Category: ನಮ್ಮೂರು

  • ಕ್ರಿಕೆಟ್ ಬೆಟ್ಟಿಂಗ್ ಹುಬ್ಬಳ್ಳಿಯಲ್ಲಿ ಶ್ರೀಕಾಂತ ಬಂಧನ..!

    ಹುಬ್ಬಳ್ಳಿ: ನಗರದ ಗವಿ ಓಣಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ವ್ಯಕ್ತಿಯನ್ನ ಬಂಧನ ಮಾಡುವಲ್ಲಿ ಕಮರಿಪೇಟೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಗವಿಓಣಿಯಲ್ಲಿ ಕ್ರಿಕೆಟ್ ಬೆಟ್ಟಿಂಗನಲ್ಲಿ ತೊಡಗಿದ್ದ 45 ವಯಸ್ಸಿನ ಶ್ರೀಕಾಂತ ತುಳಜಾರಾಮ ಕೊಲ್ಹಾಪೂರೆ ಎಂಬಾತನನ್ನ ಬಂಧನ ಮಾಡಲಾಗಿದ್ದು, ಬಂಧಿತನಿಂದ 40 ಸಾವಿರ ರೂಪಾಯಿಯನ್ನ ವಶಕ್ಕೆ ಪಡೆಯಲಾಗಿದೆ.

    ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕೆ.ರಾಮರಾಜನ್ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಬಿ.ಬಸರಗಿ ಮಾರ್ಗದರ್ಶನದಲ್ಲಿ ಕಮರಿಪೇಟೆ ಪೊಲೀಸ್ ಠಾಣೆ ಇನ್ಸಪೆಕ್ಟರ್ ಶ್ಯಾಂರಾವ ಸಜ್ಜನ ನೇತೃತ್ವದಲ್ಲಿ ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋಬ್ಬ ಆರೋಪಿ ನಾಪತ್ತೆಯಾಗಿದ್ದು, ಆತನ ಹುಡುಕಾಟಕ್ಕಾಗಿ ಜಾಲ ಬೀಸಲಾಗಿದೆ. ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

  • ಬಂಡಿವಾಡ ಬಳಿ ರಸ್ತೆ ಅಪಘಾತ ಇಬ್ಬರ ಸ್ಥಿತಿ ಗಂಭೀರ, ಮತ್ತೋರ್ವ ಪ್ರಾಣಾಪಾಯದಿಂದ ಪಾರು..!

    ಹುಬ್ಬಳ್ಳಿ:  ತಾಲೂಕಿನ ಬಂಡಿವಾಡ ಗ್ರಾಮದ ಪುಟಾಣಿ ಮಿಲ್ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

    ಗದಗ ಕಡೆಗೆ ಹೊರಟಿದ್ದ ಕಾರು ಹುಬ್ಬಳ್ಳಿಯತ್ತ ಬರುತ್ತಿದ್ದ ಎರಡು ಬೈಕುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬಂಡಿವಾಡ ಗ್ರಾಮದ ವಿರುಪಾಕ್ಷಪ್ಪ ವಾಲಿ, ಹಿಂಬದಿ ಸವಾರ ಮಲ್ಲಪ್ಪ ಸುಣಗಾರ ಹಾಗೂ ಹುಬ್ಬಳ್ಳಿಯ ಮತ್ತೊಂದು ಬೈಕ್ ಸವಾರ ಮುಗಲಿಂದರ ಶರ್ಮಾ ಗಾಯಗೊಂಡಿದ್ದಾರೆ.

    ಇದರಲ್ಲಿ ಇಬ್ಬರಿಗೆ ತಲೆಗೆ ಪೆಟ್ಟಾಗಿದ್ದು, ಇಬ್ಬರನ್ನೂ ಚಿಕಿತ್ಸೆಗಾಗಿ ಕಿಮ್ಸಗೆ ರವಾನೆ ಮಾಡಲಾಗಿದೆ. ಗದಗ ಮೂಲದ ಭಗೀರಥ ಹನಮಂತ ಮಗ್ಗಿ ಎಂಬಾತನೇ ಕಾರು ಚಾಲಕನಾಗಿದ್ದು, ಮೂರು ವಾಹಗನಗಳು ನಜ್ಜುಗುಜ್ಜಾಗಿವೆ.

