ಹಬ್ಬಕ್ಕೆ ಹಣ ಕೇಳಿದ್ರೇ ಪ್ರಾಣವನ್ನೇ ಬಿಟ್ಟ ಪತಿ
ಬೆಳಗಾವಿ: ಸಾರಾಯಿ ಕುಡಿಯಬೇಡ, ಹಬ್ಬ ಮಾಡಲು ಹಣ ಕೊಡು ಎಂದು ಪತ್ನಿ ಹೇಳಿದ್ದನ್ನೆ ನೆಪ ಮಾಡಿಕೊಂಡು ಪತಿ ಮಹಾಶಯನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಶಹಾಪುರದಲ್ಲಿ ನಡೆದಿದೆ.
ಶಹಾಪುರದ ಹೊಸೂರನ ಬಸವನಗಲ್ಲಿಯ ರಾಹುಲ್ ಸಹದೇವ ಸೈನೂಚೆ(30) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಮೃತ ರಾಹುಲ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಕಳೆದ ಹಲವಾರು ದಿನಗಳಿಂದ ಸಾರಾಯಿ ದಾಸನಾಗಿದ್ದ ಈತ ದುಡಿದ ಹಣವನ್ನೆಲ್ಲಾ ಸಾರಾಯಿ ಕುಡಿಯಲು ಸುರಿಯುತ್ತಿದ್ದ. ದಸರಾ ಹಬ್ಬಕ್ಕೆ ದಿನಸಿ ಖರೀದಿ ಮಾಡಬೇಕು ಹಣ ಕೊಡು ಎಂದು ಪತ್ನಿ, ಪತಿ ರಾಹುಲ್ಗೆ ಹೇಳಿದ್ದಾಳೆ.
ಈ ವೇಳೆ ಕುಡಿಯುವುದನ್ನ ಬಿಡು ಎಂದು ಪತ್ನಿ ಒತ್ತಾಯಿಸಿದ್ದಾಳೆ. ಇದರಿಂದ ಇಬ್ಬರ ನಡುವೆ ಜಗಳ ಕೂಡ ಆಗಿದೆ. ಇದಾದ ನಂತರ ಎರಡು ದಿನಗಳಿಂದ ರಾಹುಲ್ ನಾಪತ್ತೆಯಾಗಿದ್ದ, ಬಳಿಕ ಪತಿ ಮನೆಗೆ ಬರುತ್ತಿದ್ದಂತೆ ಪತ್ನಿ ಮತ್ತೆ ಜಗಳ ಮಾಡಿದ್ದಾಳೆ. ಇದೇ ವೇಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ರಾಹುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಈ ಘಟನೆ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏನೇ ಆಗಲಿ ಕ್ಷುಲ್ಲಕ ಕಾರಣಕ್ಕೆ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಾತ್ರ ದೊಡ್ಡ ದುರಂತವೇ ಸರಿ.