ಫೈರಿಂಗ್ “ಡೇಂಜರಸ್ ಟ್ರೇಂಡ್”- ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ಆಕ್ರೋಶ…!!!
ಧಾರವಾಡದಲ್ಲಿ ಗೂಂಡಾಗಿರಿ, ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ
ಧಾರವಾಡ: ತಡಸಿನಕೊಪ್ಪ ಬಳಿ ಇತ್ತೀಚೆಗೆ ನಡೆದ ಗುಂಡಿನ ಚಕಮಕಿ (ಫೈರಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಯುವಕನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
”ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ” ಎಂದು ಜೋಶಿ ಆಪಾದಿಸಿದರು.
-
- ಪೊಲೀಸರ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದ ಆರೋಪ: ಯುವಕನ ಮೇಲೆ ಫೈರಿಂಗ್ ನಡೆದು ನಾಲ್ಕು ದಿನಗಳಾಗಿದ್ದರೂ ಮುಖ್ಯ ಆರೋಪಿಯನ್ನು ಇನ್ನು ಬಂಧಿಸಿಲ್ಲ. ಕೇವಲ ಒಬ್ಬಿಬ್ಬರನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಘಟನೆ ನಡೆದ ತಕ್ಷಣ ಎಫ್ಐಆರ್ನಲ್ಲಿ ಆರೋಪಿಯ ಹೆಸರು ಹಾಕದ ಪೊಲೀಸರು, ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕ ಹೆಸರನ್ನು ಸೇರಿಸಿದ್ದಾರೆ ಎಂದು ಜೋಶಿ ಕಿಡಿಕಾರಿದರು.
- ಭಯೋತ್ಪಾದಕರನ್ನೇ ಹಿಡಿಯುವ ದೇಶದಲ್ಲಿ ಆರೋಪಿ ಸಿಗುತ್ತಿಲ್ಲವೇ?: “ಪುಲ್ವಾಮಾ ದಾಳಿಯಂತಹ ಸಂದರ್ಭದಲ್ಲಿ ಭಾರತದ ಪೊಲೀಸರು ಭಯೋತ್ಪಾದಕರನ್ನೇ ಪತ್ತೆ ಹಚ್ಚಿ ಹಿಡಿಯುತ್ತಾರೆ. ಆದರೆ ಇಲ್ಲಿನ ಪೊಲೀಸರಿಗೆ ಒಬ್ಬ ಸಾಮಾನ್ಯ ಆರೋಪಿಯನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದರೆ ಹೇಗೆ?” ಎಂದು ಪ್ರಶ್ನಿಸಿದ ಅವರು, ಇದರಲ್ಲಿ ದೊಡ್ಡ ಮಟ್ಟದ ಅಧಿಕಾರಿಗಳ ಶಾಮೀಲಾತಿ ಇದೆ ಎಂದು ಸಂಶಯ ವ್ಯಕ್ತಪಡಿಸಿದರು.
- ಬಡ ರೈತರಿಗೆ ವಂಚನೆ: ಆರೋಪಿ ಸುಂದರ್ಪಾಲ್ ಎಂಬಾತ ಇತ್ತೀಚೆಗೆ ಬಿಡ್ನಾಳ್ ಮತ್ತು ರಾಮನಗಟ್ಟಿಯಲ್ಲಿ ಬೇರೆ ಬೇರೆ ಜಾತಿಯ ಬಡ ರೈತರಿಗೆ ಮೋಸ ಮಾಡಿ ಜಮೀನು ಕಬಳಿಸಲು ಯತ್ನಿಸಿದ್ದಾನೆ. ಈತನ ಮೇಲೆ ಈಗಾಗಲೇ ನಾಲ್ಕೈದು ಕೇಸ್ಗಳಿದ್ದರೂ ಈ ಹಿಂದೆ ಎಂದೂ ಪೊಲೀಸರು ಆತನನ್ನು ಬಂಧಿಸಿಲ್ಲ. ರೈತರು ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ಅವರನ್ನೇ ಶರ್ಟ್ ಹಿಡಿದು ಹೊರದಬ್ಬಲಾಗಿದೆ ಎಂದು ಜೋಶಿ ಆಕ್ರೋಶ ಹೊರಹಾಕಿದರು.
- ಬಳಕೆಯಾದ ಗನ್ ಬಗ್ಗೆ ತನಿಖೆಯಾಗಲಿ: ಫೈರಿಂಗ್ ಮಾಡಲು ಲೈಸೆನ್ಸ್ ಗನ್ ಬಳಸಲಾಗಿದೆಯೇ ಎಂಬ ಬಗ್ಗೆ ಪೊಲೀಸರಿಗೆ ಇನ್ನು ನಿಖರ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದರೆ ತಕ್ಷಣ ಬಂಧಿಸುವ ಕಾನೂನು ನಮ್ಮ ದೇಶದಲ್ಲಿದೆ. ಆತ್ಮರಕ್ಷಣೆಗಲ್ಲದೆ ಬೇರೆ ಉದ್ದೇಶಕ್ಕೆ ಗನ್ ಬಳಸಿದ್ದರೆ ಅದರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
“ಪ್ರಕರಣದ ಪ್ರಮುಖ ಆರೋಪಿಯನ್ನು ತಕ್ಷಣವೇ ಬಂಧಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಅಷ್ಟೇ ಅಲ್ಲದೆ, ಹೈಕೋರ್ಟ್ಗೆ ಮೊರೆ ಹೋಗಿ ಸ್ವತಂತ್ರ ತನಿಖೆಗೆ (ಇಂಡಿಪೆಂಡೆಂಟ್ ಆರ್ಡರ್) ಆದೇಶಿಸುವಂತೆ ಕಾನೂನು ಹೋರಾಟ ನಡೆಸಲಾಗುವುದು” ಎಂದು ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.
