Karnataka Voice

Latest Kannada News

ಎಎಪಿಯಿಂದ ರಾಜ್ಯೋತ್ಸವ ಆಚರಣೆ: ವಿಶ್ವದರ್ಜೆಯ ಹುಬ್ಬಳ್ಳಿ-ಧಾರವಾಡ ಕಟ್ಟುವ ಸಂಕಲ್ಪ

ಧಾರವಾಡ: ಆಮ್ ಆದ್ಮಿ ಪಕ್ಷ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಧಾರವಾಡದ ಗಾಂಧಿನಗರದಲ್ಲಿನ ಪಕ್ಷದ ಕಚೇರಿಯಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮೂಲಕ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ನಂತರ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಅವರು ಮಾತನಾಡಿ, ‘ಕನ್ನಡ ಭಾಷೆ ತುಂಬಾ ವಿಸ್ತಾರತೆ ಪಡೆದುಕೊಂಡಿದೆ. ಪ್ರತಿಯೊಬ್ಬರೂ ಕನ್ನಡ ಉಳಿಸಿ ಬೆಳೆಸಲು ಮುಂದಾಗಬೇಕು. ಕನ್ನಡ ಭಾಷೆ ಪ್ರಾಚೀನತೆ ಪಡೆದುಕೊಳ್ಳುವ ಜತೆಗೆ ಶಾಸ್ತ್ರೀಯ ಸ್ಥಾನಮಾನ ಗಳಿಸಿಕೊಂಡ ಹೆಗ್ಗಳಿಕೆ ಪಾತ್ರವಾಗಿದೆ. ಇಲ್ಲಿನ ಸಾಹಿತ್ಯ ಕೃಷಿ ಪ್ರಪಂಚದ ಇತರೆ ಭಾಷೆಗಳಿಗಿಂತಲೂ ವಿಭಿನ್ನ ರೀತಿಯಲ್ಲಿದೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನೂ ಸಹ ಕನ್ನಡ ನಾಡು, ನುಡಿಯ ಉಳಿವಿಗಾಗಿ ಶ್ರಮಿಸಬೇಕು.

ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು ಮತ್ತು ವಿಜಯನಗರ ಸಾಮ್ರಾಜ್ಯಗಳು ಉತ್ತರ ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿವೆ. ಈಗ ಆ ಸಂಪ್ರದಾಯವನ್ನು ಮುಂದುವರೆಸಲು ಮತ್ತು ವಿಶ್ವದರ್ಜೆಯ ಉತ್ತರ ಕರ್ನಾಟಕ ಮತ್ತು ಹು-ಧಾ ನಿರ್ಮಿಸಲು ಸಮಯ ಬಂದಿದೆ. ಕರ್ನಾಟಕವನ್ನು ಈಗಾಗಲೇ ಹಲವಾರು ಗಣ್ಯರು ವಿಶ್ವದರ್ಜೆಯ ಕರ್ನಾಟಕ ಮಾಡಲು ಹಲವಾರು ಜನರು ಶ್ರಮಿಸಿದ್ದಾರೆ. ಅದರಂತೆ ನಾವು ಕೂಡಾ ಹುಬ್ಬಳ್ಳಿ ಧಾರವಾಡ ನಗರವನ್ನು ವಿಶ್ವ ದರ್ಜೆಯ ನಗರವನ್ನಾಗಿ ಮಾಡಲು ಮುಂದಾಗಬೇಕಾಗಿದೆ. ಇದಕ್ಕೆ ನಮಗೆ ವಿಶ್ವೇಶ್ವರಯ್ಯ, ಜಕನಾಚಾರಿ, ಕೆಂಪೇಗೌಡರು ಸ್ಪೂರ್ತಿದಾಯಕರಾಗಿದ್ದಾರೆ ಎಂದರು.

ಕಾರ್ಯಕಾರಿ ಸಮಿತಿ ಸದಸ್ಯ ವಿಕಾಸ ಸೊಪ್ಪಿನ ಮಾತನಾಡಿ, ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕೆಂದು ಆಗ್ರಹಿಸಿದರು, ಸರ್ಕಾರ ಸ್ಥಳೀಯರಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.

ರಾಜ್ಯೋತ್ಸವ ಆಚರಣೆ ನಂತರ ಪಕ್ಷಕ್ಕೆ ಹಲವಾರು ಜನರನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು.  ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿಕಾಸ ಸೊಪ್ಪಿನ, ಅನಂತಕುಮಾರ ಭಾರತೀಯ, ಶಿವಕಿರಣ ಅಗಡಿ, ಡೇನಿಯಲ್ ಐಕೋಸ್, ಡಾ.ಜಯತೀರ್ಥ ಚಿಮ್ಮಲಗಿ, ಆರ್.ಪಿ.ನಾಯಕ, ಸನಾ ಕುದರಿ, ಮೊಹಮ್ಮದ್ ಅರಾಫಾತ್, ಅಭಿಷೇಕ ಲದ್ವಾ, ಲಕ್ಷ್ಮಣ ರಾಥೋಡ, ಕೃಷ್ಣ ಗೆಜ್ಜಿ, ವಿಜಯ ಸಾಯಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *