Category: ನಮ್ಮೂರು

  • Exclusive-ಹುಬ್ಬಳ್ಳಿಯ ಹಳೇ ಕಳ್ಳ-ಹೊಸ ಕಳುವು ಪತ್ತೆ: ಸಿಕ್ಕವನಿಂದ ಬರೋಬ್ಬರಿ 9ಲಕ್ಷದ ಚಿನ್ನಾಭರಣ ವಶ

    ಹುಬ್ಬಳ್ಳಿ: ನಿರಂತರವಾಗಿ ಮನೆಗಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿ ಸುಮಾರು ಮೂರು ವರ್ಷಗಳ ನಂತರ ಮತ್ತೆ ಹಳೇಹುಬ್ಬಳ್ಳಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, 8ಲಕ್ಷ 84 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

    ಹುಬ್ಬಳ್ಳಿಯ ನಂದೀಶ ಉಮೇಶ ಸಕ್ರೆಪ್ಪನವರ ಎಂಬ ಕಳ್ಳನನ್ನೇ ಪೊಲೀಸರು ಬಂಧಿಸಿದ್ದು, 6 ಮನೆಗಳ್ಳತನ ಪ್ರಕರಣಗಳು ಬಯಲಾಗಿವೆ. ನಂದೀಶ, ಈ ಹಿಂದೆಯೂ ಮನೆಗಳ್ಳತನವನ್ನೇ ಮಾಡುತ್ತಿದ್ದ. ಆದರೆ, ಕೆಲವು ದಿನಗಳಿಂದ ತಾನೂ ಸುಧಾರಿಸಿದ್ದಾಗಿ ಹೇಳಿಕೊಳ್ಳುತ್ತ ತಿರುಗುತ್ತಿದ್ದ.

    ನಗರದಲ್ಲಿ ಮತ್ತೆ ಕಳ್ಳತನ ನಡೆಯುತ್ತಿರುವುದು ಬೆಳಕಿಗೆ ಬಂದ ನಂತರ ಆರೋಪಿಯನ್ನ ಬಂಧನ ಮಾಡಿದಾಗ, ನಂದೀಶ ಸುಧಾರಿಸುವ ಕಳ್ಳನಲ್ಲ ಎಂದು ಗೊತ್ತಾಗಿದೆ. ತಮ್ಮದೇ ರಿತಿಯಲ್ಲಿ ವಿಚಾರಣೆ ಮಾಡಿದಾಗ, ಒಬ್ಬನೇ ಹೋಗಿ ಮನೆಯ ಬಾಗಿಲನ್ನ ಮುರಿದು ಕಳ್ಳತನ ಮಾಡುತ್ತಿರುವುದನ್ನ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ 8.84.000 ಸಾವಿರ ಮೌಲ್ಯದ ಬೆಲೆಬಾಳುವ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.

    ಆರೋಪಿಯನ್ನ ಬಂಧಿಸುವಲ್ಲಿ ಇನ್ಸಪೆಕ್ಟರ ಸತೀಶ ಮಾಳಗೊಂಡ, ಎಎಸ್ಐ ದೊಡ್ಡಮನಿ, ಸಿಬ್ಬಂದಿಗಳಾದ ಟಿ.ಜಿ.ಪುರಾಣೀಕಮಠ, ಎನ್.ಎಂ ಪಾಟೀಲ, ಗುಡಗೇರಿ, ಕೃಷ್ಣಾ ಮೊಟೆಬೆನ್ನೂರ,ಅಂಬಿಗೇರ, ಎಂ.ಬಿ.ಪಾಟೀಲ, ಮಾರುತಿ ಭಜಂತ್ರಿ, ಬಾಬಾಜಾನ, ಷಣ್ಮುಖ ಯಶಸ್ವಿಯಾಗಿದ್ದಾರೆ.

  • ಕಲಘಟಗಿ ಪತ್ರಕರ್ತರಿಗೆ ಗೌರವ: ಕರ್ತವ್ಯ ಸ್ಮರಣೆ ಮಾಡಿದ ತಾಪಂ

    ಧಾರವಾಡ: ಮಹಾಮಾರಿ ಕೊರೋನಾ ಸಮಯದಲ್ಲಿಯೂ ನಿರಂತರವಾಗಿ ಕರ್ತವ್ಯದಲ್ಲಿ ತೊಡಗಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವಲ್ಲಿ ನಿರವಾಗಿರುವ ಜಿಲ್ಲೆಯ ಕಲಘಟಗಿ ಪತ್ರಕರ್ತರಿಗೆ ತಾಲೂಕು ಪಂಚಾಯತಿಯಿಂದ ಸನ್ಮಾನಿಸಲಾಯಿತು.

    ಲಾಕ ಡೌನ ಸಂದರ್ಭದಲ್ಲಿ ತಾಲೂಕಿನಲ್ಲಿ ಅತ್ಯುತ್ತಮವಾಗಿ ತಾಲೂಕಿನ ಎಲ್ಲ ಪತ್ರಕರ್ತರು ಸೇವೆ ಸಲ್ಲಿಸಿದ್ದಕ್ಕಾಗಿ ತಾಲೂಕು ಪಂಚಾಯಿತಿ ವತಿಯಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ  ಪತ್ರಕರ್ತ ಸಂಘದ ಅಧ್ಯಕ್ಷ ರಮೇಶ್ ಸೋಲಾರಗೊಪ್ಪ ತಾಲೂಕಿನ ಪತ್ರಕರ್ತರ ಪರವಾಗಿ ಸತ್ಕಾರ ಸ್ವೀಕರಿಸಿದರು.

    ಇದೇ ಸಮಯದಲ್ಲಿ ತಾಲೂಕು ತಾಲೂಕ ವೈದ್ಯಾಧಿಕಾರಿ ಡಾ ಬಸವರಾಜ್ ಬಾಸೂರ, ವೈದ್ಯಕೀಯ ಸೇವೆಯನ್ನು ಪರಿಗಣಿಸಿ ತಾಪಂ ಸಾಮಾನ್ಯ ಸಭೆಯಲ್ಲಿ ಸನ್ಮಾನಿಸಲಾಯಿತು.

    ತಾಪಂ ಅಧ್ಯಕ್ಷೆ ಸುನೀತಾ ಮ್ಯಾಗೀನಮನಿ, ಉಪಾಧ್ಯಕ್ಷ ಚಂದ್ರ ಗೌಡ ಪಾಟೀಲ,  ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಮೇಟಿ  ಸೇರಿದಂತೆ ಸದಸ್ಯರು, ಸಿಬ್ಬಂದಿ ಹಾಗೂ ತಾಲೂಕಿನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಧಾರವಾಡ: 15 ದಿನ- 18ಕೇಸ್- 19ಬಂಧನ- 30ಕೆಜಿ ಗಾಂಜಾ ವಶ

    ಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸುಮಾರು 18 ಗಾಂಜಾ ಪ್ರಕರಣಗಳು ಪತ್ತೆಯಾಗಿದ್ದು, 30ಕೆಜಿಯಷ್ಟು ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.

    ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಮಲ್ಲಿಗವಾಡ ಗ್ರಾಮದ ಹಿತ್ತಲಿನಲ್ಲಿ ಬೆಳೆದ ಗಾಂಜಾವನ್ನ ಬೆಳೆದ ರಾಮನಗೌಡ ಪಾಟೀಲ ಎಂಬಾತನನ್ನ ಹಿಡಿದು ಹಸಿ ಗಾಂಜಾವನ್ನ ವಶಕ್ಕೆ ಪಡೆಯಲಾಗಿತ್ತು. ತದನಂತರ ನರೇಂದ್ರ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದವರನ್ನ ಮಾಲು ಸಮೇತ ಬಂಧನ ಮಾಡಲಾಗಿತ್ತು.

    ಜಮೀನಿನಲ್ಲಿ ಬೆಳೆದ ಹಸಿ ಗಾಂಜಾವನ್ನ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿತ್ತು. ಇಂತಹ ವಿವಿಧ ರೀತಿಯ ಒಟ್ಟು 18 ಪ್ರಕರಣಗಳನ್ನ NDPS ಠಾಣೆಯವರು ಪತ್ತೆ ಹಚ್ಚಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, 30ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದಿರುವುದನ್ನ ಖಚಿತಪಡಿಸಿದ್ದಾರೆ.

  • ಹುಬ್ಬಳ್ಳಿ ಸಿಬಿಟಿಯಲ್ಲಿ ಅಂಗಡಿ- ಮಾಲ್ ಮಾಡಬೇಕಾ: ಹಾಗಾದ್ರೇ ಇಲ್ಲಿದೆ ನೋಡಿ ಅವಕಾಶ

    ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ಸಿಬಿಟಿಯಲ್ಲಿರುವ ಐದು ಅಂತಸ್ತಿನ ಕಟ್ಟಡದಲ್ಲಿ ವ್ಯಾಪಾರ-ವಹಿವಾಟು ಮಾಡಲು ಅವಕಾಶ ನೀಡಲು ಇಲಾಖೆ ಮುಂದಾಗಿದೆ.

