ಧಾರವಾಡ: ಒಂದೇ ಒಂದು ಪೈಸೆಯಿಲ್ಲದ “ಬೌದ್ಧ ಬಿಕ್ಕು”ವನ್ನ ಹಣವಿದೆ ಎಂದು ಹತ್ಯೆ… ಪಾತಕರು ಸಿಕ್ಕಿದ್ದು “ಒಂದು ಮೆಸೇಜ್”ನಿಂದ…
ಧಾರವಾಡ: ಹಣದ ಆಸೆಗಾಗಿ ವ್ಯಕ್ತಿಯ ಕೊಲೆ; ಐವರು ಆರೋಪಿಗಳ ಪೈಕಿ ಮೂವರ ಬಂಧನ
ಧಾರವಾಡ: ಹಣದ ಆಮಿಷಕ್ಕಾಗಿ ವ್ಯಕ್ತಿಯೊಬ್ಬನನ್ನು ಅಪಹರಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ಬಿಸಾಡಿದ್ದ ಭೀಕರ ಪ್ರಕರಣವನ್ನು ಧಾರವಾಡ ಗ್ರಾಮೀಣ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ದಾಖಲಾದ ಕೇವಲ 5 ದಿನಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.
ಮುಂಡಗೋಡದ ಟಿಬೆಟಿಯನ್ ಕ್ಯಾಂಪ್ ನಂಬರ್ 1ರಲ್ಲಿ ವಾಸವಾಗಿದ್ದ ತಾತಿ ಧೂಂಡೂಪ (40 ವರ್ಷ) ಎಂಬುವವರನ್ನು ದಿನಾಂಕ 28-04-2026 ಮತ್ತು 29-04-2026ರ ಮಧ್ಯದ ಅವಧಿಯಲ್ಲಿ ಅಪಹರಿಸಲಾಗಿತ್ತು. ಆರೋಪಿಗಳು ಮೃತನನ್ನು ಇಟಿಗಾ ಕಾರಿನಲ್ಲಿ ಕರೆದೊಯ್ದು, ಹಣಕ್ಕಾಗಿ ಪೀಡಿಸಿ, ಕಾಲುಗಳನ್ನು ಕಟ್ಟಿ ಹಾಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಧಾರವಾಡ-ಹುಬ್ಬಳ್ಳಿ ಬೈಪಾಸ್ ರಸ್ತೆಯ ಹಳೆಯಾಳ ಬ್ರಿಡ್ಜ್ ಹತ್ತಿರ ಎಸೆದು ಪರಾರಿಯಾಗಿದ್ದರು.
ಬಂಧಿತ ಆರೋಪಿಗಳ ವಿವರ:
- ಸಂಕೇತ ಸತ್ತಪ್ಪ ಯಾದವ (24 ವರ್ಷ): ನಿವಾಸಿ ಪಾಂಡಿ ವರೆ, ತಾ: ಬುಧರಗಡ್, ಜಿಲ್ಲೆ: ಕೊಲ್ಲಾಪುರ.
- ವೈಭವ ಚವ್ವಾಣ (30 ವರ್ಷ): ನಿವಾಸಿ ಬಾಂಬಾರ, ತಾ: ಬುಧರಗಡ್, ಜಿಲ್ಲೆ: ಕೊಲ್ಲಾಪುರ.
- ಸಿದ್ಧೇಶ ಸುನೀಲ ಬೋಸ್ಲೆ (18 ವರ್ಷ): ನಿವಾಸಿ ಪಿಂಪಳಗಾವ, ತಾ: ಬುಧರಗಡ್, ಜಿಲ್ಲೆ: ಕೊಲ್ಲಾಪುರ.
ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಗುಂಜನ್ ಆರ್ಯ (IPS) ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ತನಿಖೆಯಲ್ಲಿ ಶಿವಾನಂದ ಕಟಗಿ: ಡಿ.ಎಸ್.ಪಿ (L&O), ವಿನೋದ ಮುಕ್ತೆದಾರ್: ಡಿ.ಎಸ್.ಪಿ, ಧಾರವಾಡ ಗ್ರಾಮೀಣ ಉಪ-ವಿಭಾಗ, ಎಸ್.ಎಸ್. ಕಮತಗಿ: ಸಿ.ಪಿ.ಐ, ಧಾರವಾಡ ಗ್ರಾಮೀಣ, ಪ್ರವೀಣ ಕೋಟಿ: ಪಿ.ಎಸ್.ಐ, ಧಾರವಾಡ ಗ್ರಾಮೀಣ, ಇವರೊಂದಿಂಗೆ ಸಿಬ್ಬಂದಿಗಳು ಮತ್ತು ತಾಂತ್ರಿಕ ವಿಭಾಗದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ, ಉತ್ತರ ಕನ್ನಡ ಜಿಲ್ಲಾ ಪೊಲೀಸರು ಮತ್ತು ಮಹಾರಾಷ್ಟ್ರ ರಾಜ್ಯ ಪೊಲೀಸರು ಈ ತನಿಖೆಗೆ ಅಗತ್ಯ ಸಹಕಾರ ನೀಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಪೊಲೀಸ್ ತಂಡದ ಈ ಚಾಣಾಕ್ಷತನದ ಕೆಲಸವನ್ನು ಎಸ್ಪಿ ಗುಣಜನ್ ಆರ್ಯ ಅವರು ಶ್ಲಾಘಿಸಿದ್ದಾರೆ.
