ಮದುವೆಯಾಗಿ 10ದಿನದಲ್ಲೇ ಉಸಿರಾಟ ನಿಲ್ಲಿಸಿದ ರಾಜ್ ಟಿವಿ ಕ್ಯಾಮರಾಮನ್: ಕ್ರೂರಿ ವಿಧಿ
1 min read![](https://karnatakavoice.com/wp-content/uploads/2021/02/WhatsApp-Image-2020-12-09-at-3.15.10-PM-1024x705.jpeg)
ಚಿತ್ರದುರ್ಗ: ಕಳೆದ ನವೆಂಬರ್ 29 ರಂದು ವಿವಾಹವಾಗಿದ್ದ ವಿನಯ್ (ಬ್ಲ್ಯಾಕಿ) ಅನ್ನೇಹಾಳ್ ತೀವ್ರ ಉಸಿರಾಟದ ತೊಂದರೆಯಿಂದ ಸಾವಿಗೀಡಾದ ಘಟನೆ ನಡೆದಿದೆ.
ಚಿತ್ರದುರ್ಗದ ದವಳಗಿರಿ ಬಡಾವಣೆಯಲ್ಲಿ ವಾಸವಾಗಿದ್ದ ವಿನಯ, ಚಿತ್ರದುರ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಪ್ರಸ್ತುತ ರಾಜ್ ಟಿವಿ ಕ್ಯಾಮೆರಾ ಮ್ಯಾನ್ ಆಗಿ ಕಾರ್ಯನಿರ್ವ ಹಿಸುತ್ತಿದ್ದರು. ಈ ಹಿಂದೆ ಉದಯ ಟಿ.ವಿ , ಚಿತ್ರದುರ್ಗ ಸಿಟಿ ಕೇಬಲ್ , ಕ್ಯಾಮರಾ ಮೆನ್ ಆಗಿ ಕಾರ್ಯ ನಿರ್ವಹಿಸಿದ್ದರು.
ತೀವ್ರ ಉಸಿರಾಟದ ತೊಂದರೆ ಕಾರಣ ರಾತ್ರಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಗಾಗಿ ದಾವಣಗೆರೆಯ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಗೆ ತಡರಾತ್ರಿ ಒಂದು ಗಂಟೆಗೆ ಕಳುಹಿಸಲಾಗಿತ್ತು. ಕ್ರೂರ ವಿಧಿಯು ಕಡೆಗೂ ಬಿಡದೆ ಬೆನ್ನತ್ತಿ ಇಹಲೋಕಕ್ಕೆ ಕರೆದುಕೊಂಡು ಹೋಗಿದೆ. ಇನ್ನೂ ದಾಂಪತ್ಯ ಜೀವನದ ಕನಸು ಹೊತ್ತು ಬಾಳ ಸಂಗಾತಿಯಾಗಿ ಕೈಹಿಡಿದಿದ್ದ ವಿನಯನ ಪತ್ನಿಯ ಜೀವನ ನರಕಸದೃಶವಾಗಿದೆ.
ವಿನಯ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಪತ್ರಕರ್ತರ ಯಾವುದೇ ಸಮಸ್ಯೆಗಳಿದ್ದರೂ ತಾವೂ ಅವರಲ್ಲಿ ಒಬ್ಬರಾಗಿ ಮುಂದೆ ನಿಲ್ಲುವ ಗುಣವನ್ನ ಹೊಂದಿದ್ದರು. ಅವರ ಅಗಲಿಕೆ ಪತ್ರಕರ್ತರ ವಲಯಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.