ಮಗನ ಸಾವಿಗೆ ಆತನೇ ಕಾರಣವೆಂದ ಸಂಬಂಧಿ: ಮಮ್ಮುಲ ಮರುಗಿಸುವ ಘಟನೆ

ಧಾರವಾಡ: ವಿದ್ಯಾರ್ಥಿಯೋರ್ವ ವೇಗವಾಗಿ ಟಾಟಾ ಏಸ್ ಚಲಾವಣೆ ಮಾಡುತ್ತ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಕಲಘಟಗಿ ತಾಲೂಕಿನ ಬೇಗೂರು ಬಳಿಯ ಶೇಖಪ್ಪ ಮೇಟಿ ಜಮೀನು ಬಳಿ ನಡೆದಿದೆ.
ಘಟನೆಯಲ್ಲಿ ಕಲಘಟಗಿ ಗಾಂಧಿನಗರ ಹಟಿಗಾರ್ ಓಣಿಯ ಸುರೇಶ ರಾಘವೇಂದ್ರ ಪಂಡಿತ ಸಾವಿಗೀಡಾಗಿದ್ದು, 19 ವರ್ಷದ ಈತ ವಿದ್ಯಾರ್ಥಿಯಾಗಿದ್ದ. ಈತನ ಸಾವಿಗೆ ಇವನ ನಿರ್ಲಕ್ಷ್ಯವೇ ಕಾರಣವೆಂದು ಎಂದು ಸ್ವತಃ ಮೃತನ ಸಂಬಂಧಿ ಸುರೇಶ ಪಂಡಿತ ದೂರು ನೀಡಿದ್ದಾರೆ.
ಮೃತ ಯುವಕನಿಗೆ ವಾಹನವನ್ನ ತೆಗೆದುಕೊಂಡು ಹೋಗುವುದು ಬೇಡವೆಂದು ಮನೆಯಲ್ಲಿ ಹೇಳಿದಾಗಲೂ ಹಠ ಮಾಡಿ ವಾಹನವನ್ನ ತೆಗೆದುಕೊಂಡು ಹೋಗಿದ್ದ. ವಾಹನವನ್ನ ವೇಗವಾಗಿ ಚಲಾಯಿಸಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ, ವಿದ್ಯುತ್ ಕಂಬವೂ ಮುರಿದಿದ್ದು, ವಾಹನ ಪಲ್ಟಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸಪೆಕ್ಟರ್ ವಿಜಯ ಬಿರಾದಾರ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.