Category: ನಮ್ಮೂರು

  • ರಾಯನಾಳ ಪಂಚಾಯತಿಯವರೇ- ಇದು ದೇವರ ಸ್ಥಳ- ಚೂರು ಕಣ್ಣು ತೆರೆದು ನೋಡ್ತೀರಾ..!

    ಹುಬ್ಬಳ್ಳಿ: ಕೊರೋನಾ ಮಹಾಮಾರಿ ಹೆಚ್ಚಾಗುತ್ತಿದ್ದರೂ ಗ್ರಾಮೀಣ ಪ್ರದೇಶದ ಕೆಲವೆಡೆ ಇನ್ನೂ ಸುಧಾರಣೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಅದಕ್ಕೆ ತಾಜಾ ಉದಾಹರಣೆಯೇ ಈ ರಾಯನಾಳ ಗ್ರಾಮ.

    ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಪಾದಗಟ್ಟಿಯ ಸಮೀಪವೇ ಗಲೀಜು ತುಂಬಿ ತುಳುಕುತ್ತಿದೆ. ಈ ಬಗ್ಗೆ ಹೇಳಿ ಹೇಳಿ ಸಾಕಾಗಿ ಹೋಗಿದ್ದಾರೆ. ಆದರೆ, ಗ್ರಾಮ ಪಂಚಾಯತಿಯವರು ಮಾತ್ರ ಇದನ್ನ ಸರಿ ಮಾಡುವ ಗೋಜಿಗೆ ಹೋಗುತ್ತಿಲ್ಲ.

    ದಿನನಿತ್ಯ ಹಲವರು ಇದೇ ರಸ್ತೆಯ ಮೂಲಕ ಸಂಚಾರ ನಡೆಸುತ್ತಾರೆ. ಪ್ರಮುಖ ರಸ್ತೆಯಲ್ಲಿ ಇಷ್ಟೊಂದು ಗಲೀಜಿದ್ದರೂ ಗ್ರಾಮ ಪಂಚಾಯತಿಯವರಿಗೆ ಕಾಣಿಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.

    ಗ್ರಾಮ ಪಂಚಾಯತಿಯವರಿಗೆ ತಮ್ಮ ಗ್ರಾಮದ ಬಗ್ಗೆಯಿರುವ ಇರುವ ಕಾಳಜಿಯೂ ಈ ಮೂಲಕ ಗೊತ್ತಾಗುತ್ತಿದೆ. ಎಲ್ಲರೂ ಗೌರವಿಸುವ ಶ್ರೀ ರೇವಣಸಿದ್ದೇಶ್ವರದ ಬಳಿ ಇರುವ ಈ ಗಲೀಜನ್ನಾದರೂ ತೆಗೆದು ಪುಣ್ಯಕಟ್ಟಿಕೊಳ್ಳಿ ಎಂದು ಜನರು ಆಕ್ರೋಶದಿಂದ ಹೇಳುವಂತಾಗಿದೆ. ಈಗಲಾದರೂ ಪಂಚಾಯತಿ ಮಹಾಶಯರು ಸುಧಾರಣೆ ಮಾಡುತ್ತಾರಾ ಕಾದು ನೋಡಬೇಕಿದೆ.

  • ಹುಬ್ಳಿ-ಧಾರ್ವಾಡ್ ಕ್ರೈಂ: ಇಸ್ಪೀಟ್-ಮಟ್ಕಾ: ಆರು ಜನ ಬಂಧನ- ಬೈಕ್ ಕಳುವು- ಯುವಕ ನಾಪತ್ತೆ

     ಹುಬ್ಬಳ್ಳಿ/ಧಾರವಾಡ: ದೇಶಪಾಂಡೆನಗರದಲ್ಲಿರುವ ಐಸಿಐಸಿಐ ಬ್ಯಾಂಕಿನ ಮುಂದೆ ನಿಲ್ಲಿಸಿದ ಬೈಕ್ ನ್ನ ಕಳ್ಳತನ ಮಾಡಲಾಗಿದೆ ಎಂದು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬ್ಯಾಂಕಿನ ಕೆಲಸಕ್ಕಾಗಿ ಬೈಕ್ ಲಾಕ್ ಮಾಡಿಕೊಂಡು ಹೋಗಿದ್ದರೂ ಕಳ್ಳತನ ನಡೆದಿದೆ ಎಂದು ದೂರಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಧಾರವಾಡ ಉಪನಗರ ಪೊಲೀಸ ಠಾಣೆ

    ಧಾರವಾಡ ಹಾವೇರಿಪೇಟೆ ಸವದತ್ತಿ ರಸ್ತೆಯಲ್ಲಿರುವ ಹಳಿಯಾಳ ಮೇಸ್ತ್ರೀ ಗ್ಯಾರೇಜ ಹತ್ತಿರ ಸಾರ್ವಜನಿಕ ರಸ್ತೆ ಬದಿಗೆ ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ 500 ರೂಪಾಯಿ ಹಣ ಮತ್ತು ಓಸಿ ಬರೆಯುತ್ತಿದ್ದ ಮಟಕಾ ಚೀಟಿಗಳನ್ನ ವಶಕ್ಕೆ ಪಡೆಯಲಾಗಿದೆ.

