Category: ನಮ್ಮೂರು

  • ವಾಣಿಜ್ಯನಗರಿಯಲ್ಲಿ ಎರಡು ಬೈಕ್- ಗೂಡ್ಸ್ ಲಾರಿ ಕಳ್ಳತನ

    ವಾಣಿಜ್ಯನಗರಿಯಲ್ಲಿ ಎರಡು ಬೈಕ್- ಗೂಡ್ಸ್ ಲಾರಿ ಕಳ್ಳತನ

    ಹುಬ್ಬಳ್ಳಿ: ನಗರದಲ್ಲಿ ಬೈಕ್ ಕಳ್ಳತನ ಮುಂದುವರೆದಿದ್ದು, ಇದೀಗ ಲಾರಿಯನ್ನೂ ಕದ್ದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಾಹನ ಮಾಲೀಕರು ಜಾಗೃತೆಯಿಂದ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

    ಹುಬ್ಬಳ್ಳಿ ಅಂಚಟಗೇರಿ ಓಣಿಯ ಸುನೀಲ ಅಶೋಕ ಅಂಚಟಗೇರಿ ಎಂಬುವವರಿಗೆ ಸೇರಿದ ಬಜಾಜ್ ಪ್ಲಾಟಿನಂ ವಾಹನವನ್ನ ಮನೆ ಮುಂದೆ ನಿಲ್ಲಿಸಿದಾಗ ಕಳ್ಳತನ ಮಾಡಲಾಗಿದೆ ಎಂದು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹುಬ್ಬಳ್ಳಿ ಗಬ್ಬೂರ ಕಮಾನ್ ಹತ್ತಿರ ನಿಲ್ಲಿಸಿದ ಕೆಎ-26, ಎ-1350 ಸಂಖ್ಯೆಯ ಆರು ಗಾಲಿಯ ಗೂಡ್ಸ್ ಲಾರಿಯನ್ನ ಕದ್ದೋಯ್ಯಲಾಗಿದೆ ಎಂದು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಹುಬ್ಬಳ್ಳಿ ವಿದ್ಯಾನಗರದ ಅಜಿತ ರುದ್ರಪ್ಪ ನರಿಯವರ ಎಂಬುವವರಿಗೆ ಸೇರಿದ ಹಿರೋ ಹೊಂಡಾ ದ್ವಿಚಕ್ರ ವಾಹನವನ್ನ ಕಿಮ್ಸ್ ಆಸ್ಪತ್ರೆ ಆವರಣದಲ್ಲಿದ್ದಾಗ ಕಳ್ಳತನ ಮಾಡಲಾಗಿದೆ ಎಂದು ವಿದ್ಯಾನಗರ ಠಾಣೆಯಲ್ಲಿ ದೂರನ್ನ ನೀಡಲಾಗಿದೆ.

    ನಿನ್ನೆ ದಿನಾಂಕ 30.09.2020 ರಂದು ಸಂಚಾರ ನಿಯಮಗಳನ್ನ ಉಲ್ಲಂಘನೆ ಮಾಡಿದವರ ಮೇಲೆ 562 ಪ್ರಕರಣಗಳನ್ನ ದಾಖಲು ಮಾಡಲಾಗಿದ್ದು, 2ಲಕ್ಷ 92600 ರೂಪಾಯಿಗಳ ದಂಡ ವಿಧಿಸಲಾಗಿದೆ.

  • ಹುಬ್ಬಳ್ಳಿಯಲ್ಲಿ ಅಪಘಾತ-ಮಹಿಳೆಯ ದುರ್ಮರಣ

    ಹುಬ್ಬಳ್ಳಿಯಲ್ಲಿ ಅಪಘಾತ-ಮಹಿಳೆಯ ದುರ್ಮರಣ

    ಹುಬ್ಬಳ್ಳಿ: ಟ್ಯಾಂಕರ್ ವೇಗವಾಗಿ ಬಂದು ಜೂಪಿಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವಳು ಸಾವಿಗೀಡಾದ ಘಟನೆ ಹುಬ್ಬಳ್ಳಿಯ ಜೆ.ಜಿ.ಕಾಲೇಜಿನ ಹತ್ತಿರ ಸಂಭವಿಸಿದೆ.

    ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ರವಿ ಶಿವಪ್ಪ ಚಾಕಲಬ್ಬಿ ಚಲಾಯಿಸುತ್ತಿದ್ದ ಟ್ಯಾಂಕರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ದ್ಚಿಚಕ್ರವಾಹನದ ಹಿಂದುಗಡೆ ಕುಳಿತ ರತ್ನವ್ವ ಚೆನ್ನಬಸಯ್ಯ ಹಿರೇಮಠ ಎಂಬ ಮಹಿಳೆಗೆ ತೀವ್ರವಾದ ಗಾಯಗಳಾಗಿತ್ತು.