    ಘಟನೆಯಿಂದ ವಾಹನಗಳು ಎಲ್ಲೇಂದರಲ್ಲಿ ಬೀಳುವ ಜೊತೆಗೆ ಗಾಯಾಳುಗಳು ರಸ್ತೆಯ ಎಲ್ಲೆಂದರಲ್ಲಿ ಬಿದ್ದಿದ್ದರು. ದಾರಿಹೋಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಗ್ರಾಮೀಣ ಠಾಣೆ ಪೊಲೀಸರು ಮುಂದಿನ ಕ್ರಮವನ್ನ ಜರುಗಿಸಿದರು.

  • ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಸುಪ್ರೀಂಕೋರ್ಟ್ ತಡೆಯಾಜ್ಞೆ…!

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಹೈಕೋರ್ಟ್ ಸೂಚಿಸಿದ ಬೆನ್ನಲ್ಲೇ ಪಾಲಿಕೆ ಚುನಾವಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ರಾಜ್ಯ ಸರಕಾರ ಅವಕಾಶ ಕೇಳಿದ ಮೇಲೆ ಹೈಕೋರ್ಟ್ ಎಂಟು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಸರಕಾರಕ್ಕೆ ಸೂಚನೆ ನೀಡಿತ್ತು. ಇದನ್ನ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಹೋಗಲಾಗಿತ್ತು.

    ಇದೀಗ ಮತ್ತೆ ಚುನಾವಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದ ಚುನಾವಣೆ ಮತ್ತೆ ಯಾವಾಗ ಎಂಬ ಪ್ರಶ್ನೆ ಮೂಡುವಂತಾಗಿದೆ. ಈಗಾಗಲೇ ಮಹಾನಗರ ಪಾಲಿಕೆ ಎರಡು ವರ್ಷದಿಂದಲೂ ಚುನಾವಣೆ ಇಲ್ಲದೇ ಅಧಿಕಾರಿಗಳ ಮೇಲೆ ನಡೆಯುತ್ತಿದೆ.

    ಯಾವುದೇ ಜನಪ್ರತಿನಿಧಿಗಳು ಇಲ್ಲದೆ ಇರುವುದು ಕೂಡಾ, ಅವಳಿನಗರದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.

  • ಹುಬ್ಬಳ್ಳಿ ಬಳಿ ಅನಾಥವಾಗಿದ್ದ ಕಾರಿಗೆ ಮುಕ್ತಿ…!

    ಹುಬ್ಬಳ್ಳಿ: ಕೆಲವು ದಿನಗಳ ಹಿಂದೆ ಪಲ್ಟಿಯಾಗಿದ್ದ ಕಾರೊಂದು ಅನಾಥವಾಗಿ ಬಿದ್ದಿರುವ ಮಾಹಿತಿಯನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕಿದ ನಂತರ,  ಅದು ನಮ್ಮ ಲಿಮಿಟ್ಸನಲ್ಲಿದೆ ಎಂದು ಪೊಲೀಸರು ಬಂದು ತೆಗೆದುಕೊಂಡು ಹೋದ ಘಟನೆ ನಡೆಯಿತು.

