ಧಾರವಾಡ: ಘೋಷಣೆ ಆಯ್ತು… ಈಗ ಕ್ರೆಡಿಟ್ ಫೈಟ್..! ಬರಪೀಡಿತ ತಾಲೂಕುಗಳ ಹಿಂದೆ ಯಾರ ಹೋರಾಟ? ಜನರೇ ನೀವೇ ಹೇಳಿ..!
ಧಾರವಾಡ: ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಿಸಿ ಆದೇಶ ಹೊರಡಿಸಿರುವುದು ರೈತಾಪಿ ವರ್ಗಕ್ಕೆ ಒಂದಷ್ಟು ನಿರಾಳತೆ ತಂದಿದೆ. ತೀವ್ರ ಮಳೆ ಕೊರತೆ, ಬೆಳೆ ನಷ್ಟ ಹಾಗೂ ಸಂಕಷ್ಟದ ಪರಿಸ್ಥಿತಿಯಲ್ಲಿ ಈ ಘೋಷಣೆ ರೈತರಿಗೆ ಅಲ್ಪ ಪ್ರಮಾಣದಲ್ಲಾದರೂ ನೆರವಾಗುವ ನಿರೀಕ್ಷೆಯಿದೆ.
ಆದರೆ ಈಗ ಪ್ರಶ್ನೆ ಒಂದೇ…
ಈ ಬರಪೀಡಿತ ಘೋಷಣೆಯ ಹಿಂದೆ ಯಾರ ಪ್ರಯತ್ನ ಇದೆ?
ಈ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಸ್ಥಳೀಯ ಶಾಸಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು ಎನ್ನಲಾಗುತ್ತಿದೆ.

ಇದೇ ಸಂದರ್ಭದಲ್ಲಿ, ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಯುವ ನಾಯಕ ವಿನೋದ ಅಸೂಟಿ ಅವರು ಕೂಡ ತಮ್ಮ ಕರ್ಮಭೂಮಿಯಾದ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಸ್ನೇಹಲ್ ಅವರ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.
ಇತ್ತೀಚೆಗೆ ಮುಖ್ಯಮಂತ್ರಿ ಹುಬ್ಬಳ್ಳಿಗೆ ಆಗಮಿಸಿದ್ದ ವೇಳೆ ಶಾಸಕ ವಿನಯ ಕುಲಕರ್ಣಿ ಅವರು ಕೇವಲ ಒಂದು ಅಥವಾ ಎರಡು ತಾಲೂಕುಗಳಷ್ಟೇ ಅಲ್ಲ, ಇಡೀ ಧಾರವಾಡ ಜಿಲ್ಲೆಯನ್ನೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದರು.
ಇದರ ನಡುವೆ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಕೂಡ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದರು. ಸೆಪ್ಟೆಂಬರ್ 8ರೊಳಗೆ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು. ಇಲ್ಲದಿದ್ದರೆ ರೈತಕುಲದೊಂದಿಗೆ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದ್ದರು.
ಹೀಗಿರುವಾಗ ಈಗ ಸರ್ಕಾರದಿಂದ ಬರಪೀಡಿತ ತಾಲೂಕುಗಳ ಘೋಷಣೆ ಹೊರಬಿದ್ದಿದೆ.
ಹಾಗಾದರೆ ಈ ಘೋಷಣೆಗೆ ಕ್ರೆಡಿಟ್ ಯಾರಿಗೆ ಸಲ್ಲಬೇಕು…?
ಇಡೀ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಮನವಿ ಮಾಡಿದ ಶಾಸಕ ವಿನಯ ಕುಲಕರ್ಣಿ ಅವರ ಪ್ರಯತ್ನಕ್ಕೆ ಫಲ ಸಿಕ್ಕಿತೇ…?
ಸ್ಥಳೀಯ ಶಾಸಕರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಗೆ ಸರ್ಕಾರ ಸ್ಪಂದಿಸಿತೇ…?
ನವಲಗುಂದ ಕ್ಷೇತ್ರದ ರೈತರ ಸಂಕಷ್ಟವನ್ನು ಮನಗಂಡು ಸರ್ಕಾರದ ಗಮನ ಸೆಳೆದ ವಿನೋದ ಅಸೂಟಿ ಅವರ ಮನವಿಗೆ ಸ್ಪಂದನೆ ದೊರಕಿತೇ…?
ಅಥವಾ ಸೆಪ್ಟೆಂಬರ್ 8ರ ಗಡುವು ನೀಡಿ ರೈತ ಹೋರಾಟದ ಎಚ್ಚರಿಕೆ ನೀಡಿದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಒತ್ತಡಕ್ಕೆ ಸರ್ಕಾರ ಮಣಿಯಿತೇ…?
ಓದುಗ ಮಿತ್ರರೇ… ಉತ್ತರ ನಿಮಗೆ ಗೊತ್ತಿದೆ..!
ಪ್ರಜಾಪ್ರಭುತ್ವದಲ್ಲಿ ಒಂದು ನಿರ್ಧಾರ ಕೈಗೊಳ್ಳಲು ಹಲವರ ಮನವಿ, ಒತ್ತಡ, ಹೋರಾಟ ಹಾಗೂ ಜನರ ಧ್ವನಿ ಕಾರಣವಾಗಬಹುದು. ಆದರೆ ಕೆಲಸ ಆಗಿದ ನಂತರ ಇಡೀ ಕ್ರೆಡಿಟ್ ನನ್ನೊಬ್ಬರದ್ದೇ ಎಂದು ಹೇಳಿಕೊಂಡು ಹೊರಡುವುದು ಎಷ್ಟರ ಮಟ್ಟಿಗೆ ಸರಿ?
ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ.
ಯಾರು ಯಾವಾಗ ಮನವಿ ಮಾಡಿದರು… ಯಾರು ಯಾವ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆದರು… ಯಾರು ರೈತರ ಪರವಾಗಿ ಧ್ವನಿ ಎತ್ತಿದರು… ಯಾರು ಹೋರಾಟದ ಎಚ್ಚರಿಕೆ ನೀಡಿದರು ಎಂಬ ಸತ್ಯ ಸಾರ್ವಜನಿಕರ ಮುಂದೆಯೇ ಇದೆ.
ಹೀಗಾಗಿ, ಆಗಿರುವ ಕೆಲಸಕ್ಕೆ ಅನಗತ್ಯವಾಗಿ ಏಕಪಕ್ಷೀಯ ಕ್ರೆಡಿಟ್ ಪಡೆದುಕೊಳ್ಳಲು ಹೊರಟರೆ ಜನರು ಮೌನವಾಗಿರಬಹುದು… ಆದರೆ ಅವರು ಏನೂ ತಿಳಿಯದವರಲ್ಲ..!
ಸತ್ಯ ಎಲ್ಲರಿಗೂ ಗೊತ್ತಿದೆ… ಕ್ರೆಡಿಟ್ ರಾಜಕೀಯ ಮಾಡುವ ಮುನ್ನ ಜನರ ನೆನಪಿನ ಶಕ್ತಿಯನ್ನು ಕಡಿಮೆ ಅಂದಾಜು ಮಾಡಬೇಡಿ..!