    ತೀವ್ರವಾಗಿ ರಕ್ತಸ್ರಾವವಾಗುತ್ತಿದ್ದ ಸಮಯದಲ್ಲೇ ಕಿಮ್ಸ್ ಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೇ ಮಹಿಳೆ ಸಾವನ್ನಪಿದ್ದಾರೆ. ಪ್ರಕರಣವನ್ನ ದಾಖಲು ಮಾಡಿರುವ ಉತ್ತರ ಸಂಚಾರಿ ಠಾಣೆ ಪೊಲೀಸರು, ತನಿಖೆಯನ್ನ ಕೈಗೊಂಡಿದ್ದಾರೆ.

    ಟ್ಯಾಂಕರ್ ಸಂಖ್ಯೆ ಕೆಎ-27 ಬಿ-2584 ವಾಹನವನ್ನ ವಶಕ್ಕೆ ಪಡೆದಿದ್ದಾರೆ.

  • EXCLUSIVE-ಹುಬ್ಬಳ್ಳಿ ಆನಂದನಗರದಲ್ಲಿ ಕಿರಾಣಿ ಅಂಗಡಿ: ಓಂ ನಮಃ ಶಿವಾಯ

    EXCLUSIVE-ಹುಬ್ಬಳ್ಳಿ ಆನಂದನಗರದಲ್ಲಿ ಕಿರಾಣಿ ಅಂಗಡಿ: ಓಂ ನಮಃ ಶಿವಾಯ

    ಹುಬ್ಬಳ್ಳಿ: ಕೊರೋನಾ ಸಮಯದಲ್ಲಿ ಕಳ್ಳರು ಹೊಸ ಹೊಸ ದಾರಿಗಳನ್ನ ಹುಡುಕುತ್ತಿದ್ದು ಕಿರಾಣಿ ಅಂಗಡಿಯನ್ನೂ ಟಾರ್ಗೆಟ್ ಮಾಡುತ್ತಿದ್ದಾರೆಂಬುದು ಆನಂದನಗರದಲ್ಲಿ ನಡೆದಿರುವ ಕಳ್ಳತನವೊಂದು ಸಿಸಿಟಿವಿ ಮೂಲಕ ಜಗಜ್ಜಾಹೀರು ಮಾಡಿದೆ.

    ಕಳೆದ ರಾತ್ರಿ ಮೂರು ಗಂಟೆಗೆ ಅಂಗಡಿ ಒಳಗೆ ಕಿಟಕಿಯ ಗ್ರೀಲ್ ಮುರಿದು ಒಳನುಗ್ಗಿರುವ ಕಳ್ಳ, ತನಗೆ ಬೇಕಾದ ವಸ್ತುಗಳನ್ನ ಹಾಗೂ ಲಾಕರಿನಲ್ಲಿದ್ದ  ಹಣವನ್ನ ದೋಚಿ ಪರಾರಿಯಾಗಿದ್ದಾನೆ.

    ಕಬ್ಬಿಣದ ಗ್ರೀಲ್ ಮುರಿದು ಒಳಗೆ ಬಂದು ಎಲ್ಲವನ್ನೂ ನೋಡುತ್ತಿದ್ದಾಗಲೇ ಸಿಸಿಟಿವಿ ಕೂಡಾ ಕಳ್ಳನಿಗೆ ಕಂಡು ಬಂದಿದೆ. ತಕ್ಷಣವೇ ಅದರ ಕೇಬಲ್ ಕಟ್ ಮಾಡಿದ್ದಾನೆಯಾದರೂ, ಅಲ್ಲಿಯವರೆಗೆ ಆತ ನಡೆದುಕೊಂಡು ಎಲ್ಲವೂ ರೆಕಾರ್ಡ್ ಆಗಿರುವುದು ಅವನಿಗೆ ತಿಳಿದಿಲ್ಲ.

    ಲಾಕರನಲ್ಲಿ ಎಷ್ಟು ಹಣವಿತ್ತು ಎಂಬುದು ಇನ್ನೂ ಗೊತ್ತಾಗಿಲ್ಲ. ಆನಂದ ನಗರ ರಸ್ತೆಯಲ್ಲಿರುವ ಬೃಂದಾವನ ಟ್ರೇಡರ್ಸನಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೊಣಕಾಲಲ್ಲಿ ಮೆಟ್ಟಿಲೇರಿ ಪೂಜೆ: ಮುನೇನಕೊಪ್ಪ ಆರೋಗ್ಯವಾಗಿರುವಂತೆ ನೋಡಿಕೋ ದೇವರೇ..!