    ಹುಬ್ಬಳ್ಳಿ-ಗದಗ ರಸ್ತೆಯಲ್ಲಿರುವ ಐಸಿಸಿ ಗೋಡೌನ್ ಬಳಿಯಲ್ಲಿ ಕಳೆದ ಮೂರು ದಿನದಿಂದಲೂ ಕಾರೊಂದು ಪಲ್ಟಿಯಾಗಿತ್ತು. ಅದರಲ್ಲಿದ್ದವರು ಯಾರೂ ಎಂಬುದು ಪತ್ತೆಯಿಲ್ಲದ ಹಾಗೇ, ಕಾರನ್ನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

    ಆದರೆ, ಈ ಕಾರು ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂಬುದನ್ನೇ ಕನ್ ಪ್ಯೂಸ್ ಮಾಡಿಕೊಂಡಿದ್ದ ಮೂರು ಪೊಲೀಸ್ ಠಾಣೆಯವರು ನಮ್ಮಗೇನು ಸಂಬಂಧವಿಲ್ಲವೆಂದು ಸುಮ್ಮನಾಗಿದ್ದರು. ಆದರೀಗ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು, ಅದು ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದುಕೊಂಡು ಕಾರನ್ನ ಬಂಡಿವಾಡ ಓಪಿಗೆ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಮೇಲೆ, ಅದರಲ್ಲಿದ್ದವರೂ ಯಾರೂ.? ಏನಾಗಿದ್ದಾರೆ.. ? ಯಾಕೆ ಹೀಗಾಗಿದೆ..? ಎಂಬ ಮಾಹಿತಿಯನ್ನ ಪೊಲೀಸರು ಕಲೆ ಹಾಕಬೇಕಿದೆ.

  • ಧಾರವಾಡ ಜಿಲ್ಲಾ ಪಂಚಾಯತಿ ಬಳಿ ಕಾರು ಮೇಲೆ ಮರ…!

    ಧಾರವಾಡ: ಜಿಲ್ಲಾಧಿಕಾರಿಗಳ ಕಚೇರಿಗೆ ಕಾರ್ಯನಿಮಿತ್ತ ಬಂದಿದ್ದ ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ಕಾರು ನಿಲ್ಲಿಸಿ ಕಚೇರಿ ಹೋದಾಗ, ಮರವೊಂದು ಕಾರಿನ ಮೇಲೆ ಬಿದ್ದು ಕಾರು ಜಖಂಗೊಂಡ ಘಟನೆ ನಡೆದಿದೆ.

    ಹುಬ್ಬಳ್ಳಿಯ ಪದ್ಮರಾಜನಗರದ ನಿವಾಸಿಯಾದ ಎಸ್.ಅಭಿಜಿತ್ ಎನ್ನುವವರಿಗೆ ಸೇರಿದ ಕಾರು ಹುಂಡೈ ಕಾರಿನ ಮೇಲೆ ಮರದ ದೊಡ್ಡದೊಂದು ಟೊಂಗೆ ಬಿದ್ದಿದ್ದು, ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಕಾರಿನ ಮುಂದಿನ ಗ್ಲಾಸು ಒಡೆದಿದೆ.

    ಕಾರು ನಿಲ್ಲಿಸಿ ಹೋಗಿ ಮರಳಿ ಬಂದ ಅಭಿಜಿತ್ ಅವರಿಗೆ ಘಟನೆಯನ್ನ ನೋಡಿ ಆತಂಕಕ್ಕೆ ಒಳಗಾಗಿದ್ದರು. ತಕ್ಷಣವೇ ಸಂಚಾರಿ ಠಾಣೆಯ ಪೊಲೀಸರಿಗೆ ಮಾಹಿತಿಯನ್ನ ರವಾನೆ ಮಾಡಿದ್ದು, ಮರವನ್ನ ತೆಗೆಸಲು ಅರಣ್ಯ ಇಲಾಖೆಯವರನ್ನ ಕರೆಸಿಕೊಂಡು ತೆಗೆಸುವ ಪ್ರಯತ್ನ ಮಾಡುತ್ತಿದ್ದಾರೆ.

