ರಾಜಧಾನಿಯಲ್ಲಿ ನಿಲ್ಲದ ಹನಿಟ್ರ್ಯಾಪ್- ಇಬ್ಬರು ಯುವತಿಯರು ಸೇರಿ ಏಳು ಜನರ ಬಂಧನ
1 min readಬೆಂಗಳೂರು: ಹಣಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ದಂಧೆ ನಿರಂತರವಾಗಿ ನಡೆಯುತ್ತಿದ್ದು, ಇಂತಹದೇ ಪ್ರಕರಣದಲ್ಲಿ ಹನಿಟ್ರ್ಯಾಪ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಏಳು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹದೇವಪುರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಯುವತಿಯರು ಸೇರಿದಂತೆ ಏಳು ಜನರನ್ನ ಬಂಧನ ಮಾಡಲಾಗಿದೆ. ಬಂಧಿತರನ್ನ ಅಂಜಲಿ, ದೀಪಕ್, ಪ್ರೇಮನಾಥ್, ಟೈಸನ್, ವಿನೋದ್, ಪ್ರಕಾಶ್, ಈಶ್ವರಿ ಎಂದು ಗುರುತಿಸಲಾಗಿದೆ. ಪೈ ಲೇಔಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಂಧಿತರು, ಶ್ರೀಮಂತರನ್ನು ಟಾರ್ಗೇಟ್ ಮಾಡಿ, ಪೈ ಲೇಔಟ್ ಗೆ ಕರೆತರುತ್ತಿದರು. ಅಲ್ಲಿಗೆ ಬಂದ ಬಳಿಕ ವ್ಯಕ್ತಿ ಯುವತಿ ಜೊತೆ ಇದ್ದಾಗ ಯುವತಿಯ ಪತಿ ಹಾಗೂ ಸ್ನೇಹಿತರೆಂದು ದಾಳಿ ಮಾಡಿ ವಿಡಿಯೋ ಚಿತ್ರಣ ಮಾಡುತ್ತಿದ್ದರು.
ತಾವೇ ಮಾಡಿದ ಖೆಡ್ಡಾದಲ್ಲಿ ಗಿರಾಕಿ ಬಿದ್ದು ನಂತರ, ವೀಡಿಯೋ ಹಿಡಿದುಕೊಂಡು ಆತನಿಗೆ ಬೆದರಿಕೆ ಹಾಕುತ್ತಿದ್ದರು. ಅಷ್ಟೇ ಅಲ್ಲ, ಸುಮ್ಮನೆ ಇರದಿದ್ದರೇ ವೀಡಿಯೋವನ್ನ ವೈರಲ್ ಮಾಡುತ್ತೇವೆ ಎಂದು ಬೆದರಿಸುತ್ತಿದ್ದರು. ಇದರ ಜೊತೆಗೆ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿ, ಹಣ, ಚಿನ್ನಾಭರಣಗಳನ್ನು ಕಿತ್ತುಕೊಳ್ಳುತ್ತಿದ್ದರು ಎಂದು ದೂರಲಾಗಿದೆ.
ಪ್ರತಿಷ್ಟಿತ ವ್ಯಕ್ತಿಯೋರ್ವ ತನಗೆ ಆಗಿರುವ ತೊಂದರೆಯ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಹದೇವಪುರ ಪೊಲೀಸರು ಈ ಗ್ಯಾಂಗನ್ನ ವಿಚಾರಣೆ ಮಾಡಿದ್ದಾರೆ. ಆಗ ಇದು ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಎಂದು ಗುರುತಿಸಿ, ಹೆಡಮುರಿಗೆ ಕಟ್ಟಿದ್ದಾರೆ.