ಮುಂಡಗೋಡ ಉದ್ಯಮಿ ಹತ್ಯೆ: ಸುಫಾರಿ ಗ್ಯಾಂಗ್ನಲ್ಲಿ ಧಾರವಾಡದ ಮೂವರು ಸೇರಿ ಐವರ ಬಂಧನ…
ಮೀಟರ್ ಬಡ್ಡಿ, ರಿಯಲ್ ಎಸ್ಟೇಟ್ ದ್ವೇಷ; ಕೊಲೆ ಆರೋಪಿಗಳ ಬಂಧನ
ಮುಂಡಗೋಡ: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಅಂಬಿಕಾ ಸಾವಜಿ ಹೊಟೇಲ್ನಲ್ಲಿ ನಡೆದಿದ್ದ ಜಮೀರಅಹ್ಮದ ದರ್ಗಾವಾಲೆ (38) ಅವರ ಭೀಕರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಘಟನೆ ನಡೆದ 24 ಗಂಟೆಯೊಳಗೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 24/04/2026 ರಂದು ರಾತ್ರಿ 11 ಗಂಟೆಯಿಂದ 11:15 ರ ನಡುವೆ, ಮೃತ ಜಮೀರಅಹ್ಮದ ಅವರು ಸಾಧಿಕ ಚಾವೂಸನೊಂದಿಗೆ ಊಟಕ್ಕೆ ತೆರಳಿದ್ದಾಗ, ನಾಲ್ಕೈದು ಜನರಿದ್ದ ಗುಂಪೊಂದು ಅವರ ಮೇಲೆ ಖಾರದಪುಡಿ ಎರಚಿ, ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಗುನ್ನಾ ನಂ: 90/2026, ಕಲಂ: 103(1) ಸಹಿತ 3(5) ಬಿ.ಎನ್.ಎಸ್-2023) ದಾಖಲಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಮುಂಡಗೋಡದ ಮಂಜುನಾಥ ನಾಗೇಂದ್ರ ಕಾಜಗಾರ (35), ಶ್ರೀಕಾಂತ ರಾಜಶೇಖರ ಕಿರಣ್ಣನವರ (22), ಧಾರವಾಡದ ಮಂಜುನಾಥ ವಿಷ್ಣು ಬೆಳಗಾಂವ (20), ಅಭಿಷೇಕ ಮಲ್ಲಿಕಾರ್ಜುನ ಬಡಶೆಟ್ಟಿ (22) ಮತ್ತು ದೀಪಕ ನಾಗರಾಜ ನವಲೆ (22) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎರಡು ದ್ವಿಚಕ್ರ ವಾಹನಗಳು, ಒಂದು ಕಾರು, ಎರಡು ಕಂಟ್ರಿ ಮೇಡ್ ಪಿಸ್ತೂಲ್ಗಳು ಮತ್ತು 06 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಲೆಗೆ ಸುಪಾರಿ
ಪ್ರಾಥಮಿಕ ತನಿಖೆಯಲ್ಲಿ, ಪ್ರಮುಖ ಆರೋಪಿ ಮಂಜುನಾಥ ಕಾಜಗಾರನಿಗೆ ಮೃತ ಜಮೀರಅಹ್ಮದನೊಂದಿಗೆ ಮೀಟರ್ ಬಡ್ಡಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದ ವಿಷಯದಲ್ಲಿ ದ್ವೇಷವಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ಉಳಿದ ನಾಲ್ಕು ಜನರಿಗೆ ಸುಪಾರಿ ನೀಡಿ, ಸಂಘಟಿತ ತಂಡ ರಚಿಸಿ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಹಾಗೂ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಮುಂಡಗೋಡ ಠಾಣೆಯ ಪಿಐ ರಂಗನಾಥ ನೀಲಮ್ಮನವರ್, ಗೋಕರ್ಣ ಪಿಐ ಶ್ರೀಧರ ಎಸ್.ಆರ್., ಪಿಎಸ್ಐಗಳಾದ ಮಂಜುನಾಥ ಗೌಡರ, ಪರಶುರಾಮ ಮಿರ್ಜಗಿ, ರಾಜಶೇಖರ ವಂದಲಿ ಹಾಗೂ ಪ್ರೊಬೇಷನರಿ ಪಿಎಸ್ಐ ಕಾಸೀಂ ಅವರ ತಂಡ ಕಾರ್ಯಚರಣೆ ನಡೆಸಿತು. ಸಿಬ್ಬಂದಿಗಳಾದ ತಿರುಪತಿ ಚೌಡಣ್ಣನವರ, ಬಸವರಾಜ ಲಂಬಾಣಿ, ಮಹಾಂತೇಶ ಮುಧೋಳ, ಮುತ್ತಣ್ಣ ಭೋವಿ, ನಾಗಪ್ಪ ಮೋರಟಗಿ, ಸಂಜು ರಾಠೋಡ, ಮಂಜುನಾಥ ಓಣಿಕೇರಿ, ಬಸವರಾಜ ಒಡೆಯರ್, ಮಹಮ್ಮದ ಶಫೀ ಶೇಖ, ಬಸವರಾಜ ಹಗರಿ, ಪ್ರವೀಣ ಪೂಜಾರ, ಶ್ರೀಕಾಂತ ಕಟಬರ ಹಾಗೂ ಟೆಕ್ನಿಕಲ್ ಸೆಲ್ನ ಉದಯ ಗುನಗಾ, ಬಬನ್ ಕದಂ ಪಾಲ್ಗೊಂಡಿದ್ದರು.
ತ್ವರಿತವಾಗಿ ಪ್ರಕರಣ ಭೇದಿಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದಿಸಿದ್ದಾರೆ.