    ಮೊಣಕಾಲಲ್ಲಿ ಮೆಟ್ಟಿಲೇರಿ ಪೂಜೆ: ಮುನೇನಕೊಪ್ಪ ಆರೋಗ್ಯವಾಗಿರುವಂತೆ ನೋಡಿಕೋ ದೇವರೇ..!

    ಹುಬ್ಬಳ್ಳಿ: ನವಲಗುಂದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರು ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಮೊಣಕಾಲಿನಲ್ಲಿ ಮೆಟ್ಟಿಲೇರಿ ವಿಶೇಷ ಪೂಜೆ ಸಲ್ಲಿಸಿದ ಪ್ರಸಂಗ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ನಡೆಯಿತು.

    ಕೊರೋನಾ ಸಂದರ್ಭದಲ್ಲಿ ಸತತವಾಗಿ 6 ತಿಂಗಳುಗಳ ಕಾಲ ತಮ್ಮ ಕ್ಷೇತ್ರದಲ್ಲಿ ಹಗಲಿರುಳು ಸಾರ್ವಜನಿಕರ ಪರವಾಗಿ ಓಡಾಡಿ ಕೆಲ್ಸ ಮಾಡಿದ ನವಲಗುಂದ ಶಾಸಕ ಮುನೆನಕೊಪ್ಪ ಅವರಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ…

    ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅಭಿಮಾನಿಗಳು, ಹುಬ್ಬಳ್ಳಿಯಲ್ಲಿರುವ  ಶ್ರೀ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ತೆರಳಿ ವಿಶೇಷವಾದ ಪೂಜೆ ಮಾಡಿದರು. ಕೆಲವರು ಮಂಡಿ ಊರಿ ಸಾಯಿಬಾಬಾ ಮೆಟ್ಟಿಲುಗಳನ್ನು ಹತ್ತುವುದರ ಜೊತೆಗೆ ವಿಶೇಷ ಸೇವೆ ಸಲ್ಲಿಸಿ ತಮ್ಮ ನೆಚ್ಚಿನ ನಾಯಕ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

    ಈ ಸಂದರ್ಭದಲ್ಲಿ ಶಂಕರ ಪಾಟೀಲಮುನೇನಕೊಪ್ಪರ ಅಭಿಮಾನಿಗಳಾದ  ಮಂಜುನಾಥ ಹೆಬಸೂರ, ವಿಜಯಕಾಂತ ನಿಡವಣಿ, ಸಂತೋಷ ಹಿರೇಮಠ, ಅಣ್ಣಪ್ಪ, ದ್ಯಾಮಣಗೌಡ, ಶಂಕರಗೌಡ ಪಾಟೀಲ, ಕಿರಣ ಸೇರಿದಂತೆ ಹಲವರು ಭಾಗವಹಿಸಿದ್ದರು.

  • 35ಸಾವಿರಕ್ಕೆ ಕೊಲೆಗೆ ಯತ್ನ: ಧಾರವಾಡದಲ್ಲಿ ನಡೆದದ್ದೇನು..?

    35ಸಾವಿರಕ್ಕೆ ಕೊಲೆಗೆ ಯತ್ನ: ಧಾರವಾಡದಲ್ಲಿ ನಡೆದದ್ದೇನು..?

    ಧಾರವಾಡ: ಗೆಳೆಯನಿಗೆ ಸಾಲ ಕೊಟ್ಟು ಮರಳಿ ಪಡೆಯುವಾಗ ತಡ ಮಾಡಿದ್ದಕ್ಕೆ ತಲ್ವಾರನಿಂದ ಕೊಲೆ ಮಾಡುವ ಯತ್ನಕ್ಕೆ ಹೋದ ಘಟನೆ ಮೆಹಬೂಬನಗರದ ಮದುವೆ ಹಾಲ್ ಬಳಿ ಸಂಭಿವಿಸಿದೆ.

    ಘಟನೆಯಲ್ಲಿ ಗಾಯಗೊಂಡವ ಮತ್ತು ಹಲ್ಲೆ ಮಾಡಿದವರಿಬ್ಬರು ಆಟೋ ಚಾಲಕರಾಗಿದ್ದು, ಧಾರವಾಡದ ಮಾಳಾಪುರ ನಿವಾಸಿ ಮಾಬೂಲಿ ತಾಸ್ತಿವಾಲೆ ಎಂಬಾತನೇ ಕೊಲೆ ಯತ್ನ ಮಾಡಿದ ಆರೋಪಿಯಾಗಿದ್ದು, ಪೊಲೀಸರ ಈತನನ್ನ ವಶಕ್ಕೆ ಪಡೆದಿದ್ದಾರೆ.

