ಕರ್ನಾಟಕ ವಿಶ್ವವಿದ್ಯಾಲಯದಲ್ಲಿ “ಮಾಟ”- ಕುಲಪತಿಗೆ ಪ್ರಾಧ್ಯಾಪಕಿ ದೂರು…!

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯೊಬ್ಬರ ಚೇಂಬರ್ನಲ್ಲಿ ವಾಮಾಚಾರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಶಂಕೆ ವ್ಯಕ್ತವಾಗಿದ್ದು, ಕುಲಪತಿಗೆಯವರಿಗೆ ದೂರು ನೀಡಲಾಗಿದೆ.
ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಡಾ.ರಮಾ ಗುಂಡೂರಾವ್ ಅವರು ರಜೆ ಮೇಲೆ ತೆರಳಿದ್ದರು. ಶುಕ್ರವಾರ ವಾಪಸ್ ಆಗಮಿಸಿದಾಗ ಚೇಂಬರ್ನ ಕೀಲಿ ತೆಗೆದಾಗ ವಾಮಾಚಾರ ಮಾಡಿರುವುದು ಕಂಡು ಬಂದಿದೆ.
ಟೇಬಲ್ ಮೇಲೆ ಕಪ್ಪು ಬಣ್ಣದ ಮಾಟದ ಗೊಂಬೆ, ಅದರೊಂದಿಗೆ 3 ಲಿಂಬೆ ಹಣ್ಣು ಎಸೆಯಲಾಗಿದ್ದು, ಅರಿಷಿಣ-ಕುಂಕುಮ ಹಾಕಲಾಗಿದೆ. ಕಿಟಕಿ ಮೂಲಕ ಈ ಕೃತ್ಯ ಎಸಗಲಾಗಿದೆ. ಎರಡು ದಿನಗಳ ಹಿಂದೆ ವಾಮಾಚಾರ ಮಾಡಿರುವ ಅನುಮಾನವಿದೆ
ಒಳಗೆ ಹೋಗುತ್ತಿದ್ದ ಪ್ರಾಧ್ಯಾಪಕಿ, ಇದನ್ನ ನೋಡಿ ಗಾಬರಿಯಿಂದ ಹೊರ ತೆರಳಿ ಕುಲಪತಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಶಂಕೆ ವ್ಯಕ್ತವಾಗಿದೆ. ಅವರ ಅಳಿಯ ಇದೇ ವಿಭಾಗದಲ್ಲಿ ಉಪನ್ಯಾಸಕರಾಗಿದ್ದು, ರಮಾ ಚೇಂಬರ್ ಬಿಟ್ಟು ಕೊಡುವ ವಿಷಯವಾಗಿ ವಿದ್ಯಾರ್ಥಿಗಳ ಎದುರೇ ಮಾವ-ಅಳಿಯ ಬಂದು ತಿಕ್ಕಾಟ ನಡೆಸಿದ್ದರು. ನಾಲ್ಕು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಮತ್ತೆ ರಮಾ ವಿರುದ್ಧ ಷಡ್ಯಂತ್ರವನ್ನ ವಾಮಾಚಾರದ ಮೂಲಕ ನಡೆಸಲಾಗಿದೆ ಎನ್ನಲಾಗಿದೆ.