ಖಾಕಿಯೊಳಗೆ ಕರಗಿದ ತಂದೆಯ ಹೃದಯ: ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕಂದನನ್ನು ಎದೆಗಪ್ಪಿ ಓಡಿದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್…
“ನನ್ನ ಕಂದಾ ಕಣ್ಣು ಬಿಡು…” : ಕರಗಿ ನೀರಾದ ಖಾಕಿ ಎದೆ, ಮಗುವಿನ ಜೀವಕ್ಕಾಗಿ ಓಡಿದ ಕಮಿಷನರ್!
ಧಾರವಾಡ: ಅಯ್ಯೋ ದೇವರೆ… ಆ ಕಣ್ಣುಗಳಲ್ಲಿದ್ದ ಕಣ್ಣೀರು ಮತ್ತು ಆ ಪುಟ್ಟ ಮಗುವಿನ ರಕ್ತ ಇಡೀ ರಸ್ತೆಯನ್ನೇ ಒದ್ದೆ ಮಾಡಿತ್ತು. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ಅಲ್ಲಿಗೆ ಬಂದಾಗ ಕಂಡದ್ದು ಕೇವಲ ಕೊಲೆಯಾದ ಸ್ಥಳವನ್ನಲ್ಲ, ಒಂದು ಪುಟ್ಟ ಸಂಸಾರದ ಕನಸು ನುಚ್ಚುನೂರಾಗಿ ಬಿದ್ದಿದ್ದನ್ನು.
ಸಾವಿನ ನೆರಳು ಆವರಿಸಿದ್ದ ಆ ರಕ್ತದ ಮಡುವಿನಲ್ಲಿ, ಪುಟ್ಟ ಕಂದಮ್ಮ ನೇಹಿತ್ ಇನ್ನು ಉಸಿರಾಡುತ್ತಿದ್ದ. ಆ ಎಳೆ ಎದೆಯ ಕೊನೆಯ ಒದ್ದಾಟವನ್ನು ನೋಡಿದ ಕ್ಷಣ, ಕಮಿಷನರ್ ಶಶಿಕುಮಾರ್ ಅವರ ಎದೆಯೊಳಗೆ ಏನೋ ಚುರುಕ್ ಎಂದಿರಬೇಕು. ಅಲ್ಲಿ ಅವರಿಗೆ ತಾನು ದೊಡ್ಡ ಐಪಿಎಸ್ ಆಫೀಸರ್ ಎಂಬುದು ನೆನಪೇ ಇರಲಿಲ್ಲ. ಆ ಹೊತ್ತಿನಲ್ಲಿ ಅವರ ಕಣ್ಣಿಗೆ ಕಂಡಿದ್ದು ಕೇವಲ ಸಾವು-ಬದುಕಿನ ನಡುವೆ ಕೊನೆಯುಸಿರೆಳೆಯುತ್ತಿದ್ದ ತನ್ನದೇ ಮನೆಯ ಮಗುವಿನಂತಹ ಒಂದು ಕಂದಮ್ಮ!
ಆಂಬ್ಯುಲೆನ್ಸ್ ಬರಲು ತಡವಾದರೆ ಈ ಜೀವ ಹಾರಿಹೋಗುತ್ತದೆ ಎಂದು ಅವರ ಎದೆ ಬಡಿದುಕೊಂಡಿತು. ಪ್ರೋಟೋಕಾಲ್ ಇಲ್ಲ, ಅಧಿಕಾರದ ಗತ್ತೂ ಇಲ್ಲ… ಪ್ರೀತಿಯಿಂದ, ನಡುಗುವ ಕೈಗಳಿಂದ ಆ ರಕ್ತಸಿಕ್ತ ಮಗುವನ್ನು ಎದೆಗಪ್ಪಿಕೊಂಡರು.
ತನ್ನ ಮಗು ಹೀಗೆ ಬಿದ್ದಿದ್ದರೆ ಒಬ್ಬ ತಂದೆ ಹೇಗೆ ಎದೆ ಒಡೆದು ಓಡುತ್ತಾನೋ, ಹಾಗೆ ಕಮಿಷನರ್ ಶಶಿಕುಮಾರ್ ಅವರು ನೇಹಿತ್ನನ್ನು ಎತ್ತಿಕೊಂಡು ಧಾವಿಸಿದರು. “ಚಿನ್ನಾ, ಏನೂ ಆಗಲ್ಲ ಕಣೋ… ಕಣ್ಣು ಬಿಡು ಮಗನೇ” ಎಂದು ಒಳಗೊಳಗೇ ಪ್ರಾರ್ಥಿಸುತ್ತಾ, ತಾವೇ ಖುದ್ದಾಗಿ ಆಸ್ಪತ್ರೆಗೆ ಸಾಗಿಸಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಈಗ ಆ ಪುಟ್ಟ ಕಂದ ನೇಹಿತ್ ಆಸ್ಪತ್ರೆಯ ಬೆಡ್ ಮೇಲೆ ತೀವ್ರ ನಿಗಾ ಘಟಕದಲ್ಲಿದ್ದಾನೆ. ಬದುಕಿ ಬರಲು ಹೋರಾಡುತ್ತಿದ್ದಾನೆ. ಮಗುವನ್ನು ಎತ್ತಿ ಓಡಿದ ಆ ಕಮಿಷನರ್ ಅವರ ಕೈಗಳಲ್ಲಿದ್ದ ಕರುಣೆ ಸುಳ್ಳಾಗದಿರಲಿ. ಆ ಪುಟ್ಟ ಜೀವ ಎದ್ದು ಬಂದು ಮತ್ತೆ ನಗುವಂತಾಗಲಿ.
ನೇಹಿತ್ ಆಸ್ಪತ್ರೆಯಿಂದ ಆರೋಗ್ಯವಾಗಿ ಹೊರಬರಲಿ ಎಂದು ನಾವೆಲ್ಲರೂ ಕೈಮುಗಿದು ಪ್ರಾರ್ಥಿಸೋಣ, ಬಾರಣ್ಣ… ಕರುಣೆ ಇನ್ನೂ ಬದುಕಿದೆ, ನಮ್ಮ ಪ್ರಾರ್ಥನೆ ಆ ಮಗುವನ್ನು ಖಂಡಿತ ಉಳಿಸುತ್ತದೆ!
