ಕಮೀಷನರ್ ಕಚೇರಿ ಮುಂದೆ ಅಪಘಾತ: PSI ಎಸ್.ಎ.ಗೌರಿಮಠ ಅವರಿಗೆ ಗಂಭೀರ ಗಾಯ…
ಹುಬ್ಬಳ್ಳಿ: ನಾಳೆ ಸೇವೆಯಿಂದ ನಿವೃತ್ತಿಯಾಗಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ವಿಧಿ ಕ್ರೂರ ಆಟವಾಡಿದ್ದು, ಆಮಂತ್ರಣ ಪತ್ರಿಕೆ ಹಂಚಿ ವಾಪಸ್ ಬರುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಕಚೇರಿಯ ಎಎಸ್ಐ ಸಣ್ಣವೀರಯ್ಯ ಗೌರಿಮಠ (ಸ್ವಾಮಿಗಳು) ಅವರೇ ಅಪಘಾತಕ್ಕೀಡಾದ ದುರ್ದೈವಿ. 1993ರ ಬ್ಯಾಚ್ನ ದಕ್ಷ ಅಧಿಕಾರಿಯಾಗಿರುವ ಇವರು ಮೂಲತಃ ಗಜೇಂದ್ರಗಡದವರು. ಇಲಾಖೆಯಲ್ಲಿ ಇವರನ್ನು ಎಲ್ಲರೂ ಪ್ರೀತಿಯಿಂದ ‘ಸ್ವಾಮಿಗಳು’ ಎಂದೇ ಕರೆಯುತ್ತಿದ್ದರು.
ನಾಳೆ (ಶನಿವಾರ) ತಮ್ಮ ನಿವೃತ್ತಿ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ, ಕಮೀಷನರ್ ಕಚೇರಿಗೆ ಬಂದು ಅಧಿಕಾರಿ ಹಾಗೂ ಸಿಬ್ಬಂದಿಗೆ ಆಮಂತ್ರಣ ಪತ್ರಿಕೆ ನೀಡಿ ತಮ್ಮ ಬೈಕ್ನಲ್ಲಿ ಮರಳಿ ಮನೆಗೆ ಹೊರಟಿದ್ದರು. ಈ ವೇಳೆ ಕಮೀಷನರ್ ಕಚೇರಿ ಮುಂದೆಯೇ ವೇಗವಾಗಿ ಬಂದ ಕಾರೊಂದು ಬೈಕಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಗೌರಿಮಠ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
