ಬಂದ ಎರಡನೇಯ ದಿನಕ್ಕೆ “ರೈತರ ಜೊತೆ ನಿಂತು” ಬರಗಾಲ ಘೋಷಣೆ ಮಾಡಲು ಒತ್ತಾಯಿಸಿದ ಶಾಸಕ ವಿನಯ ಕುಲಕರ್ಣಿ…
ಧಾರವಾಡ: ಧಾರವಾಡ ಜಿಲ್ಲೆಯನ್ನು ಬರಗಾಲ ಪಟ್ಟಿಯಿಂದ ಕೈಬಿಟ್ಟಿರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ.
“ನಮ್ಮ ಭಾಗದಲ್ಲಿ ಬೆಳೆ ಕಣ್ಣಿಗೆ ಎತ್ತರಕ್ಕೆ ಕಾಣುತ್ತಿದೆ. ಆದರೆ ಬೆಳೆಗಳಲ್ಲಿ ಕಾಳಿಲ್ಲ. ನಮ್ಮ ಭಾಗದಲ್ಲಿ ಜಿಟಿ ಜಿಟಿ ಮಳೆ ಮಾತ್ರ ಆಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ನಾನು ಸ್ವತಃ ಹೊಲಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ,” ಎಂದು ಅವರು ಹೇಳಿದರು.
ಈ ಕುರಿತು ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ ಅವರು, ಶೇ.70ಕ್ಕಿಂತ ಕಡಿಮೆ ಇಳುವರಿ ಬಂದರೆ ಬರಗಾಲ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ರೈತರು ತೀವ್ರ ಸಂಕಷ್ಟದಲ್ಲಿದ್ದು, ಡೀಸೆಲ್ ಬೆಲೆ, ಕಾರ್ಮಿಕರ ವೆಚ್ಚ ಸೇರಿದಂತೆ ಕೃಷಿ ವೆಚ್ಚಗಳು ಹೆಚ್ಚಾಗಿವೆ. ಉಳುಮೆ ಮಾಡುವುದು ಕೂಡ ರೈತರಿಗೆ ಕಷ್ಟಕರವಾಗಿದೆ. ಕೃಷಿ ಕ್ಷೇತ್ರವೇ ಇಂದು ಸಂಕಷ್ಟದಲ್ಲಿದೆ ಎಂದು ಶಾಸಕ ವಿನಯ ಕುಲಕರ್ಣಿ ಆತಂಕ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲೆಯ ರೈತರ ಸಮಸ್ಯೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ ಅವರು, “ನಾನು ಒಂದೇ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡುವುದಿಲ್ಲ. ರೈತರ ಪರವಾಗಿ ನನ್ನ ಜವಾಬ್ದಾರಿ ಏನಿದೆಯೋ ಅದನ್ನು ನಾನು ಮಾಡುತ್ತೇನೆ,” ಎಂದು ಹೇಳಿದರು.
ಇದೇ ವೇಳೆ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಶಾಸಕ ವಿನಯ ಕುಲಕರ್ಣಿ, “ನಾನು ಆ ವಿಷಯ ನೋಡಿಲ್ಲ. ನಾನು ಟಿವಿ ನೋಡುವುದಿಲ್ಲ. ಅದರ ಬಗ್ಗೆ ನನಗೆ ಗಮನಕ್ಕೆ ಬಂದಿಲ್ಲ. ನಾನು ಈಗಷ್ಟೇ ಧಾರವಾಡಕ್ಕೆ ಬಂದಿದ್ದೇನೆ. ಸ್ವಲ್ಪ ನನಗೆ ಸಡಿಲಿಕೆ ಕೊಡಿ,” ಎಂದು ಹೇಳಿದರು.
