Karnataka Voice

Latest Kannada News

ಹುಬ್ಬಳ್ಳಿ: ಯುವತಿಯ ಜೊತೆಯಿದ್ದ ಕ್ರಿಶ್ಚಿಯನ್ ಯುವಕನನ್ನ “ಮುಸ್ಲಿಂ” ಎಂದುಕೊಂಡು ಹಿಗ್ಗಾ‌ಮುಗ್ಗಾ ಥಳಿತ…

ಹುಬ್ಬಳ್ಳಿ ಹೊರವಲಯದಲ್ಲಿ ನೈತಿಕ ಪೊಲೀಸ್‌ಗಿರಿ: ಪ್ರೇಮಿಗಳ ಕಿಡ್ನಾಪ್, ಭೀಕರ ಹಲ್ಲೆ!

  • ಮುಸ್ಲಿಂ ಎಂದು ಭಾವಿಸಿ ಕ್ರಿಶ್ಚಿಯನ್ ಯುವಕನ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಅಟ್ಯಾಕ್
  • 6 ಗಂಟೆಗಳ ಕಾಲ ಕೊಠಡಿಯಲ್ಲಿ ಕೂಡಿಹಾಕಿ ಟಾರ್ಚರ್; ಹಣಕ್ಕೆ ಬೇಡಿಕೆ ಇಟ್ಟು, ವಿಡಿಯೋ ಮಾಡಿ ಪರಾರಿ
  • ಕಿಮ್ಸ್ ಆಸ್ಪತ್ರೆಗೆ ಧಾರವಾಡ ಎಸ್ಪಿ ಗುಂಜನ್ ಆರ್ಯ ಭೇಟಿ, ಪರಿಶೀಲನೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವುದಕ್ಕೆ ಸಾಕ್ಷಿಯೆಂಬಂತೆ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ಹೊರವಲಯದಲ್ಲಿ ನೈತಿಕ ಪೊಲೀಸ್‌ಗಿರಿ ನಡೆಸಿರುವ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರ ಗುಂಪು, ಪ್ರೇಮಿಗಳನ್ನು ಅಪಹರಿಸಿ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

​ದಾಳಿಯಿಂದಾಗಿ ಮೈಮೇಲೆಲ್ಲಾ ಗಂಭೀರ ಗಾಯಗೊಂಡಿರುವ ಶರ್ವಿನ್ (22) ಎಂಬ ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

​ಪೊಲೀಸ್ ಮೂಲಗಳ ಪ್ರಕಾರ, ಕಳೆದ ದಿನ ಹುಬ್ಬಳ್ಳಿ ಹೊರವಲಯದ ಹೋಟೆಲ್‌ವೊಂದಕ್ಕೆ ಯುವಕ ಮತ್ತು ಯುವತಿ ಊಟಕ್ಕಾಗಿ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಹಿಂದೂ ಸಂಘಟನೆಯ ಕಾರ್ಯಕರ್ತರ ಗ್ಯಾಂಗ್, ಯುವಕನನ್ನು ಮುಸ್ಲಿಂ ಸಮುದಾಯದವನೆಂದು ತಪ್ಪಾಗಿ ಭಾವಿಸಿ ಏಕಾಏಕಿ ದಾಳಿ ನಡೆಸಿದೆ. ತಾನು ಮುಸ್ಲಿಂ ಅಲ್ಲ, ಕ್ರಿಶ್ಚಿಯನ್ ಧರ್ಮದವನು ಎಂದು ಶರ್ವಿನ್ ಎಷ್ಟೇ ವಿನಂತಿಸಿಕೊಂಡರೂ ಕಿರಾತಕರು ಬಿಡದೆ ದೌರ್ಜನ್ಯ ಎಸಗಿದ್ದಾರೆಂದು ದೂರಲಾಗಿದೆ.

​ಪ್ರೇಮಿಗಳನ್ನು ಯಾರ ಸಂಪರ್ಕಕ್ಕೂ ಸಿಗದಂತೆ ಬೇರೆ ಬೇರೆ ಕಡೆಗೆ ಅಪಹರಿಸಿಕೊಂಡು ಹೋದ ದುಷ್ಕರ್ಮಿಗಳು, ಸತತ ಆರು ಗಂಟೆಗಳ ಕಾಲ ಕೊಠಡಿಯೊಂದರಲ್ಲಿ ಕೂಡಿಹಾಕಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಸಂತ್ರಸ್ತರಿಂದ ಹಣ ಸುಲಿಗೆ ಮಾಡಲು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ನಂತರ ಯುವಕ ಮತ್ತು ಯುವತಿಯಿಂದ ತಮಗೆ ಬೇಕಾದ ರೀತಿಯಲ್ಲಿ ಬಲವಂತವಾಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು, ಜಾಗ ಖಾಲಿ ಮಾಡಿದ್ದಾರೆಂದು ಯುವಕ ಹೇಳಿದ್ದಾನೆ.

​ಘಟನೆಯ ತೀವ್ರತೆ ಅರಿತು ತಕ್ಷಣವೇ ಕಾರ್ಯಪ್ರವೃತ್ತರಾದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಗುಂಜನ್ ಆರ್ಯ ಅವರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಯುವಕನ ಆರೋಗ್ಯ ವಿಚಾರಿಸಿದ ಎಸ್ಪಿ, ಸಂತ್ರಸ್ತರಿಂದ ಘಟನೆಯ ಸಂಪೂರ್ಣ ಮಾಹಿತಿ ಹಾಗೂ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

​ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಹಿಂದೂ ಸಂಘಟನೆಯ ಕಾರ್ಯಕರ್ತರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಜಿಲ್ಲೆಯಲ್ಲಿ ಸಾರ್ವಜನಿಕರ ರಕ್ಷಣೆಗೆ ಧಕ್ಕೆ ಬರುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *