Karnataka Voice

Latest Kannada News

ವೇಷ ಬದಲಿಸಿಕೊಂಡಿದ್ದ “ಮಚ್ಚ್ ಮಂಜ್ಯಾ”- ಡೈಮಂಡ್ ರಾಕೆಟ್ ಸಿನೇಮಾ ಮಾದರಿಯಲ್ಲಿ “PI ಜಯಪಾಲ ಪಾಟೀಲ” ಟೀಂ ವರ್ಕೌಟ್… ರಹಸ್ಯ… ರೋಚಕ… ಬಂಧನ…!!!

Spread the love

ಹಳಿಯಾಳ: ಕಾನೂನಿನ ಕೈಗಳು ಅತ್ಯಂತ ಉದ್ದ ಎಂಬುದನ್ನು ಹಳಿಯಾಳ ಪೊಲೀಸ್ ಇಲಾಖೆ ಮತ್ತೊಮ್ಮೆ ಸಾಬೀತುಪಡಿಸಿದೆ. ಯಾವುದೇ ಮೊಬೈಲ್ ಫೋನ್ ಬಳಸದೆ ತಲೆಮರೆಸಿಕೊಂಡು, ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ರೌಡಿಶೀಟರ್ ಮಂಜುನಾಥ ಅಲಿಯಾಸ್ ‘ಮಚ್ಚ ಮಂಜಾ’ನನ್ನು ಮಹಾರಾಷ್ಟ್ರ ಗಡಿಯ ಸಾಂಗ್ಲಿ ಸಮೀಪ ಭಾನುವಾರ ನಡೆಸಿದ ಶಿಸ್ತುಬದ್ಧ ಕಾರ್ಯಾಚರಣೆಯಲ್ಲಿ ಬಂಧಿಸುವ ಮೂಲಕ ಖಾಕಿ ಪಡೆ ತನ್ನ ದಕ್ಷತೆಯನ್ನು ಮೆರೆದಿದೆ.

​ಇತ್ತೀಚೆಗೆ ಸ್ಥಳೀಯ ಮೌರ್ಯ ಹೋಟೆಲ್ ಎದುರಿನ ಪಾನ್ ಶಾಪ್ ಬಳಿ ಸಾರ್ವಜನಿಕರಿಗೆ ತೊಂದರೆ ನೀಡಿ, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ ಮಂಜಾನ ದಾದಾಗಿರಿಯ ವಿಡಿಯೋಗಳು ರಾಜ್ಯಾದ್ಯಂತ ವೈರಲ್ ಆಗಿದ್ದವು. ಘಟನಾ ಸ್ಥಳಕ್ಕೆ ಬಂದಿದ್ದ ಪಿಎಸ್‌ಐ ಬಸವರಾಜ ಮಬನೂರು ಅವರು ಯಾವುದೇ ಕ್ರಮ ಕೈಗೊಳ್ಳದೆ ಹಿಂದಿರುಗಿದ್ದು ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿತ್ತು. ಈ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಪಿಎಸ್‌ಐ ಅವರನ್ನು ಅಮಾನತುಗೊಳಿಸಿ, 8 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿತ್ತು.

ಘಟನೆಯ ಬಳಿಕ ಪೊಲೀಸರಿಗೆ ನಿಜವಾದ ಸವಾಲು ಎದುರಾಗಿತ್ತು. ಆರೋಪಿ ಮಂಜುನಾಥ ಯಾವುದೇ ಮೊಬೈಲ್ ಬಳಸುತ್ತಿರಲಿಲ್ಲ ಹಾಗೂ ಯಾವುದೇ ಡಿಜಿಟಲ್ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಇಂದಿನ ತಂತ್ರಜ್ಞಾನ ಆಧಾರಿತ ತನಿಖಾ ಯುಗದಲ್ಲಿ ಮೊಬೈಲ್ ಲೊಕೇಶನ್ ಇಲ್ಲದೆ ಆರೋಪಿಯನ್ನು ಪತ್ತೆ ಹಚ್ಚುವುದು ಬಣವೆಯಲ್ಲಿ ಸೂಜಿ ಹುಡುಕಿದಷ್ಟೇ ಕಠಿಣವಾಗಿತ್ತು. ಆದರೂ ಛಲ ಬಿಡದ ಖಾಕಿ ಪಡೆ, ಹಳೆಯ ಶೈಲಿಯ ಖಚಿತ ಮಾಹಿತಿ ಜಾಲ, ಮಾನವ ಬೇಹುಗಾರಿಕೆ (Human Intelligence) ಮತ್ತು ಕ್ಷೇತ್ರ ಮಟ್ಟದ ತೀವ್ರ ಕಾರ್ಯಾಚರಣೆಗೆ ಇಳಿಯಿತು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ (SP) ದೀಪನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಮತ್ತು ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಜಯಪಾಲ ಪಾಟೀಲ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಯಿತು.

​ಈ ತಂಡದಲ್ಲಿ ಹಳಿಯಾಳ ಮತ್ತು ದಾಂಡೇಲಿ ಪಿಎಸ್ಐಗಳಾದ ಕೃಷ್ಣಗೌಡ ಅರಕೇರಿ, ಮಹಾಂತೇಶ್ ನಾಯ್ಕ್, ಕಿರಣ್ ಪಾಟೀಲ್ ಹಾಗೂ ಹಳಿಯಾಳ, ದಾಂಡೇಲಿ, ರಾಮನಗರ ಪೊಲೀಸ್ ಠಾಣೆಯ ದಕ್ಷ ಸಿಬ್ಬಂದಿಗಳಾದ ಎಂ.ಎಂ. ಮುಲ್ಲಾ, ಕೃಷ್ಣ, ಚಂದ್ರು, ಶಫಿ, ಬಸವರಾಜ ತೇಲಸಂಗ, ಗಂಗಾಧರ್, ನಿಂಗಪ್ಪ ಬಳ್ಳಾರಿ, ಸೊಹೇಲ್, ಬಸವರಾಜು ತ್ಯಾಪಿ, ಶ್ರೀಶೈಲ, ಮಂಜುನಾಥ ಬಾಲಿ ಮತ್ತು ಬಸವರಾಜ ಹಗರಿ ಒಳಗೊಂಡಿದ್ದರು. ಈ ಜಂಟಿ ತಂಡವು ಹಗಲು-ರಾತ್ರಿ ಎನ್ನದೆ ಕಾರ್ಯಾಚರಣೆ ನಡೆಸಿ ಬಲೆ ಬೀಸಿತ್ತು. ಕೊನೆಗೂ ಆರೋಪಿ ಬೇರೆ ರಾಜ್ಯಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ, ಭಾನುವಾರ ಸಂಜೆ ಮಹಾರಾಷ್ಟ್ರ ಗಡಿಯಲ್ಲಿ ಆತನನ್ನು ಸುತ್ತುವರಿದು ಯಶಸ್ವಿಯಾಗಿ ಬಂಧಿಸಲಾಯಿತು.

ಬಂಧಿತ ಆರೋಪಿಯನ್ನು ತಕ್ಷಣವೇ ಹಳಿಯಾಳಕ್ಕೆ ಕರೆತಂದು, ಮಧ್ಯರಾತ್ರಿಯೇ ಗೌರವಾನ್ವಿತ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

​ಯಾವುದೇ ಆಧುನಿಕ ತಂತ್ರಜ್ಞಾನದ ನೆರವಿಲ್ಲದೆ, ಕೇವಲ ವೃತ್ತಿಪರ ಚಾಣಾಕ್ಷತೆ, ಸಾಂಘಿಕ ಶ್ರಮ ಮತ್ತು ಕರ್ತವ್ಯ ನಿಷ್ಠೆಯಿಂದಲೇ ರೌಡಿಯನ್ನು ಮಟ್ಟಹಾಕಿದ ಹಳಿಯಾಳ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಯಶಸ್ವಿ ಕಾರ್ಯಾಚರಣೆಯ ಮೂಲಕ ಪೊಲೀಸ್ ಇಲಾಖೆಯು ತನ್ನ ಮೇಲಿದ್ದ ಕಳಂಕವನ್ನು ತೊಳೆದುಕೊಂಡಿರುವುದಲ್ಲದೆ, ಕಾನೂನು ಎಲ್ಲರಿಗಿಂತ ಮಿಗಿಲು ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ.


Spread the love

Leave a Reply

Your email address will not be published. Required fields are marked *

You may have missed