     

    ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ವ್ಯಕ್ತಿ ಮಾಬೂಲಿ ಹಿರೇಕುಂಬಿಯನ್ನ ಚಿಕಿತ್ಸೆಗಾಗಿ  ಹುಬ್ಬಳ್ಳಿ ಕಿಮ್ಸಗೆ ರವಾನೆ ಮಾಡಲಾಗಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ತೀವ್ರವಾದ ರಕ್ತಸ್ರಾವವಾಗಿದೆ.

    ತಾಸ್ತಿವಾಲೇಯಿಂದ 35 ಸಾವಿರ ರೂಪಾಯಿ ಹಣ ಪಡೆದಿದ್ದ ಹಿರೇಕುಂಬಿ, ಹಣವನ್ನ ಕೊಡಲು ಮೀನಮೇಷ ಎಣಿಸುತ್ತಿದ್ದ. ಇದರಿಂದ ರೋಸಿ ಹೋದ ತಾಸ್ತಿವಾಲೇ, ಮಚ್ಚಿನೊಂದಿಗೆ ಹಣ ಕೇಳು ಹೋಗಿದ್ದಾನೆ. ಆಗಲೂ ಮಾತಿನ ನಡುವೆ ಚಕಮಕಿ ನಡೆದು, ಹಲ್ಲೆ ಮಾಡಲಾಗಿದೆ.

  • ಗಿರ್ಮಿಟಗೆ ಬ್ಯಾರಿಕೇಡ್ ಬಳಕೆ: ಕಣ್ಣು ಮುಚ್ಚಿ ಕುಳಿತ ಪೊಲೀಸರು..

    ಹುಬ್ಬಳ್ಳಿ: ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪೊಲೀಸರು ಬ್ಯಾರಿಕೇಡಗಳನ್ನ ಬಳಕೆ ಮಾಡುತ್ತಾರೆಂಬುದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದ್ರೇ, ಇಲ್ಲೋಬ್ಬ ಭೂಪ ಪೊಲೀಸ್ ಬ್ಯಾರಿಕೇಡಗಳನ್ನೇ ತನ್ನ ಗಿರ್ಮಿಟ್ ಅಂಗಡಿಗಳಿಗೆ ಕಾವಲು ಹಾಕಿಕೊಂಡಿದ್ದಾನೆ.

    ಹುಬ್ಬಳ್ಳಿ ಸಿಟಿ ಕ್ಲಿನಿಕ್ ಬಳಿಯೇ ಇಂತಹದೊಂದು ಆಟಾಟೋಪಕ್ಕೆ ಇಳಿದಿರುವ ಗಿರ್ಮಿಟ್ ಮಾರುವಾತ, ಪೊಲೀಸರ ಬ್ಯಾರಿಕೇಡಗಳನ್ನೇ ಗಿರಾಕಿಗಳಿಂದ ದೂರವುಳಿಯಲು ಬಳಕೆ ಮಾಡಿಕೊಳ್ಳುತ್ತಿದ್ದಾನೆ.

    ಸುಮಾರು ಎಂಟು ಬ್ಯಾರಿಕೇಡಗಳನ್ನ ತನ್ನದೇ ಅಂಗಡಿಯ ಸುತ್ತಲೂ ಇಟ್ಟುಕೊಂಡು ಸಂಜೆಯಾಯಿತಂದರೇ ವ್ಯಾಪಾರ ಶುರು ಮಾಡುತ್ತಾನೆ. ಕೆಲವು ಪೊಲೀಸರು ಇದನ್ನ ನೋಡಿದರೂ ನೋಡದ ಹಾಗೇ ಹೋಗುತ್ತಿರುವುದು ಸೋಜಿಗದ ವಿಚಾರವೇ ಸರಿ.

    ಕೊರೋನಾ ಸಮಯದಲ್ಲಿಯೂ ಪೊಲೀಸರ ಬ್ಯಾರಿಕೇಡಗಳನ್ನೇ ಬಳಕೆ ಮಾಡಿಕೊಳ್ಳುತ್ತಿರುವ ಗಿರ್ಮಿಟ್ ಅಣ್ಣನಿಗೆ ಪೊಲೀಸರು ವಿಚಾರಿಸುವುದು ಸೂಕ್ತವಲ್ಲವೇ..!

  • ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಪ್ರತಿಭಟನೆ_ ಪೊಲೀಸರೊಂದಿಗೆ ವಾಗ್ವಾಧ

    ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಪ್ರತಿಭಟನೆ_ ಪೊಲೀಸರೊಂದಿಗೆ ವಾಗ್ವಾಧ

    ಹುಬ್ಬಳ್ಳಿ/ಧಾರವಾಡ: ಉತ್ತರಪ್ರದೇಶದಲ್ಲಿ ಹತ್ರಾಸ್ ಅತ್ಯಾಚಾರ -ಮಹಿಳೆಯ ಸಾವಿನ ಸಂಬಂಧ ಹೋರಾಟ ಮಾಡುತ್ತಿದ್ದ ಕಾಂಗ್ರೆಸ್ ನ ರಾಹುಲಗಾಂಧಿಯವರನ್ನ ಪೊಲೀಸರ ಮುಖಾಂತರ ತಡೆಗಟ್ಟುವ ಪ್ರಯತ್ನವನ್ನ ಮಾಡಿದ್ದಾರೆಂದು ಆಕ್ರೋಶವ್ಯಕ್ತಪಡಿಸಿ ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.

    ಅವಳಿನಗರದಲ್ಲಿ ದಿಢೀರನೆ ನಡೆದ ಹೋರಾಟ ಹೇಗಿತ್ತು ನೀವೇ ನೋಡಿ..

    https://www.youtube.com/watch?v=8Hw6npnpomg

  • ಗಾಂಧಿ ಜಯಂತಿಯಂದೇ ಹೋರಾಟಕ್ಕೆ ಮುಂದಾದ  ಸಂತೋಷ ಲಾಡ

    ಗಾಂಧಿ ಜಯಂತಿಯಂದೇ ಹೋರಾಟಕ್ಕೆ ಮುಂದಾದ  ಸಂತೋಷ ಲಾಡ

    ಧಾರವಾಡ: ಮಾಜಿ ಸಚಿವ ಸಂತೋಷ ಲಾಡ್ ಕಲಘಟಗಿ ಕ್ಷೇತ್ರಕ್ಕೆ ನಾಳೆ ಆಗಮಿಸಲಿದ್ದು, ಅದೇ ದಿನ ಕಿಸಾನ್ ಮಜ್ದೂರ ಬಚಾವೋ ದಿವಸ ಹಾಗೂ ಕಿಸಾನ್ ಮಜ್ದೂರ ಕಾಂಗ್ರೆಸ್ ಸಮಿತಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ.

    ಸಚಿವ ಸಂತೋಷ ಲಾಡ್, ‌ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಅದೇ ದಿನ ಬೆಳಿಗ್ಗೆ 11-00 ಗಂಟೆಗೆ ಕಲಘಟಗಿ ಬ್ಲಾಕ್‌ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ “ಕಿಸಾನ್ ಮಜ್ದೂರ್ ಬಚಾವೋ ದಿವಸ ” ಹಾಗೂ ಕಿಸಾನ್ ಮಜ್ದೂರ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನ ಹಮ್ಮಿಕೊಳ್ಳಲಾಗಿದ್ದು, ಮೆರವಣಿಗೆಯು ಕಲಘಟಗಿ APMCಯಿಂದ ತಹಶಿಲ್ದಾರರ ಕಛೇರಿ ವರೆಗೆ ಆಯೋಜನೆ ಮಾಡಲಾಗಿದ್ದು, ಇದರಲ್ಲಿಯೂ ಲಾಡ್ ಭಾಗವಹಿಸಲಿದ್ದಾರೆ.

    ತಾಲೂಕಿನ ರೈತರ ಬೆಳೆಹಾನಿ, 2019ರ ಬೆಳೆ ವಿಮೆ ರೈತರಿಗೆ ಬಾರದೆ ಇರುವುದು,  ಕೂಲಿ ಕಾರ್ಮಿಕರ, ವಯೋವೃದ್ದರ ವೃದ್ಯಾಪ ವೇತನ , ತಾಲೂಕಿನಲ್ಲಿ ಅಪಾರವಾದ ಮಳೆಯಿಂದ ಸಾಕಷ್ಟು ಮನೆಗಳು ಹಾನಿಯಾದರೂ ಪರಿಹಾರ ನೀಡದೇ ಇರುವುದನ್ನ ಖಂಡಿಸಿ ತಹಶೀಲ್ದಾರರ ಮೂಲಕ ಮನವಿ ಕೊಡುವ ಹೋರಾಟ ನಡೆಯಲಿದೆ.

    ಪ್ರತಿಭಟನಾ  ಮೆರವಣಿಗೆಯಲ್ಲಿ ಕಲಘಟಗಿ ತಾಲ್ಲೂಕಿನ ಸಮಸ್ತ ರೈತ ಮುಖಂಡರು, ತಾಲೂಕಿನ ವಿವಿದ ಸಂಘಟನೆಗಳ ಮುಖಂಡರು ಭಾಗವಹಿಸುವಂತೆ  ಕೆಪಿಸಿಸಿ ಸದಸ್ಯ ಎಸ್. ಆರ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಪ್ರಧಾನ ಕಾರ್ಯದರ್ಶಿ ಹನಮಂತಪ್ಪ ಕಾಳಿ ತಿಳಿಸಿದ್ದಾರೆ.