    ಜಿಲ್ಲಾಧಿಕಾರಿಗಳ ಕಚೇರಿಯ ಅಕ್ಕಪಕ್ಕದಲ್ಲಿ ಕೆಲವು ಗೀಳಾದ ಮರಗಳಿದ್ದು, ಅವುಗಳನ್ನ ತೆಗೆಸದೇ ಇರುವುದರಿಂದ ಇಂತಹ ಅವಘಡ ಸಂಭವಿಸುತ್ತಿವೆ ಅಂತಾರೆ ವಾಹನ ಮಾಲೀಕರು.

  • ಹುಬ್ಬಳ್ಳಿ ಬಳಿ ಜಖಂಗೊಂಡ ಅನಾಥ ಕಾರು…. ನಮ್ಮ ಲಿಮಿಟ್ಸಲ್ಲಾ, ನಿಮ್ಮ ಲಿಮಿಟ್ಸಲ್ಲಾ…! ಕಾರಲ್ಲಿದ್ದವರೂ ಏನಾದರೂ…

    ಹುಬ್ಬಳ್ಳಿ: ನಗರದ ಗದಗ ರಸ್ತೆಯ ಒಂಟಿ ಹನಮಪ್ಪ ಮಂದಿರದ ಸಮೀಪದರಲ್ಲಿನ ಐಸಿಸಿ ಗೋಡೌನದ ಬಳಿ ಕಾರೊಂದು ಪಲ್ಟಿಯಾಗಿದ್ದು, ಅದರಲ್ಲಿದ್ದವರು ಏನಾಗಿದ್ದಾರೋ ಗೊತ್ತೆಯಿಲ್ಲ. ಅಷ್ಟೇ ಏಕೆ.. ಕಾರು ಬಿದ್ದ ಜಾಗ ಯಾವ ಠಾಣೆ ವ್ಯಾಪ್ತಿಗೆ ಬರುತ್ತೇ ಎನ್ನುವುದೇ ತಿಳಿಯದಾಗಿದ್ದು, ಎಲ್ಲ ಠಾಣೆಯವರು ಇದು ನನ್ನ ವ್ಯಾಪ್ತಿಗೆ ಬರೋದಿಲ್ಲವೆನ್ನುತ್ತಿದ್ದಾರೆ.

    ಹೌದು.. ಇಂತಹದೊಂದು ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಬಿದ್ದಿರೋ ಕಾರು ಸಂಖ್ಯೆ ಕೆಎ-01, ಎಸಿ7443 ಭೀಮೇಶ ಎನ್ನುವವರ ಹೆಸರಿನಲ್ಲಿದೆ. ಇದು ಐಸಿಸಿ ಗೋಡೌನ ಬಳಿ ಯಾವಾಗ ಪಲ್ಟಿಯಾಗಿತ್ತು ಎಂಬುದು ಯಾರಿಗೂ ಗೊತ್ತಿಲ್ಲ. ಇದರಲ್ಲಿ ಎಷ್ಟು ಜನಾ ಇದ್ದರೂ ಎಂಬುದು ಗೊತ್ತಿಲ್ಲ.

    ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಗೆ ಬರೋದಿಲ್ಲವೆಂದ್ರು, ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಗೇನಾದರೂ ಬರತ್ತೆ ಅಂದುಕೊಂಡರೇ, ಅದು ನಮಗೆ ಬರೋದಿಲ್ಲವೆಂದ್ರು. ಉತ್ತರ ಸಂಚಾರಿ ಠಾಣೆ ವ್ಯಾಪ್ತಿಗೇನಾದರೂ ಬರಬಹುದಾ ಎಂದು ತಡಕಾಡಿದ್ರೇ, ಅವರಂತೂ ಆ ಏರಿಯಾ ನಮಗೆ ಸಂಬಂಧವೇ ಇಲ್ಲಾ ಅಂದುಬಿಟ್ರು.