    ಹುಬ್ಬಳ್ಳಿಯ ಪ್ರಮುಖ ಸ್ಥಳವಾದ ಸಿಬಿಟಿಯಲ್ಲೇ ಕಟ್ಟಡವಿದ್ದು, ಮಾಲ್, ರೆಸ್ಟೋರೆಂಟ್, ತರಬೇತಿ ಕೇಂದ್ರಗಳು, ಸಗಟು/ಚಿಲ್ಲರೇ ವ್ಯಾಪಾರ ನಡೆಸುವವರಿಗೆ ಅವಕಾಶವನ್ನ ಬಳಕೆ ಮಾಡಿಕೊಳ್ಳಿ ಎಂದು ಇಲಾಖೆ ಮನವಿ ಮಾಡಿಕೊಂಡಿದೆ.

    ಈ ಬಗ್ಗೆ ಈ ಟೆಂಡರ್ ಕರೆಯಲಾಗಿದ್ದು, ಅರ್ಜಿಯನ್ನ ಸಲ್ಲಿಸಲು ಅಕ್ಟೋಬರ್ 12ರವರೆಗೆ ಅವಕಾಶವನ್ನ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ WWW.eproc.karnataka.gov.in ಭೇಟಿ ನೀಡಬಹುದಾಗಿದೆ.

    ಮಸ್ತ್ ಜಗಾ ಐತೀ ನೋಡ್ರೀ. ಈಗ್ಲೇ ತಯಾರಾಗಿ..

  • ‘ಅಪ್ಪ-ಮಗ’ ಸೇರಿಸಿದ ‘ಅಪ್ಪಣ್ಣ’ -ಮನೆಯಂಗಳದ ನಗುವನ್ನ ಮಡಿಲಿಗೆ ಸೇರಿಸಿದ ಲಾಲಸಾಬ ನದಾಫ

    ಹುಬ್ಬಳ್ಳಿ: ಇನ್ನೂ ಜಗತ್ತು ಕಾಣದ ಸಣ್ಣ ಜೀವವದು. ಮನೆಯಲ್ಲಿ ಏನೋ ಅಂದ್ರು ಅಂದುಕೊಂಡು ಸಿಕ್ಕ ವಾಹನಕ್ಕೆ ಕೈ ಮಾಡಿ ಛೋಟಾ ಮುಂಬೈಗೆ ಬಂದುಬಿಟ್ಟಾ. ಹೀಗೇನು ಬಂದು ಬಿಟ್ಟೆ, ಬೆಳಿಗ್ಗೆಯಿಂದ ಹೊಸ ಜೀವನ ಕಟ್ಟಿಕೋಬೇಕು ಎಂದವನಿಗೆ ನೆನಪಾಗಿದ್ದು, ಪತ್ರಿಕೆ ಹಾಕೋ ಕೆಲಸ. ಅದೇ ಕಾರಣಕ್ಕೆ ಆತ ಪ್ರೆಸ್ ಕ್ಲಬ್ ಗೆ ಬಂದು ಪೇಪರ ಹಾಕೋ ಕೆಲ್ಸಾ ಕೊಡಿ ಎನ್ನುತ್ತಿದ್ದ.. ನಂತರ ನಡೆದದ್ದೇ ಬೇರೆ..

    ಪತ್ರಕರ್ತರ ಸಂಘದ ಕಾರ್ಯಾಲಯದ ಸಹಾಯಕನಾಗಿ ಕಾರ್ಯನಿರ್ವಹಿಸುವ ಲಾಲಸಾಬ ನದಾಫನನ್ನ ಎಲ್ಲರೂ ಪ್ರೀತಿಯಿಂದ ಕರೆಯುವುದು ‘ಅಪ್ಪಣ್ಣ’ ಎಂದೇ. ಆ ಅಪ್ಪಣ್ಣನ ಮುಂದೆ ನಿಂತು ಕೆಲಸಕ್ಕೆ ಕೈಚಾಚಿದ್ದು ಈ ಹದಿಮೂರು ವಯಸ್ಸಿನ ಎಳೆಯ.

    ಎಂಟನೇಯ ತರಗತಿಯ ಆ ಪೋರನ ಹಾವಭಾವ ನೋಡಿ, ಸಂಶಯಗೊಂಡ ಅಪ್ಪಣ್ಣ, ಕೆಲಸ ಕೊಡ್ತೇನಿ ಎಲ್ಲಿಂದ ಬಂದೆ, ಏನಾಗಿದೆ ಎಂದು ಕೇಳಿದ. ಆತನಿಗೆ ಅಳು ತಡೆಯಲಾಗದೇ ಸತ್ಯವನ್ನ ಬಾಯಿಬಿಟ್ಟ.