  • ಗುಂಡಿ ಬಿದ್ದ ರಸ್ತೆಗಳೇ ರಜತ್ ಉಳ್ಳಾಗಡ್ಡಿಮಠ  ಅಸ್ತ್ರ ; ವೈರಲ್ ಆದ ರೋಡ್ ಚಾಲೆಂಜ್.. !

    ಗುಂಡಿ ಬಿದ್ದ ರಸ್ತೆಗಳೇ ರಜತ್ ಉಳ್ಳಾಗಡ್ಡಿಮಠ  ಅಸ್ತ್ರ ; ವೈರಲ್ ಆದ ರೋಡ್ ಚಾಲೆಂಜ್.. !

    ಹುಬ್ಬಳ್ಳಿ: ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ಕಪಲ್ ಚಾಲೆಂಜ್, ಸ್ಮೈಲ್ ಚಾಲೆಂಜ್ ಹೀಗೆ ವಿವಿಧ ರೀತಿಯ ಚಾಲೆಂಜ್‌ಗಳು ಸದ್ದು ಮಾಡುತ್ತಿವೆ. ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ  ಮಾತ್ರ ವಿಭಿನ್ನ ರೀತಿಯ ಚಾಲೆಂಜ್ ಆರಂಭಿಸಿದ್ದಾರೆ.  ಗುಂಡಿ ಬಿದ್ದ ಹುಬ್ಬಳ್ಳಿ ರಸ್ತೆಗಳ ಫೋಟೊಗಳನ್ನು ಷೇರ್ ಮಾಡುತ್ತಿದ್ದು ರಜತ್ ಉಳ್ಳಾಗಡ್ಡಿಮಠ ಕರೆಗೆ ಹುಬ್ಬಳ್ಳಿ -ಧಾರವಾಡ ಜನತೆ ಓಗೊಟ್ಟು ಸ್ಪಂದಿಸಿದ್ದಾರೆ.


    ಉತ್ತರ ಕರ್ನಾಟಕದ ಹೆಬ್ಬಾಗಿಲೆಂದು ಮತ್ತು ವಾಣಿಜ್ಯ ವಹಿವಾಟಿಗೆ ಖ್ಯಾತಿ ಪಡೆದಿರುವ ಹುಬ್ಬಳ್ಳಿ ನಗರದ ರಸ್ತೆಗಳ ಪರಿಸ್ಥಿತಿ ಹೇಳತೀರದು. ಸುತ್ತಮುತ್ತಲಿನ ಕಲಘಟಗಿ, ನವಲಗುಂದ ,ಕುಂದಗೋಳ ತಾಲೂಕುಗಳು ಹುಬ್ಬಳ್ಳಿಯ ಮೇಲೆ ಅವಲಂಬಿತವಾಗಿದೆ. ರಸ್ತೆಗಳಲ್ಲಿನ  ಗುಂಡಿಗಳಿಂದ ಅಪಘಾತಗಳಾಗಿರುವ ಉದಾಹರಣೆಗಳು ಕಣ್ಣ ಮುಂದೆ ಇವೆ. ಆದರೂ ಇದಕ್ಕೆ ಸ್ಪಂದಿಸದೆ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಕಣ್ಣು ಮುಚ್ಚಿ ಕುಂತಿದ್ದಾರೆ.


    ರಜತ್ ಉಳ್ಳಾಗಡ್ಡಿಮಠ ಮ್ಮ ಫೇಸ್ ಬುಕ್‌ನಲ್ಲಿ ಹಾಳಾಗಿರುವ ರಸ್ತೆಗಳ ಪೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದು , ಮಾಜಿ ಮುಖ್ಯಮಂತ್ರಿ ಹಾಲಿ ಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ರಸ್ತೆಗಳನ್ನು ಸರಿಪಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಹುಬ್ಬಳ್ಳಿಯ ವಿವಿಧ ಕಡೆಗಳ  ರಸ್ತೆಯ ಚಿತ್ರಗಳನ್ನು ತೆಗೆದು #HubballiRoadChallenge ಎಂಬ ಹೆಸರಿನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ರಸ್ತೆಗಳು ತುಂಬಾ ಹದಗೆಟ್ಟಿವೆ. ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸೋದು ಹೇಗೆ? ಈ ರಸ್ತೆಗಳನ್ನು ರಿಪೇರಿ ಮಾಡಿಸಿ ಎಂದು ಆಗ್ರಹಿಸಿದ್ದಾರೆ.

    ರಜತ್ ಉಳ್ಳಾಗಡ್ಡಿಮಠ ಅವರು ಕೆಪಿಸಿಸಿ ಸಂಯೋಜಕರಾಗಿದ್ದು , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತರಾಗಿದ್ದಾರೆ.

