” ಕಾರ್ಯಾಚರಣೆ- ಮಾರೋರ ರಾಬರಿ ಬಯಲು..!

    ಹುಬ್ಬಳ್ಳಿ: ನೀವೂ ಟ್ರೇನನಲ್ಲಿ ಹೋಗುತ್ತಿದ್ದರೇ ಚಾ.. ಚಾ.. ಚಾ.. ಎಂದು ಧ್ವನಿಯನ್ನ ಕೇಳಿಯೇ ಇರುತ್ತೀರಿ. ಹಾಗೇ ಬಂದು ಹೋಗುವವರೇ ನಿಮ್ಮ ಬ್ಯಾಗನ್ನೂ ಎಗರಿಸಿ ಹೋಗುತ್ತಿದ್ದರೆಂಬ ಸತ್ಯವನ್ನ ರೇಲ್ವೆ ಪೊಲೀಸರು ಬಯಲು ಮಾಡಿದ್ದು, ಆರೋಪಿಗಳಿಬ್ಬರನ್ನ ಬಂಧನ ಮಾಡಿದ್ದಾರೆ.

    ಚಲಿಸುವ ರೇಲ್ವೆಯಲ್ಲಿ ಚಹಾ ಮಾರಾಟ ಮಾಡುತ್ತಲೇ ಮಹಿಳೆಯರನ್ನ ಬ್ಯಾಗನ್ನ ಕದ್ದು ಹೊರಗೆ ಎಸೆದು ಕಳ್ಳತನ ಮಾಡುತ್ತಿದ್ದ ಮಂಟೂರ ರಸ್ತೆಯ ಯೋಹಾನಕುಮಾರ ಪ್ರಾನ್ಸಿಸ್ ಕೂಂದರ್ತಿ ಹಾಗೂ ಪ್ರೇಮಕುಮಾರ ಅಲಿಯಾಸ್ ಚಿಂಟುವನ್ನ ಬಂಧನ ಮಾಡಲಾಗಿದೆ.

    ಬಂಧಿತರಿಂದ ಸುಮಾರು ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ಹಾಗೂ ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.

    ಚಾಲಾಕಿ ಕಳ್ಳರು, ಮಹಿಳೆಯರ ಬ್ಯಾಗನ್ನ ಕದ್ದು ಹೊರಗೆ ಒಗೆದು ಆ ಜಾಗವನ್ನ ಗುರುತು ಮಾಡಿಕೊಳ್ಳುತ್ತಿದ್ದರು. ನಂತರ ಮುಂಬರುವ ನಿಲ್ದಾಣದಲ್ಲಿಳಿದು ನಡೆದುಕೊಂಡು ಬಂದು ಬ್ಯಾಗಿನಲ್ಲಿದ್ದ ಎಲ್ಲವನ್ನೂ ದೋಚಿ, ಬ್ಯಾಗನ್ನ ಅಲ್ಲಿಯೇ ಒಗೆದು ಹೋಗುತ್ತಿದ್ದರು.

    ರೇಲ್ವೆ ಠಾಣೆಯ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ, ಪಿಎಸೈ ಎಂ.ಸತ್ಯಪ್ಪ, ಸಿಬ್ಬಂದಿಗಳಾದ ಪ್ರವೀಣ ಪಾಟೀಲ, ರಮೇಶ ಲಮಾಣಿ, ಸುಭಾಸ ದಳವಾಯಿ, ರಮೇಶಕುಮಾರ ಕಟಗಿ, ಸುಭಾಸ ದಳವಾಯಿ, ರಾಯಪ್ಪ ಗುಂಡಗಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

  • ರಾಯನಾಳ ಪಂಚಾಯತಿಯವರೇ- ಇದು ದೇವರ ಸ್ಥಳ- ಚೂರು ಕಣ್ಣು ತೆರೆದು ನೋಡ್ತೀರಾ..!

    ಹುಬ್ಬಳ್ಳಿ: ಕೊರೋನಾ ಮಹಾಮಾರಿ ಹೆಚ್ಚಾಗುತ್ತಿದ್ದರೂ ಗ್ರಾಮೀಣ ಪ್ರದೇಶದ ಕೆಲವೆಡೆ ಇನ್ನೂ ಸುಧಾರಣೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಅದಕ್ಕೆ ತಾಜಾ ಉದಾಹರಣೆಯೇ ಈ ರಾಯನಾಳ ಗ್ರಾಮ.

    ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಪಾದಗಟ್ಟಿಯ ಸಮೀಪವೇ ಗಲೀಜು ತುಂಬಿ ತುಳುಕುತ್ತಿದೆ. ಈ ಬಗ್ಗೆ ಹೇಳಿ ಹೇಳಿ ಸಾಕಾಗಿ ಹೋಗಿದ್ದಾರೆ. ಆದರೆ, ಗ್ರಾಮ ಪಂಚಾಯತಿಯವರು ಮಾತ್ರ ಇದನ್ನ ಸರಿ ಮಾಡುವ ಗೋಜಿಗೆ ಹೋಗುತ್ತಿಲ್ಲ.

    ದಿನನಿತ್ಯ ಹಲವರು ಇದೇ ರಸ್ತೆಯ ಮೂಲಕ ಸಂಚಾರ ನಡೆಸುತ್ತಾರೆ. ಪ್ರಮುಖ ರಸ್ತೆಯಲ್ಲಿ ಇಷ್ಟೊಂದು ಗಲೀಜಿದ್ದರೂ ಗ್ರಾಮ ಪಂಚಾಯತಿಯವರಿಗೆ ಕಾಣಿಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.

