ಧಾರವಾಡ: ಜಿಂಕೆ ಬೇಟೆಯಾಡಿ “ತಿಂದು” ಮಾರಾಟ- ಗನ್, ಗುಂಡಿನ ಜೊತೆಗೆ ಇಬ್ಬರ ಬಂಧನ…
ಧಾರವಾಡ: ಚುಕ್ಕೆ ಜಿಂಕೆ ಬೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; ಮಾಂಸ, ಆಯುಧಗಳು ಜಪ್ತಿ
ಧಾರವಾಡ: ತಾಲ್ಲೂಕಿನ ಕಲಕೇರಿ ಶಾಖೆಯ ಲಾಳಗಟ್ಟಿ ಗ್ರಾಮದಲ್ಲಿ ಚುಕ್ಕೆ ಜಿಂಕೆಯನ್ನು ಬೇಟೆಯಾಡಿ, ಅದರ ಮಾಂಸವನ್ನು ಬಳಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತರನ್ನು ಲಾಳಗಟ್ಟಿ ಗ್ರಾಮದ ಫಕೀರಪ್ಪ ಮಡಿವಾಳಪ್ಪ ಮ್ಯಾಗಡಿ (42 ವರ್ಷ) ಮತ್ತು ಹೊಸಯಲ್ಲಾಪುರದ ವಾಸುದೇವ ಪರಶುರಾಮ ನಾಯಕ (34 ವರ್ಷ) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಶಾಮೀಲಾಗಿರುವ ಉಳಿದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಲಾಳಗಟ್ಟಿ ಗ್ರಾಮದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಬಳಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ. ದಾಳಿಯ ಸಂದರ್ಭದಲ್ಲಿ ಜಿಂಕೆಯ ತಲೆ, ಮಾಂಸ, ಮಾಂಸ ಕತ್ತರಿಸಲು ಬಳಸಲಾಗಿದ್ದ ಆಯುಧಗಳು ಹಾಗೂ ಮುದ್ದು ಗುಂಡುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಸಂತ ರೆಡ್ಡಿ ಕೆ.ವಿ (ಭಾ.ಅ.ಸೇ), ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶೇಕ್ ಅಬ್ದುಲ್ ಅಲೀಂ ಸಿದ್ದಿಕಿ (ಕ.ಅ.ಸೇ) ಹಾಗೂ ಧಾರವಾಡ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುನಿತಾ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.
ವಲಯ ಅರಣ್ಯ ಅಧಿಕಾರಿ ಕಿರಣಕುಮಾರ ಕರತಂಗಿ, ಉಪ ವಲಯ ಅರಣ್ಯ ಅಧಿಕಾರಿಗಳಾದ ಅವಿನಾಶ ರಣಕಂಬಿ, ನಕುಲ ಪೂಜೇರಿ, ಇಸುಫ್ ಪೆಂಡಾರಿ, ಅಜೀತ್ ದೇವರಡ್ಡಿ, ಭಾರತಿ ಸೀತಿಮನಿ ಹಾಗೂ ಗಸ್ತು ಅರಣ್ಯ ಪಾಲಕರಾದ ಸುರೇಶ ಹಾರೋಳಿ, ರಾಮನಗೌಡ ಪಾಟೀಲ, ರಾಜನ್ ಗುರವ, ಭರಮಪ್ಪ ಸರವಾರಿ, ಯಲಗುರಪ್ಪ ಕಾಶಿನಕುಂಟಿ, ಶಶಿಕುಮಾರ್ ಕೊಡಗಿ ಮತ್ತು ಫಕೀರಪ್ಪ ಕಾಶಿ ಅವರು ಈ ದಾಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಬಂಧಿತ ಆರೋಪಿಗಳು ‘ವನ್ಯಜೀವಿ ಸಂರಕ್ಷಣಾ ಕಾಯ್ದೆ’ಯನ್ನು ಉಲ್ಲಂಘಿಸಿ ಶಿಕ್ಷಾರ್ಹ ಅಪರಾಧ ಎಸಗಿದ್ದು, ಅವರನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಎಫ್ಓ ತಿಳಿಸಿದರು.