    ಅಂದ ಹಾಗೇ ಈ ಪೋರ ಮನೆ ಬಿಟ್ಟು ಬಂದವನಾಗಿದ್ದ. ನಾನು ಊರಿಗೆ ಹೋಗಲ್ಲ ಎನ್ನತೊಡಗಿದ. ಅಷ್ಟರಲ್ಲೇ ಅಲ್ಲಿಯೇ ಇದ್ದ ಹಿರಿಯ ಪತ್ರಕರ್ತ ಮಹೇಂದ್ರ ಚವ್ಹಾಣ, ಬಾಲಕನ ವಿವರವನ್ನ ಪಡೆದು ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರ ಸುಪರ್ಧಿಯಲ್ಲಿ ಕೊಟ್ಟು, ಪಾಲಕರನ್ನ ಕರೆಸಿ ಅವರೊಂದಿಗೆ ಬಾಲಕನನ್ನ ಮನೆಗೆ ಕಳಿಸಲಾಗಿದೆ.

    ಲಾಲಸಾಬ ನದಾಫ್ ಸಮಯಪ್ರಜ್ಞೆ ಬಾಲಕನನ್ನ ಆತನ ಮನೆಗೆ ಮರಳಿ ಕಳಿಸುವಂತೆ ಮಾಡಿದೆ. ಮಗನನ್ನ ಮರಳಿ ಕರೆದುಕೊಂಡು ಹೋಗುವಾಗ ಪಾಲಕರು ಕೂಡಾ ಅಪ್ಪಣ್ಣನಿಗೆ ದೇವರು ಒಳ್ಳೆಯದನ್ನ ಮಾಡ್ಲಿ ಎಂದು ಹರಸಿದ್ದಾರೆ.

    ಇಂತಹ ಅಪ್ಪಣ್ಣನಿಗೆ ನೀವೂ ಮಾತಾಡಿ (9945153822), ಒಳ್ಳೆಯ ಕೆಲಸ ಮಾಡೀ ಎಂದು ಹೇಳಿ. ಸುಂದರ ಮನಸ್ಸುಗಳಿಗೆ ಒಂಚೂರು ಖುಷಿ ಸಿಗತ್ತೆ.. ಅಲ್ವಾ..!

    ಯರೆಬೆಲೇರಿ ಗ್ರಾಮದ ವೀರೇಶ್ ಪಾತ್ರವು ಸಹ ಬಹು ಮುಖ್ಯವಾದದು. ಆತನಿಂದ ಪಾಲಕರ ಸಂಪರ್ಕ ಸಾಧ್ಯವಾಯಿತು.

  • Exclusive Video- ಹೌದು.. ನಾನೇ ಕೊಲೆ ಮಾಡಿಸಿದ್ದು ಅಂದ್ನಾ… ಬಚ್ಚಾಖಾನ್ ಒಪ್ಪಿಕೊಂಡಿದ್ದು ಏನೇನು ಗೊತ್ತಾ..?

    ಹುಬ್ಬಳ್ಳಿ: ಆಗಸ್ಟ್ ಮೊದಲ ವಾರದಲ್ಲಿ ಹುಬ್ಬಳ್ಳಿಯ ಜನನಿಬೀಡ ಪ್ರದೇಶದಲ್ಲಿಯೇ ಗುಂಡು ಹಾರಿಸಿ ಕೊಲೆ ಮಾಡಿಸಿದ್ದು ನಾನೇ ಎಂದು ಬಾಂಬೆ ಮೂಲದ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಸಯ್ಯದ ಸುಲೇಮಾನ ಬಚ್ಚಾಖಾನ ಖಾದ್ರಿ ಹೇಳಿಕೊಂಡಿದ್ದಾನೆಂದು ತಿಳಿದು ಬಂದಿದೆ.

    ಇರ್ಪಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಫಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಐದು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಬಚ್ಚಾಖಾನ, ಪ್ರೂಟ್ ಇರ್ಫಾನ್ ಜೊತೆಗಿನ ವಿರಸವನ್ನ ಎಳೆ ಎಳೆಯಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆಂದು ಹೇಳಲಾಗಿದೆ.

    ಧಾರವಾಡದ ಸಮೀಪದ ಖಾನಕಾ ಜಾಗಕ್ಕೆ ಸಂಬಂಧಿಸಿದಂತೆ ಹಣಕಾಸಿನ ಮಾತುಕತೆ ನಡೆದಿತ್ತು. ಮತ್ತೂ ಅದೇ ಕಾರಣಕ್ಕಾಗಿ ಹಲವು ಬಾರಿ ಮಾತಿಗೆ ಮಾತು ಬೆಳೆದಿತ್ತು ಎಂಬುದನ್ನೂ ಬಚ್ಚಾಖಾನ ಹೇಳಿಕೊಂಡಿದ್ದಾನೆಂದು ತಿಳಿದು ಬಂದಿದೆ.

    ಧಾರವಾಡ ಜೈಲಿನಲ್ಲಿದ್ದಾಗ ಪರಿಚಯವಾಗಿ ಪ್ರೂಟ್ ಇರ್ಫಾನ್ ಮೊದ ಮೊದಲು ಸರಿಯಾಗಿಯೇ ಇದ್ದ. ಆದರೆ, ಆತನಿಂದ ಸಮಾಜಕ್ಕೆ ಬಹಳ ಅನ್ಯಾಯವಾಗುತ್ತಿದೆ ಎಂದು ಹೀಗೆ ಮಾಡಿದನೆಂದು ಹೇಳಿಕೊಂಡಿದ್ದಾನೆಂದು ತಿಳಿದು ಬಂದಿದೆ.

    ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಿದ್ದು, ಹಾಲಿಯಿರುವ ಮೈಸೂರು ಕಾರಾಗೃಹಕ್ಕೆ ಪೊಲೀಸರು ರವಾನೆ ಮಾಡಲಿದ್ದಾರೆ. ವಾಣಿಜ್ಯನಗರಿಯಲ್ಲಿ ನಡೆದ ಇರ್ಫಾನ್ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನ ಬಂಧನ ಮಾಡಲಾಗಿದೆ.

    ಕೊಲೆಗೆ ಸಾಥ್ ನೀಡಿದವರನ್ನ, ಮೊಬೈಲ್ ಒದಗಿಸಿದವರನ್ನ ಕೊನೆಗೆ ಶೂಟ್ ಮಾಡಿದವರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹಳೇಹುಬ್ಬಳ್ಳಿ ಠಾಣೆಯ ಶಿವಾನಂದ ಕಮತಗಿ, ಅಶೋಕನಗರ ಠಾಣೆ ಇನ್ಸಪೆಕ್ಟರ್ ರವಿಚಂದ್ರ ಹಾಗೂ ಸಿಸಿಬಿಯ ಅಲ್ತಾಪ ಮುಲ್ಲಾ ಅತ್ಯುತ್ತಮ ಕಾರ್ಯವನ್ನ ಮಾಡಿದ್ದು, ಈ ಹತ್ಯೆಯ ಮೂಲವನ್ನೂ ಪತ್ತೆ ಹಚ್ಚಿರುವುದು ಶ್ಲಾಘನೀಯ.

  • “ಮನೋ ಉದ್ರೇಖಕಾರಿ” ವಸ್ತು ಮಾರಾಟ- ಆರೋಪಿಗಳ ಪತ್ತೆಗಾಗಿ ಪೊಲೀಸರೊಂದಿಗೆ ಸಹಕರಿಸಿ

    ಹುಬ್ಬಳ್ಳಿ: ಪೊಲೀಸ್ ಕಮೀಷನರೇಟ್ ಕಛೇರಿಯ ಸಭಾಭವನದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಘಟಕದ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಯ ಎನ್‍ಡಿಪಿಎಸ್ ನೋಡಲ್ ಅಧಿಕಾರಿಗಳಿಗೆ ಎನ್‍ಡಿಪಿಎಸ್ ಕಾಯ್ದೆಗೆ ಸಂಬಂಧಿಸಿದಂತೆ ಕಾರ್ಯಾಗಾರ ನಡೆಸಲಾಯಿತು.