    ಗ್ರಾಮ ಪಂಚಾಯತಿಯವರಿಗೆ ತಮ್ಮ ಗ್ರಾಮದ ಬಗ್ಗೆಯಿರುವ ಇರುವ ಕಾಳಜಿಯೂ ಈ ಮೂಲಕ ಗೊತ್ತಾಗುತ್ತಿದೆ. ಎಲ್ಲರೂ ಗೌರವಿಸುವ ಶ್ರೀ ರೇವಣಸಿದ್ದೇಶ್ವರದ ಬಳಿ ಇರುವ ಈ ಗಲೀಜನ್ನಾದರೂ ತೆಗೆದು ಪುಣ್ಯಕಟ್ಟಿಕೊಳ್ಳಿ ಎಂದು ಜನರು ಆಕ್ರೋಶದಿಂದ ಹೇಳುವಂತಾಗಿದೆ. ಈಗಲಾದರೂ ಪಂಚಾಯತಿ ಮಹಾಶಯರು ಸುಧಾರಣೆ ಮಾಡುತ್ತಾರಾ ಕಾದು ನೋಡಬೇಕಿದೆ.

  • ಹುಬ್ಳಿ-ಧಾರ್ವಾಡ್ ಕ್ರೈಂ: ಇಸ್ಪೀಟ್-ಮಟ್ಕಾ: ಆರು ಜನ ಬಂಧನ- ಬೈಕ್ ಕಳುವು- ಯುವಕ ನಾಪತ್ತೆ

     ಹುಬ್ಬಳ್ಳಿ/ಧಾರವಾಡ: ದೇಶಪಾಂಡೆನಗರದಲ್ಲಿರುವ ಐಸಿಐಸಿಐ ಬ್ಯಾಂಕಿನ ಮುಂದೆ ನಿಲ್ಲಿಸಿದ ಬೈಕ್ ನ್ನ ಕಳ್ಳತನ ಮಾಡಲಾಗಿದೆ ಎಂದು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬ್ಯಾಂಕಿನ ಕೆಲಸಕ್ಕಾಗಿ ಬೈಕ್ ಲಾಕ್ ಮಾಡಿಕೊಂಡು ಹೋಗಿದ್ದರೂ ಕಳ್ಳತನ ನಡೆದಿದೆ ಎಂದು ದೂರಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಧಾರವಾಡ ಉಪನಗರ ಪೊಲೀಸ ಠಾಣೆ

    ಧಾರವಾಡ ಹಾವೇರಿಪೇಟೆ ಸವದತ್ತಿ ರಸ್ತೆಯಲ್ಲಿರುವ ಹಳಿಯಾಳ ಮೇಸ್ತ್ರೀ ಗ್ಯಾರೇಜ ಹತ್ತಿರ ಸಾರ್ವಜನಿಕ ರಸ್ತೆ ಬದಿಗೆ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ 500 ರೂಪಾಯಿ ಹಣ ಮತ್ತು ಓಸಿ ಬರೆಯುತ್ತಿದ್ದ ಮಟಕಾ ಚೀಟಿಗಳನ್ನ ವಶಕ್ಕೆ ಪಡೆಯಲಾಗಿದೆ.

    ಕೇಶ್ವಾಪುರ ಪೊಲೀಸ್ ಠಾಣೆ

    ಸರಾಯಿ ಕುಡಿದು ಮಾನಸಿಕವಾಗಿ ಸರಿಯಾಗಿ ಕೆಲಸಕ್ಕೆ ಹೋಗದೇ ಇರುತ್ತಿದ್ದ ಮಹಾಂತೇಶ ಮಟ್ಟಿಕಲ್ಲಿ ಎಂಬಾತ ಕಾಣೆಯಾಗಿದ್ದಾನೆಂದು ಆತನ ಪತ್ನಿ ದೂರು ನೀಡಿದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

    ಹಳೇ-ಹುಬ್ಬಳ್ಳಿ ಪೊಲೀಸ ಠಾಣೆ

    ಮ್ಮಸಾಗರ ಗ್ರಾಮದ ಪ್ಲಾಟ್ ಹತ್ತಿರ   ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಸ್ಪೀಟ ಆಡುತ್ತಿದ್ದ ಐವರನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 52 ಿಸ್ಪೀಟ್ ಎಲೆಗಳನ್ನ ಹಾಗೂ 3520 ರೂಪಾಯಿಗಳನ್ನ ವಶಕ್ಕೆ ಪಡೆದು, ಕೆಪಿ ಕಾಯಿದೆ 87 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    ಸಂಚಾರ ನಿಯಮ ಉಲ್ಲಂಘನೆ

    ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ದಿನಾಂಕ:- 26/09/2020 ರಂದು  364  ಕೇಸಗಳನ್ನು ದಾಖಲಿಸಿದ್ದು ಒಟ್ಟು 1,93,200/- ರೂ. ದಂಡ ಹಾಕಲಾಗಿದೆ.

  • ಮಳೆಯಲ್ಲೂ ಶಿಕ್ಷಣ- ಇಂಥ ಶಿಕ್ಷಕಿಯರಿಗೆ ನಿಮ್ಮದೊಂದು ಸೆಲ್ಯೂಟ್ ಇರಲಿ..!