    ಹಾಗಾದರೇ, ಈ ವಾಹನ ಯಾರದ್ದೂ, ಯಾವಾಗ ಪಲ್ಟಿಯಾಗಿದೆ, ಎಷ್ಟು ಜನಾ ಇದ್ರೂ ಎಂದು ಪ್ರಶ್ನಿಸುವ ಮುನ್ನ, ದಯವಿಟ್ಟು ಕಾರು ಬಿದ್ದಿರೋ ಈ ಪ್ರದೇಶ ಯಾವ ಠಾಣೆ ಲಿಮಿಟ್ಸ್ ಗೆ ಬರುತ್ತೆ ಎಂಬುದನ್ನ ಪೊಲೀಸರು ಪತ್ತೆ ಹಚ್ಚಬೇಕಿದೆ. ಲಿಮಿಟ್ಸ್ ಗೊತ್ತಾದ ಮೇಲೆ, ಇನ್ನುಳಿದ ಪ್ರಶ್ನೆಗಳಿಗೆ ಉತ್ತರವನ್ನ ಹುಡುಕಿದರಾಯಿತು..

  • ಫೆಬ್ರುವರಿ 16ಕ್ಕೆ ಧಾರವಾಡ ಮುರುಘಾಮಠ ಜಾತ್ರೆ..

    ಧಾರವಾಡ: ಕೊರೋನಾ ಮಹಾಮಾರಿಯ ನಡುವೆ ಜಾತ್ರೆ, ಜನ ಕೂಡುವುದು ಕಡಿಮೆಯಾಗಿರುವ ಬೆನ್ನಲ್ಲೇ ಪ್ರಸಿದ್ಧ ಧಾರವಾಡ ಮುರುಘಾಮಠದ ಶ್ರೀ ಶಿವಯೋಗಿಗಳ ರಥೋತ್ಸವ ಫೆಬ್ರುವರಿ 16ರಂದು ಜರುಗಲಿದೆ.

    ಫೆಬ್ರುವರಿ 7ರಿಂದ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಆರಂಭವಾಗಲಿದ್ದು, ಫೆಬ್ರುವರಿ 16ರ ಸಂಜೆ 4 ಗಂಟೆಗೆ ಶಿವಯೋಗಿಗಳ ರಥೋತ್ಸವ ಜರುಗಲಿದೆ ಎಂದು ಶ್ರೀ ಶಿವಯೋಗಿಶ್ವರ ಜಾತ್ರಾ ಉತ್ಸವ ಸಮಿತಿ ತಿಳಿಸಿದೆ.

    ಸಂಪ್ರದಾಯದಂತೆ ಕತೃ ಗದ್ದುಗೆಗೆ ಶ್ರೀ ಶಿವಯೋಗಿಗಳವರ ಪಾದಕ್ಕೆ ಹಾಗೂ ಶ್ರೀ ಮೃತ್ಯುಂಜಯ ಅಪ್ಪಗಳವರ ಗದ್ದುಗೆ, ಶ್ರೀ ಮಹಾಂತಪ್ಪಗಳವರ ಗದ್ದುಗೆಗೆ ಪ್ರತಿನಿತ್ಯ ರುದ್ರಾಭಿಷೇಕ, ಪಾದಪೂಜೆ ಮತ್ತು ಗಣಾರಾಧನೆ ನಡೆಯಲಿದ್ದು, ಭಕ್ತರು ಭಾಗವಹಿಸುವಂತೆ ಕೋರಲಾಗಿದೆ.

    ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಪ್ರತಿ ಭಕ್ತರಿಗೆ ಪ್ರಸಾಧದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಕೃಪಾಶೀರ್ವಾದಕ್ಕೆ ಒಳಗಾಗಬೇಕೆಂದು ಸಮಿತಿ ಹೇಳಿದೆ.

  • ಧಾರವಾಡದಲ್ಲಿ KSGMEWA ಕಾರ್ಯಕ್ರಮ ಯಶಸ್ವಿ..!

