ಮೊಹ್ಮದ ನಲ್ ಪಾಡ್: ರಾಜ್ಯಾಧ್ಯಕ್ಷ ಸಿಂಧುಗೊಳಿಸಿ: ಕಾಂಗ್ರೆಸ್ ಮುಖಂಡ ಆನಂದ ಕಲಾಲ ಆಗ್ರಹ
ಫಲಿತಾಂಶದ ನಂತರ ಅನರ್ಹಗೊಳಿಸಿದ್ದು, ಪಕ್ಷದ ಕಾರ್ಯಕರ್ತರನ್ನೂ ಅನರ್ಹಗೊಳಿಸಿದ ಹಾಗಾಗತ್ತೆ. ಜಾತ್ಯಾತೀತ ಮನೋಭಾವನೆಯಿಂದ ಮತ ಹಾಕಿದ ಅಷ್ಟು ಮತಗಳಿಗೆ ಗೌರವ ಕೊಡದ ಹಾಗಾಗತ್ತೆ ಎಂಬುದು ಪ್ರಮುಖರಿಗೆ ತಿಳಿಯಬೇಕಾಗಿದೆ..
ಧಾರವಾಡ: ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದಿರುವ ಕಾಂಗ್ರೆಸ್ ಯುವ ನಾಯಕ ಮೊಹ್ಮದ ಹ್ಯಾರಿಸ್ ನಲ್ ಪಾಡ್ ಅವರನ್ನ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನಾಗಿ ಸಿಂಧುಗೊಳಿಸಬೇಕೆಂದು ಕಾಂಗ್ರೆಸ್ ಮುಖಂಡ ಆನಂದ ಕಲಾಲ ಆಗ್ರಹಿಸಿದ್ದಾರೆ.
ಆನಂದ ಕಲಾಲ ಅವರು ಮೊದಲಿಂದಲೂ ಮೊಹ್ಮದ ನಲ್ ಪಾಡ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ನಲ್ ಪಾಡ್ ಅವರನ್ನ ಅಧ್ಯಕ್ಷರನ್ನಾಗಿ ಮಾಡದೇ ಹೋದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮುನ್ನವೇ ಅವರನ್ನ ಅನರ್ಹಗೊಳಿಸಬೇಕಿತ್ತು. ಆದರೆ, ಚುನಾವಣೆ ಮುಗಿದ ಮೇಲೆ ಅನರ್ಹ ಮಾಡುವುದು ಯಾವ ಲೆಕ್ಕ. ಆ್ಯಪ್ ಮೂಲಕ ನಡೆದ ಚುನಾವಣೆಯಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆದಿದೆ. ಇದರಿಂದ ನಲ್ ಪಾಡ್ ಅವರನ್ನೇ ಅಧ್ಯಕ್ಷರನ್ನಾಗಿ ಘೋಷಣೆ ಮಾಡಬೇಕೆಂದು ಆನಂದ ಕಲಾಲ ಒತ್ತಾಯಿಸಿದ್ದಾರೆ.
ಪಕ್ಷದಲ್ಲಿ ಯುವಕರನ್ನ ಸೆಳೆಯುವ ನಾಯಕತ್ವ ಮೊಹ್ಮದಹ್ಯಾರಿಸ್ ನಲ್ ಪಾಡ್ ಹೊಂದಿದ್ದಾರೆ. ಇಂದಿನ ಸ್ಥಿತಿಯಲ್ಲಿ ಪಕ್ಷವನ್ನ ಮುನ್ನಡೆಸುವ ಯುವಕರು ಬೇಕಾಗಿದ್ದಾರೆ. ಹಾಗಾಗಿ, ಅವರನ್ನೇ ಅಧ್ಯಕ್ಷರನ್ನಾಗಿ ಘೋಷಣೆ ಮಾಡಬೇಕೆಂದು ಹೇಳಿದ್ದಾರೆ.
ಒಂದು ವಾರದೊಳಗೆ ನಲ್ ಪಾಡ್ ಅವರನ್ನ ಅಧ್ಯಕ್ಷರನ್ನಾಗಿ ಘೋಷಣೆ ಮಾಡದೇ ಹೋದರೆ, ತಾವೂ ಬೆಂಬಲಿಗರೊಂದಿಗೆ ಹೋರಾಟದ ದಾರಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ಆನಂದ ಕಲಾಲ ಎಚ್ಚರಿಕೆ ನೀಡಿದ್ದಾರೆ.