    ಧಾರವಾಡ: ಸರಕಾರದ ಕೆಲಸ ದೇವರ ಕೆಲಸ ಎಂದು ಅರಿತುಕೊಂಡು ಚಾಚುತಪ್ಪದೇ ಪಾಲಿಸುತ್ತಿರುವುದು ಶಿಕ್ಷಕರು ಎನ್ನುವುದನ್ನ ನಾವೂ ಅರಿತುಕೊಳ್ಳಬೇಕಿದೆ. ಹಲವು ಸಮಸ್ಯೆಗಳ ನಡುವೆಯೂ ಅವರೇಗೆ ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ತಲ್ಲೀನರಾಗಿದ್ದಾರೆಂಬುದಕ್ಕೆ ಇಲ್ಲೊಂದು ಉದಾಹರಣೆಯಿದೆ ನೋಡಿ.. ಇವರಿಗೊಂದು ಧನ್ಯವಾದ ತಿಳಿಸಿ..

    ಧಾರವಾಡದಿಂದ ಕಲ್ಲಾಪುರ ಶಾಲೆಗೆ ಹೋಗುವ ಕಲ್ಪನಾ ಚಂದನಕರ ಹಾಗೂ ವೀರಾಪುರ ಸರಕಾರಿ ಶಾಲೆಗೆ ಹೋಗುವ ವಡ್ಡಟ್ಟಿ ಟೀಚರ್ ಹೇಗೆ ಶಾಲೆಗಳನ್ನ ತಲುಪುತ್ತಿದ್ದಾರೆ ನೋಡಿ. ನಿರಂತರ ಸುರಿಯುವ ಮಳೆಯಲ್ಲೂ ರಸ್ತೆ ಮಧ್ಯೆ ಬಸ್ ನಿಂತರೂ ಶಾಲೆಗಳಿಗೆ ಹೋಗುವುದನ್ನ ಬಿಟ್ಟಿಲ್ಲ. ಏನಾದರೂ ಆಗಲಿ, ಮಕ್ಕಳಿಗೆ ವಿದ್ಯಾಭ್ಯಾಸ್ ನೀಡಬೇಕೆಂಬ ಮನೋಭಾವನೆ ಇವರದ್ದು.

    ವಿದ್ಯಾಗಮ ಯೋಜನೆ ನಿರಂತರವಾಗಿ ಯಶಸ್ವಿಯಾಗುತ್ತಿರುವುದಕ್ಕೆ ಇಂತಹ ಶಿಕ್ಷಕರ ಕಾರ್ಯಕ್ಷಮತೆಯೇ ಕಾರಣ.  ತಮಗೆ ಯಾವುದೇ ರೀತಿಯ ಕಷ್ಟಗಳಾದರೂ ಅದನ್ನ ಯಾರಿಗೂ ಹೇಳದೇ ನಡೆಯುವ ಶಿಕ್ಷಕರ ಮನಸ್ಥಿತಿ ಮೆಚ್ಚುವಂತಹದು.

    ಕಲ್ಲಾಪುರ-ವೀರಾಪುರ ಗ್ರಾಮಕ್ಕೆ ಹೋಗಬೇಕಾದರೇ ಹಳ್ಳದ ನೀರು, ರಸ್ತೆಯನ್ನ ನುಂಗಿ ಬಿಡುತ್ತೆ. ಆಗ ಅನಿವಾರ್ಯವಾಗಿ ಕಾಲ್ನಡಿಗೆಯಲ್ಲೇ ಗ್ರಾಮಗಳಿಗೆ ಹೋಗಿ ಶಿಕ್ಷಣ ಕೊಡುತ್ತಿದ್ದಾರೆ. ಕೊರೋನಾ ಹೆಚ್ಚುತ್ತಿರುವ ಸಮಯದಲ್ಲಿಯೂ ಮಳೆ-ಗಾಳಿಗೂ ಬೆದರದೇ ಸರಸ್ವತಿಯ ಸೇವೆ ಸಲ್ಲಿಸುತ್ತಿರುವ ನಡೆದಾಡುವ ದೇವರುಗಳಿವರು.. ಹ್ಯಾಟ್ಸಾಫ್ ಶಿಕ್ಷಕ-ಶಿಕ್ಷಕಿಯರೇ.. ನೀವೂ ನೂರ್ಕಾಲ ಚೆನ್ನಾಗಿ ಬಾಳಿ..

  • ಧಾರವಾಡ: “ಬಂದ್” DSS-ACHR-ಜಯ ಕರ್ನಾಟಕ ಬೆಂಬಲ

    ಧಾರವಾಡ: ರೈತವಿರೋಧಿ ಕಾಯ್ದೆಗಳನ್ನು ಬಲವಂತವಾಗಿ ಹೇರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಡಿ.ಎಸ್.ಎಸ್ (ಅಂಬೇಡ್ಕರ ವಾದ), ಜಯ ಕರ್ನಾಟಕ ಸಂಘಟನೆ ಹಾಗೂ ಎ.ಸಿ.ಎಚ್.ಆರ್  ಸಂಘಟನೆಗಳ  ಬೆಂಬಲ ನೀಡಿವೆ.

    ರೈತರು ಈ ದೇಶದ ಅನ್ನದಾತರು ಇಡೀ ದೇಶಕ್ಕೆ ಹೆಮ್ಮೆಯ ಪ್ರಜೆಗಳು.  ಜೈ ಜವಾನ್ ಜೈ ಕಿಸಾನ್ ಎಂಬ ಹಿರಿಯರ ಉಕ್ತಿಯಂತೆ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ದುಡಿದು ಸುಣ್ಣವಾಗುವ ಮುಗ್ದ ಜೀವಿ ಇವರು.

