Posts Slider

Karnataka Voice

Latest Kannada News

SP ಹೆಸರಿನಲ್ಲಿ “ಫೇಸ್‌ಬುಕ್ ಖಾತೆ”- ನೌಕರಿ ಕೊಡಿಸುವ ನೆಪದಲ್ಲಿ ವಂಚನೆ: ಓರಿಜಿನಲ್ SP ಟೀಂನಿಂದ ಆರೋಪಿ‌ ಅಂದರ್…

Spread the love

ಎಸ್ಪಿ ಹೆಸರಿನಲ್ಲಿ ಸರ್ಕಾರಿ ನೌಕರಿ ಆಮಿಷ: ಲಕ್ಷಾಂತರ ರೂ. ದೋಚಿದ್ದ ಆರೋಪಿ ಪೊಲೀಸ್ ವಶಕ್ಕೆ

ವಿಜಯಪುರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರ ಹೆಸರನ್ನೇ ಬಳಸಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪಿಯನ್ನು ಇಲ್ಲಿನ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.

​ಬಂಧಿತನನ್ನು ಹಣಮಂತ ಭಜಂತ್ರಿ ಎಂದು ಗುರುತಿಸಲಾಗಿದೆ. ಸುರೇಶ ಅಥಣಿ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

​ಈ ಕುರಿತು ವಿಜಯಪುರ ನಗರದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು, “ಆರೋಪಿ ಹಣಮಂತ ಭಜಂತ್ರಿ ನನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್ (Facebook) ಖಾತೆಯನ್ನು ಸೃಷ್ಟಿಸಿದ್ದನು. ಅದರ ಮೂಲಕ ಸಾರ್ವಜನಿಕರನ್ನು ಸಂಪರ್ಕಿಸಿ, ಲೋಕೋಪಯೋಗಿ ಇಲಾಖೆಯಲ್ಲಿ (PWD) ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿದ್ದನು,” ಎಂದು ತಿಳಿಸಿದರು.

ರೂ. 5.04 ಲಕ್ಷ ವಂಚನೆ: ಎಸ್ಪಿಯವರ ನಕಲಿ ಖಾತೆಯನ್ನು ನಿಜವೆಂದು ನಂಬಿದ್ದ ಸುರೇಶ ಅಥಣಿ ಎಂಬುವವರಿಂದ ಆರೋಪಿ ಹಂತ ಹಂತವಾಗಿ ಒಟ್ಟು 5 ಲಕ್ಷದ 4 ಸಾವಿರ ರೂಪಾಯಿ ನಗದನ್ನು ಪಡಕೊಂಡಿದ್ದನು. ಹಣ ಪಡೆದ ಬಳಿಕ ಕೆಲಸವೂ ಕೊಡಿಸದೇ, ಇತ್ತ ಹಣವನ್ನೂ ಹಿಂತಿರುಗಿಸದೇ ವಂಚಿಸಿದ್ದಾನೆ.

​ತಮಗೆ ಮೋಸ ಹೋಗಿರುವುದು ಮನವರಿಕೆಯಾಗುತ್ತಿದ್ದಂತೆ ಸುರೇಶ ಅವರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಹಣಮಂತನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

​ಇದೇ ವೇಳೆ ಸಾರ್ವಜನಿಕರಿಗೆ ಮನವಿ ಮಾಡಿದ ಎಸ್ಪಿ ಲಕ್ಷ್ಮಣ ನಿಂಬರಗಿ, “ಫೇಸ್‌ಬುಕ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಇಂತಹ ನಕಲಿ ಸಂದೇಶಗಳನ್ನು ನಂಬಿ ಸಾರ್ವಜನಿಕರು ಯಾರು ಮೋಸ ಹೋಗಬಾರದು. ಹಣದ ಆಮಿಷ ಒಡ್ಡಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸುವ ವಂಚಕರ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು,” ಎಂದು ಕರೆ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *