ಹುಬ್ಬಳ್ಳಿ-ಧಾರವಾಡದಲ್ಲಿನ ಗಣೇಶ ಹಬ್ಬ- ರೂಲ್ಸ್ ಹೆಂಗಿವೆ: ನೂತನ ಕಮೀಷನರ್ B.G. ಬೋರಸೆ ಹೇಳಿದ್ದಿಲ್ಲಿದೆ…
ಧಾರವಾಡ: ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಈ ಬಾರಿ 950ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದ್ದು, ಗಣೇಶೋತ್ಸವವನ್ನು ಶಾಂತಿಯುತ ಹಾಗೂ ಸುರಕ್ಷಿತವಾಗಿ ಆಚರಿಸುವಂತೆ ಪೊಲೀಸ್ ಆಯುಕ್ತ ಭೂಷಣ್ ಭೋರಸೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಗಣೇಶೋತ್ಸವದ ಹಿನ್ನೆಲೆಯಲ್ಲಿ ಇಂದು ಧಾರವಾಡದಲ್ಲಿ ಶಾಂತಿ ಪಾಲನಾ ಸಭೆ ನಡೆಸಲಾಗಿದ್ದು, ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ.
15 ಅಡಿಗಿಂತ ಹೆಚ್ಚಿನ ಎತ್ತರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರು ಕಡ್ಡಾಯವಾಗಿ ರೂಟ್ ಸರ್ವೆ ನಡೆಸಬೇಕು. ಮೆರವಣಿಗೆ ಮಾರ್ಗದಲ್ಲಿ ಯಾವುದೇ ತೊಂದರೆಯಾಗದಂತೆ ಮುಂಚಿತವಾಗಿಯೇ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.
ಗಣೇಶ ಪೆಂಡಾಲ್ ನಿರ್ಮಿಸುವ ವೇಳೆ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳು ಸುಲಭವಾಗಿ ಸಂಚರಿಸಲು ಸಾಕಷ್ಟು ಜಾಗ ಬಿಡಬೇಕು ಎಂದು ಆಯುಕ್ತರು ತಿಳಿಸಿದ್ದಾರೆ. ಅಲ್ಲದೆ, ಪ್ರತಿಯೊಂದು ಪೆಂಡಾಲ್ನಲ್ಲೂ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದಿದ್ದಾರೆ.
ಗಣೇಶೋತ್ಸವದಲ್ಲಿ ಮ್ಯೂಸಿಕ್ ಸಿಸ್ಟಮ್ ಬಳಸಲು ಅವಕಾಶವಿದ್ದರೂ, ಅದರ ಶಬ್ದದಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
80 ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಬಂದರೆ ಪೊಲೀಸರಿಗೆ ತಕ್ಷಣವೇ ಮಾಹಿತಿ ದೊರೆಯುವ ವ್ಯವಸ್ಥೆ ಇದೆ. ಸಿಬ್ಬಂದಿಯ ಬಳಿ ಶಬ್ದದ ಪ್ರಮಾಣವನ್ನು ಪತ್ತೆಹಚ್ಚುವ ವಿಶೇಷ ಆ್ಯಪ್ ಇರಲಿದ್ದು, ನಿಯಮ ಉಲ್ಲಂಘಿಸುವ ಡಿಜೆ ವ್ಯವಸ್ಥೆಯನ್ನು ಸೀಜ್ ಮಾಡಿ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ವಯಸ್ಸಾದವರು ಹಾಗೂ ಮಕ್ಕಳಿಗೆ ಅತಿಯಾದ ಶಬ್ದದಿಂದ ತೊಂದರೆಯಾಗಬಾರದು. ಡ್ಯಾನ್ಸ್ ಮಾಡಬಹುದು, ಸಂಭ್ರಮಿಸಬಹುದು, ಆದರೆ ಶಬ್ದದಿಂದ ಮತ್ತೊಬ್ಬರಿಗೆ ತೊಂದರೆಯಾಗಬಾರದು ಎಂದು ಭೋರಸೆ ಸ್ಪಷ್ಟಪಡಿಸಿದ್ದಾರೆ.
ಗಣೇಶೋತ್ಸವದ ವೇಳೆ ಲೇಸರ್ ಲೈಟ್ ಬಳಕೆ ಮಾಡಬಾರದು ಎಂದು ಸೂಚಿಸಲಾಗಿದೆ. ಲೇಸರ್ ಬೆಳಕಿನಿಂದ ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ, ನಿಯಮ ಉಲ್ಲಂಘಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಮೆರವಣಿಗೆ ಅಥವಾ ಪೆಂಡಾಲ್ ವ್ಯವಸ್ಥೆಯಿಂದ ವಿದ್ಯುತ್ ಕೇಬಲ್, ಮರಗಳು ಸೇರಿದಂತೆ ಯಾವುದೇ ಅಡಚಣೆ ಉಂಟಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಗಣೇಶೋತ್ಸವದ ಸಂದರ್ಭದಲ್ಲಿ ವಾಚ್ ಟವರ್ಗಳನ್ನೂ ಬಳಸಿಕೊಂಡು ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
“ರಾಜ್ಯದಲ್ಲಿಯೇ ಹುಬ್ಬಳ್ಳಿ-ಧಾರವಾಡದ ಗಣೇಶೋತ್ಸವ ಅತ್ಯಂತ ಉತ್ತಮ ಹಾಗೂ ಶಾಂತಿಯುತವಾಗಿ ನಡೆಯಬೇಕು. ಮೈಸೂರು ದಸರಾ ಮಾದರಿಯಲ್ಲೇ ಈ ಹಬ್ಬವೂ ವಿಶೇಷ ಪ್ರಾಮುಖ್ಯತೆ ಪಡೆದುಕೊಳ್ಳಬೇಕು” ಎಂಬ ಆಶಯವನ್ನು ಪೊಲೀಸ್ ಆಯುಕ್ತ ಭೂಷಣ್ ಭೋರಸೆ ವ್ಯಕ್ತಪಡಿಸಿದ್ದಾರೆ.
