ಇನ್ಸಪೆಕ್ಟರ್ ಪ್ರಭು ಸೂರೀನ್ ವಿರುದ್ಧ ಎಫ್ಐಆರ್: ಒಂದು ಕೋಟಿ ಬಂಗಾರ ಕಿತ್ತುಕೊಂಡ ಅಪರಾಧ
ಹುಬ್ಬಳ್ಳಿ: ನವನಗರದ ನಿವೃತ್ತ ನೌಕರರೋರ್ವರಿಗೆ ಜೀವ ಭಯ ಹುಟ್ಟಿಸಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ಕಿತ್ತುಕೊಂಡ ಬಗ್ಗೆ ಎಪಿಎಂಸಿ ಠಾಣೆಯಲ್ಲೇ ಅಲ್ಲಿನ ಇನ್ಸಪೆಕ್ಟರ್ ಮೇಲೆ ಪ್ರಕರಣ ದಾಖಲಾಗಿದ್ದು, ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಎಲ್ಲಿ ಹೋಯಿತು ಎಂಬುದು ಇನ್ನೂ ತನಿಖೆಯಾಗಬೇಕಿದೆ.
ನವನಗರದ ನಿವಾಸಿ ಓಂಕಾರಗೌಡ ಪಾಟೀಲ ಎಂಬುವವರದ್ದೇ ಚಿನ್ನಾಭರಣವನ್ನ ಕಿತ್ತುಕೊಂಡು ಹೋಗಲಾಗಿದೆ ಎಂದು ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಹಾಲಿ ಎಪಿಎಂಸಿ ಇನ್ಸಪೆಕ್ಟರ್ ಪ್ರಭು ಸೂರೀನ್ ಮೂರನೇಯ ಆರೋಪಿಯಾಗಿದ್ದು, ಬೆಂಗಳೂರಿನ ಶಿವಲೀಲಾ ಪಾಟೀಲ ಹಾಗೂ ಸಂತೋಷಕುಮಾರ ಗುಡ್ಡಾಪುರಮಠ ಮೊದಲ ಹಾಗೂ ಎರಡನೇಯ ಆರೋಪಿಯಾಗಿದ್ದಾರೆ.
ಚಿನ್ನಾಭರಣ ಕಿತ್ತುಕೊಂಡ ಬಗ್ಗೆ ಪದೇ ಪದೇ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಪ್ರಕರಣವನ್ನ ದಾಖಲಿಸಿಕೊಂಡಿಲ್ಲ. ಹೀಗಾಗಿ ಓಂಕಾರಗೌಡ ಪಾಟೀಲ, 3ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಈ ಬಗ್ಗೆ ನ್ಯಾಯಾಲಯ ದೂರು ದಾಖಲಿಸಿಕೊಳ್ಳುವಂತೆ ತಿಳಿಸಿದ್ದರಿಂದ ಇನ್ಸಪೆಕ್ಟರ್ ಪ್ರಭು ಸೂರೀನ್ ಸೇರಿದಂತೆ ಮೂವರ ವಿರುದ್ಧ ಪಿಎಸ್ಐ ಎಸ್.ಎಸ್.ಜಕ್ಕನಗೌಡ ದೂರು ದಾಖಲಿಸಿಕೊಂಡಿದ್ದಾರೆ. ಅದೇ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅದೇ ಠಾಣೆಯಲ್ಲಿ ಇನ್ಸಪೆಕ್ಟರ್ ಇರುವುದರಿಂದ ಅದ್ಯಾವ ರೀತಿಯಲ್ಲಿ ತನಿಖೆ ನಡೆಯುತ್ತದೋ ಆ ದೇವರೇ ಬಲ್ಲ..