ವಿನಯ ಕುಲಕರ್ಣಿ ಬಿಜೆಪಿ ಸೇರ್ಪಡೆ- ಸ್ಥಳೀಯ ಘಟಕಗಳ ನಿರ್ಧಾರವೇ ಅಂತಿಮ- ಸಿ.ಟಿ.ರವಿ
1 min readಹುಬ್ಬಳ್ಳಿ: ಮಾಜಿ ಸಚಿವ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಸ್ಥಳೀಯ ಘಟಕಗಳ ನಿರ್ಧಾರವೇ ಅಂತಿಮ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಸಿ.ಟಿ.ರವಿ, ಮಾಜಿ ಸಚಿವ ವಿನಯ ಕುಲಕರ್ಣಿ ಬಿಜೆಪಿ ಸೇರೋ ಬಗ್ಗೆ ಮಾತುಕತೆ ನಡೆದಿಲ್ಲ. ಪಕ್ಷ ಸೇರ್ಪಡೆ ವಿಚಾರದಲ್ಲಿ ಸ್ಥಳೀಯರು ಘಟಕಗಳ ನಿರ್ಧಾರವೇ ಅಂತಿಮ. ಪಕ್ಷದ ಆಸ್ತಿಯಾಗೋದಾದ್ರೆ ಸ್ಥಳೀಯ ಘಟಕಗಳು ಗ್ರೀನ್ ಸಿಗ್ನಲ್ ನೀಡುತ್ತದೆ ಎಂದು ಹೇಳಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರು ವರ್ಷದಲ್ಲಿ ಸುಧಾರಣಾ ಪರ್ವ ಮುಂದುವರೆಸಿದೆ. ಆಡಳಿತದಲ್ಲಿ ಸುಧಾರಣೆ, ಅಭಿವೃದ್ಧಿಯಲ್ಲಿ ವೇಗದೊಂದಿಗೆ ಕೆಲಸ ಮಾಡುತ್ತಿದೆ. ಐದು ಶತಮಾನಗಳ ಅಯೋಧ್ಯಾ ಹೋರಾಟ ನಡೆದಿತ್ತು. ಬಿಜೆಪಿ ಬೆಂಬಲಿಸಿದವರು, ವಿರೋಧಿಸಿದವರು ಅಯೋಧ್ಯಾ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅಯೋಧ್ಯಾ ಯಾವಾಗ ಸರಿ ಮಾಡುತ್ತೀರಿ ಎಂದು ಬೆಂಬಲಿಸಿದವರು ಕೇಳಿದ್ರೆ, ವಿರೋಧಿಸಿದವರು ಚುನಾವಣೆ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳುತ್ತಿರಿ ಎಂದಿದ್ದರು ಎಂದು ಹೇಳಿದರು.
ಜಮ್ಮು ಕಾಶ್ಮೀರದ ಆರ್ಟಿಕಲ್370 ರದ್ದು ಪಡಿಸಿ ಅನುಷ್ಠಾನಗೊಳಿಸುವ ಕೆಲಸ ನಡೆದಿದೆ. ಪ್ರತ್ಯೇಕತಾವಾದಕ್ಕೆ ಜಮ್ಮು ಮಾತ್ರವಲ್ಲ, ದೇಶದಲ್ಲಿಯೇ ಜಾಗವಿಲ್ಲ. ದೇಶದಲ್ಲಿ ಸುಧಾರಣೆ ಪರ್ವ ನಡೆದಿದೆ. 1986 ರಾಜೀವ್ ಗಾಂಧಿ ಒಂದು ಮಾತು ಹೇಳಿದ್ರು. ಒಂದು ರೂಪಾಯಿ ಕಳಿಸಿದ್ರೆ, 15 ಪೈಸೆ ಜನರಿಗೆ ತಲುಪುತ್ತದೆ ಎಂದಿದ್ದರು. ಅದು ಕಾಂಗ್ರೆಸ್ ಆಡಳಿತ ವೈಖರಿ. ಸಾರ್ವಜನಿಕವಾಗಿ ರಾಜೀವ್ ಗಾಂಧಿ ಅವರೇ ಒಪ್ಪಿಕೊಂಡಿದ್ದರು ಎಂದರು.