    ಠಾಣಾ ಮಟ್ಟದಲ್ಲಿ ಮಾದಕ ದ್ರವ್ಯ ಸೇವನೆ, ಸಂಗ್ರಹ, ಸಾಗಾಟ ಮತ್ತು ಮಾರಾಟ ತಡೆಗಟ್ಟುವ ಕುರಿತು ಉಪಯುಕ್ತವಾದ ಮಾಹಿತಿ ಸಂಗ್ರಹಿಸಲು ಮತ್ತು ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಪರಿಣಾಮಕಾರಿಯಾಗಿ ಕಾನೂನಿನ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

    ಠಾಣಾ ಮಟ್ಟದಲ್ಲಿರುವ ಶಾಲಾ ಕಾಲೇಜುಗಳು ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳು ಮತ್ತು ಹಿಂದೆ ದಾಖಲಾದ ಪ್ರಕರಣದಲ್ಲಿನ ಆರೋಪಿತರ ಬಗ್ಗೆ ಮಾಹಿತಿ ಕಲೆಹಾಕಿ ಅವರ ಮೇಲೆ ನಿಗಾವಹಿಸುವಂತೆ ಪೊಲೀಸ ಆಧಿಕಾರಿಗಳಿಗೆ ವಿವರಿಸಲಾಗಿದೆ.

    ಸಾರ್ವಜನಿಕರು ತಾವು ವಾಸಿಸುವ ಪ್ರದೇಶದಲ್ಲಿ, ಕೆಲಸ ಮಾಡುವ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಯಾವುದೇ ತರಹದ “ಮನೋ ಉದ್ರೇಖಕಾರಿ” ವಸ್ತುಗಳನ್ನು ಉಪಯೋಗಿಸುವುದು, ಮಾರಾಟ ಮಾಡುವುದು, ಸಂಗ್ರಹಿಸಿಡುವುದು ಕಂಡುಬಂದಲ್ಲಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಪೊಲೀಸರೊಂದಿಗೆ ಸಹಕರಿಸಿ ಅಪರಾಧಗಳ ಬಗ್ಗೆ ಮಾಹಿತಿಯನ್ನು ಕೂಡಲೇ ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರೇಟ್ ಘಟಕದ ಎನ್‍ಡಿಪಿಎಸ್ (ಮಾದಕ ದ್ರವ್ಯ) ಟೋಲ್ ಫ್ರೀ ನಂ – 1908 ನೇದ್ದಕ್ಕೆ ಅಥವಾ 0836-2233575 ನೇದ್ದಕ್ಕೆ ಕರೆ ಮಾಡಿ ಮಾಹಿತಿ ನೀಡಲು ಕೋರಲಾಗಿದೆ.

    ಪೊಲೀಸ್ ಆಯುಕ್ತ ಆರ್.ದಿಲೀಪ ಪಿಐಗಳಾದ ಎನ್.ಸಿ.ಕಾಡದೇವರ,  ಅಲ್ತಾಫ್ ಮುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  • ಒಂದೇ ನಂಬರ-ಎರಡು ವಾಹನ: ಧಾರವಾಡದಲ್ಲಿಂದು ನಡೆದ ಕ್ರೈಂ ಏನು..!

    ಧಾರವಾಡ: ಆತ ತನ್ನ ತವೇರಾ ವಾಹನವನ್ನ ಚಲಾಯಿಸಿಕೊಂಡು ಹೋಗುತ್ತಿದ್ದ. ಬರೋಬ್ಬರಿ 6ವರ್ಷದ ಹಿಂದಿನ ವಾಹನವದು. ಹಾಗೇಯೇ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮುಂದೆ ನೋಡಿದ್ರೇ ಮತ್ತೊಂದು ತವೇರಾ.. ಅಷ್ಟೇ ಅಲ್ಲ, ತನ್ನ ವಾಹನಗಿದ್ದ ನಂಬರೇ.. ಅಯ್ಯೋ.. ಮಾಲಕನ ಸ್ಥಿತಿ ಏನಾಗಿರಬೇಡಾ.. ಅದೇ ಆಗಿದೆ.

    ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಗ್ರಾಮದ ಬಸವರಾಜ ನಿಂಗಪ್ಪ ಕರಗುಳಿ ಎಂಬುವವರೇ ತಮ್ಮದೇ ವಾಹನದ ಡೂಪ್ಲಿಕೇಟ್ ನಂಬರ ನೋಡಿ ಗಾಬರಿಯಾಗಿದ್ದಾರೆ. ತಕ್ಷಣವೇ ಜಾಗೃತರಾದ ಆತ ಆ ವಾಹನವನ್ನ ಹಿಡಿದುಕೊಂಡು ಧಾರವಾಡ ಪೊಲೀಸರಿಗೆ ಒಪ್ಪಿಸಿದ್ದಾರೆ. ತವೇರಾ ವಾಹನದ ಮೇಲೆ ವಿಶ್ವಕರ್ಮ ಎಂದು ಬರೆದುಕೊಂಡು ನಕಲಿ ನಂಬರ ಹಾಕಿಕೊಂಡು ಅಲೆದಾಡುತ್ತಿದ್ದ ವ್ಯಕ್ತಿಯೂ ಕೂಡ ಹೂಲಿಕಟ್ಟಿ ಗ್ರಾಮದ ನಾಗರಾಜ ಎಂಬಾತ.

