ಕುಡಿಯೋದಕ್ಕೆ ಹಣ ಕೊಡದ ಪತ್ನಿಗೆ ಕೊಡಲಿಯೇಟು- ಮಲಗಿದಲ್ಲೇ ಪ್ರಾಣ ಬಿಟ್ಟ ಏಳು ಹೆಜ್ಜೆ ಇಟ್ಟವಳು..!
1 min readವಿಜಯಪುರ: ಸಾರಾಯಿ ಕುಡಿಯಲು ಹೆಂಡ್ತಿ ದುಡ್ಡು ಕೊಡಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಕೊಡಲಿಯಿಂದ ಕೊಚ್ಚಿ ಹೆಂಡ್ತಿಯನ್ನು ಪಾಪಿ ಪತಿ ಕೊಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲಪಟ್ಟಣದ ದೇವಣಗಾಂವನಲ್ಲಿ ನಡೆದಿದೆ.
ಮಲ್ಲಕವ್ವ ಹರಗೋಲ ಹತ್ಯೆಯಾಗಿರುವ ಪತ್ನಿ. ಶಿವಪ್ಪ ಹರಗೋಲ ಹತ್ಯೆಗೈದಿರುವ ಪಾಪಿ ಪತಿಯಾಗಿದ್ದು, ಕಳೆದ ರಾತ್ರಿ ಸಾರಾಯಿ ಕುಡಿಯಲು ಹೆಂಡ್ತಿಗೆ ಪತಿ ಶಿವಪ್ಪ ದುಡ್ಡು ಕೇಳಿದ್ದಾನೆ. ಇದಕ್ಕೆ ಹೆಂಡ್ತಿ ಮಲ್ಲಕವ್ವ ಸಾರಾಯಿ ಕುಡಿಯಲು ದುಡ್ಡು ಕೊಡಲ್ಲ ಎಂದಿದ್ದಾಳೆ. ಅದಕ್ಕಾಗಿ ಹೆಂಡ್ತಿ ಮಲಗಿದ್ಮೇಲೆ ಮನೆಯ ಅಟ್ಟದಲ್ಲಿದ್ದ ಕೊಡಲಿಯಿಂದ ಕೊಚ್ಚಿ ಹೆಂಡ್ತಿಯ ಕುತ್ತಿಗೆ, ಕಿವಿ ಭಾಗಕ್ಕೆ ಕೊಚ್ಚಿ ಹತ್ಯೆಗೈದು ಪಾಪಿ ಪತಿ ಶಿವಪ್ಪ ಪರಾರಿಯಾಗಿದ್ದಾನೆ.
ಪತಿ ಶಿವಪ್ಪ ಪ್ರತಿದಿನವೂ ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ಪಡೆದು ಹೋಗಿ ಕುಡಿದುಕೊಂಡು ಬಂದು ಜಗಳವಾಡುತ್ತಿದ್ದ. ಇದೇ ಕಾರಣಕ್ಕೆ ಹಬ್ಬ ಬಂದಿದೆ ಹಣವಿಲ್ಲವೆಂದು ಹೇಳಿದ್ದಾಳೆ. ಇದನ್ನೇ ನೆಪ ಮಾಡಿಕೊಂಡ ಭೂಪ, ರಾತ್ರಿ ಮಲಗಿದ ಮೇಲೆ ಕೊಲೆ ಮಾಡಿದ್ದಾನೆ.
ಪತ್ನಿಯ ಶವದ ಸುತ್ತಲೂ ರಕ್ತದ ಕೋಡಿಯೇ ಹರಿದಿದ್ದು, ಗಂಡನ ಮಾನಸಿಕತೆಯ ಬಗ್ಗೆ ಗ್ರಾಮಸ್ಥರು ಹೌಹಾರಿದ್ದಾರೆ. ಈ ಕುರಿತು ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.