    ಕೇಶ್ವಾಪುರ ಪೊಲೀಸ್ ಠಾಣೆ

    ಸರಾಯಿ ಕುಡಿದು ಮಾನಸಿಕವಾಗಿ ಸರಿಯಾಗಿ ಕೆಲಸಕ್ಕೆ ಹೋಗದೇ ಇರುತ್ತಿದ್ದ ಮಹಾಂತೇಶ ಮಟ್ಟಿಕಲ್ಲಿ ಎಂಬಾತ ಕಾಣೆಯಾಗಿದ್ದಾನೆಂದು ಆತನ ಪತ್ನಿ ದೂರು ನೀಡಿದ್ದು, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

    ಹಳೇ-ಹುಬ್ಬಳ್ಳಿ ಪೊಲೀಸ ಠಾಣೆ

    ಮ್ಮಸಾಗರ ಗ್ರಾಮದ ಪ್ಲಾಟ್ ಹತ್ತಿರ   ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಸ್ಪೀಟ ಆಡುತ್ತಿದ್ದ ಐವರನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 52 ಿಸ್ಪೀಟ್ ಎಲೆಗಳನ್ನ ಹಾಗೂ 3520 ರೂಪಾಯಿಗಳನ್ನ ವಶಕ್ಕೆ ಪಡೆದು, ಕೆಪಿ ಕಾಯಿದೆ 87 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    ಸಂಚಾರ ನಿಯಮ ಉಲ್ಲಂಘನೆ

    ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ದಿನಾಂಕ:- 26/09/2020 ರಂದು  364  ಕೇಸಗಳನ್ನು ದಾಖಲಿಸಿದ್ದು ಒಟ್ಟು 1,93,200/- ರೂ. ದಂಡ ಹಾಕಲಾಗಿದೆ.

  • ಮಳೆಯಲ್ಲೂ ಶಿಕ್ಷಣ- ಇಂಥ ಶಿಕ್ಷಕಿಯರಿಗೆ ನಿಮ್ಮದೊಂದು ಸೆಲ್ಯೂಟ್ ಇರಲಿ..!

    ಧಾರವಾಡ: ಸರಕಾರದ ಕೆಲಸ ದೇವರ ಕೆಲಸ ಎಂದು ಅರಿತುಕೊಂಡು ಚಾಚುತಪ್ಪದೇ ಪಾಲಿಸುತ್ತಿರುವುದು ಶಿಕ್ಷಕರು ಎನ್ನುವುದನ್ನ ನಾವೂ ಅರಿತುಕೊಳ್ಳಬೇಕಿದೆ. ಹಲವು ಸಮಸ್ಯೆಗಳ ನಡುವೆಯೂ ಅವರೇಗೆ ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ತಲ್ಲೀನರಾಗಿದ್ದಾರೆಂಬುದಕ್ಕೆ ಇಲ್ಲೊಂದು ಉದಾಹರಣೆಯಿದೆ ನೋಡಿ.. ಇವರಿಗೊಂದು ಧನ್ಯವಾದ ತಿಳಿಸಿ..

    ಧಾರವಾಡದಿಂದ ಕಲ್ಲಾಪುರ ಶಾಲೆಗೆ ಹೋಗುವ ಕಲ್ಪನಾ ಚಂದನಕರ ಹಾಗೂ ವೀರಾಪುರ ಸರಕಾರಿ ಶಾಲೆಗೆ ಹೋಗುವ ವಡ್ಡಟ್ಟಿ ಟೀಚರ್ ಹೇಗೆ ಶಾಲೆಗಳನ್ನ ತಲುಪುತ್ತಿದ್ದಾರೆ ನೋಡಿ. ನಿರಂತರ ಸುರಿಯುವ ಮಳೆಯಲ್ಲೂ ರಸ್ತೆ ಮಧ್ಯೆ ಬಸ್ ನಿಂತರೂ ಶಾಲೆಗಳಿಗೆ ಹೋಗುವುದನ್ನ ಬಿಟ್ಟಿಲ್ಲ. ಏನಾದರೂ ಆಗಲಿ, ಮಕ್ಕಳಿಗೆ ವಿದ್ಯಾಭ್ಯಾಸ್ ನೀಡಬೇಕೆಂಬ ಮನೋಭಾವನೆ ಇವರದ್ದು.

    ವಿದ್ಯಾಗಮ ಯೋಜನೆ ನಿರಂತರವಾಗಿ ಯಶಸ್ವಿಯಾಗುತ್ತಿರುವುದಕ್ಕೆ ಇಂತಹ ಶಿಕ್ಷಕರ ಕಾರ್ಯಕ್ಷಮತೆಯೇ ಕಾರಣ.  ತಮಗೆ ಯಾವುದೇ ರೀತಿಯ ಕಷ್ಟಗಳಾದರೂ ಅದನ್ನ ಯಾರಿಗೂ ಹೇಳದೇ ನಡೆಯುವ ಶಿಕ್ಷಕರ ಮನಸ್ಥಿತಿ ಮೆಚ್ಚುವಂತಹದು.