    ಸಮಸ್ತ ದೇಶದ ಕೋಟ್ಯಂತರ ಜನರ ಹೊಟ್ಟೆ ತುಂಬಿಸುವ ರೈತರ ಭಾವನೆಗಳನ್ನು ಹತ್ತಿಕ್ಕುವ ವಿವಾದಾತ್ಮಕ ವಿಧೇಯಕಗಳನ್ನು ಬಲವಂತವಾಗಿ ಹೇರಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿಲುವನ್ನು ತೀವ್ರವಾಗಿ ವಿರೋಧಿಸಿ ನಗರದ ಆಲೂರ ವೆಂಕಟರಾವ್ ವೃತ್ತದಲ್ಲಿ ನಾಳೆ ಬೆಳಿಗ್ಗೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಿವೆ.

    ಉದ್ದೇಶಿತ ಪ್ರತಿಭಟನೆಯ ನೇತೃತ್ವವನ್ನು ಲಕ್ಷ್ಮಣ ಈ ದೊಡಮನಿ, ಸುಧೀರ ಮುಧೋಳ, ಬಸವರಾಜ ಆನೇಗುಂದಿ, ನಾರಾಯಣ ಮಾದರ, ಪರಶುರಾಮ ಕೊರವರ, ಹನುಮಂತ ಮೊರಬ, ಶಬ್ಬೀರ ಅತ್ತಾರ, ಅಂದರಖಂಡಿ, ಅಲ್ತಾಫ ಜಾಲೇಗಾರ, ಕಿಶೋರ ಕಟ್ಟಿ, ಭಾಸ್ಕರ್ ಭೋಗಲೆ, ಡಿ.ಟಿ. ಚಲವಾದಿ, ಚಂದ್ರು ಅಂಗಡಿ, ಮಂಜು ಸುತಗಟ್ಟಿ, ಸಿಡ್ಲೆಪ್ಪ ಹೆಗಡೆ, ಬಸವರಾಜ ಮಾದರ, ಪ್ರಕಾಶ ಹೂಗಾರ, ರಾಮು ಹರಿಜನ, ಕರಿಯಪ್ಪ ಮಾಳಗಿಮನಿ, ಪಂಚಯ್ಯ ಪೂಜಾರ ಮುಂತಾದವರು ವಹಿಸಲಿದ್ದಾರೆ.

  • ನಾಳೆ ಹುಬ್ಬಳ್ಳಿ-ಧಾರವಾಡ ಬಂದ್- ಬೆಂಬಲ ನೀಡಿದ್ದು ಯಾರು ಯಾರೂ ಗೊತ್ತಾ.. ?

    ಹುಬ್ಬಳ್ಳಿ: ಎಪಿಎಂಸಿಯಲ್ಲಿಯ ವ್ಯಾಪಾರಸ್ಥರ ಸಂಘದ ಸಭಾ ಭವನದಲ್ಲಿ ನಡೆದ ರೈತ, ಕಾರ್ಮಿಕ ಕನ್ನಡಪರ, ದಲಿತ ಹಾಗೂ ಜನಪರ ಸಂಘಟನೆಗಳ ಸಮಾವೇಶವು ಎಪಿಎಂಸಿ, ಭೂ ಸುಧಾರಣಾ, ಕಾರ್ಮಿಕ ಕಾನೂನುಗಳು ಸೇರಿದಂತೆ ವಿವಿಧ ಜನವಿರೋಧಿ ಕಾನೂನುಗಳ ತಿದ್ದುಪಡಿ ವಿರೋಧಿಸಿ ಸೆಪ್ಟೆಂಬರ್ 28 ರಂದು ಕರೆ ನೀಡಲಾದ ಕರ್ನಾಟಕ ಬಂದ್ ಕರೆಯನ್ನು ಹುಬ್ಬಳ್ಳಿ ಧಾರವಾಡದಲ್ಲಿ ಯಶಸ್ವಿಗೋಳಿಸಲು 50ಕ್ಕೂ ಹೆಚ್ಚು ಸಂಘಟನೆ ಸರ್ವಾನುಮತದ ತೀರ್ಮಾನ ಮಾಡಿದವು.

    ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆ, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಕಿಸಾನ್ ಸೆಲ್, ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ, ಕರ್ನಾಟಕ ಕಳಸಾ ಬಂಡೂರಿ ಹೋರಾಟ ಸಮಿತಿ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಸಿಐಟಿಯು, ಎಐಟಿಯುಸಿ, ಟಿಯುಸಿಸಿ, ವಿಮಾ ನೌಕರರ ಸಂಘ, ಗ್ರಾಮೀಣ ಬ್ಯಾಂಕ ನೌಕರರ ಸಂಘ. ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಕರ್ನಾಟಕ ಸಂಗ್ರಾಮ ಸೇನೆ, ಅಟೋ ಚಾಲಕರ ಸಂಘಗಳು, ಪೌರ ಕಾರ್ಮಿಕರ ಸಂಘ, ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘ, ಬೀದಿಬದಿ ವ್ಯಾಪಾರಸ್ಥರ ಸಂಘ, ಹುಬ್ಬಳ್ಳಿ ನಾಗರಿಕ ಹೋರಾಟ ಸಮಿತಿ, ಜೈ ಭೀಮ ಸೇನೆ, ಕರ್ನಾಟಕ ದಲಿತ ವಿಮೋಚನಾ ಸಮಿತಿ, ಸಂವಿಧಾನ ಸುರಕ್ಷಾ ಸಮಿತಿ, ಎಪಿಎಂಸಿ ವ್ಯಾಪಾರಸ್ಥರ ಸಂಘಗಳು, ಜಮಾತೆ ಇಸ್ಲಾಮ್, ಸಮುದಾಯ ಸಾಂಸ್ಕೃತಿಕ ಸಂಘಟನೆ, ರಂಗಭೂಮಿ ಗೊಂಬೆ ಆಟದ ಸಂಸ್ಥೆ, ಮುಂತಾದ ಜನಪರ ಸಂಘಟನೆಗಳು ಹಾಗೂ ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಸಿಪಿಐ, ಆಮ್ ಆದ್ಮಿ ಪಕ್ಷಗಳು ಹುಬ್ಬಳ್ಳಿ ಧಾರವಾಡ ಬಂದ್ ಬೆಂಬಲಿಸಲಿವೆ.