  • ಧಾರವಾಡ ಡಿಸಿ ಕಚೇರಿ ಸುತ್ತಲೂ ನಿಷೇಧಾಜ್ಞೆ ಜಾರಿ- ಯಾಕೆ ಗೊತ್ತಾ..?

    ಧಾರವಾಡ ಡಿಸಿ ಕಚೇರಿ ಸುತ್ತಲೂ ನಿಷೇಧಾಜ್ಞೆ ಜಾರಿ- ಯಾಕೆ ಗೊತ್ತಾ..?

    ಹುಬ್ಬಳ್ಳಿ: ವಿಧಾನಪರಿಷತ್ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಆರ್.ದಿಲೀಪ್ ನಿಷೇಧಾಜ್ಞೆ ಜಾರಿಗೆ ತಂದಿದ್ದು, ಅವರ ಯಥಾವತ್ತ್ ಪ್ರತಿಯನ್ನ ಈ ಕೆಳಗೆ ನಮೂದಿಸಲಾಗಿದೆ ನೋಡಿ..

    ಕರ್ನಾಟಕ ವಿಧಾನ ಪರಿಷತ್ತಿನ ಪಶ್ವಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಗೆ ಸಂಬಂಧಿಸಿದಂತೆ, ಧಾರವಾಡ ಜಿಲ್ಲೆಯಲ್ಲಿ ದಿನಾಂಕ: 28-10-2020 ರಂದು ಚುನಾವಣೆಯು ಜರುಗಲಿರುತ್ತದೆ. ಚುನಾವಣೆ ಘೋಷಣೆಯಾದ ತಕ್ಷಣದಿಂದ ಅಂದರೆ ದಿನಾಂಕ; 29-09-2020 ರಿಂದ ಮಾದರಿ ನೀತಿ ಸಂಹಿತೆಯು ಜಾರಿಗೆ ಬಂದಿರುತ್ತದೆ.  ಸದರ ಚುನಾವಣೆಯ ಯಾವತ್ತೂ  ಪ್ರಕ್ರಿಯೇಗಳು ಮುಕ್ತಾಯಗೊಳ್ಳುವವರೆಗೆ ಅಂದರೆ ದಿನಾಂಕ: 05-11-2020 ರವರೆಗೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.

    ಚುನಾವಣೆಯ ವಿವಿಧ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ, ಚುನಾವಣೆಯ  ಅಧಿಸೂಚನೆಯಲ್ಲಿ ತಿಳಿಸಿರುವ ಚುನಾವಣೆಯ ವೇಳಾಪಟ್ಟಿಯಲ್ಲಿ  ನಮೂದಿಸಿರುವಂತೆ ದಿನಾಂಕ: 30-09-2020 ರಿಂದ 05-11-2020 ರವರೆಗೆ ಚುನಾವಣೆಯ ಯಾವತ್ತೂ ಕಾರ್ಯಗಳು ಸುಗಮವಾಗಿ ಮತ್ತು ಶಾಂತಿಯುತವಾಗಿ ಜರುಗುವ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಧಾರವಾಡ ಇವರ ಕಛೇರಿಗೆ 200 ಮೀಟರ್ ಅಂತರದವರೆಗೆ ಶಾಂತತೆಗೆ ಭಂಗ ಉಂಟಾಗದಂತೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಅಹಿತಕರ ಘಟನೆಗಳು ಇತ್ಯಾದಿ ನಿಯಂತ್ರಿಸುವ ದೃಷ್ಟಿಯಿಂದ ಸಿ.ಆರ್.ಪಿ.ಸಿ. 1973 ಕಲಂ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರ ಪ್ರಕಾರ ಪ್ರದತ್ತವಾದ ಅಧಿಕಾರ ಹೊಂದಿದವನಾದ ನಾನು ಆರ್.ದಿಲೀಪ್, ಐಪಿಎಸ್., ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಮತ್ತು ಪೊಲೀಸ್ ಕಮೀಷನರ್, ಹುಬ್ಬಳ್ಳಿ-ಧಾರವಾಡ ಜಿಲ್ಲಾಧಿಕಾರಿಗಳು ಧಾರವಾಡ ಇವರ ಕಛೇರಿಗೆ 200 ಮೀಟರ್  ಅಂತರದವರೆಗೆ ದಿನಾಂಕ: 30-09-2020 ರಿಂದ 05-11-2020 ರವರಗೆ ಜಾರಿಗೆ ಬರುವಂತೆ ನಿಷೇದಾಜ್ಞೆಯನ್ನು ವಿಧಿಸಿ ಆದೇಶ ಹೊರಡಿಸಿರುತ್ತೇನೆ.

