Posts Slider

Karnataka Voice

Latest Kannada News

ರಾಜ್ಯದ ಪ್ರತಿ ಶಿಕ್ಷಕರಿದ್ದವರು “ಶಿಕ್ಷಕ” ಮನಸ್ಸು ಹೊಂದ ಬಯಸುವವರು ನೋಡಲೇಬೇಕಾದ ಸ್ಟೋರಿ…!!!

1 min read
Spread the love

ಶಿಕ್ಷಕ ಸಮೂಹ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಘಟ್ಟದಲ್ಲಿದೆ; ಶೈಕ್ಷಣಿಕ ಬದಲಾವಣೆಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು: ಸಚಿವ ಸಂತೋಷ ಲಾಡ್

ಧಾರವಾಡ: ಇಂದಿನ ಶೈಕ್ಷಣಿಕ ಪ್ರಗತಿ, ಗುಣಮಟ್ಟವನ್ನು ಪರಿಶೀಲಿಸಿದಾಗ, ಇಡೀ ಶಿಕ್ಷಕ ಸಮೂಹ ತಮ್ಮ ಆದರ್ಶತನ ಮತ್ತು ಕಾಯಕ ವೃತ್ತಿ ಮೌಲ್ಯಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಘಟ್ಟದಲ್ಲಿದೆ. ರಾಜಕಾರಣಿಗಳ ಹಿಂಬಾಲಕರಾಗದೇ, ಅನಗತ್ಯ ತುಷ್ಟೀಕರಣ, ಓಲೈಕೆಗಳನ್ನು ಮಾಡದೇ, ಪೂಜ್ಯನೀಯ ಗುರು ಸ್ಥಾನದಲ್ಲಿರುವ ಶಿಕ್ಷಕರು ಬಸವಣ್ಣ, ಅಂಬೇಡ್ಕರ, ರಾಧಾಕೃಷ್ಣನ್ ಅವರು ಹೇಳಿದ ನೀತಿ ಮಾರ್ಗದಲ್ಲಿ ನಡೆದು ಶೈಕ್ಷಣಿಕ ಬದಲಾವಣೆ, ಆತ್ಮ ಸಂಸ್ಕಾರ ನೀಡುವ ಶಿಕ್ಷಣ ನೀಡುವಂತೆ ಆಗಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್.ಲಾಡ್ ಅವರು ಹೇಳಿದರು.

Exclusive videos…

ಅವರು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಜಿಲ್ಲಾ ಉಪ ನಿರ್ದೇಶಕರ ಕಾರ್ಯಾಲಯದಿಂದ ಆಯೋಜಿಸಿದ್ದ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಜೃಷ್ಣನ್‍ರವರ ಜನ್ಮದಿನದ ಅಂಗವಾಗಿ ಜಿಲ್ಲಾಮಟ್ಟದ ಶಿಕ್ಷಕರ ದಿನೋತ್ಸವ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.

ನಮ್ಮ ಶಿಕ್ಷಕ ಸಮೂಹಕ್ಕೆ ಡಾ. ರಾಧಾಕೃಷ್ಣನ್ ಅವರದು ಮಾದರಿ ವ್ಯಕ್ತಿತ್ವ. ಅವರು ಶಿಕ್ಷಣ, ಸಮಾಜ, ಧರ್ಮ, ರಾಜಕೀಯ ಮತ್ತು ಸರಕಾರಿ ಸೇವೆಯಲ್ಲಿ ಅವರು ಆದರ್ಶವಾಗಿ ನಡೆದು, ಮಾರ್ಗದರ್ಶರಾಗಿದ್ದಾರೆ. ಶಿಕ್ಷಣ ಮತ್ತು ಸಂವಿಧಾನಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಈಗಾಗಲೇ ಶಿಕ್ಷರ ಬೇಡಿಕೆಗಳ ಬಗ್ಗೆ ಸರಕಾರ ಸಕಾರತ್ಮಕವಾಗಿ ಸ್ಪಂದಿಸಿ, 7ನೇ ವೇತನ ಆಯೋಗ ಜಾರಿಗೊಳಿಸಿದೆ. ಉಳಿದಂತೆ ಸರಕಾರಿ ನೌಕರರ ಎಲ್ಲ ಬೇಡಿಕೆಗಳು ಪರಿಶೀಲನಾ ಹಂತದಲ್ಲಿವೆ ಎಂದು ಸಚಿವರು ತಿಳಿಸಿದರು.

ಶಿಕ್ಷಕ ಸಮೂಹ ಇಂದು ಆತ್ಮವಲೋಕನ ಮಾಡಿಕೊಳ್ಳುವ ಕಾಲ ಬಂದಿದೆ. ವರದಿ ಒಂದರ ಪ್ರಕಾರ ಒಂದರಿಂದ ಹತ್ತನೇ ತರಗತಿವರೆಗೆ ಕಲಿಯುವ ಮಕ್ಕಳಿಗೆ ಸರಿಯಾಗಿ ಪೂರ್ಣಪ್ರಮಾಣದಲ್ಲಿ ಓದಲು ಬರುವದಿಲ್ಲ ಎಂಬ ಮಾಹಿತಿ ಇದೆ. ಓದು-ಬರಹದಲ್ಲಿ ಹಿಂದುಳಿದಿದ್ದಾರೆ ಎಂದು ವರದಿ ಹೇಳುತ್ತಿದೆ. ಅಂದರೆ ನಮ್ಮ ಕರ್ತವ್ಯ ಪ್ರಜ್ಞೆ ಮರೆಯುತ್ತಿದ್ದೆವೆ, ಬಸವಣ್ಣ, ಅಂಬೇಡ್ಕರ ಅವರ ವಿಚಾರ, ಜೀವನ ಸಂದೇಶಗಳು ಪಾಠಕ್ಕೆ ಮೀಸಲಾಗದೆ, ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ಆಗಬೇಕು ಎಂದರು.

