Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ನಾದಿನಿಯರ ಪೋಟೋ ತೆಗೆಯುತ್ತಿದ್ದ “ಪತಿಯಿಂದ್ಲೇ” ಮಗು, ಪತ್ನಿ ಸೇರಿ ಐವರ. ಮೇಲೆ ಆ್ಯಸಿಡ್ ದಾಳಿ…!!!

Spread the love

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಜಗಳ, ಆರು ತಿಂಗಳ ಮಗು ಸೇರಿ ಐವರ ಮೇಲೆ ಆಸಿಡ್ ದಾಳಿ!

ಹುಬ್ಬಳ್ಳಿ: ಇಲ್ಲಿನ ತಾರಿಹಾಳದ ವಾಜಪೇಯಿ ನಗರದಲ್ಲಿ ಶನಿವಾರ ಅತ್ಯಂತ ಭೀಕರ ಘಟನೆಯೊಂದು ಸಂಭವಿಸಿದೆ. ನಾದಿನಿಯರ ಫೋಟೋ ತೆಗೆಯುವ ವಿಚಾರವಾಗಿ ಉಂಟಾದ ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಆರು ತಿಂಗಳ ಮಗು ಸೇರಿದಂತೆ ಕುಟುಂಬದ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ.

ಆರೋಪಿ ಸುರೇಶ್ ಬೈಲ್ ಪತ್ತಾರ (33) ವೃತ್ತಿಯಲ್ಲಿ ತಾಮ್ರ ಮತ್ತು ಹಿತ್ತಾಳೆ ಕೆಲಸ ಮಾಡುತ್ತಿದ್ದನು. ಈತ ತನ್ನ ನಾದಿನಿಯರ ಫೋಟೋ ತೆಗೆಯುತ್ತಿದ್ದ ಎನ್ನಲಾಗಿದ್ದು, ಇದಕ್ಕೆ ಪತ್ನಿ ರಾಜೇಶ್ವರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಷಯವಾಗಿ ಶನಿವಾರ ದಂಪತಿಗಳ ನಡುವೆ ಜೋರು ಜಗಳ ನಡೆದಿದೆ. ಜಗಳದ ಭರದಲ್ಲಿ ಆಕ್ರೋಶಗೊಂಡ ಸುರೇಶ್, ತಾಮ್ರ ತೊಳೆಯಲು ಇಟ್ಟುಕೊಂಡಿದ್ದ ಆಸಿಡ್ ಅನ್ನು ಪತ್ನಿಯ ಮೇಲೆ ಎರಚಿದ್ದಾನೆ.

​ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಆರು ತಿಂಗಳ ಮಗು, ಸಂಬಂಧಿಕರಾದ ಶೃತಿ ಮತ್ತು ರೇಷ್ಮಾ ಅವರ ಮೇಲೂ ಆಸಿಡ್ ಬಿದ್ದಿದೆ. ದುರಂತವೆಂದರೆ ದಾಳಿ ಮಾಡುವಾಗ ಆಸಿಡ್ ಸಿಡಿದು ಆರೋಪಿ ಸುರೇಶ್ ಗೂ ಗಾಯಗಳಾಗಿವೆ.

ದಾಳಿಯಿಂದಾಗಿ ಪತ್ನಿ ರಾಜೇಶ್ವರಿ ಅವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಆರು ತಿಂಗಳ ಪುಟ್ಟ ಕಂದಮ್ಮನ ಮುಖ ಮತ್ತು ಬಾಯಿಯ ಭಾಗಕ್ಕೆ ಆಸಿಡ್ ತಗುಲಿದ್ದು, ಮಗು ಕಿರುಚಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಗಾಯಾಳುಗಳನ್ನೆಲ್ಲ ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸಂಸಾರದ ಸಣ್ಣ ಜಗಳವೊಂದು ಈ ಮಟ್ಟದ ಭೀಕರತೆಗೆ ತಿರುಗಿದ್ದು ಇಡೀ ನಗರವನ್ನು ಬೆಚ್ಚಿಬೀಳಿಸಿದೆ.


Spread the love

Leave a Reply

Your email address will not be published. Required fields are marked *

You may have missed