    1. ಮೆರವಣಿಗೆ ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
    2. ಮೆರವಣೆಗೆ / ಬೈಕ್ ರ್ಯಾಲಿ, ವಾಹನಗಳಲ್ಲಿ ಧ್ವನಿವರ್ಧಕ ಬಳಸುವುದನ್ನು, ಬ್ಯಾನರ್, ಬಂಟಿಂಗ್ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.
    3. ಶಸ್ತ್ರ, ಬಡಿಗೆ, ಭರ್ಚಿ, ಖಡ್ಗ, ಬಂದೂಕು, ಚೂರಿ, ಕೋಲು, ಲಾಠಿ, ದೊಣ್ಣಿ, ಚಾಕು, ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡಲು ಉಪಯೋಗಿಸಬಹುದಾದ ಯಾವುದೇ ಮಾರಕಾಸ್ತ್ರ ತೆಗೆದುಕೊಂಡು ಹೋಗುವುದನ್ನು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.
    4. ಕಲ್ಲುಗಳನ್ನು, ಕ್ಷಾರ ಪದಾರ್ಥ ಇಲ್ಲವೇ ಸ್ಪೋಟಕ ವಸ್ತುಗಳು, ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದು ಮತ್ತು ಶೇಖರಿಸುವುದನ್ನು ನಿಷೇಧಿಸಲಾಗಿದೆ.
    5. ಕಲ್ಲುಗಳು ಅಥವಾ ಎಸೆಯುವಂಥ ವಸ್ತುಗಳನ್ನು ಎಸೆಯುವ ಆಥವಾ ಬಿಡುವ ಸಾಧನೆಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
    6. ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ ಮಾಡುವುದನ್ನು ಪ್ರತಿಬಂಧಿಸಲಾಗಿದೆ.
    7. ಸದರಿ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
    8. ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ದೇಶಕಾರಿ ಹಾಡುಗಳು ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂಥಹ ಚಿತ್ರಗಳು ಚಿನ್ನೆಗಳು ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲೀ ಹಾಗೂ ಸಾರ್ವಜನಿಕರ ಗಾಂಭೀರ್ಯ ಮತ್ತು ನೈತಿಕತೆಗೆ ಭಂಗ ತರುವಂಥಹ ಆಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
    9. ಯಾವುದೇ ವ್ಯಕ್ತಿ ಸಾರ್ವಜನಿಕರಾಗಲೀ ಮೇಲೆ ವಿವರಿಸಿರುವ ಮಾರಕಾಸ್ತ್ರಗಳು, ಸ್ಪೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರೆ ಆಕ್ಷೇಪಾರ್ಹ ವಸ್ತುಗಳು ಹೊಂದಿದ್ದು ಕಂಡು ಬಂದ ಕೂಡಲೇ ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಮತ್ತು ಅಂಥಹ ಮಾರಕ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು ಅಲ್ಲದೇ ಸಂಬಂಧಿಸಿದ ವ್ಯಕ್ತಿಯ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗವುದು.
    1. ಈ ಆಜ್ಞೆಯು ಅಂತ್ಯಕ್ರಿಯೆ ಮೆರವಣಿಗೆಗಳಿಗೆ ಮತ್ತು ಇನ್ನಿತರ ಕಾರಣಗಳಿಗಾಗಿ ಅನುಮತಿ ಪಡೆದು ತೆಗೆಯಿಸಲಾದ ಮೆರವಣಿಗೆಗಳಿಗೆ ಅನ್ವಯಿಸುವದಿಲ್ಲ.
    2. ಈ ಆದೇಶವು ಮತದಾನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ / ಪೊಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣೆ ಕಾರ್ಯನಿರತ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹಾಗೂ ಒಬ್ಬೊಬ್ಬರಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ.

    ಸದರಿ ಆಜ್ಞೆಯನ್ನು ಉಲ್ಲಂಘಿಸುವವರ ವಿರುದ್ದ ಕಲಂ 188 ಭಾರತೀಯ ದಂಡ ಸಂಹಿತೆಯ ಪ್ರಕಾರ ಕ್ರಮವನ್ನು ಜರುಗಿಸಲು ಸಂಬಂಧಪಟ್ಟ ಪಿ.ಐ ರವರಿಗೆ ಅನುಮತಿ ನೀಡಲಾಗಿದೆ.  ಈ ನಿಷೇಧಾಜ್ಞೆಯನ್ನು ಈ ದಿವಸ ಅಂದರೆ ದಿನಾಂಕ: 30/09/2020 ರಂದು ನನ್ನ ಹಸ್ತಾಕ್ಷರ ಹಾಗೂ ಮುದ್ರೆಯೊಂದಿಗೆ ಹೊರಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.