    ಕಲ್ಲಾಪುರ-ವೀರಾಪುರ ಗ್ರಾಮಕ್ಕೆ ಹೋಗಬೇಕಾದರೇ ಹಳ್ಳದ ನೀರು, ರಸ್ತೆಯನ್ನ ನುಂಗಿ ಬಿಡುತ್ತೆ. ಆಗ ಅನಿವಾರ್ಯವಾಗಿ ಕಾಲ್ನಡಿಗೆಯಲ್ಲೇ ಗ್ರಾಮಗಳಿಗೆ ಹೋಗಿ ಶಿಕ್ಷಣ ಕೊಡುತ್ತಿದ್ದಾರೆ. ಕೊರೋನಾ ಹೆಚ್ಚುತ್ತಿರುವ ಸಮಯದಲ್ಲಿಯೂ ಮಳೆ-ಗಾಳಿಗೂ ಬೆದರದೇ ಸರಸ್ವತಿಯ ಸೇವೆ ಸಲ್ಲಿಸುತ್ತಿರುವ ನಡೆದಾಡುವ ದೇವರುಗಳಿವರು.. ಹ್ಯಾಟ್ಸಾಫ್ ಶಿಕ್ಷಕ-ಶಿಕ್ಷಕಿಯರೇ.. ನೀವೂ ನೂರ್ಕಾಲ ಚೆನ್ನಾಗಿ ಬಾಳಿ..

  • ಬಿಜೆಪಿ ಮುಖಂಡನ ಮಡದಿ ಎನ್ನುತ್ತಿದ್ದ ‘ಆಕೆ’ ನೇಣಿಗೆ ಶರಣು; ಸಾಕ್ಷ್ಯ ಪೊಲೀಸರ ಬಳಿ.. ಹಣ ಪಡೆದವರಿಗೀಗ ಡವಡವ..!

    ಹುಬ್ಬಳ್ಳಿ: ಬಿಜೆಪಿ ಮುಖಂಡನ ಪತ್ನಿಯಂದು ಹೇಳಿಕೊಳ್ಳುತ್ತ ಪದೇ ಪದೇ ಗಲಾಟೆ ಮಾಡಿಕೊಳ್ಳುತ್ತಿದ್ದ ಮಹಿಳೆ ತನ್ನದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ತಾನು ಯಾವ್ಯಾವ ವಿಷಯಕ್ಕೆ ಯಾರು ಯಾರಿಗೆ ಹಣ ಕೊಟ್ಟಿರುವ ಬಗ್ಗೆ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾಳೆಂದು ಹೇಳಲಾಗಿದೆ.

    ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಸವರಾಜ ಕೆಲಗೇರಿ ಎಂಬುವವರ ಪತ್ನಿ ನಾನು ಎಂದು ಹೇಳಿಕೊಳ್ಳುತ್ತಿದ್ದ ಕವಿತಾ ಅಣ್ವೇಕರ ಎಂಬ ಮಹಿಳೆಯೇ, ಶಾಂತಿನಗರದ ಮನೆಯಲ್ಲಿ ನೇಣಿಗೆ ಶರಣಾಗುವ ಮೂಲಕ ದುರಂತ ಅಂತ್ಯವಾಗಿದ್ದಾರೆ.

    ಕೆಲವ ತಿಂಗಳ ಹಿಂದೆ ಬಸವರಾಜ ಕೆಲಗೇರಿ ಎಂಬ ವ್ಯಕ್ತಿಯನ್ನ ಬಿಜೆಪಿ ಮುಖಂಡನೆಂದು ಬಿಂಬಿಸಿ, ಆತ ತನ್ನ ಗಂಡನೆಂದು ಹೇಳಿಕೊಂಡು ರಂಪಾ ಮಾಡಿದ್ದ ಕವಿತಾ ಅಣ್ವೇಕರ, ತದನಂತರ ಕಿಮ್ಸ್ ಆವರಣದಲ್ಲಿಯೂ ರಕ್ತಸಿಕ್ತವಾಗಿ ಕಾಣಿಸಿಕೊಂಡು ಬಸವರಾಜ ಕೆಲಗೇರಿಯ ವಿರುದ್ಧ ಆರೋಪ ಮಾಡಿದ್ದರು.

    ಈ ಎಲ್ಲ ಘಟನೆಗಳು ನಡೆದು ಇನ್ನೂ ತಿಂಗಳು ಕಳೆದಿಲ್ಲ ಅಷ್ಟರಲ್ಲಿ ಕವಿತಾ, ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ತನಗೆ ಸಹಾಯ ಮಾಡುವ ನೆಪದಲ್ಲಿಯೂ ಹಣವನ್ನ ಪೀಕಲಾಗಿದೆ ಎಂಬುದನ್ನ ಹೆಸರು ಸಮೇತ ನಮೂದು ಮಾಡಿದ್ದಾರೆನ್ನುವುದು ಗೊತ್ತಾಗಿದೆ.

    ಬಸವರಾಜ ಕೆಲಗೇರಿಗೂ ಬಿಜೆಪಿಗೂ ಯಾವುದೇ ಸಂಬಂಧವೇಯಿಲ್ಲ. ಆದರೂ, ಆತನನ್ನ ಕೆಲವರು ಬಿಜೆಪಿ ಮುಖಂಡನೆಂದು ಬಿಂಬಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.

  • ಜಗದೀಶ ಶೆಟ್ಟರ ಮಹತ್ವಾಕಾಂಕ್ಷೆಯ ‘BRTS ಅವೈಜ್ಞಾನಿಕ’- ಅರವಿಂದ ಬೆಲ್ಲದ ಹೀಗೇಕೆ ಹೇಳಿದ್ರು..?

    ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಹತ್ವಾಕಾಂಕ್ಷೆಯ ಬಿಆರ್ ಟಿಎಸ್ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹೇಳಿರುವುದು ಸೋಜಿಗ ಮೂಡಿಸಿದೆ.

    ಬಿಆರ್ ಟಿಎಸ್ ಯೋಜನೆಯನ್ನ ಜಾರಿಗೆ ತರಲು ಮಾಜಿ ಮುಖ್ಯಮಂತ್ರಿಗಳು ಆಗಿರುವ ಜಗದೀಶ ಶೆಟ್ಟರ ಸಾಕಷ್ಟು ಆಸಕ್ತಿ ತೆಗೆದುಕೊಂಡು, ಅವಳಿನಗರದ ಜನರಿಗೆ ಗಿಫ್ಟ್ ರೂಪದಲ್ಲಿ ಈ ಯೋಜನೆಯನ್ನ ಜಾರಿಗೆ ತರುವಲ್ಲಿಯೂ ಮುಂಜೂಣಿಯಲ್ಲಿದ್ದು ಕಾರ್ಯವನ್ನಾರಂಭಿಸಿದ್ದರು.

    ಆದರೆ, ಇದೇ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಹೇಳಿದ್ದು, ಬೇರೆ ಯಾವುದೇ ಪಕ್ಷದವರಲ್ಲ. ಅವರದ್ದೇ ಪಕ್ಷದ ಶಾಸಕ ಅರವಿಂದ ಬೆಲ್ಲದ ಹೇಳುತ್ತಿರುವುದು ಇದೀಗ ಗೊಂದಲ ಸೃಷ್ಟಿಸುವ ಸಾಧ್ಯತೆಯಿದೆ.

    ನಿನ್ನೆ ಮುಖ್ಯಮಂತ್ರಿಗಳಿಗೆ ಶಾಸಕ ಅರವಿಂದ ಬೆಲ್ಲದ ಸಲ್ಲಿಸಿರುವ ಮನವಿಯಲ್ಲೂ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾದ್ರೇ, ಅವೈಜ್ಞಾನಿಕವಾದ ಯೋಜನೆಯನ್ನ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ದು ಜಗದೀಶ ಶೆಟ್ಟರ ಎನ್ನುವುದು ಕೂಡಾ ಮುಖ್ಯ.

    ಈ ಘಟನೆಯನ್ನ ಅವಲೋಕನೆ ಮಾಡಿದಾಗ, ಬಿಆರ್ ಟಿಎಸ್ ಅವೈಜ್ಞಾನಿಕವಾಗಿಯೇ ಪೂರ್ಣಗೊಳ್ಳಲಿದೆಯೇ ಎಂಬ ಪ್ರಶ್ನೆ ಮೂಡದೇ ಇರದು. ಭಾರತೀಯ ಜನತಾ ಪಕ್ಷದವರೇ ತಂದಿರುವ ಯೋಜನೆಯಿದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

    ಈ ಯೋಜನೆಯ ಬಗ್ಗೆ ಮೊದಲು ಕಾಂಗ್ರೆಸ್ ನವರು ಮಾತನಾಡುತ್ತಿದ್ದರು. ಇದೀಗ ಬಿಜೆಪಿ ಶಾಸಕರೇ ಮಾತನಾಡುತ್ತಿರುವುದನ್ನೇ ನೋಡಿದ್ರೇ, ಈ ಬಿಆರ್ ಟಿಎಸ್ ತರುವುದರ ಹಿಂದೆ ಯಾರಿಗೆ ಲಾಭವಿದೆ ಎಂಬ ಪ್ರಶ್ನೆ ಮೂಡುತ್ತಿದೆ.

    ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಕೂಡಾ ಇದನ್ನ ಗಮನಿಸಬೇಕಿದೆ.. ಅಲ್ವೇ..!

