ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಜಾ
1 min readಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನ ನ್ಯಾಯಾಲಯ ವಜಾಗೊಳಿಸಿದೆ.
ನವೆಂಬರ್ 5ರಂದು ಸಿಬಿಐನಿಂದ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯ ಬಗ್ಗೆ ವಾದ-ವಿವಾದಗಳು ಡಿಸೆಂಬರ್ 9ರಂದು ಆಲಿಸಿದ್ದ ನ್ಯಾಯಾಲಯ ಇಂದು ತನ್ನ ತೀರ್ಪನ್ನ ನೀಡಿದ್ದು, ಜಾಮೀನು ಅರ್ಜಿಯನ್ನ ವಜಾ ಮಾಡಿದೆ.
ಧಾರವಾಡದಲ್ಲಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಇಂದು ಈ ಬಗ್ಗೆ ಆದೇಶ ಹೊರ ಬಂದಿದೆ. ಯೋಗೇಶಗೌಡ ಹತ್ಯೆಯಲ್ಲಿ ಮಾಜಿ ಸಚಿವರನ್ನ ಬಂಧನ ಮಾಡಿದ ನಂತರ ಸಿಬಿಐ ಮೂರು ದಿನಗಳವರೆಗೆ ಕಸ್ಟಡಿ ತೆಗೆದುಕೊಂಡಿತ್ತು. ಇದಾದ ನಂತರ ನ್ಯಾಯಾಲಯ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೀಗಾಗಿ ವಿನಯ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯದ ಇಂದಿನ ತೀರ್ಪಿನ ಬಗ್ಗೆ ಎಲ್ಲರ ಚಿತ್ತ ನೆಟ್ಟಿತ್ತು. ಈಗಾಗಲೇ ವಿನಯ ಕುಲಕರ್ಣಿ ಬಂಧನವಾಗಿ 39 ದಿನಗಳಾಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.