    ತಾನು ಖರೀದಿಸಿದ ವಾಹನದ ಕಂತು ತುಂಬದೇ ಇರುವುದರಿಂದ ವಾಹನದ ಸಂಖ್ಯೆಯನ್ನೇ ಬದಲಾವಣೆ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಇಂತಹ ಅಪರಾಧ ಎಸಗಿದವರನ್ನ ಹಿಡಿದುಕೊಟ್ಟಿರುವ ಸುತಗಟ್ಟಿಯ ಬಸವರಾಜ, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ.

    ವಿದ್ಯಾನಗರಿಯಲ್ಲಿನ ಈ ಘಟನೆ ಮತ್ತಷ್ಟು ವಾಹನ ಮಾಲೀಕರಿಗೆ ಎಚ್ಚರಿಕೆ ಗಂಟೆಯಾಗಲಿದೆ. ಪ್ರಕರಣದ ಬಗ್ಗೆ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದು, ನಕಲಿ ನಂಬರ ಹಾಕಿಕೊಂಡಿರುವ ವಾಹನದ ಸಂಪೂರ್ಣ ವಿವರ ಪಡೆಯುತ್ತಿದ್ದಾರೆ.

  • ಹಮಾಲಿ ಕಾರ್ಮಿಕರ ಮುಷ್ಕರ: ಪದ್ಮಶ್ರೀ ದೇವಿ ಸಾಥ್- ಮಹೇಶ ಪತ್ತಾರ ಚಾಲನೆ

    ಎಪಿಎಂಸಿ ಹಮಾಲಿ ಕಾರ್ಮಿಕರ ಮುಷ್ಕರ ಪ್ರಾರಂಭ

    ವಸತಿ ಯೋಜನೆ ಜಾರಿಗೆ ಒತ್ತಾಯ

    ಒಂದು ಲಕ್ಷ ಹಮಾಲಿ ಕಾರ್ಮಿಕರ ಉದ್ಯೋಗ ಕಸಿಯಲಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್ಸಗೆ ಒತ್ತಾಯ

    ಹುಬ್ಬಳ್ಳಿ: ಎಪಿಎಂಸಿ ಹಮಾಲಿ ಕಾರ್ಮಿಕರು ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಕೈಗೊಂಡರು. ಅಂಬೇಡ್ಕರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಮುಖಾಂತರ ಬಂದ ಕಾರ್ಮಿಕರು ಎಪಿಎಂಸಿ ಆಡಳಿತ ಕಚೇರಿ ಎದುರು ಧರಣಿ ಕುಳಿತರು.

    ಧರಣಿಗೆ ರಾಜ್ಯ ಹಮಾಲಿ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಚಾಲನೆ ನೀಡಿದರು.

    ಬೆಂಬಲ ನೀಡಿ ಮಾತನಾಡಿದವರು

    ಖ್ಯಾತ ಭಾಷಾತಜ್ಞ ಪದ್ಮಶ್ರೀ ಡಾ. ಜಿ.ಎನ್.ದೇವಿ, ಮಾಜಿ ಶಾಸಕ  ಎನ್.ಎಚ್.ಕೋನರೆಡ್ಡಿ, ಸಂವಿಧಾನ ಸುರಕ್ಷಾ ಸಮಿತಿ ಸಂಚಾಲಕ  ಅಶ್ರಫ್ ಅಲಿ ಬಿ., ಕರವೇ ಜಿಲ್ಲಾಅಧ್ಯಕ್ಷ ಅಮೃತ ಇಜಾರಿ, ಯುವ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಏಕಲಾಸಪೂರ, ಎಪಿಎಂಸಿ ಸದಸ್ಯ ಚನ್ನು ಹೋಸಮನಿ, ಮಾಜಿ ಎಪಿಎಂಸಿ ಅಧ್ಯಕ್ಷ ರಾಮಚಂದ್ರ ಜಾಧವ, ಜೈಭೀಮ ಸೇನೆ ಮುಖಂಡರಾದ ಹನುಮಂತ ಸೋಮಪಲ್ಲಿ, ಮಹದಾಯಿ ಹೋರಾಟಗಾರ ಶಿವಣ್ಣ ಹುಬ್ಬಳ್ಳಿ ವೀರಣ್ಣ ನೀರಲಗಿ, ಡಿ.ಜಿ.ಜಂತ್ಲಿ, ವಕೀಲರ ಸಂಘದ ಕೆ.ಎಚ್.ಪಾಟೀಲ, ವಿಮಾ ನೌಕರರ ಸಂಘದ ಎ.ಎಂ.ಖಾನ, ಕರ್ನಾಟಕ ಭೀಮ ಸೇನೆ ಸಮಿತಿ ರಾಜ್ಯಾಧ್ಯಕ್ಷ ಬಿ.ಡಿ.ಮಾದರ, ಸಮಾಜಿಕ ಕಾರ್ಯಕರ್ತ ಎಸ್. ಎಮ್. ಬುಡನಖಾನ ಮುಂತಾದವರು ಬೆಂಬಲಿಸಿ ಮಾತನಾಡಿದರು.