  • ನಾಳೆಯ ಬಂದ್ ಗೆ ಆಮ್ ಆದ್ಮಿ ಬೆಂಬಲ: ಜಿಲ್ಲಾಧ್ಯಕ್ಷ ಸಂತೋಷ ನರಗುಂದ

    ಹುಬ್ಬಳ್ಳಿ: ರೈತ, ಕಾರ್ಮಿಕ ಹಾಗೂ ಜನಪರ ಸಂಘಟನೆಗಳು ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ವ್ಯಾಪಾರಸ್ಥರ ಸಂಘದ ಸಭಾ ಭವನದಲ್ಲಿಂದು ಚಿಂತನಾ ಸಮಾವೇಶ ಹಮ್ಮಿಕೊಂಡಿತ್ತು. ಅದರಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಭಾಗವಹಿಸಿದ್ದರು.

    ಈ ವೇಳೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಪಿಎಂಸಿ, ಭೂ ಸುಧಾರಣಾ ಕಾರ್ಮಿಕ ಕಾನೂನುಗಳ ತಿದ್ದುಪಡಿ ತರುವ ಮೂಲಕ ಭಾರತದ ಏಕೈಕ ಆಶಾಕಿರಣವಾದ ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡಲು ಹೊರಟಿರುವುದು ದುರಂತ. ಕೃಷಿಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳ ಬಗ್ಗೆ ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಮತ್ತು ಮಸೂದೆಗಳನ್ನು ಆಯ್ಕೆ ಸಮಿತಿಯ ಪರಿಶೀಲನೆಗೊಳಪಡಿಸಬೇಕು ಎಂಬ ವಿರೋಧಪಕ್ಷಗಳ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.

    ದುರ್ಬಲರು, ಅಸಹಾಯಕರು ಮತ್ತು ಅಸಂಘಟಿತರಾಗಿರುವ ಶೇಕಡಾ 80ರಷ್ಟಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ಕೃಷಿಮಾರುಕಟ್ಟೆಯನ್ನು ಸರ್ಕಾರದ ನೆರವಿಲ್ಲದೆ ಸ್ವಯಂನಿಯಂತ್ರಿಸಲಾರರು. ಆ ಕೆಲಸ ಮಾಡುತ್ತಿದ್ದ ಎಪಿಎಂಸಿಯನ್ನು ನಾಶಮಾಡುವುದೆಂದರೆ ಪೂರ್ಣ ಕೃಷಿಕ್ಷೇತ್ರವನ್ನು ಮಣ್ಣುಪಾಲು ಮಾಡುವುದು ಎಂದರ್ಥ. ಎಪಿಎಂಸಿಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪೆನಿಗಳಿಗೆ ಹೆಬ್ಬಾಗಿಲು ತೆರೆಯುವುದೇ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ( ಉತ್ತೇಜನ ಮತ್ತು ಸೌಲಭ್ಯ) ಮಸೂದೆಯ ದುರುದ್ದೇಶ. ಇದು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರ ಬೆನ್ನು ಮುರಿಯುವ ಕೆಲಸ ಎಂದು ದೂರಿದರು.