    ಧಾರವಾಡ: ಇಲ್ಲಿಯ ಆಲೂರು ವೆಂಕಟರಾವ್ ಸಭಾಭವನದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಮುಸ್ಲಿಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಧಾರವಾಡ ಜಿಲ್ಲಾಮಟ್ಟದ ರಾಷ್ಟ್ರೀಯ ಶಿಕ್ಷಣ ನೀತಿ 2020, ಕೋವಿಡ-19 ಸುರಕ್ಷತಾ ಕ್ರಮಗಳು  ಹಾಗೂ ವ್ಯಾಕ್ಸಿನೇಷನ್ ಕುರಿತು ಶೈಕ್ಷಣಿಕ ಉಪನ್ಯಾಸ ಕಾರ್ಯಗಾರ , KSGMEWA 2021ರ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನ KSGMEWA ರಾಜ್ಯ ಅಧ್ಯಕ್ಷ ಅಬ್ದುಲ್ ರಹೀಮ್ ಖಾಜಿ ವಹಿಸಿಕೊಂಡಿದ್ದರು. ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಜಯಾನಂದ ಸರಸ್ವತಿ ಮಹಾಸ್ವಾಮಿಗಳು ಹಾಗೂ ಪೀರ ಎ ತರೀಖತ ಹಜರತ್ ಸಯ್ಯದ್ ತಾಜುದ್ದೀನ್ ಎಸ್ ಖಾದ್ರಿ ಅಲ್ ಜೀಲಾನೀ ಕೆಸರ್ಮೊಡವಿ ಸಾಹೇಬ ವಹಿಸಿಕೊಂಡಿದ್ದರು.

    ಅರೇಬಿಕ್ ಗುರುಗಳಾದ ಖಾನ್ ಅವರ ಖಿರಾತ್ ನಿಂದ ಈ ಕಾರ್ಯಕ್ರಮ  ಪ್ರಾರಂಭಿಸಲಾಯಿತು. ಎನ್.ಟಿ.ಮುಲ್ಲಾ ಅವರು ಅಲ್ಲಾಹನ ಸ್ಮರಣೆಯಲ್ಲಿ ಹಮ್ದ ಹೇಳಿದರು. ಸನಾವುಲ್ಲಾಹ ಮಕಾಂದಾರ ಇವರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಸ್ಮರಣೆಯಲ್ಲಿ ನಾತ್ ಹೇಳಿದರು. ಹುತಾತ್ಮರ ದಿನದ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯೊಂದಿಗೆ ಶ್ರದ್ಧಾಂಜಲಿ ನಡೆಸಿ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.

    ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ಡಿವೈಪಿಸಿ ಧಾರವಾಡ  ಎಸ್.ಎಂ. ಹುಡೆದಮನಿ ಡಿ.ವೈ.ಪಿ.ಸಿ, ಡಿಎಚ್ಓ ಡಾ.ಯಶವಂತ ಮದೀನಕರ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅಬ್ದುಲರಸೀದ ಮಿರಜನ್ನವರ, ಬಿಇಓ ಅಕ್ಬರಲಿ ಖಾಜಿ, ಉಮಾದೇವಿ ಬಸಾಪುರ, KSGMEWA ಸಂಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಸಲೀಮ್ ಹಂಚಿನಮನಿ ಆಗಮಿಸಿದ್ದರು.

    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡ್ರ,  ವ್ಹಿ ಎಫ್ ಚುಳಕಿ, ವಾಯ್.ಎಚ್. ಬಣವಿ,  ಅಬ್ದುಲ್ ಖಾದರ್ ಮೆಣಸಗಿ, ಶಾನವಾಜ ಪಠಾಣ, ಎಂ.ಡಿ. ಮಕಾಂದಾರ, ಮಗದುಮ್ ಹುಸೇನ್ ಕಿಲ್ಲೆದಾರ, ನಿಯಾಜ್ ಅಹ್ಮದ್ ಹಂಚಿನಮನಿ,  ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದರು.