ಸಂವಿಧಾನ ಉಳಿಯುವುದು ಶಿಕ್ಷಕರಿಂದ ಮತ್ತು ಶಿಕ್ಷಕರು ಮಕ್ಕಳಿಗೆ ನೀಡುವ ಶಿಕ್ಷಣದಿಂದ ಮಾತ್ರ ಸಾಧ್ಯ. ಜಗತ್ತಿನ ಬದಲಾವಣೆ, ಸಮಾಜದ ಬದಲಾವಣೆ ಶಿಕ್ಷಕರಿಂದ ಮಾತ್ರ ಆಗುತ್ತದೆ. ರಾಜಕೀಯ ರಗಳೆಗೆ ಹೋಗದೆ ಶಿಕ್ಷಕರು ಉತ್ತಮ ಸಮಾಜ ಕಟ್ಟುವ ಕಾಯಕದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ನೇತೃತ್ವದಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ಬದಲಾವಣೆಗೆ ಮಿಷನ್ ವಿದ್ಯಾ ಕಾಶಿ ಯೋಜನೆ ಮೂಲಕ ಕ್ರಮವಹಿಸಿರುವುದು ಅಭಿನಂದನಾರ್ಹವಾಗಿದ್ದು, ಈ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿ, ಶಿಕ್ಷಕ ಸಮೂಹ ಮತ್ತು ಎಲ್ಲ ಪಾಲಕರು ಪ್ರಾಮಾಣಿಕವಾಗಿ ಕೈಜೋಡಿಸಿ, ಸಕ್ರಿಯವಾಗಿ ಪಾಲ್ಗೋಳ್ಳಬೇಕು ಎಂದು ಸಚಿವರು ತಿಳಿಸಿದರು.

ಸಂವಿಧಾನ ಒಂದೇ ನಮ್ಮನ್ನು ಸದಾಕಾಲ ರಕ್ಷಿಸುವ ರಕ್ಷಕ. ಸಂವಿಧಾನದ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಬೇಕು. ಉತ್ತಮವಾಗಿ ಮಕ್ಕಳನ್ನು ಬೆಳೆಸಬೇಕು. ಪ್ರತಿ ದಿನ ಸಕಾರಾತ್ಮವಾಗಿ ಚಿಂತಿಸುವ ಮೂಲಕ ಮಕ್ಕಳಲ್ಕಿ ಜಾತ್ಯಾತೀತತೇ, ಸಾಮಾರಸ್ಯ, ಸಹೋದರತ್ವ, ಭ್ರಾತೃತ್ವದ ಗುಣಗಳನ್ನು ಬೆಳೆಸಬೇಕು ಎಂದು ಸಚಿವ ಸಂತೋಷ ಲಾಡ್ ಶಿಕ್ಷಕರಲ್ಲಿ ವಿನಂತಿಸಿದರು.

ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಾನಿಧ್ಯವಹಿಸಿ, ಆಶಿರ್ವಚನ ನೀಡಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ಶಿಕ್ಷಕರು ಕಷ್ಟುಪಟ್ಟು ಕಲಿಸಿದರೆ ಮಾತ್ರ ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ನಾವು ಉತ್ತಮ ಜೀವನ ಪಡೆಯಬೇಕಾದರೆ, ಉತ್ತಮ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಲಕ್ಷ್ಯ ಅಕಾಡೆಮಿ ಮುಖ್ಯಸ್ಥೆ ಲಕ್ಷ್ಮಿ ಹಿರೇಮಠ ಅವರು ಮಾತನಾಡಿದರು. ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಹುಬ್ಬಳ್ಳಿಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ. ಸಿಇಓ ಸ್ವರೂಪ ಟಿ.ಕೆ., ಮಾಜಿ ಲೋಕಸಭಾ ಸದಸ್ಯ ಐ.ಜಿ.ಸನದಿ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್ ಸಿದ್ದನಗೌಡರ ಸೇರಿದಂತೆ ವಿವಿಧ ಅಧಿಕಾರಿಗಳು, ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ವೇದಿಕೆಯಲ್ಲಿದ್ದರು.

ಸಮಾರಂಭದಲ್ಲಿ ಕಿರಿಯ ಪ್ರಾಥಮಿಕ ಶಾಲೆಯ 7 ಜನ ಶಿಕ್ಷಕರಿಗೆ, ಹಿರಿಯ ಪ್ರಾಥಮಿಕ ಶಾಲೆಯ 7 ಜನ ಶಿಕ್ಷಕರಿಗೆ ಮತ್ತು ಪ್ರೌಢಶಾಲೆ ವಿಭಾಗದ 7 ಜನ ಸಹ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಶಿಕ್ಷಕ ಸಮೂಹದವರು ಭಾಗವಹಿಸಿದ್ದರು. ಪ್ರಕಾಶ ಭೂತಾಳಿ ಮತ್ತು ರೇಖಾ ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು.


Spread the love

Leave a Reply

Your email address will not be published. Required fields are marked *