    ಕೃಷಿ ಕ್ಷೇತ್ರವನ್ನು ಕಾರ್ಪೋರೇಟ ವಲಯಕ್ಕೆ ಒತ್ತೆ ಇಡುವ, ಲೂಟಿಗೆ ಅವಕಾಶ ಮಾಡಿಕೊಡುವ, ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳಲಿರುವ, ಸಾರ್ವಜನಿಕರ ಮೇಲೆ ತೀವ್ರ ದಾಳಿ ನಡೆಸಲಿರುವ ಜನವಿರೋಧಿ ಕಾನೂನು ತಿದ್ದುಪಡಿಗಳನ್ನು ವಾಪಸ್ಸ ಪಡೆಯಲು ಸಮಾವೇಶ ಕೇಂದ್ರ ರಾಜ್ಯ ಸರಕಾರಗಳನ್ನು ಒತ್ತಾಯಿಸಿತಲ್ಲದೇ ಇದರ ವಿರುದ್ದ ತೀವ್ರವಾದ ಚಳುವಳಿಯನ್ನು ನಡೆಸಲು ತೀರ್ಮಾನಿಸಿತು.

    ಖ್ಯಾತ ಭಾಷಾ ತಜ್ಞ ಪದ್ಮಶ್ರೀ ಡಾ. ಜಿ.ಎನ್.ದೇವಿ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಕಾರ್ಮಿಕ ಮುಖಂಡ ಮಹೇಶ ಪತ್ತಾರ ಪ್ರಸ್ತಾವಣೆಯನ್ನು ಸಲ್ಲಿಸಿದರು. ಪ್ರಸ್ತಾವಣೆಯ ಮೇಲೆ ವಿವಿಧ ಸಂಘಟನೆಗಳ ಮುಖಂಡರಾದ ಮಾಜಿ ಶಾಸಕ ಎನ್.ಎಚ್.ಕೊನರೆಡ್ಡಿ, ವಾಣಿಜ್ಯೋಧ್ಯ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲಡ್ಡದ, ಎಪಿಎಂಸಿ ಅಧ್ಯಕ್ಷ ಸಹದೇವಪ್ಪ, ಸುಡೇಕನವರ, ಮಾಜಿ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಅಬ್ದುಲ್ ವಹಾಬ ಮುಲ್ಲಾ, ಕಾಂಗ್ರೆಸ್ ಮುಖಂಡರಾದ ಪಿ.ಎಚ್.ನೀರಲಕೇರಿ, ಅನ್ವರ ಮುಧೋಳ, ಸಂವಿಧಾನ ಸುರಕ್ಷಾ ಸಮಿತಿ ಸಂಚಾಲಕ ಅಶ್ರಫ್ ಅಲಿ ಬಸೀರ, ಗ್ರಾಮೀಣ ಕೂಲಿಕಾರರ ಸಂಘಟನೆಯಿಂದ ಶಾರದಾ ದಾಬಡೆ, ರೈತ ಮುಖಂಡರಾದ ಕಲ್ಮೇಶ ಲಿಗಾಡಿ, ಶೋಭಾ ಚಲವಾದಿ, ಬಿ.ಎಸ್.ಸೊಪ್ಪಿನ,  ಸಿದ್ದು ತೇಜಿ, ಶಿವಣ್ಣ ಹುಬ್ಬಳ್ಳಿ, ಕಾರ್ಮಿಕ ಮುಖಂಡರಾದ ಪುಂಡಲೀಕ ಬಡಿಗೇರ, ವಿಜಯ ಗುಂಟ್ರಾಳ, ಬಾಬಾಜಾನ ಮುಧೋಳ, ಗುರುಸಿದ್ದಪ್ಪ ಅಂಬಿಗೇರ, ಬಿ.ಐ.ಈಳಿಗೇರ ಕನ್ನಡಪರ ಸಂಘಟನೆಗಳಿಂದ ಅಮೃತ ಇಜಾರಿ,  ಸಂಜು ದುಮ್ಮಕನಾಳ , ಮುತ್ತು ಬೆಳ್ಳಕ್ಕಿ, ದಲಿತ ಸಂಘಟನೆಗಳಿಂದ ಸುರೇಶ ಖಾನಾಪೂರ, ಲಕ್ಷ್ಮಣ ಬಕ್ಕಾಯಿ,  ಆಮ್ ಆದ್ಮೀ ಪಕ್ಷದ ಸಂತೋಷ ನರಗುಂದ, ವ್ಯಾಪಾರಸ್ಥರ ಸಂಘದ ಬಸವರಾಜ ಏಕಲಾಸಪೂರ, ಗಂಗನಗೌಡ ಪಾಟೀಲ, ಎ.ಎ.ಅತ್ತಾರ, ಸಲೀಂ ಬ್ಯಾಹಟ್ಟಿ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿ ಬೆಂಬಲಿಸಿ  ಮಾತನಾಡಿದರು. ಶಂಕರ ಹಲಗತ್ತಿ ಕಾರ್ಮಯಕ್ರಮ ನಿರೂಪಿಸಿದರು. ಎಪಿಎಂಸಿ ಸದಸ್ಯ ಜಗನ್ನಾಥಗೌಡ ಸಿದ್ದನಗೌಡರ, ಯುವ ಕಾಂಗ್ರಸ್ ಮುಖಂಡ ರಜತ ಉಳ್ಳಾಗಡ್ಡಿಮಠ, ರಂಗಕರ್ಮಿ ಪ್ರಕಾಶ ಗರೂಡ,  ವಿಶ್ರಾಂತ ಕುಲಪತಿ ವಿ.ಬಿ.ಮಾಗನೂರ, ಅಬ್ದುಲ್ ರೇಹಮಾನ ಮುಲ್ಲಾ, ರಮೇಶ ಭೂಸ್ಲೆ, ವೀರಣ್ಣ ನೀರಲಗಿ, ಕರಿಯಪ್ಪ ದಳವಾಯಿ, ಮಂಜುನಾಥ ಹುಜರಾತಿ ಕರಿಯಪ್ಪ ಗಿರಿಸಾಗರ, ಕತಾಲಸಾಬ ಮುಲ್ಲಾ, ಬಸವಣ್ಣೆಪ್ಪ ನೀರಲಗಿ, ವಿನಾಯಕ ಗಾಳಿವಡ್ಡರ, ಚಿದಾನಂದ ಸವದತ್ತಿ, ನಿಂಗನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