    ಕೇಂದ್ರ ಸರ್ಕಾರದ ಹೊಸ ತಿದ್ದುಪಡಿ ಕಾನೂನಿನಲ್ಲಿ ಬೆಂಬಲ ಬೆಲೆಯ ರಕ್ಷಣೆಯನ್ನು ಕಿತ್ತೊಗೆದು ರೈತರನ್ನು ಅನಾಥರನ್ನಾಗಿ ಮಾಡಲಾಗಿದೆ. ಅಲ್ಲದೇ ಪ್ರಸ್ತುತ ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ರೈತರ ಹಿತಾಸಕ್ತಿ ರಕ್ಷಣೆಗೆ ಬದ್ಧವಾಗಿದೆ ಎಂದಿರುವ ಅವರು, ಸೆಕ್ಷನ್ 8 ರ ಪ್ರಕಾರ ‘’ಎಪಿಎಂಸಿ ಮಾರುಕಟ್ಟೆ ಯಾರ್ಡ್ ಒಳಗೆ ಇಲ್ಲವೆ ಹೊರಗೆ ಯಾರೂ ಕೂಡಾ ಅಧಿಕೃತ ಲೈಸೆನ್ಸ್ ಇಲ್ಲದೆ ವ್ಯಾಪಾರ ನಡೆಸುವಂತಿಲ್ಲ’’. ಇದಕ್ಕೆ ತಿದ್ದುಪಡಿ ಮಾಡಲಾಗಿದೆ. ಸೆಕ್ಷನ್ 66 ಮತ್ತು 67ರ ಪ್ರಕಾರ ಯಾರ್ಡ್ ನ ಮಾರುಕಟ್ಟೆ ವ್ಯಾಪ್ತಿಯಲ್ಲಿ ಅಕ್ರಮ ವ್ಯಾಪಾರ, ಕಾಳಸಂತೆ ಮತ್ತು ಅಕ್ರಮ ದಾಸ್ತಾನು ನಿಯಂತ್ರಿಸಲು ಅವಕಾಶವಿದೆ. ಈಸೆಕ್ಷನ್ ಗೂ ತಿದ್ದುಪಡಿ ಮಾಡಲಾಗಿದೆ. ರೈತರಿಗೆ ನ್ಯಾಯಬದ್ಧ ಬೆಲೆ ಸಿಗುವಂತೆ ಮಾಡಲು ಖಾಸಗಿ ಸಂಸ್ಥೆಗಳ ಲೆಕ್ಕಪತ್ರ ಪರಿಶೀಲಿಸಬಹುದು. ಸೆಕ್ಷನ್ 114,116 ಮತ್ತು 117ರಡಿಯಲ್ಲಿ ತಪ್ಪಿತಸ್ಥರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶ ಇದೆ. ಈ ಆರೂ ಸೆಕ್ಷನ್ ಗಳನ್ನು ತಿದ್ದುಪಡಿ ಮೂಲಕ ಬದಲಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿವೆ. ಈ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳು ಕಾಯ್ದೆ ತಿದ್ದುಪಡಿ ಮೂಲಕ ಮೀಸೆ ತುರುಕಿಸಿ ಒಳಪ್ರವೇಶಿಸಿದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಅಪ್ರಸ್ತುತ ಗೊಳಿಸಿ, ನಾಶ ಮಾಡಲು ಬಹಳ ದಿನಗಳು ಬೇಕಾಗಲಾರದು. ಎಪಿಎಂಸಿಯ ಹೊಸ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಎಂಪಿಎಂಸಿಯಿಂದ ಹೊರಗಿರುವ ವರ್ತಕರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಈ ಮೂಲಕ ಮಾರುಕಟ್ಟೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದು ನಿಧಾನವಾಗಿ ಎಪಿಎಂಸಿಗಳನ್ನು ಅಪ್ರಸ್ತುತಗೊಳಿಸುವುದು ಇದರ ಹಿಂದಿನ ನಿಜವಾದ ದುರುದ್ದೇಶ ಎನ್ನುವುದನ್ನು ರೈತರು ಅರ್ಥಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ರೈತ, ಕಾರ್ಮಿಕ ಹಾಗೂ ಜನಪರ ಸಂಘಟನೆಗಳು ಒಂದಾಗಿ ಕಾಯಿದೆಯನ್ನು ತೀವ್ರವಾಗಿ ವಿರೋಧಿಸಬೇಕು. ಈ ಹಿನ್ನೆಲೆಯಲ್ಲಿ ರೈತ‌ ವಿರೋಧಿ ಕಾಯಿದೆ ವಿರೋಧಿಸಿ ನಾಳೆ ನಡೆಯಲಿರುವ ಸ್ವಯಂ ಪ್ರೇರಿತವಾದ ಬಂದ್ ಗೆ ಆಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಲಿದೆ ಎಂದರು.

  • ‘ಗಂಡನ ಜೀವ’ ಹೋದ ಕ್ಷಣವೇ “ಆಕೆಯ ಉಸಿರು” ನಿಂತಿದೆ- ಕುಂದಗೋಳದಲ್ಲಿ ಆಗಿದ್ದೇನು..?

    ಕುಂದಗೋಳ : ಪತಿ ಸಾವಿನ ಆಘಾತ ಪತ್ನಿಯೂ ಹೃದಯಾಘಾತದಿಂದ ಸಾವು

    ಕುಂದಗೋಳ : ಸತಿ-ಪತಿಗಳು ಒಂದಾದ ಭಕ್ತಿ ಶಿವನಿಗೆ ಒಪ್ಪುವ ಮಾತಿನಂತೆ ಕುಂದಗೋಳ ಪಟ್ಟಣದ ಕುಂಬಾರಗಲ್ಲಿಯಲ್ಲಿ ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ.

    ಫೆರಿದ್ಧೀನ್ ಇಮಾಮಸಾಬ್ ಪಠಾಣ್ (74) ಎಂಬುವವರು ಇಂದು ಬೆಳಿಗ್ಗೆ 6-30 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಕುಟುಂಬಸ್ಥರು, ಸಂಬಂಧಿಗಳು ಅವರ ಶವ ಸಂಸ್ಕಾರ ಮುಗಿಸಿ ಮನೆಗೆ ಮರಳುವ ಹೊತ್ತಿಗಾಗಲೇ ಅವರ ಪತ್ನಿ ಹುಸೇನಬಿ ಫೆರುದ್ಧೀನ್ ಪಠಾಣ್ (70) ಪತಿಯ ಸಾವಿನ ದು:ಖ ತಾಳಲಾರದೆ ಇಂದು ಸಾಯಂಕಾಲ 4 ಗಂಟೇಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದು ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ.

    ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದ್ದು ಸಾವಿನಲ್ಲೂ ಒಂದಾದ ಸತಿ ಪತಿಗಳ ಹೊಂದಾಣಿಕೆಗೆ ಇಡೀ ಕುಂದಗೋಳ ಪಟ್ಟಣವೇ ಕಂಬನಿ ಮಿಡಿಯುತ್ತಿದೆ.