    ಕಿಮ್ಸ ಪ್ರಾಂಶುಪಾಲ ಡಾ. ಖರಾರ್ ಷಾ ಕಮ್ಮಾರ ಇವರಿಂದ ಕೋವಿಡ- 19ಸುರಕ್ಷತಾ ಕ್ರಮಗಳು ಹಾಗೂ ವ್ಯಾಕ್ಸಿನೇಷನ್ ಕುರಿತು ಉಪನ್ಯಾಸ ಜರುಗಿತು. ಇದೇ ರೀತಿ ಡಾ. ಸೈಯದ್ ಇಸ್ಮಾಯಿಲ್ ಪಾಷಾ ಇವರಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತು ಉಪನ್ಯಾಸ ಜರುಗಿತು.

    ಸಸಿಗೆ ನೀರು ಹಾಕುವ ಮೂಲಕ ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. KSG-MEWA 2021 ರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಕೋವಿಡ- 19 ವಾರಿಯರ್ಸ್ ಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ KSPSTA, NGO ಚುನಾಯಿತ ಪ್ರತಿನಿಧಿ ಗಳಿಗೆ ಸನ್ಮಾನ ಮಾಡಲಾಯಿತು.

    ಕಾರ್ಯಕ್ರಮದ ನಿರೂಪಣೆಯನ್ನು KSG-MEWA ರಾಜ್ಯ ಜಂಟಿ ಕಾರ್ಯದರ್ಶಿ ಕುಮಾರಿ ಫರಹತ ಖುತೇಜಾ ಝಲಗೆರಿ ಮಾಡಿದರು. ತಬಸ್ಸುಮ ಪಟ್ಟನ್ನದ ಅತಿಥಿ ಗಳ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮವನ್ನು ನಿರೂಪಿಸಿದರು, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಎಂ.ಕೆ. ಘೋಡೆಸವಾರ ಮಾತನಾಡಿದರು.

    ಕೋವಿಡ- 19 ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ಪಿರೋಜ ಗುಡೆನಕಟ್ಟಿ KSGMEWA ಖಜಾಂಚಿ ಗಳು KSG-MEWA ಜಿಲ್ಲಾ ಘಟಕ ಧಾರವಾಡ, ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಸನ್ಮಾನ ಕಾರ್ಯಕ್ರಮ ಆರ್.ಕೆ.ಪಿಂಜಾರ KSG-MEWA ಸಂಘಟನಾ ಕರ್ಯದರ್ಶಿಗಳು ಜಿಲ್ಲಾ ಘಟಕ ಧಾರವಾಡ ಹಾಗೂ ಬಿ.ಎ ಬಳ್ಳಾರಿ ಶಿಕ್ಷಕರು NGO, KSPSTA ಚುನಾಯಿತ ಪ್ರತನಿಧಿಗಳಿಗೆ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು.

    ಉರ್ದು ಇ.ಸಿ.ಓ ಜುಬೇರ್ ಅಹ್ಮದ್ ಖಂಡುನಾಯ್ಕ ವಂದಿಸಿದರು. KSGMEWA ರಾಜ್ಯ ಸಂಸ್ಥಾಪಕ ಅಧ್ಯಕ್ಷ ಮಹಮ್ಮದ್ ಸಲೀಂ ಹಂಚಿನಮನಿ, KSGMEWA ಧಾರವಾಡ ಜಿಲ್ಲಾ ಘಟಕ  ಅಧ್ಯಕ್ಷ ಮುಸ್ತಾಕ್ ಅಹ್ಮದ ಸಂಗ್ರೇಸಕೊಪ್ಪ, ಪ್ರಧಾನ ಕಾರ್ಯದರ್ಶಿ ಮಂಜೂರ ಅಹ್ಮದ ಘೋಡೆಸವಾರ ಉಪಸ್ಥಿತರಿದ್ದರು.

  • ಮಂಜುನಾಥನ ಲಾರಿ ಸಮೇತ ಕಳ್ಳಕ್ಕಿಯವ ಬಂಧನ..!

