ಶಿಕ್ಷಕರ ಮಿತ್ರ ‘APP’ ಬಿಡುಗಡೆ: ಶಿಕ್ಷಕರಿಗೆ ಅಭಯ ಹಸ್ತ ನೀಡಿದ ಸಿಎಂ ಯಡಿಯೂರಪ್ಪ
1 min readಬೆಂಗಳೂರು: ಈ ವರ್ಷದಿಂದದಲೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶಿಕ್ಷಕರ ಮಿತ್ರ APP ಮೂಲಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶಿಕ್ಷಕ ಮಿತ್ರ APP ಬಿಡುಗಡೆ ಮಾಡಿ ಯಡಿಯೂರಪ್ಪ ಮಾತನಾಡಿದರು. ವರ್ಗಾವಣೆ ಅರ್ಜಿ ಆಪ್ ಮೂಲಕವೇ ಪಡೆಯಲಾಗುವುದು ಎಂದು ತಿಳಿಸಿದರು. ಶಿಕ್ಷಕರ ವಿಚಾರದಲ್ಲಿ ಸರ್ಕಾರ ಸದಾ ಸ್ಪಂದನಾ ಮನೋಭಾವ ಹೊಂದಿದ್ದು, ಶಿಕ್ಷಕರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿದೆ ಎಂದು ಹೇಳಿದರು.
ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಶಾಲೆಗಳಿಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ ಬಜೆಟ್ ನಲ್ಲಿ ಘೋಷಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಂತ್ರಜ್ಞಾನಾಧಾರಿತ ಶಿಕ್ಷಕ ಮಿತ್ರ- APP ತಯಾರಿಸಿದೆ. ಶಿಕ್ಷಕರು ಮೊಬೈಲ್ನಲ್ಲಿ ಈ ಆಪ್ನ್ನು ಡೌನ್ಲೋಡ್ ಮಾಡಿಕೊಂಡು ತಾವು ಕುಳಿತಲ್ಲೇ ತಮ್ಮ ಸೇವಾ ವಿಷಯ- ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಇನ್ಮುಂದೆ ಶಿಕ್ಷಕರ ಅಲೆದಾಟಕ್ಕೆ app ಸೇವೆಯ ಮೂಲಕ ತೆರೆ ಬೀಳಲಿದೆ ಎಂದರು.
ಸಚಿವ ಸುರೇಶ್ ಕುಮಾರ್ ಅವರ ಕುರಿತು ನಾಡಿನ ಹಲವಾರು ಲೇಖಕರು ಬರೆದಿರುವ ವಿಮರ್ಶಾ ಕೃತಿ ‘ವಿದ್ಯಾವಿನೀತ’ ಪುಸ್ತಕದ ಹೆಸರು ಅವರ ವ್ಯಕ್ತಿತ್ವ, ಸ್ವಭಾವಕ್ಕೆ ಕನ್ನಡಿ ಹಿಡಿದಂತಿದೆ. ಇದು ಅವರ ಗುಣಸ್ವಭಾವಕ್ಕೆ ಅನ್ವರ್ಥವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಸುರೇಶ್ ಕುಮಾರರು ಶಿಕ್ಷಕರ ವರ್ಗಾವಣೆ ನೀತಿಯನ್ನು ಸರಳೀಕರಣಗೊಳಿಸಿ ಶಿಕ್ಷಕರಿಗೆ ನೆಮ್ಮದಿ ತಂದಿದ್ದಾರೆ ಎಂದು ಶ್ಲಾಘಿಸಿದರು.