  • ಧಾರವಾಡದಲ್ಲಿಂದು 139 ಪಾಸಿಟಿವ್ –171 ಗುಣಮುಖ- 2ಸೋಂಕಿತರ ಸಾವು

    ಧಾರವಾಡದಲ್ಲಿಂದು 139 ಪಾಸಿಟಿವ್ –171 ಗುಣಮುಖ- 2ಸೋಂಕಿತರ ಸಾವು

    ಧಾರವಾಡದಲ್ಲಿಂದು 139 ಪಾಸಿಟಿವ್ –171 ಗುಣಮುಖ- 2ಸೋಂಕಿತರ ಸಾವು

    ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 139 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಪಾಸಿಟಿವ್ ಸಂಖ್ಯೆ 17056ಕ್ಕೇರಿದೆ. ಇಂದು 171 ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 14018 ಕ್ಕೇರಿದೆ.

    ಜಿಲ್ಲೆಯಲ್ಲಿ ಒಟ್ಟು 481 ಸೋಂಕಿತರು ಕೊರೋನಾ ಪಾಸಿಟಿವ್ ನಿಂದ ಸಾವಿಗೀಡಾಗಿದ್ದಾರೆ.

    ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ

  • ಅರವಿಂದ ಬೆಲ್ಲದ್ರೇ, ಮೊಸಳೆ ಕಣ್ಣೀರು ಹಾಕಬೇಡಿ: ಆಮ್ ಆದ್ಮಿ ಪಾರ್ಟಿ

    ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ  ಮಹತ್ವಾಕಾಂಕ್ಷೆಯ ಬಿಆರ್ ಟಿಎಸ್ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವುದು ಸೋಜಿಗ ಮೂಡಿಸಿದೆ. ಈ ಯೋಜನೆಯ ಬಗ್ಗೆ ಮೊದಲು ಸಾರ್ವಜನಿಕರು ಮಾತನಾಡುತ್ತಿದ್ದರು. ಇದೀಗ ಬಿಜೆಪಿ ಶಾಸಕರೇ ಮಾತನಾಡುತ್ತಿರುವುದನ್ನೇ ನೋಡಿದರೇ, ಬಿಆರ್ ಟಿಎಸ್ ಕಳಪೆ ಕಾಮಗಾರಿ ಬಗ್ಗೆ ಅನುಮಾನ ಕಾಡದೇ ಇರದು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕ ಹೇಳಿದೆ.

    ಶಾಸಕ ಅರವಿಂದ ಬೆಲ್ಲದ ಅವರು ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಸತತ 2 ಬಾರಿ ಆಯ್ಕೆ ಆಗಿದ್ದಾರೆ. ಆದರೆ ಬಿಆರ್ ಟಿಎಸ್ ಕಾಮಗಾರಿ ಪ್ರಾರಂಭವಾದಾಗ ಇದರ ಬಗ್ಗೆ ಮಾತಾಡಬೇಕಿತು. ಅಲ್ಲದೇ ಕಳಪೆ ಕಾಮಗಾರಿ ಬಗ್ಗೆ ಸಾಮಾನ್ಯ ಜನರು ಕೂಡಾ ಗುಣಮಟ್ಟದ ಪರಿಶೀಲನೆ ಮಾಡುವ ಹಕ್ಕಿರುವಾಗ ಈ ಭಾಗದ ಶಾಸಕರಾಗಿ ನೂರಾರು ಕೋಟಿ ಕಾಮಗಾರಿ ಬಗ್ಗೆ ಕಾಳಜಿ ವಹಿಸದೇ ಇರುವುದು ಖಂಡನೀಯ. ‌ಇದೀಗ ಕಳಪೆ ಕಾಮಗಾರಿ ಬಹಿರಂಗದ ನಂತರ. ಸುಮ್ಮನೆ ಶಾಸಕರು ಕಾಟಾಚಾರಕ್ಕೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ ಎಂದಿದೆ.