    ವಿಜಯಪುರ: ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಅಕ್ಕಿ ಸಾಗಾಟ ಮಾಡುವ ವೇಳೆ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ಕಿ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

    ಬಾಗಲಕೋಟ ಜಿಲ್ಲೆಯ ಗದ್ದನಕೇರಿ ನಿವಾಸಿ ಸದ್ದಾಂ ಅಮೀನಸಾಬ್ ಜಂಗಿ ಬಂಧಿತ ಆರೋಪಿ. ಇನ್ನು ಬಂಧಿತ ಆರೋಪಿ ಸದ್ದಾಂ ಅಕ್ರಮವಾಗಿ 8 ಲಕ್ಷ ಮೌಲ್ಯದ 296 ಕ್ವಿಂಟಲ್ ಅಕ್ಕಿಯನ್ನು ವಿಜಯಪುರದಿಂದ ನಿಡಗುಂದಿ ಮಾರ್ಗವಾಗಿ ತೆಗೆದುಕೊಂಡು ಹೋಗುವಾಗ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಮನಗೂಳಿ ಪೊಲೀಸರು ದಾಳೆ‌ ನಡೆಸಿದ್ದಾರೆ.

    ಅಲ್ಲದೇ, KA-29 B-8299 ನಂಬರಿನ್ ವಾಹನದಲ್ಲಿ ಅಕ್ರಮ ಅಕ್ಕಿ ಸಾಗಾಟಕ್ಕೆ ಸದ್ದಾಂ ಯತ್ನಿಸಿದ್ದಾನೆ. ಈ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಖಲೆಯ ಪ್ರಕಾರ ಲಾರಿಯು ಮಂಜುನಾಥ ಹೂಲಗೇರಿ ಎಂಬುವವರಿಗೆ ಸೇರಿದ್ದೆಂದು ಪೊಲೀಸರು ಮಾಹಿತಿಯನ್ನ ಕಲೆ ಹಾಕಿದ್ದು, ಇನ್ನುಳಿದ ಮಾಹಿತಿಯನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.

  • ಹಾರೋಬೆಳವಡಿ ಪಂಚಾಯತಿಗೆ ಶಶಿಕಲಾ ಅಧ್ಯಕ್ಷೆ, ವೀರೇಶ ಉಪಾಧ್ಯಕ್ಷ..!

    ಧಾರವಾಡ: ತಾಲೂಕಿನ ಹಾರೋಬೆಳವಡಿ ಗ್ರಾಮ ಪಂಚಾಯತಿ ಚುನಾವಣೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ಚುನಾವಣೆ ನಡೆದು, ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.

    ಹಾರೋಬೇಳವಡಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಶಶಿಕಲಾ ಮರೆಪ್ಪ ತಳವಾರ ಮತ್ತು ಉಪಾಧ್ಯಕ್ಷರಾಗಿ ವೀರೇಶ ಬಸಪ್ಪ ಕನಾಜಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ರಮೇಶ್ ಜಾಧವ ಕಾರ್ಯನಿರ್ವಹಿಸಿದ್ದರು.

    ಚುನಾವಣೆಯ ಸಮಯದಲ್ಲಿ ಸರ್ವ ಸದಸ್ಯರು ಆಗಮಿಸಿ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಅಧ್ಯಕ್ಷ-ಉಪಾಧ್ಯಕ್ಷರ  ಆಯ್ಕೆಯಲ್ಲಿ ಭಾಗವಹಿಸಿದ್ದರೆಂದು ಪಿಡಿಓ A.H. ಮನಿಯಾರ ತಿಳಿಸಿದರು.

    ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಮಾಲೆ ಹಾಕುವ ಮೂಲಕ ಶುಭ ಹಾರೈಸಿದರು. ಇನ್ನುಳಿದ ಸದಸ್ಯರು ಹಾಜರಿದ್ದರು.