“ಮೋದಿ ಟೀಂನಲ್ಲಿ ಮತ್ತೊಮ್ಮೆ” ಪ್ರಲ್ಹಾದ ಜೋಶಿಯವರಿಂದು “3ಗಂಟೆಗೆ” ಸ್ವಕ್ಷೇತ್ರಕ್ಕೆ…

ಹುಬ್ಬಳ್ಳಿಗೆ ಇಂದು ಕೇಂದ್ರ ಆಹಾರ
ಸಚಿವ ಪ್ರಲ್ಹಾದ ಜೋಶಿ
ಮೋದಿ ಸಂಪುಟದಲ್ಲಿ 2ನೇ ಬಾರಿ ಕ್ಯಾಬಿನೆಟ್ ಸೇರಿದ ಬಳಿಕ ಇದೇ ಪ್ರಥಮ ಬಾರಿ ಸ್ವಕ್ಷೇತ್ರಕ್ಕೆ ಆಗಮನ
ವಾಣಿಜ್ಯ ನಗರಿಯಲ್ಲಿ ಜೋಶಿ ಅದ್ದೂರಿ ಸ್ವಾಗತಕ್ಕೆ ಬಿಜೆಪಿ ಪಡೆ ಸನ್ನದ್ಧ; ಮಧ್ಯಾಹ್ನ ಬೃಹತ್ ಮೆರವಣಿಗೆ
ಹುಬ್ಬಳ್ಳಿ: ಕೇಂದ್ರ NDA ಸರ್ಕಾರದಲ್ಲಿ ಎರಡನೇ ಬಾರಿ ಕ್ಯಾಬಿನೆಟ್ ಸಚಿವ ಸ್ಥಾನ ಅಲಂಕರಿಸಿರುವ ಸಂಸದ ಪ್ರಲ್ಹಾದ ಜೋಶಿ ಇಂದು (ಜೂ.14) ಸ್ವಕ್ಷೇತ್ರಕ್ಕೆ ಆಗಮಿಸಲಿದ್ದು, ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಲು ಸಿದ್ಧತೆ ನಡೆಸಿದ್ದಾರೆ.
ಚುನಾವಣೆ ಫಲಿತಾಂಶ ಪ್ರಕಟವಾಗುತ್ತಲೇ ದೆಹಲಿಗೆ ತೆರಳಿದ್ದ ಜೋಶಿ ಅವರು, ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಖಾತೆ ಹಂಚಿಕೆಯಾದ ಬಳಿಕ ಇದೇ ಪ್ರಥಮ ಬಾರಿಗೆ ಸ್ವಕ್ಷೇತ್ರಕ್ಕೆ ಮರಳುತ್ತಿದ್ದಾರೆ.
ಧಾರವಾಡ ಲೋಕಸಭೆ ಕ್ಷೇತ್ರದಿಂದ ಸತತ 5ನೇ ಬಾರಿ ಐತಿಹಾಸಿಕ ಗೆಲುವು ಸಾಧಿಸಿರುವ ಸಂಸದ ಪ್ರಲ್ಹಾದ ಜೋಶಿ ಅವರು ಕೇಂದ್ರದಲ್ಲಿ ಸತತ 2ನೇ ಬಾರಿ ಸಂಪುಟ ದರ್ಜೆ ಸಚಿವರಾಗಿರುವುದು ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅತೀವ್ರ ಸಂತಸ ತಂದಿದೆ.
ಕೇಂದ್ರ ಕ್ಯಾಬಿನೆಟ್ ನಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಪ್ರಪ್ರಥಮವಾಗಿ ಹುಬ್ಬಳ್ಳಿ ನಗರಕ್ಕೆ ಆಗಮಿಸುತ್ತಿರುವ ಪ್ರಲ್ಹಾದ ಜೋಶಿ ಅವರಿಗೆ ಅದ್ದೂರಿ ಅದ್ದೂರಿ ಸ್ವಾಗತ ನೀಡಲು ಬಿಜೆಪಿ ಪಡೆ ಸನ್ನದ್ಧವಾಗಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಚಿವ ಜೋಶಿ ಅವರು ಬಂದಿಳಿಯಲಿದ್ದು, ಇಲ್ಲಿಂದ ಬೈಕ್ ರ್ಯಾಲಿ, ಬೃಹತ್ ಮೆರವಣಿಗೆ ಮೂಲಕ ಕಾರ್ಯಕರ್ತರು ಬರಮಾಡಿಕೊಳ್ಳಲಿದ್ದಾರೆ.
ವಿಮಾನ ನಿಲ್ದಾಣದಿಂದ ಅಕ್ಷಯ ಪಾರ್ಕ್ ಮಾರ್ಗವಾಗಿ ಹೊಸೂರ ವೃತ್ತ, ಉತ್ತರ ಟ್ರಾಫಿಕ್ ಪೊಲೀಸ್ ಸ್ಟೇಷನ್ ಮಾರ್ಗವಾಗಿ ಮೆರವಣಿಗೆ ಸಾಗಲಿದೆ.
ವಾಣಿಜ್ಯ ನಗರಿಯ ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮ ಪುತ್ಥಳಿಗೆ ಸಚಿವರು ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಸಂಗೊಳ್ಳಿ ರಾಯಣ್ಣ ಮೂರ್ತಿ, ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಲಿದ್ದಾರೆ.
ನಂತರ ಕೇಶ್ವಾಪುರ ಸರ್ಕಲ್ ನಲ್ಲಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ನೆರವೇರಿಸಿ ಅಲ್ಲಿಂದ ನೇರವಾಗಿ ಸಚಿವರು ತಮ್ಮ ನಿವಾಸಕ್ಕೆ ತೆರಳುವರು.