ಈಗ ಕೇಂದ್ರದಿಂದ ನೂರು ರೂಪಾಯಿ ಕಳಿಸಿದ್ರೆ ಜನರಿಗೆ ನೂರು ರೂಪಾಯಿ ದೊರೆಯುತ್ತದೆ. ಎಲ್ಲ ಯೋಜನೆಗಳ ಹಣ ನೇರವಾಗಿ ಜನರ ಖಾತೆಗೆ ಹೋಗುತ್ತದೆ. ಎಲ್ಲ ಭ್ರಷ್ಟಾಚಾರ, ವಿಳಂಬಕ್ಕೆ ಆಸ್ಪದ ಇಲ್ಲ, ಜನಧನ ಮೂಲಕ ಜನರ ಖಾತೆಗಳಿಗೆ ನೇರವಾಗಿ ಜಮಾ ಆಗುತ್ತಿದೆ. ಒನ್ ರೇಷನ್, ಒನ್ ಕಾರ್ಡನಿಂದ ದೇಶದೆಲ್ಲೆಡೆ ರೇಷನ್ ಪಡೆಯಬಹುದು. ಕಾರ್ಮಿಕ ಕಾಯಿದೆ ತಿದ್ದುಪಡಿಯಿಂದ ಯಾರಿಗೂ ಪಿಎಫ್ ಸಮಸ್ಯೆ ಇಲ್ಲ. ಭವಿಷ್ಯದ ಭಾರತವನ್ನು ಗಟ್ಟಿ ಅಡಿಪಾಯದ ಮೇಲೆ ನಿರ್ಮಾಣ ಮಾಡುವ ಶಿಕ್ಷಣವಿದೆ. ಪ್ರಾದೇಶಿಕ ಭಾಷೆಗಳ ಉಳಿವಿಗೆ ಆದ್ಯತೆ ನೀಡಲಾಗುತ್ತಿದೆ. ಕೌಶಲ್ಯದ ತರಬೇತಿಗೆ ಒತ್ತು ನೀಡಿದ ಶಿಕ್ಷಣ ನೀಡಲಾಗುತ್ತಿದೆ. ವಿರೋಧಕ್ಕಾಗಿ ವಿರೋಧಿಸಲು ಯಾವುದೇ ಅಂಶಗಳು ಸಿಗುತ್ತಿಲ್ಲ ಎಂದರು.
ಹೊಸ ಶಿಕ್ಷಣ ನೀತಿಯಿಂದ ವಿರೋಧ ಪಕ್ಷ ಅಸಹಾಯಕ ಸ್ಥಿತಿ ನಿರ್ಮಾಣ ಆಗಿದೆ. ನಮ್ಮ ಬೆಳೆ ನಮ್ಮ ಹಕ್ಕು ಕಾಯಿದೆಯಿಂದ ರೈತರು ಎಲ್ಲಿ ಬೇಕಾದರೂ ಬೆಳೆ ಮಾರಾಟ ಮಾಡಬಹುದು. ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ಬಹಳ ಬದಲಾವಣೆ ಆಗಲಿದೆ. ಆವಧಿ ಮುಗಿಸಲು ಅಧಿಕಾರ ಮಾಡುವ ಸರ್ಕಾರ ನಮ್ಮದಲ್ಲ. ಮನಮೋಹನ್ ಸಿಂಗ್ ಸರ್ಕಾರ ಭ್ರಷ್ಟಾಚಾರಗಳ ಸರಮಾಲೆ ಆಗಿತ್ತು. ನಮ್ಮ ಸರ್ಕಾರದ ಸಂಕಷ್ಟಗಳ ನಡುವೆಯೂ ಕೂಡ ಜನರು ಸಮಾಧಾನದಿಂದ ಇದ್ದಾರೆ. ಅದಕ್ಕೆ ಪ್ರಧಾನಿಗಳ ಕಾರ್ಯವೇ ಕಾರಣ, ಹೀಗಾಗಿಯೇ ಚುನಾವಣೆಗಳಲ್ಲಿ ಜನರು ಮತ ನೀಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಒಂದು ವರ್ಷ ಪೂರೈಸಿದೆ. ಆರಂಭದಲ್ಲಿ ಬರ, ಪ್ರವಾಹ, ಇದೀಗ ಮತ್ತೆ ಕೋವಿಡ್ ಸಂಕಷ್ಟದ ನಡುವೆಯೂ ಪ್ರವಾಹ ಬಂದಿದೆ. ಇದೆಲ್ಲದರ ನಡುವೆ ಪಶ್ಚಿಮ ಪದವೀಧರ ಕ್ಷೇತ್ರದ, ಎರಡು ಕ್ಷೇತ್ರದ ಉಪ ಚುನಾವಣೆ ಬಂದಿದೆ. ಆರು ಕ್ಷೇತ್ರದಲ್ಲಿ ಬಿಜೆಪಿ ಜಯಬೇರಿ ಭಾರಿಸುತ್ತದೆ. ಚುನಾವಣೆ ಸಮರ್ಥವಾಗಿ ಎದುರಿಸಿ ಗೆಲುವಿನ ಮೂಲಕ ಉತ್ತರ ಕೊಡುತ್ತೇವೆ. ನಮ್ಮ ಮುಂದಿನ ಗುರಿ, ಕರ್ನಾಟಕ ಹೊರತುಪಡಿಸಿ ನಮ್ಮ ಪಕ್ಷ ಆಡಳಿತದಲ್ಲಿಲ್ಲ. ದಕ್ಷಿಣ ಭಾಗದಲ್ಲಿ ಮೂರು ರಾಜ್ಯದಲ್ಲಿ ಚುನಾವಣೆ ಬರುತ್ತದೆ. ಅಲ್ಲಿಯೂ ಕೂಡ ಕರ್ನಾಟಕದ ಜೊತೆಗೆ ಬಿಜೆಪಿ ಆ ರಾಜ್ಯದಲ್ಲಿ ಗೆಲುವು ಸಾಧಿಸುತ್ತೇವೆ. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆ ನಡೆದಿದೆ ಎಂದು ಸಿ.ಟಿ.ರವಿ ಹೇಳಿದರು.