    ಇನ್ನು ಅರವಿಂದ ಬೆಲ್ಲದ ಅವರು ಒಬ್ಬ ಶಾಸಕರಾಗಿ ಅವರದ್ದೇ ಆದ ವಿಶೇಷ ಅಧಿಕಾರಗಳನ್ನು ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಲು ಅವಕಾಶಗಳಿದ್ದರು ಸಹಿತ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿರುವುದು ಇತಿಹಾಸದಲ್ಲಿ ಇದು ಮೊದಲ ಬಾರಿ ಎನ್ನಿಸುವುದು. ಬಿಆರ್ ಟಿಎಸ್ ಯೋಜನೆಯನ್ನು ಅವಳಿನಗರಕ್ಕೆ ನಾವು ತಂದಿದ್ದೇವೆ ಎಂದು ಹೇಳಿಕೊಳ್ಳುವ ಜಿಲ್ಲೆಯ ಉಸ್ತುವಾರಿ ಸಚಿವರು ಜನರು ಸಂಕಷ್ಟದಲ್ಲಿರುವಾಗ  ಈ ಬಗ್ಗೆ ಮಾತನಾಡದೇ ಇರುವುದು ಕಳವಳಕ್ಕೆ ಕಾರಣವಾಗಿದೆ‌ ಎಂದು ಹೇಳಿದೆ.

    ಶಾಸಕ ಅರವಿಂದ ಬೆಲ್ಲದ ಅವರಿಗೆ ಜನರ ಮೇಲೆ ನಿಜವಾದ ಕಾಳಜಿ ಎಂಬುದು ಇದ್ದರೆ ಈಗಲಾದರೂ ತಮ್ಮ ಜವಾಬ್ದಾರಿ ಅರಿತು ವಿಧಾನಸಭೆಯಲ್ಲಿ ಈ ವಿಷಯವಾಗಿ ಧ್ವನಿ ಎತ್ತಿ ಪ್ರಾಮಾಣಿಕವಾಗಿ ಉನ್ನತಮಟ್ಟದ ತನಿಖೆಗೆ ಆಗ್ರಹಿಸಬೇಕು. ಕಳಪೆ ಕಾಮಗಾರಿ ನಡೆಸಿದ ತಪ್ಪಿತಸ್ಥ ಅಧಿಕಾರಿಗಳು, ಇಂಜಿನಿಯರ್, ಪ್ರಭಾವಿಗಳಿದ್ದರೂ ಅವರ ಮೇಲೂ ಕಾನೂನು ಕ್ರಮ ತೆಗೆದುಕೊಳ್ಳುವಲ್ಲಿ ಶಾಸಕರು ಮುಂದಾಗಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ.

  • ನಾಳೆಯ ಬಂದ್ ಗೆ ಆಮ್ ಆದ್ಮಿ ಬೆಂಬಲ: ಜಿಲ್ಲಾಧ್ಯಕ್ಷ ಸಂತೋಷ ನರಗುಂದ

    ಹುಬ್ಬಳ್ಳಿ: ರೈತ, ಕಾರ್ಮಿಕ ಹಾಗೂ ಜನಪರ ಸಂಘಟನೆಗಳು ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ವ್ಯಾಪಾರಸ್ಥರ ಸಂಘದ ಸಭಾ ಭವನದಲ್ಲಿಂದು ಚಿಂತನಾ ಸಮಾವೇಶ ಹಮ್ಮಿಕೊಂಡಿತ್ತು. ಅದರಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಭಾಗವಹಿಸಿದ್ದರು.

    ಈ ವೇಳೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಪಿಎಂಸಿ, ಭೂ ಸುಧಾರಣಾ ಕಾರ್ಮಿಕ ಕಾನೂನುಗಳ ತಿದ್ದುಪಡಿ ತರುವ ಮೂಲಕ ಭಾರತದ ಏಕೈಕ ಆಶಾಕಿರಣವಾದ ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡಲು ಹೊರಟಿರುವುದು ದುರಂತ. ಕೃಷಿಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳ ಬಗ್ಗೆ ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಮತ್ತು ಮಸೂದೆಗಳನ್ನು ಆಯ್ಕೆ ಸಮಿತಿಯ ಪರಿಶೀಲನೆಗೊಳಪಡಿಸಬೇಕು ಎಂಬ ವಿರೋಧಪಕ್ಷಗಳ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.

    ದುರ್ಬಲರು, ಅಸಹಾಯಕರು ಮತ್ತು ಅಸಂಘಟಿತರಾಗಿರುವ ಶೇಕಡಾ 80ರಷ್ಟಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ಕೃಷಿಮಾರುಕಟ್ಟೆಯನ್ನು ಸರ್ಕಾರದ ನೆರವಿಲ್ಲದೆ ಸ್ವಯಂನಿಯಂತ್ರಿಸಲಾರರು. ಆ ಕೆಲಸ ಮಾಡುತ್ತಿದ್ದ ಎಪಿಎಂಸಿಯನ್ನು ನಾಶಮಾಡುವುದೆಂದರೆ ಪೂರ್ಣ ಕೃಷಿಕ್ಷೇತ್ರವನ್ನು ಮಣ್ಣುಪಾಲು ಮಾಡುವುದು ಎಂದರ್ಥ. ಎಪಿಎಂಸಿಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪೆನಿಗಳಿಗೆ ಹೆಬ್ಬಾಗಿಲು ತೆರೆಯುವುದೇ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ( ಉತ್ತೇಜನ ಮತ್ತು ಸೌಲಭ್ಯ) ಮಸೂದೆಯ ದುರುದ್ದೇಶ. ಇದು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರ ಬೆನ್ನು ಮುರಿಯುವ ಕೆಲಸ ಎಂದು ದೂರಿದರು.

