Posts Slider

Karnataka Voice

Latest Kannada News

ಭೀಮಾ ತೀರದಲ್ಲಿ “ರಕ್ತದೋಕುಳಿ” ಒಂದೇ ಕುಟುಂಬದ ಐವರು ಸೇರಿ‌ ‘ಆರು’ ಜನರ ಅಮಾನುಷ ಹತ್ಯೆ…!!!

Spread the love

ಭೀಮಾತೀರದಲ್ಲಿ ರಕ್ತದೋಕುಳಿ: ಆಸ್ತಿ ವಿವಾದಕ್ಕೆ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಹತ್ಯೆ!

ವಿಜಯಪುರ: ಭೀಮಾತೀರದಲ್ಲಿ ಮತ್ತೊಮ್ಮೆ ರಕ್ತದೋಕುಳಿ ಹರಿದಿದ್ದು, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಜನರನ್ನು ಗುಂಡಿಟ್ಟು, ಬಳಿಕ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ.

​ಸ್ಥಳೀಯ ಮೂಲಗಳ ಪ್ರಕಾರ, ಗೋವಿಂದಪುರ ಗ್ರಾಮದ ನಿರಾಳೆ ಹಾಗೂ ಗೊಳಗಿ ಕುಟುಂಬಗಳ ನಡುವೆ ದೀರ್ಘಕಾಲದಿಂದ ಜಮೀನು ವ್ಯಾಜ್ಯ ನಡೆದಿತ್ತು ಎನ್ನಲಾಗಿದೆ. ಇದೇ ಹಳೇ ದ್ವೇಷ ಹಾಗೂ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಇಂದು (ಮೇ 29) ಗೊಳಗಿ ಕುಟುಂಬದ ಕಡೆಯವರು ನಿರಾಳೆ ಕುಟುಂಬದವರ ಮೇಲೆ ಏಕಾಏಕಿ ಫೈರಿಂಗ್ (ಗುಂಡಿನ ದಾಳಿ) ನಡೆಸಿದ್ದಾರೆ. ದಾಳಿಯಿಂದ ತತ್ತರಿಸಿದವರನ್ನು ಬಳಿಕ ಮಚ್ಚು ಹಾಗೂ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

​ಘಟನೆಯಲ್ಲಿ ಗೋವಿಂದಪುರ ಗ್ರಾಮದ ನಿರಾಳೆ ಕುಟುಂಬದ ಐವರು ಹಾಗೂ ಅವರ ಪರಿಚಯಸ್ಥರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:

    • ಚಂದು ನಿರಾಳೆ
    • ದುಂಡಪ್ಪ ನಿರಾಳೆ
    • ಶಿವಪುತ್ರ ನಿರಾಳೆ
    • ರಾಹುಲ್ ನಿರಾಳೆ
    • ಸಮರ್ಥ ನಿರಾಳೆ
    • ಶಬ್ಬೀರ್ ನದಾಫ್

ಎಸ್ಪಿ ಲಕ್ಷ್ಮಣ ನಿಂಬರಗಿ ಅವರ ಹೇಳಿಕೆ:

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಲಕ್ಷ್ಮಣ ನಿಂಬರಗಿ ಅವರು, “ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು ಜನರ ಕೊಲೆಯಾಗಿರುವುದು ವರದಿಯಾಗಿದೆ. ಈಗಾಗಲೇ ನಮ್ಮ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ತನಿಖೆ ಕೈಗೊಂಡಿದ್ದಾರೆ. ಘಟನೆಯ ಸಂಪೂರ್ಣ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ,” ಎಂದು ತಿಳಿಸಿದ್ದಾರೆ.

​ಒಂದೇ ಗ್ರಾಮದಲ್ಲಿ ಆರು ಜನರ ಭೀಕರ ಹತ್ಯೆಯಾಗಿರುವುದರಿಂದ ಗೋವಿಂದಪುರ ಹಾಗೂ ಚಡಚಣ ವ್ಯಾಪ್ತಿಯಲ್ಲಿ ತೀವ್ರ ಆತಂಕ ಮತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಚಡಚಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


Spread the love

Leave a Reply

Your email address will not be published. Required fields are marked *