  • ಅಣ್ಣಿಗೇರಿ ತಾಲೂಕು ಪಂಚಾಯತಿಗೆ ಬೀಗ: ಕೋನರೆಡ್ಡಿ ವಿರುದ್ಧ ಮುನೇನಕೊಪ್ಪ ಟೀಕೆ

    ಧಾರವಾಡ: ಇನ್ನೂ ಉದ್ಘಾಟನೆಯಾಗದ ತಾಲೂಕು ಪಂಚಾಯತಿ ಕಚೇರಿಯನ್ನ ಉದ್ಘಾಟನೆ ಮಾಡಿ ಶಿಷ್ಟಚಾರ ಉಲ್ಲಂಘನೆಯಾಗಿರುವ ಪರಿಣಾಮ ಅಧಿಕಾರಿಗಳು ನವಲಗುಂದ ಕ್ಷೇತ್ರದ ಅಣ್ಣಿಗೇರಿ ತಾಲೂಕು ಪಂಚಾಯತಿ ಕಚೇರಿಗೆ ಬೀಗ ಹಾಕಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಇಡೀ ಪ್ರಕರಣದ ಬಗ್ಗೆ ವೀಡಿಯೋದಲ್ಲಿ ನೋಡಿ ತಿಳಿಯಿರಿ..

    ಅಣ್ಣಿಗೇರಿ ತಾಲೂಕು ರಚನೆಯಾದ ಮೇಲೆ ಆಯ್ಕೆಯಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷರು ತಮ್ಮ ಕೊಠಡಿಗಳನ್ನ ಪೂಜೆ ಮಾಡಿಕೊಂಡು ಅಧಿಕಾರ ಸ್ವೀಕರಿಸುವ ಬದಲು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಉಪಸ್ಥಿತಿಯಲ್ಲಿ ಉದ್ಘಾಟನೆಯೇ ಆಗದ ತಾಲೂಕು ಪಂಚಾಯತಿ ಕಾರ್ಯಾಲಯವನ್ನೇ ಉದ್ಘಾಟನೆ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ.

    ಓರ್ವ ಶಾಸಕ ಮಂತ್ರಿಯಾದ್ರೇ, ಅವರು ತಮ್ಮ ಕೊಠಡಿಯನ್ನ ಪೂಜೆ ಮಾಡಿಕೊಳ್ಳುತ್ತಾರೋ ಅಥವಾ ವಿಧಾನಸೌಧವನ್ನೇ ಉದ್ಘಾಟನೆ ಮಾಡುತ್ತಾರೋ ಎಂದು ಕೇಳುವಂತಾಗಿದೆ.

    ಅಧಿಕಾರಿಗಳು ಮಾಡಿದ ಯಡವಟ್ಟನ್ನ ಸರಿ ಮಾಡಿಕೊಳ್ಳಲು ಅಧಿಕಾರಿಗಳು ತಾವೇ ಖುದ್ದಾಗಿ ತಾಲೂಕು ಪಂಚಾಯತಿ ಕಚೇರಿಗೆ ಬೀಗ ಹಾಕಿದ್ದು, ನೂತನವಾಗಿ ಆಯ್ಕೆಯಾದವರ ಸ್ಥಿತಿ ಕಚೇರಿಗೆ ಹೋಗದ ಹಾಗಾಗಿದೆ.

    ನೂತನ ಕಾರ್ಯಾಲಯಗಳು ಉದ್ಘಾಟನೆಯಾಗಬೇಕಾದರೇ ಅದಕ್ಕೊಂದು ಶಿಷ್ಟಾಚಾರವಿರತ್ತೆ. ಅದನ್ನ ಮೀರಿ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ನಡೆದುಕೊಂಡಿದ್ದಾರೆ ಎಂದು ಹಾಲಿ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹೇಳಿದ್ದಾರೆ.

  • ನಾಳೆ ಬಂದ್ : ಅವಳಿನಗರದಲ್ಲಿ ಪೊಲೀಸರ ಕಟ್ಟೇಚ್ಚರ: ಕಿಡಗೇಡಿಗಳಿಗೆ ಎಚ್ಚರಿಕೆ..

    ಹುಬ್ಬಳ್ಳಿ: ವಿವಿಧ ಕನ್ನಡಪರ, ರೈತಪರ, ದಲಿತಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು “ಕರ್ನಾಟಕ ಬಂದ್” ಕರೆ ನೀಡಿದ್ದು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಟ್ಟೇಚ್ಚರ ವಹಿಸಿದೆ.

    ರೈತರ ಹೆಸರಿನಲ್ಲಿ ಕಿಡಿಗೇಡಿತನ ಮಾಡುವಂತಹವರ ಮೇಲೆ ನಿಗಾ ವಹಿಸಿದ್ದೇವೆ ಎಂದು ಹೇಳಿಕೊಂಡಿರುವ ಪೊಲೀಸ್ ಪ್ರಕಟಣೆ, ಹುಬ್ಬಳ್ಳಿ-ಧಾರವಾಡ ಅವಳಿನಗರದ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಅಧಿಕಾರಿ, ಸಿಬ್ಬಂದಿಗಳನ್ನು ಬಂದೋಬಸ್ತ ನಿಯೋಜನೆ ಮಾಡಿದ್ದಾರಂತೆ.

