ಊರಿಗೆ ಊರೇ ಹೊತ್ತಿ ಉರಿಯುತ್ತಿದೆ- ಪೊಲೀಸರಿಗೆ ಮಾತ್ರ ಗೊತ್ತಿಲ್ಲ: ಹೋಗಿ ನೋಡಿ ಆರಕ್ಷಕರೇ..!
1 min readಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮೀತಿ ಮೀರಿದ್ದು, ಬಡವರ ಬಹುತೇಕ ಅಂಗಡಿಗಳನ್ನ ಧ್ವಂಸ ಮಾಡಿ, ಗಲಾಟೆ ಎಬ್ಬಿಸಲು ಮುಂದಾಗಿರುವ ನೀಚ ಪಡೆಯ ಬಗ್ಗೆ ಪೊಲೀಸರಿಗೆ ಇನ್ನೂ ಮಾಹಿತಿಯೇ ಇಲ್ಲದೇ ಇರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಭಾವೈಕ್ಯತೆಯ ಬೀಡಾದ ಹಿರೇಕುಂಬಿಯಲ್ಲಿ ಒಂದು ಕೋಮಿಗೆ ಸೇರಿದ ಧರ್ಮ ಛತ್ರಗಳಿದ್ದು, ಅಲ್ಲಿ ಹೂವು- ಕಾಯಿ ಮಾರಾಟ ಮಾಡುವ ಎಲ್ಲ ಕೋಮಿನವರ ಅಂಗಡಿಗಳನ್ನೂ ಊರಿಗೆ ಬೇಡವಾದವರು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಹಿರೇಕುಂಬಿ ಗುಡ್ಡದಲ್ಲಿರುವ ಎಲ್ಲವನ್ನೂ ಗುದ್ದಲಿ, ಹಾರೇಯಿಂದ ನೆಲಸಮ ಮಾಡಿ ಗ್ರಾಮದಲ್ಲಿ ಅಶಾಂತಿ ಮೂಡಿಸಿದ್ದಾರೆ.
ಈ ಘಟನೆ ನಡೆದು 24 ಗಂಟೆಯಾದರೂ ಪೊಲೀಸರಿಗೆ ಯಾವುದೇ ಮಾಹಿತಿಯಿಲ್ಲ. ಮಾನವ ಧರ್ಮ ಬೆಳೆಸಿ-ಉಳಿಸಿ ಎಂದು ಸಾರುವ ಜಾಗದಲ್ಲಿಯೇ ಇಂತಹ ಕಿಡಗೇಡಿತನ ನಡೆದಿದ್ದು, ಮಾನವಕುಲಕ್ಕೆ ಮಾರಕವಾಗಿದೆ.
ಅಂಗಡಿಮುಗ್ಗಟ್ಟುಗಳನ್ನ ಯಾವ ಉದ್ದೇಶಕ್ಕಾಗಿ ಕೆಡವಲಾಗಿದೆ ಎಂಬುದಕ್ಕೆ ಉತ್ತರವಿಲ್ಲ. ಗ್ರಾಮ ಪಂಚಾಯತಿಯವರೂ ಇದರಲ್ಲಿ ಭಾಗಿಯಾಗಿಲ್ಲ. ಆದರೆ, ಗ್ರಾಮದ ಶಾಂತಿಯನ್ನ ಹದಗೆಡಿಸುವ ಪ್ರಯತ್ನ ಮಾತ್ರ ಎಗ್ಗಿಲ್ಲದೇ ನಡೆದಿದೆ. ಅದಕ್ಕೂ ಮೀರಿ ನಡೆದಿದ್ದು ಪೊಲೀಸ್ ಇಲಾಖೆಯ ಕರ್ತವ್ಯನಿಷ್ಠೆ. ಘಟನೆಯ ಬಗ್ಗೆ ಚೂರು ಮಾಹಿತಿಯಿಲ್ಲದೇ ಇರುವುದು ಕೂಡಾ, ಇಂತಹ ದುಷ್ಕರ್ಮಿಗಳಿಗೆ ವರದಾನವಾಗಿದೆ.