    ಕೇಂದ್ರ ಸರ್ಕಾರದ ಹೊಸ ತಿದ್ದುಪಡಿ ಕಾನೂನಿನಲ್ಲಿ ಬೆಂಬಲ ಬೆಲೆಯ ರಕ್ಷಣೆಯನ್ನು ಕಿತ್ತೊಗೆದು ರೈತರನ್ನು ಅನಾಥರನ್ನಾಗಿ ಮಾಡಲಾಗಿದೆ. ಅಲ್ಲದೇ ಪ್ರಸ್ತುತ ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ರೈತರ ಹಿತಾಸಕ್ತಿ ರಕ್ಷಣೆಗೆ ಬದ್ಧವಾಗಿದೆ ಎಂದಿರುವ ಅವರು, ಸೆಕ್ಷನ್ 8 ರ ಪ್ರಕಾರ ‘’ಎಪಿಎಂಸಿ ಮಾರುಕಟ್ಟೆ ಯಾರ್ಡ್ ಒಳಗೆ ಇಲ್ಲವೆ ಹೊರಗೆ ಯಾರೂ ಕೂಡಾ ಅಧಿಕೃತ ಲೈಸೆನ್ಸ್ ಇಲ್ಲದೆ ವ್ಯಾಪಾರ ನಡೆಸುವಂತಿಲ್ಲ’’. ಇದಕ್ಕೆ ತಿದ್ದುಪಡಿ ಮಾಡಲಾಗಿದೆ. ಸೆಕ್ಷನ್ 66 ಮತ್ತು 67ರ ಪ್ರಕಾರ ಯಾರ್ಡ್ ನ ಮಾರುಕಟ್ಟೆ ವ್ಯಾಪ್ತಿಯಲ್ಲಿ ಅಕ್ರಮ ವ್ಯಾಪಾರ, ಕಾಳಸಂತೆ ಮತ್ತು ಅಕ್ರಮ ದಾಸ್ತಾನು ನಿಯಂತ್ರಿಸಲು ಅವಕಾಶವಿದೆ. ಈಸೆಕ್ಷನ್ ಗೂ ತಿದ್ದುಪಡಿ ಮಾಡಲಾಗಿದೆ. ರೈತರಿಗೆ ನ್ಯಾಯಬದ್ಧ ಬೆಲೆ ಸಿಗುವಂತೆ ಮಾಡಲು ಖಾಸಗಿ ಸಂಸ್ಥೆಗಳ ಲೆಕ್ಕಪತ್ರ ಪರಿಶೀಲಿಸಬಹುದು. ಸೆಕ್ಷನ್ 114,116 ಮತ್ತು 117ರಡಿಯಲ್ಲಿ ತಪ್ಪಿತಸ್ಥರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶ ಇದೆ. ಈ ಆರೂ ಸೆಕ್ಷನ್ ಗಳನ್ನು ತಿದ್ದುಪಡಿ ಮೂಲಕ ಬದಲಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿವೆ. ಈ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳು ಕಾಯ್ದೆ ತಿದ್ದುಪಡಿ ಮೂಲಕ ಮೀಸೆ ತುರುಕಿಸಿ ಒಳಪ್ರವೇಶಿಸಿದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಅಪ್ರಸ್ತುತ ಗೊಳಿಸಿ, ನಾಶ ಮಾಡಲು ಬಹಳ ದಿನಗಳು ಬೇಕಾಗಲಾರದು. ಎಪಿಎಂಸಿಯ ಹೊಸ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಎಂಪಿಎಂಸಿಯಿಂದ ಹೊರಗಿರುವ ವರ್ತಕರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಈ ಮೂಲಕ ಮಾರುಕಟ್ಟೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದು ನಿಧಾನವಾಗಿ ಎಪಿಎಂಸಿಗಳನ್ನು ಅಪ್ರಸ್ತುತಗೊಳಿಸುವುದು ಇದರ ಹಿಂದಿನ ನಿಜವಾದ ದುರುದ್ದೇಶ ಎನ್ನುವುದನ್ನು ರೈತರು ಅರ್ಥಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ರೈತ, ಕಾರ್ಮಿಕ ಹಾಗೂ ಜನಪರ ಸಂಘಟನೆಗಳು ಒಂದಾಗಿ ಕಾಯಿದೆಯನ್ನು ತೀವ್ರವಾಗಿ ವಿರೋಧಿಸಬೇಕು. ಈ ಹಿನ್ನೆಲೆಯಲ್ಲಿ ರೈತ‌ ವಿರೋಧಿ ಕಾಯಿದೆ ವಿರೋಧಿಸಿ ನಾಳೆ ನಡೆಯಲಿರುವ ಸ್ವಯಂ ಪ್ರೇರಿತವಾದ ಬಂದ್ ಗೆ ಆಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಲಿದೆ ಎಂದರು.