    ಕೆಎಸ್‌ಆರ್‌ಪಿ ಪ್ಲಟೂನ್‌ಗಳು, ಸಿಎಆರ್ ಪಾರ್ಟಿಗಳು, ಅಗ್ನಿಶಾಮಕ ವಾಹನಗಳು

    ಹಾಗೂ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ವಾಹನಗಳು, ಹೈ-ವೇ ಪೆಟ್ರೋಲಿಂಗ್ ವಾಹನಗಳನ್ನು ಬಂದೋಬಸ್ತ ಕರ್ತವ್ಯಕ್ಕೆ  ನಿಯೋಜನೆ ಮಾಡಿರುವ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ.

    ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡಿದ್ದಲ್ಲಿ ಅಂತವರ ಮೇಲೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂಬುದನ್ನೂ ಪ್ರಕಟಣೆಯಲ್ಲಿ ನಮೂದು ಮಾಡಿದ್ದಾರೆ.

  • ಧಾರವಾಡ: “ಬಂದ್” DSS-ACHR-ಜಯ ಕರ್ನಾಟಕ ಬೆಂಬಲ

    ಧಾರವಾಡ: ರೈತವಿರೋಧಿ ಕಾಯ್ದೆಗಳನ್ನು ಬಲವಂತವಾಗಿ ಹೇರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಡಿ.ಎಸ್.ಎಸ್ (ಅಂಬೇಡ್ಕರ ವಾದ), ಜಯ ಕರ್ನಾಟಕ ಸಂಘಟನೆ ಹಾಗೂ ಎ.ಸಿ.ಎಚ್.ಆರ್  ಸಂಘಟನೆಗಳ  ಬೆಂಬಲ ನೀಡಿವೆ.

    ರೈತರು ಈ ದೇಶದ ಅನ್ನದಾತರು ಇಡೀ ದೇಶಕ್ಕೆ ಹೆಮ್ಮೆಯ ಪ್ರಜೆಗಳು.  ಜೈ ಜವಾನ್ ಜೈ ಕಿಸಾನ್ ಎಂಬ ಹಿರಿಯರ ಉಕ್ತಿಯಂತೆ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ದುಡಿದು ಸುಣ್ಣವಾಗುವ ಮುಗ್ದ ಜೀವಿ ಇವರು.

    ಸಮಸ್ತ ದೇಶದ ಕೋಟ್ಯಂತರ ಜನರ ಹೊಟ್ಟೆ ತುಂಬಿಸುವ ರೈತರ ಭಾವನೆಗಳನ್ನು ಹತ್ತಿಕ್ಕುವ ವಿವಾದಾತ್ಮಕ ವಿಧೇಯಕಗಳನ್ನು ಬಲವಂತವಾಗಿ ಹೇರಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿಲುವನ್ನು ತೀವ್ರವಾಗಿ ವಿರೋಧಿಸಿ ನಗರದ ಆಲೂರ ವೆಂಕಟರಾವ್ ವೃತ್ತದಲ್ಲಿ ನಾಳೆ ಬೆಳಿಗ್ಗೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಿವೆ.

    ಉದ್ದೇಶಿತ ಪ್ರತಿಭಟನೆಯ ನೇತೃತ್ವವನ್ನು ಲಕ್ಷ್ಮಣ ಈ ದೊಡಮನಿ, ಸುಧೀರ ಮುಧೋಳ, ಬಸವರಾಜ ಆನೇಗುಂದಿ, ನಾರಾಯಣ ಮಾದರ, ಪರಶುರಾಮ ಕೊರವರ, ಹನುಮಂತ ಮೊರಬ, ಶಬ್ಬೀರ ಅತ್ತಾರ, ಅಂದರಖಂಡಿ, ಅಲ್ತಾಫ ಜಾಲೇಗಾರ, ಕಿಶೋರ ಕಟ್ಟಿ, ಭಾಸ್ಕರ್ ಭೋಗಲೆ, ಡಿ.ಟಿ. ಚಲವಾದಿ, ಚಂದ್ರು ಅಂಗಡಿ, ಮಂಜು ಸುತಗಟ್ಟಿ, ಸಿಡ್ಲೆಪ್ಪ ಹೆಗಡೆ, ಬಸವರಾಜ ಮಾದರ, ಪ್ರಕಾಶ ಹೂಗಾರ, ರಾಮು ಹರಿಜನ, ಕರಿಯಪ್ಪ ಮಾಳಗಿಮನಿ, ಪಂಚಯ್ಯ ಪೂಜಾರ ಮುಂತಾದವರು ವಹಿಸಲಿದ್ದಾರೆ.