“100% ಮಗು ಪ್ರಾಣ ಉಳಿದಿದೆ” ದೊಡ್ಡಸ್ತಿಕೆ ತೋರಿಸದ ಕಮೀಷನರ್ ಎನ್.ಶಶಿಕುಮಾರ… “ಈ” ಬಗ್ಗೆ ಏನಂದ್ರು… Exclusive
ಧಾರವಾಡ: ವೈದ್ಯ ಡಾ. ಕಿರಣ್ ಹೊನ್ನಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮೃತರ ಪತ್ನಿ ಪ್ರಿಯಾಂಕಾ ಅವರ ಆರೋಗ್ಯ ಸಂಪೂರ್ಣ ಸುಧಾರಿಸಿದ ನಂತರವೇ ಅವರನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಇದೇ ವೇಳೆ, ಕೃತ್ಯದ ವೇಳೆ ತೀವ್ರ ಗಾಯಗೊಂಡಿದ್ದ ಎಂಟು ವರ್ಷದ ಮಗು ಇದೀಗ ಪ್ರಾಣಾಪಾಯದಿಂದ ಪಾರಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ತಾವು ಮಾಡಿದ ಮಹತ್ಕಾರ್ಯವನ್ನ ವಿನಮ್ರವಾಗಿ ನಿರಾಕರಿಸಿ, ತಮ್ಮತನವನ್ನ ತೋರಿಸಿಕೊಟ್ಟರು.
ಧಾರವಾಡದಲ್ಲಿ ಸಂಭವಿಸಿದ ವೈದ್ಯ ಡಾ. ಕಿರಣ್ ಹೊನ್ನಣ್ಣವರ ಭೀಕರ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪ್ರಕರಣದ ಪ್ರಮುಖ ಆರೋಪಿ ಪ್ರಿಯಾಂಕಾ ಪ್ರಸ್ತುತ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ತದಲ್ಲಿ ಗ್ಲೂಕೋಸ್ ಮಟ್ಟ ತೀವ್ರವಾಗಿ ಕುಸಿದಿದ್ದರಿಂದ ಅವರನ್ನು ವೈದ್ಯಕೀಯ ನಿಗಾದಲ್ಲಿಡಲಾಗಿದೆ ಎಂದಿದ್ದಾರೆ.
ಆರೋಪಿ ಪ್ರಿಯಾಂಕಾ ದೈಹಿಕವಾಗಿ ಹಾಗೂ ಮಾನಸಿಕವಾಗಿ ಚೇತರಿಸಿಕೊಂಡ ತಕ್ಷಣವೇ ಅವರನ್ನು ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಲಾಗುವುದು. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಂಟು ವರ್ಷದ ಮಗುವಿನ ಆರೋಗ್ಯ ಪರಿಸ್ಥಿತಿಯಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದ್ದು, ಅಪಾಯದ ಗಡಿಯಿಂದ ಹೊರಬಂದಿದೆ. ಪ್ರಕರಣದ ಹಿಂದೆ ಇರುವ ನೈಜ ಕಾರಣಗಳನ್ನು ಹೊರತರಲು ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದು, ವಿಚಾರಣೆಯ ನಂತರ ಹೆಚ್ಚಿನ ಸತ್ಯಾಸತ್ಯತೆಗಳು ಹೊರಬರಲಿವೆ.