    ನೇತೃತ್ವ

    ಗುರುಸಿದ್ದಪ್ಪ ಅಂಬೀಗೇರ, ಬಸವಣ್ಣೇಪ್ಪ ನೀರಲಗಿ, ಕರಿಯಪ್ಪ ದಳವಾಯಿ, ಹುಸೇನಸಾಬ ನದಾಫ್, ಕತಾಲಸಾಬ ಮುಲ್ಲಾ, ಮಂಜುನಾಥ ಹುಜರಾತಿ, ಮಹ್ಮದ ರಫೀಕ್ ಮುಳಗುಂದ, ಕರಿಯಪ್ಪ ಗಿರಿಸಾಗರ, ಲಕ್ಷ್ಮವ್ವ ಹೊಸೂರಿ, ಪ್ರೇಮಾ ಅಣ್ಣಿಗೇರಿ, ಕಾಕಪ್ಪ ಜಾಲಗಾರ, ನಾಗರಾಜ ಮುಪ್ಪಣ್ಣವರ, ಹನಮಂತ ಅಂಬಿಗೇರ, ಗಾಳೆಪ್ಪ ಮುತ್ಯಾಳ , ನೂರಾಹ್ಮದ ಕಲಾದಗಿ ಮುಂತಾದವರು.

    ಮನವಿ

    ಎಪಿಎಂಸಿ ಸಹ ಕಾರ್ಯದರ್ಶಿ  ಬಿ.ಎಸ್.ಮರೀಕಟ್ಟಿ ಅವರ ಮುಖಾಂತರ ಸಹಕಾರ ಸಚಿವರಿಗೆ ಮನವಿ ನೀಡಲಾಯಿತು. ನಾಳೆಯೂ ಮುಷ್ಜರ ಮುಂದುವರೆಯಲಿದೆ. ನಾಳೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗುವುದು.

  • ಯಮನೂರಿನ ಹಿರಿಯ ಜೀವ ನೀಲವ್ವ ಹಿರೇಮಠ ಇನ್ನಿಲ್ಲ: ಅಂತ್ಯಕ್ರಿಯೆ ನಾಳೆ

    ನವಲಗುಂದ: ತಾಲ್ಲೂಕಿನ ಯಮನೂರು ಗ್ರಾಮದ ನಿವಾಸಿ, ವೀರಶೈವ ಸಮಾಜದ ಹಿರಿಯರಾದ ನೀಲವ್ವ ಬಸಯ್ಯ ಹಿರೇಮಠ (78) ಬುಧವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾದರು.

    ಮೂವರು ಪುತ್ರರು ಹಾಗೂ ಅಪಾರ ಬಂಧು- ಬಳಗ ಅಗಲಿರುವ ಮೃತರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11 ಗಂಟೆಗೆ ಗ್ರಾಮದ ರುದ್ರಭೂಮಿಯಲ್ಲಿ ನಡೆಯಲಿದೆ.

    ನೀಲವ್ವ ಹಿರೇಮಠ, ಗ್ರಾಮದ ಪ್ರತಿಯೊಬ್ಬರಲ್ಲೂ ಒಳ್ಳೆಯ ಬಾಂಧವ್ಯನ್ನಿಟ್ಟುಕೊಂಡಿದ್ದರು. ಇವರನ್ನ ನೋಡಿದ ಪ್ರತಿಯೊಬ್ಬರು ಗೌರವದಿಂದ ನಡೆದುಕೊಳ್ಳುತ್ತಿದ್ದರು. ಹೀಗಾಗಿ ಹಿರಿಯ ಜೀವದ ಸಾವು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.