ಅಪಘಾತ ಸವಾರರ ಸ್ಥಿತಿ ಗಂಭೀರ: ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಅನಿಲಕುಮಾರ ಪಾಟೀಲ…!

ಹುಬ್ಬಳ್ಳಿ: ಉಣಕಲ್ ಕೆರೆಯ ಎದುರಿಗಿರುವ ಪ್ರೆಸಿಡೆಂಟ್ ಹೊಟೇಲ್ ಮುಂಭಾಗದಲ್ಲಿ ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಬಂದೋಬಸ್ತಗಾಗಿ ನಿಂತಿದ್ದ ಪೊಲೀಸರನ್ನ ತಪ್ಪಿಸಿಕೊಂಡು, ಹೋಗಲು ಯತ್ನಿಸಿದ ಬೈಕ್ ಸವಾರರಿಬ್ಬರು ಕಾರಿಗೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

ಧಾರವಾಡದಿಂದ ಬರುತ್ತಿದ್ದ ಕಾರಿಗೆ ಬೈಕ್ ಸವಾರರು ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕಾರಿನ ಮುಂದಿನ ಗಾಜು ಸಂಪೂರ್ಣವಾಗಿ ಹಾಳಾಗಿದ್ದು, ಬೈಕ್ ಸವಾರರಿಬ್ಬರು ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದಾಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ತಮ್ಮದೇ ವಾಹನದಲ್ಲಿ ಅವರನ್ನ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ.
ತಮ್ಮ ಕೆಲಸವನ್ನ ಬಿಟ್ಟು ಯುವಕರ ಪ್ರಾಣ ಉಳಿಸಲು ಮುಂದಾದ ಅನಿಲಕುಮಾರ ಪಾಟೀಲ ಅವರ ಕಾರ್ಯವನ್ನ ಎಲ್ಲರೂ ಮೆಚ್ಚುವಂತಾಗಿದೆ. ವೀಕೆಂಡ್ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಅಂಬ್ಯುಲೆನ್ಸ್ ಬಾರದಿರಬಹುದೆಂದು ತಕ್ಷಣ ಜಾಗೃತರಾಗಿದ್ದು, ಪ್ರಶಂಸನೀಯವಾಗಿದೆ.

ಘಟನಾ ಸ್ಥಳದಲ್ಲಿಯೇ ಇದ್ದ ಉತ್ತರ ಸಂಚಾರಿ ಠಾಣೆಯ ಪೊಲೀಸರು, ಎರಡು ವಾಹನಗಳನ್ನ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.
ಬೈಕ್ ಸವಾರರ ಬಳಿ ವಾಹನದ ಡಾಕುಮೆಂಟ್ ಇಲ್ಲದ ಕಾರಣ, ಪೊಲೀಸರಿಗೆ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿದ್ದಾಗಲೇ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪೊಲೀಸರು ಪರಿಶೀಲನೆಯನ್ನ ನಡೆಸುತ್ತಿದ್ದಾರೆ.