Karnataka Voice

Latest Kannada News

ಧಾರವಾಡ: ಮಕ್ಕಳ ಹೊಟ್ಟೆ ತುಂಬಿಸಲು “ಹೆಸರು ಕಾಯಿಗಾಗಿ” ಹೊಲಕ್ಕೆ ಹೋದ ತಾಯಿ… ಯಂತ್ರದಡಿ ಮಣ್ಣಾದಳು!

Spread the love

ಹೆಸರುಕಾಯಿ ಆರಿಸಲು ಹೋದವಳ ಬದುಕನ್ನೇ ಕಸಿದುಕೊಂಡ ಯಂತ್ರ

ಧಾರವಾಡ: ಬಡತನದ ಬದುಕಿಗೆ ಆಸರೆಯಾಗಬೇಕಿದ್ದ ಕೈಗಳಿಗೆ, ಇಂದು ಮಣ್ಣಿನಲ್ಲೇ ಅಂತ್ಯ ಕಂಡಿದೆ. ಕುಟುಂಬದ ಹೊಟ್ಟೆ ತುಂಬಿಸಲು ಹೆಸರುಕಾಯಿ ಆರಿಸಲು ಹೊಲಕ್ಕೆ ಹೋದ ಮಹಿಳೆಯೊಬ್ಬರು, ಅದೇ ಹೆಸರುಕಾಯಿ ಬಿಡಿಸುವ ಯಂತ್ರಕ್ಕೆ ಬಲಿಯಾಗಿ ದುರಂತ ಸಾವಿಗೀಡಾದ ಹೃದಯವಿದ್ರಾವಕ ಘಟನೆ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಹೊಲವೊಂದರಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಯಲ್ಲವ್ವ ಈರಪ್ಪ ಸುಣಗಾರ ಎಂದು ಗುರುತಿಸಲಾಗಿದೆ.

ಕಣ್ಣಿಲ್ಲದ ಪತಿ ಹಾಗೂ ಮೂರು ಮಕ್ಕಳನ್ನು ಸಾಕುವ ಹೊಣೆ ಹೊತ್ತಿದ್ದ ಯಲ್ಲವ್ವ, ದಿನಗೂಲಿ ಕೆಲಸ ಮಾಡಿ ಕುಟುಂಬವನ್ನು ಮುನ್ನಡೆಸುತ್ತಿದ್ದರು. ಬಡತನದ ಕಷ್ಟ ಗೊತ್ತಿದ್ದ ಆಕೆ, ಹೊಟ್ಟೆಪಾಡಿಗಾಗಿ ಸಿಕ್ಕ ಕೆಲಸ ಯಾವುದನ್ನೂ ಬಿಡದೆ ಮಾಡುತ್ತಿದ್ದಳು.

ಹೊಲದಲ್ಲಿ ಯಂತ್ರದಿಂದ ಬಿಡಿಸಿದ ಹೆಸರುಕಾಯಿಗಳನ್ನು ಆರಿಸಿಕೊಂಡರೆ ಒಂದಿಷ್ಟು ಹಣ ಸಿಗಬಹುದು, ಮನೆಯ ಒಲೆ ಉರಿಸಬಹುದು, ಮಕ್ಕಳ ಹೊಟ್ಟೆ ತುಂಬಿಸಬಹುದು ಎಂಬ ನಿರೀಕ್ಷೆಯಿಂದ ಯಲ್ಲವ್ವ ಹೆಸರುಕಾಯಿ ಆರಿಸಲು ಮುಂದಾಗಿದ್ದರು. ಆದರೆ, ಕುಟುಂಬಕ್ಕೆ ಅನ್ನವಾಗಬೇಕಿದ್ದ ಆ ಹೆಸರುಕಾಯಿಯೇ ಆಕೆಯ ಪಾಲಿಗೆ ಸಾವಿನ ಕಾರಣವಾಯಿತು.

ಹೆಸರುಕಾಯಿ ಬಿಡಿಸುವ ಯಂತ್ರ ಹಾಯ್ದ ಪರಿಣಾಮ ಯಲ್ಲವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬದುಕಿಗಾಗಿ ಹೋರಾಡುತ್ತಿದ್ದ ತಾಯಿಯೊಬ್ಬಳು, ತನ್ನ ಮೂರು ಮಕ್ಕಳನ್ನು ಹಾಗೂ ಕಣ್ಣಿಲ್ಲದ ಪತಿಯನ್ನು ದಿಕ್ಕಿಲ್ಲದಂತೆ ಮಾಡಿ ಇಹಲೋಕ ತ್ಯಜಿಸಿದ್ದಾರೆ.

ತಾಯಿಯನ್ನು ಕಳೆದುಕೊಂಡ ಮಕ್ಕಳ ಆಕ್ರಂದನ, ಜೀವನ ಸಂಗಾತಿಯನ್ನು ಕಳೆದುಕೊಂಡ ಪತಿಯ ನೋವು—ಈ ದುರಂತದ ಭೀಕರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಘಟನೆ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಡತನದ ವಿರುದ್ಧ ಹೋರಾಡುತ್ತಿದ್ದ ಹೆಣ್ಣಿನ ಬದುಕು, ಒಂದು ಕ್ಷಣದ ಅವಘಡಕ್ಕೆ ಬಲಿಯಾಗಿದೆ. ಕುಟುಂಬದ ಭವಿಷ್ಯಕ್ಕಾಗಿ ಹೊಲಕ್ಕೆ ಹೋದ ಯಲ್ಲವ್ವ, ಇದೀಗ ತನ್ನವರ ನೆನಪಾಗಿ ಮಾತ್ರ ಉಳಿದಿದ್ದಾರೆ.


Spread the love

Leave a Reply

Your email address will not be published. Required fields are marked *