“ಎಸ್ಕಾರ್ಟ್ MLA” 2023ರಿಂದ ಹಣ ತುಂಬಿಸಿಕೊಳ್ಳಿ ಎಂದು ಸಾಮಾಜಿಕ ಹೋರಾಟಗಾರ “MY”…
ಶಾಸಕರ ವಿರುದ್ಧ ಲೋಕಾಯುಕ್ತ, ಹೈಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ
ನವಲಗುಂದ: ರಾಜಕೀಯ ಅಧಿಕಾರ ದುರುಪಯೋಗಿಸಿಕೊಂಡು ಪೊಲೀಸ್ ಎಸ್ಕಾರ್ಟ್ ವಾಹನವನ್ನು ಕಾನೂನುಬಾಹಿರವಾಗಿ ಬಳಸಿರುವ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ, ಸಂಬಂಧಿಸಿದ ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಆಗ್ರಹಿಸಿದರು.
ಈ ಕುರಿತು ತಹಶೀಲ್ದಾರ್ ಸುಧೀರ ಸಾಹುಕಾರ ಅವರ ಮೂಲಕ ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ ಅವರು, ಜನಪ್ರತಿನಿಧಿಯೊಬ್ಬರು ಸಾರ್ವಜನಿಕರ ತೆರಿಗೆ ಹಣದಿಂದ ನಿರ್ವಹಣೆಯಾಗುವ ಪೊಲೀಸ್ ವ್ಯವಸ್ಥೆಯನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸಿರುವುದು ಖಂಡನೀಯ ಎಂದು ಆರೋಪಿಸಿದರು.
ನಿಯಮಬಾಹಿರವಾಗಿ ಬಳಸಲಾಗಿದೆ ಎನ್ನಲಾದ ಪೊಲೀಸ್ ವಾಹನದ ಡೀಸೆಲ್ ವೆಚ್ಚ, ಭದ್ರತಾ ಸಿಬ್ಬಂದಿಯ ವೇತನ, ವಾಹನದ ನಿರ್ವಹಣೆ ಹಾಗೂ ದುರಸ್ತಿ ವೆಚ್ಚವನ್ನು ಸಂಬಂಧಿಸಿದ ಶಾಸಕರಿಂದಲೇ ವಸೂಲಿ ಮಾಡಿ ಸರ್ಕಾರದ ಖಜಾನೆಗೆ ಜಮಾ ಮಾಡಬೇಕು. ಇಲ್ಲವಾದಲ್ಲಿ ಈ ಸಂಬಂಧ ಕರ್ನಾಟಕ ಹೈಕೋರ್ಟ್ ಹಾಗೂ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಸ್ವಾಮಿ ಮಠಪತಿ, ಮಹಮ್ಮದಲಿ ಮಿರ್ಜಿ ಹಾಗೂ ಬಾಪುಸಾಬ ತಾಸೇದ ಉಪಸ್ಥಿತರಿದ್ದರು.
