ಧಾರವಾಡದಲ್ಲಿ “ಚಿರಾಯು ಆಸ್ಪತ್ರೆ” ಡಾಕ್ಟರ್ನ ಬರ್ಬರ ಹತ್ಯೆ- ವೈದ್ಯೆ ಪತ್ನಿಯನ್ನ ವಶಕ್ಕೆ ಪಡೆದ ಪೊಲೀಸರು…!!
ಧಾರವಾಡ: ಇಲ್ಲಿನ ಬಾರಾಕೊಟ್ರಿ ರಸ್ತೆಯಲ್ಲಿರುವ ‘ರಂಕಾ ಸ್ಟೆಲ್ಲೊ’ ಅಪಾರ್ಟ್ಮೆಂಟ್ನಲ್ಲಿ ಬುಧವಾರ ಸಂಜೆ ಇಡೀ ನಗರವೇ ಬೆಚ್ಚಿಬೀಳುವಂತಹ ಭೀಕರ ಹತ್ಯಾಕಾಂಡವೊಂದು ನಡೆದಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಅನೆಸ್ತೆಸಿಯಾ ವೈದ್ಯರಾಗಿದ್ದ ಡಾ. ಕಿರಣ್ ಹೊನಣ್ಣವರ್ (45) ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ ಆರೋಪದ ಮೇಲೆ ಪತ್ನಿ ಪ್ರಿಯಾಂಕಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಕ್ಷಸೀ ಪ್ರವೃತ್ತಿ ಮೆರೆದಿರುವ ಪತ್ನಿ, ಪತಿಯನ್ನು ಹತ್ಯೆ ಮಾಡಿದ್ದಲ್ಲದೆ ತನ್ನದೇ 8 ವರ್ಷದ ಮಗ ನೇಹಿತ್ ಮೇಲೂ ಚಾಕುವಿನಿಂದ ಪ್ರಾಣಾಂತಿಕ ದಾಳಿ ನಡೆಸಿದ್ದಾಳೆಂದು ಹೇಳಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಅಪಾರ್ಟ್ಮೆಂಟ್ನ ಒಂದು ಕೋಣೆಯಲ್ಲಿ ಪತಿ ಕಿರಣ್ ಅವರನ್ನು ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಲಾಗಿದೆ. ಮತ್ತೊಂದು ಕೋಣೆಯಲ್ಲಿ ಮಗ ನೇಹಿತ್ಗೆ ಚಾಕುವಿನಿಂದ ಇರಿದು ಆಕೆ ಕುಳಿತಿದ್ದಳು. ಮಗ ರಕ್ತದ ಮಡುವಿನಲ್ಲಿ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ, ಆರೋಪಿ ಪತ್ನಿ ಯಾವುದೇ ಆತಂಕವಿಲ್ಲದೆ ಅದೇ ಕೋಣೆಯಲ್ಲಿ ಮೊಬೈಲ್ ನೋಡುತ್ತಾ ಕುಳಿತಿದ್ದ ದೃಶ್ಯ ನೆರೆಹೊರೆಯವರನ್ನು ಮತ್ತು ಪೊಲೀಸರನ್ನು ದಿಗ್ಭ್ರಮೆಗೊಳಿಸಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ಮಾನವೀಯತೆ ಮೆರೆದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗು ಇನ್ನು ಉಸಿರಾಡುತ್ತಿರುವುದನ್ನು ತಾವೇ ಖುದ್ದಾಗಿ ಗಮನಿಸಿದ ಕಮಿಷನರ್, ತಡಮಾಡದೇ ಮಗುವನ್ನು ತಾವೇ ಕೈಯಲ್ಲಿ ಹೊತ್ತುಕೊಂಡು ಕಾರಿನತ್ತ ಧಾವಿಸಿ, ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ. ಸದ್ಯ ಬಾಲಕ ನೇಹಿತ್ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ವೈದ್ಯ ಕಿರಣ್ ಅವರ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಅಪಾರ್ಟ್ಮೆಂಟ್ ಎದುರು ಜಮಾಯಿಸಿದ ಅವರ ಸಹೋದರಿಯರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರವಾದ ಕಾರಣವೇನೆಂಬುದನ್ನು ಪತ್ತೆ ಹಚ್ಚಲು ಪೊಲೀಸರು ಆರೋಪಿ ಪ್ರಿಯಾಂಕಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
